ತೀರ್ಥೋದ್ಭವ; ಕಾವೇರಿ ತೀರ್ಥದಿಂದ ಮಲ್ಲಿಕಾರ್ಜುನನಿಗೆ ಅಭಿಷೇಕ
ಮಡಿಕೇರಿ, ಅಕ್ಟೋಬರ್ 16: ಕರ್ನಾಟಕದ ಸಿರಿದೇವಿ... ತಮಿಳುನಾಡಿನ ಭಾಗ್ಯಲಕ್ಷ್ಮಿ... ಕೊಡಗಿನ ಕುಲದೇವಿಯಾದ ಮಾತೆ ಕಾವೇರಿ ತುಲಾ ಸಂಕ್ರಮಣದಂದು, ಅಂದರೆ ಅ.17 ರಂದು ಬೆಳಗ್ಗೆ 7.03 ಗಂಟೆಗೆ ಸಲ್ಲುವ ಕನ್ಯಾ ಲಗ್ನದಲ್ಲಿ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಆವಿರ್ಭವಿಸಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.
ವರ್ಷಕ್ಕೊಮ್ಮೆ ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಸಂಕ್ರಾಂತಿ ಮುಹೂರ್ತದಲ್ಲಿ ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಹಾಲು ಉಕ್ಕಿಬರುವಂತೆ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ಉದ್ಭವಿಸುತ್ತಿದ್ದು, ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸೀಮಿತ ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೊರೊನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುತ್ತಿರುವುದರಿಂದ ಅರ್ಚಕರು, ತಕ್ಕ ಮುಖ್ಯಸ್ಥರು, ಊರಿನ ಪ್ರಮುಖರು, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಪ್ರಮುಖರು ಸೇರಿದಂತೆ ಕೆಲವು ಮಾತ್ರ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
ಮನೆಯಲ್ಲಿ ತೀರ್ಥಕ್ಕೆ ಪೂಜೆ
ಇನ್ನು ಕೊಡಗಿನಲ್ಲಿ ತೀರ್ಥೋದ್ಭವದ ಬಳಿಕ ಪವಿತ್ರ ತೀರ್ಥವನ್ನಿಟ್ಟು ಪೂಜಿಸುತ್ತಾರೆ. ಎಲ್ಲರೂ ತೀರ್ಥೋದ್ಭವಕ್ಕೆ ತೆರಳಿ ತೀರ್ಥವನ್ನು ತರಲು ಸಾಧ್ಯವಾಗದ ಕಾರಣ ತೀರ್ಥ ತಂದವರಿಂದ ತೀರ್ಥ ಪಡೆದು ದೇವರ ಮನೆಯಲ್ಲಿಟ್ಟು ಪೂಜಿಸುತ್ತಾರೆ. ಇನ್ನು ಜಿಲ್ಲೆಯ ಕೆಲವೆಡೆ ಅದರಲ್ಲೂ ಮಡಿಕೇರಿ ತಾಲೂಕಿನಲ್ಲಿ ತೀರ್ಥೋದ್ಭವಕ್ಕೆ ಮೊದಲು ಕಾಡಿನಲ್ಲಿ ಸಿಗುವ ಬೊತ್ತು (ಬೆಚ್ಚು) ಎಂಬ ಸಸ್ಯದ ಕಾಂಡವನ್ನು ತಂದು ಅದಕ್ಕೆ ಕಾಡಿನಲ್ಲೇ ಸಿಗುವ ಬೆಚ್ಚು ಬಳ್ಳಿಯನ್ನು ಸಿಕ್ಕಿಸಿ ಗದ್ದೆಗೆ ನೆಡುತ್ತಾರೆ. ದೊಡ್ಡಗದ್ದೆಯಲ್ಲಿ ಅಕ್ಕಪಕ್ಕದಲ್ಲಿ ಬೊತ್ತನ್ನು ಚುಚ್ಚಿ ಅದಕ್ಕೆ ಬಳ್ಳಿಯನ್ನು ಸುತ್ತಿ ಹೂವಿನ ಅಲಂಕಾರ ಮಾಡಲಾಗುತ್ತದೆ.
ಅ.17 ರಂದು ಕಾವೇರಿ ತೀರ್ಥೋದ್ಭವ: ಸರಳ, ಸಾಂಪ್ರದಾಯಿಕ ಆಚರಣೆ
ಗದ್ದೆಯಲ್ಲಿ ದೋಸೆಯಿಟ್ಟು ಪೂಜೆ
ತಲಕಾವೇರಿಯಲ್ಲಿ ತೀರ್ಥೋದ್ಭವವಾದ ಬಳಿಕ ಅಂದರೆ ಅ.18ರ ಮುಂಜಾನೆ ಬ್ರಾಹ್ಮಿ ಮೂಹೂರ್ತದಲ್ಲಿ ಅದರಲ್ಲಿ ದೋಸೆ, ತುಪ್ಪ, ಬೆಲ್ಲ, ಸಕ್ಕರೆ, ಬಾಳೆಹಣ್ಣು ಮೊದಲಾದವುಗಳನ್ನು ಇಟ್ಟು ದೀಪ ಹಚ್ಚಿ ಕಾವೇರಿ ಮಾತೆಯನ್ನು ಪ್ರಾರ್ಥಿಸಿ ಉತ್ತಮ ಬೆಳೆಯಾಗಲಿ ಎಂದು ಪ್ರಾರ್ಥಿಸುತ್ತಾ ಕಬ್ಬೆಚ್ಚು ಕಾಯಿಬಳ್ಳಿ ಕಾವೋ ಕಾವೋ ಎಂದು ಜೋರಾಗಿ ಕೂಗುವ ಸಂಪ್ರದಾಯವೂ ಇದೆ. ಇದಲ್ಲದೆ ಕೊಡಗಿನ ತಲಕಾವೇರಿಗೂ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೂ ಆಚರಣೆಯಲ್ಲಿ ಐತಿಹಾಸಿಕ ನೇರ ಸಂಬಂಧವಿರುವುದನ್ನು ಕಾಣಬಹುದಾಗಿದೆ.
ಮಲ್ಲಿಕಾರ್ಜುನನಿಗೆ ಕಾವೇರಿ ತೀರ್ಥಾಭಿಷೇಕ
ತೊಡಿಕಾನವು ತಲಕಾವೇರಿಯಿಂದ ಒಂಬತ್ತು ಕಿ.ಮೀ.ದೂರದಲ್ಲಿದ್ದು ಸಂಪರ್ಕಿಸುವ ರಸ್ತೆಯು ಅರಣ್ಯ ಪ್ರದೇಶಕ್ಕೆ ಹಾದು ಹೋಗುತ್ತದೆ. ಇದರಲ್ಲಿ ಎರಡು ಕಿ.ಮೀ. ವನ್ಯಜೀವಿ ವಿಭಾಗ, ಎರಡು ಕಿ.ಮೀ. ಮೀಸಲು ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತಿದೆ. ತಲಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಕಾವೇರಿ ತೀರ್ಥವನ್ನು ತೊಡಿಕಾನ ದೇವಸ್ಥಾನಕ್ಕೆಂದು ಮೊದಲು ತೆಗೆದಿಡಲಾಗುತ್ತದೆ. ಈ ತೀರ್ಥವನ್ನು ಕೊಂಡೊಯ್ಯಲು ಹಿಂದಿನ ಕಾಲದಲ್ಲಿ ಅರ್ಚಕರು ತಲಕಾವೇರಿಗೆ ಕಾಲ್ನಡಿಗೆಯಲ್ಲಿಯೇ ಬರುತ್ತಿದ್ದರಂತೆ. ಆದರೆ ಈಗ ವಾಹನಗಳಲ್ಲಿ ತೊಡಿಕಾನ-ಪಟ್ಟಿ-ಭಾಗಮಂಡಲ ರಸ್ತೆಯಲ್ಲಿ ಬಂದು ಕಾವೇರಿ ತೀರ್ಥ ಕೊಂಡೊಯ್ದು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಈ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿರುವುದು ವಿಶೇಷವಾಗಿದೆ.
ತಲಕಾವೇರಿ ತೀರ್ಥೋದ್ಭವ; ಹೊರಗಿನಿಂದ ಬಂದವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ
ಕೊಪ್ಪರಿಗೆ ಏರಿಸುವ ಸಂಪ್ರದಾಯ
ಹಿಂದೆ ಕುಂದಾಪುರ ಮುಂತಾದ ಕಡೆಗಳಿಂದಲೂ ಭಕ್ತರು ಕಾವೇರಿ ಜಾತ್ರೆಗೆ ಕಾಲ್ನಡಿಗೆಯಲ್ಲಿ ಬರುತ್ತಿದ್ದರಂತೆ. ಹಾಗೆ ಬರುತ್ತಿದ್ದವರು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ರಾತ್ರಿ ಕಳೆದು, ದೇವರ ದರ್ಶನ ಹಾಗೂ ವಿಶ್ರಾಂತಿ ಪಡೆದು ಆ ನಂತರ ತೊಡಿಕಾನ-ಪಟ್ಟಿ-ಭಾಗಮಂಡಲ ರಸ್ತೆಯಲ್ಲಿ ಪಾದಯಾತ್ರೆ ಮೂಲಕ ತಲಕಾವೇರಿಯನ್ನು ತಲುಪುತ್ತಿದ್ದರು ಎಂದು ಹೇಳಲಾಗುತ್ತಿದೆ. ಇವತ್ತಿಗೂ ತಲಕಾವೇರಿ ತೀರ್ಥೋದ್ಭವಕ್ಕೂ ಮುನ್ನಾ ದಿನ ತೊಡಿಕಾನ ದೇವಸ್ಥಾನದಲ್ಲಿ ಕೊಪ್ಪರಿಗೆ ಏರಿಸುವ ಸಂಪ್ರದಾಯವಿರುವುದನ್ನು ಕಾಣಬಹುದು. ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯ ತಲಕಾವೇರಿಯ ತೀರ್ಥೋದ್ಭವಕ್ಕೆ ಪ್ರತಿ ವರ್ಷವೂ ಭಕ್ತರು ಸಮರೋಪಾದಿಯಲ್ಲಿ ಆಗಮಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾದಿಂದಾಗಿ ಮನೆಯಲ್ಲಿಯೇ ಉಳಿದು ಪ್ರಾರ್ಥಿಸುವುದು ಅನಿವಾರ್ಯವಾಗಿದೆ.