ಬಾಲ ವಿವೇಕಾನಂದರಿಗೆ ತಾಯಿ ಭುವನೇಶ್ವರಿ ಹೇಳಿದ ಅದ್ಭುತ ಕತೆ
ವಿವೇಕಾನಂದರು ವಿಶ್ವಮಾನ್ಯರಾಗಿ ಹೊರಹೊಮ್ಮಿದ್ದರ ಹಿಂದೆ ಗುರು ರಾಮಕೃಷ್ಣ ಪರಮಹಂಸರ ಪ್ರಭಾವ ಎಷ್ಟಿದೆಯೋ ಅವರ ವಿವೇಕಾನಂದರ ಪೋಷಕರ ಪ್ರಭಾವವೂ ಅಷ್ಟೇ ಇದೆ.
ವಿವೇಕಾನಂದರ ಪೋಷಕರಾದ ತಾಯಿ ಭುವನೇಶ್ವರಿ ಅವರ ಪ್ರಭಾವವಂತೂ ವಿವೇಕಾನಂದರ ಮೇಲೆ ತುಸು ಹೆಚ್ಚೇ ಇದೆ. ಬಾಲ್ಯದಲ್ಲಿ ನರೇಂದ್ರ ನಾಥ ದತ್ತ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ವಿವೇಕಾನಂದರಿಗೆ ತಾಯಿ ಭುವನೇಶ್ವರಿ ಹೇಳಿದ ಕತೆ ಇಲ್ಲಿದೆ.
ನರೇಂದ್ರರ ತಂದೆ ವಿಶ್ವನಾಥ ದತ್ತರು ಕೊಲ್ಕತ್ತಾದಲ್ಲಿ ಖ್ಯಾತ ವಕೀಲರಾಗಿದ್ದರು. ಮಗ ನರೇಂದ್ರನೂ ತಮ್ಮಂತೆಯೇ ವಕೀಲನಾಗಬೇಕೆಂಬುದು ಅವರ ಆಸೆಯಾಗಿತ್ತು. ಆದರೆ ನಾಲಕ ನರೇಂದ್ರರ ಆಸೆ ಬೇರೆಯದ್ದೇ ಆಗಿತ್ತು.
ಆಗಿನ ಕಾಲದಲ್ಲಿ ಬ್ರಿಟೀಷ್ ಅಧಿಕಾರಿಗಳು, ಪ್ರಖ್ಯಾತರು, ಜಮೀನ್ದಾರುಗಳು ಎಲ್ಲರೂ ಸಾರೋಟಿನಲ್ಲಿ ಓಡಾಡುತ್ತಿದ್ದರು. ಸಾರೋಟಿನಲ್ಲಿ ಪ್ರಯಾಣಿಸುವುದು ಗೌರವದ ವಿಷಯವಾಗಿತ್ತು. ಇದನ್ನು ನರೇಂದ್ರ ಗಮನಿಸಿದ್ದರು.
ಒಮ್ಮೆ ಮನೆಗೆ ಬಂದ ಅತಿಥಿಗಳ ಮುಂದೆ ನರೇಂದ್ರರ ತಂದೆ ವಿಶ್ವನಾಥರು 'ದೊಡ್ಡವನಾಗಿ ಏನಾಗಬೇಕೆಂದುಕೊಂಡಿದ್ದೀಯ ಮಗು?' ಎಂದು ಕೇಳಿದರು. 'ಸಾರೋಟಿನ ಚಾಲಕ ಆಗಬೇಕೆಂದಿದ್ದೇನೆ' ಎಂದರು ಬಾಲಕ ನರೇಂದ್ರ.
ಮಗನ ಉತ್ತರ ಕೇಳಿ ಸಿಟ್ಟು ನೆತ್ತಿಗೆ ಹತ್ತಿದ ವಿಶ್ವನಾಥರು, ನರೇಂದ್ರನಿಗೆ ಕೆನ್ನೆಗೆ ಬಾರಿಸಿದರು. ನರೇಂದ್ರ ಅಳುತ್ತಾ ಓಡಿ ಅಮ್ಮ ಭುವನೇಶ್ವರಿ ಬಳಿ ಹೋಗಿ ನಡೆದ ಘಟನೆ ಹೇಳಿದ.
ಶಾಂತವಾಗಿ ಕೇಳಿಸಿಕೊಂಡ ಭುವನೇಶ್ವರಿ, ಗೋಡೆಯ ಮೇಲೆ ತೂಗು ಹಾಕಲಾಕಿದ್ದ ಶ್ರೀಕೃಷ್ಣ ಅರ್ಜುನನ್ನು ಕೂರಿಸಿಕೊಂಡು ಸಾರೋಟು ಓಡಿಸುತ್ತಿದ್ದ ಚಿತ್ರ ತೋರಿಸಿ, 'ಮಗು ಸಾರೋಟು ಓಡಿಸುವುದು ಕೆಟ್ಟ ಉದ್ಯೋಗವಲ್ಲ, ಆದರೆ ನೀನು ಓಡಿಸಬೇಕಾದುದು ಜನರು ಓಡಾಡುವ ರಥವನ್ನಲ್ಲ, ಬದಲಿಗೆ ಧರ್ಮದ ಸಾರೋಟನ್ನು' ಎಂದರು.
ಅಮ್ಮ ಹೇಳಿದ ಮಾತು ನರೇಂದ್ರರ ಮನದಲ್ಲಿ ಅಚ್ಚೊತ್ತಿತು. ಅಂತೆಯೇ ತಂದೆ ವಿಶ್ವನಾಥರಿಗೂ ತಮ್ಮ ತಪ್ಪಿನ ಅರಿವಾಯಿತು. ಶ್ರೀಕೃಷ್ಣನೇ ಮಾಡಿದ ಸಾರೋಟು ಚಾಲಕನ ಉದ್ಯೋಗವನ್ನು ನಾನು ನೀಚವೆಂಬಂತೆ ಕಂಡೆ ಎಂದು ಬೇಸರಿಸಿಕೊಂಡು, ಮಗ ನರೇಂದ್ರನನ್ನು ಮುದ್ದಿಸಿದರು.