ಲೋಕಸಭಾ ಚುನಾವಣೆ ಹೊತ್ತಲ್ಲಿ ರಂಗೇರಲಿದೆ ತಮಿಳುನಾಡು ರಾಜಕೀಯ!
ಚೆನ್ನೈ, ಫೆಬ್ರವರಿ 20: ತಮಿಳುನಾಡಿನ ರಾಜಕೀಯ ಇಡೀ ದೇಶದ ರಾಜಕೀಯಕ್ಕಿಂತ ಕೊಂಚ ಭಿನ್ನ. ರಾಷ್ಟ್ರೀಯ ಪಕ್ಷಗಳಿಗೆ ಜಾಗವನ್ನೇ ನೀಡದೆ ಪ್ರಾದೇಶಿಕ ಪಕ್ಷಗಳೇ ಇಲ್ಲಿ ಅನಭಿಷಿಕ್ತ ದೊರೆಗಳಾಗಿವೆ.
ಆದರೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ)ನ ಜಯಲಲಿತಾ ಮತ್ತು ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ)ನ ಎಂ.ಕರುಣಾನಿಧಿ ಅವರ ಅಗಲಿಕೆಯ ನಂತರ ನಡೆಯುತ್ತಿರುವ ಈ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ.
ತಮಿಳುನಾಡಲ್ಲಿ ಡಿಎಂಕೆ ಜೊತೆ ಕಾಂಗ್ರೆಸ್ ಮೈತ್ರಿ: 9 ಕ್ಷೇತ್ರಗಳಲ್ಲಿ ಸ್ಪರ್ಧೆ?
ಅತ್ತ ಡಿಎಂಕೆಯಲ್ಲೂ ಸ್ಟಾಲಿನ್-ಅಳಗಿರಿ ನಡುವೆ ಕಿತ್ತಾಟ, ಇತ್ತ ಎಐಎಡಿಎಂಕೆಯಲ್ಲಿ ಜಯಲಲಿತಾ ಬಣಕ್ಕೂ ಶಶಿಕಲಾ ಬಣಕ್ಕೂ ಕಿತ್ತಾಟ ಈ ಎಲ್ಲದರೊಂದಿಗೆ ರಜನೀಕಾಂತ್, ಕಮಲ್ ಹಾಸನ್ ರಂಥ ಸೂಪರ್ ಸ್ಟಾರ್ ಗಳ ರಾಜಕೀಯ ಪ್ರವೇಶ, ತಮಿಳುನಾಡಿನಲ್ಲಿ ಠೇವಣಿ ಬೇಕೆಂದರೆ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಅನಿವಾರ್ಯ ಎಂಬ ಸ್ಥಿತಿಗೆ ತಲುಪಿದ ಕಾಂಗ್ರೆಸ್-ಬಿಜೆಪಿ... ಈ ಎಲ್ಲಾ ಕಾರಣಗಳಿಂದ ತಮಿಳುನಾಡು ರಾಜಕೀಯ ಸಾಕಷ್ಟು ಕುತೂಹಲದ ಸಂತೆ ಎನ್ನಿಸಿದೆ.
ಎಐಡಿಎಂಕೆ ಜೊತೆ ಬಿಜೆಪಿ ಮೈತ್ರಿ
ತಮಿಳುನಾಡಿನ ಒಟ್ಟು 39 ಲೋಕಸಭಾ ಕ್ಷೇತ್ರಗಳ ಪೈಕಿ 7 ಲೋಕಸಭಾ ಕ್ಷೇತ್ರಗಳಲ್ಲಿ ಪಿಎಂಕೆ(ಪಟ್ಟಾಲಿ ಮಕ್ಕಳ್ ಕಟ್ಚಿ) ಮತ್ತು 5 ಕ್ಷೇತ್ರಗಳಲ್ಲಿ ಬಿಜೆಪಿ ಕಣಕ್ಕಿಳಿಯಲಿವೆ. ಉಳಿದ ಕ್ಷೇತ್ರಗಳಲ್ಲಿ ಎಐಎಡಿಎಂ ಕೆ ಸ್ಪರ್ಧಿಸಲಿದೆ. 2014 ರ ಲೋಕಸಭಾ ಚುನಾವಣೆಯಲ್ಲಿ 37 ಕ್ಷೇತ್ರಗಳಲ್ಲಿ ಎಐಎಡಿಎಂಕೆ ಗೆಲುವು ಸಾಧಿಸಿತ್ತು. ಬಿಜೆಪಿ ಎರಡರಲ್ಲಿ ಗೆದ್ದಿತ್ತು.
ಲೋಕಸಭೆ ಚುನಾವಣೆ: ಸೀಟು ಹಂಚಿಕೊಂಡ ಎಐಎಡಿಎಂಕೆ-ಪಿಎಂಕೆ
ಕಾಂಗ್ರೆಸ್-ಡಿಎಂಕೆ ಮೈತ್ರಿ
ವಿಪಕ್ಷಗಳ ಮೈತ್ರಿಯ ನಂತರ ಎಚ್ಚೆತ್ತ ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಮೈತ್ರಿಯನ್ನು ಸದ್ಯದಲ್ಲೇ ಘೋಷಿಸಲಿದ್ದು, 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಉಳಿದಂತೆ 20-25 ಕ್ಷೇತ್ರಗಳಲ್ಲಿ ಡಿಎಂಕೆ ಸ್ಪರ್ಧಿಸಲಿದೆ.
ಲೋಕಸಭೆ ಚುನಾವಣೆ: ತಮಿಳುನಾಡಿನಲ್ಲಿ ಬಿಜೆಪಿಗೆ ಐದು ಕ್ಷೇತ್ರ ಬಿಟ್ಟುಕೊಟ್ಟ ಎಐಎಡಿಎಂಕೆ
ರಜನಿಕಾಂತ್ ಅಚ್ಚರಿಯ ನಿರ್ಧಾರ
ಸೂಪರ್ ಸ್ಟಾರ್ ರಜನಿಕಾಂತ್ ಅವರು ಈ ಬಾರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಅವರ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ರಜನಿ ಮಕ್ಕಳ್ ಮಂದ್ರಂ ಎಂಬ ಹೆಸರಿನಲ್ಲಿ ರಾಜಕೀಯ ಪಕ್ಷ ಕಟ್ಟಿದ್ದ ರಜನಿ, ತಾವಾಗಲೀ, ತಮ್ಮ ಪಕ್ಷದ ಸದಸ್ಯರಾಗಲೀ ಲೋಕಸಭೆ ಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಜನಿಕಾಂತ್ ಚುನಾವಣೆಗೆ ಸ್ಪರ್ಧಿಸಿದ್ದೇ ಆದರೆ ಅವರನ್ನು ಸೆಳಲೆಯಲು ಬಿಜೆಪಿ ಸಾಕಷ್ಟು ಪ್ರಯತ್ನ ಮಾಡಿತ್ತು.
ಕಮಲ್ ಹಾಸನ್ ನಿಲುವೇನು?
ಇನ್ನು ತಮಿಳುನಾಡಿನ ಖ್ಯಾತ ನಟ ಕಮಲ್ ಹಾಸನ್, ಮಕ್ಕಳ್ ನೀಧಿ ಮಯ್ಯಮ್ ಎಂಬ ಹೆಸರಿನಲ್ಲಿ ರಾಜಕೀಯ ಪಕ್ಷ ಕಟ್ಟಿದ್ದಾರೆ. ಅವರು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಜೊತೆಗೆ ರಜನೀಕಾಂತ್ ಸ್ಪರ್ಧಿಸುವುದಿಲ್ಲ ಎಂಬ ವಿಷಯ ಕೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ನಿನ್ನೆ ತೊಡೆ ತಟ್ಟಿ ನಿಂತವರು ಈಗೇಕೆ ಸುಮ್ಮನಾದಿರಿ? ಎಂದು ಪ್ರಶ್ನಿಸಿದ್ದಾರೆ. ರಜನೀ ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಿ ಕಣಕ್ಕಳಿದರೆ ತಮಿಳುನಾಡು ರಾಜಕೀಯ ಮತ್ತಷ್ಟು ರಂಗೇಳುವುದು ಖಂಡಿತ.