ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲ, ಒಂದು ವರ್ಷದ ಕಹಿ ನೆನಪು ರೀವೈಂಡ್
ಹಿಂದಿ ಚಿತ್ರರಂಗದ ಸ್ಫುರದ್ರೂಪಿ ನಟ ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲವಾಗಿ ಇಂದಿಗೆ ಒಂದು ವರ್ಷ ಕಳೆದಿದೆ. ಸುಶಾಂತ್ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಬಾಂದ್ರಾ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿತ್ತು. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಪರಿಗಣಿಸಿದ್ದರು. ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು? ಎಂಬುದು ಅಂದಿಗೆ ಮುಖ್ಯ ಪ್ರಶ್ನೆಯಾಗಿತ್ತು. ಲಾಕ್ಡೌನ್ನಿಂದಾಗಿ ಯಾವುದೇ ಹೊಸ ಪ್ರಾಜೆಕ್ಟ್ ಸಿಗದೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿರಬಹುದು ಎಂದು ಶಂಕಿಸಲಾಗಿತ್ತು.
ಆದರೆ, ಸುಶಾಂತ್ ಸಾವು ನಿಗೂಢವಾಗಿದ್ದು, ಅನೇಕ ಕಾರಣಗಳು ದಿನ ಕಳೆದಂತೆ ಕಾಣಿಸಿಕೊಳ್ಳತೊಡಗಿತು. ಬಾಲಿವುಡ್ನ ಅರ್ಧದಷ್ಟು ಮಂದಿ ವಿಚಾರಣೆಗೊಳಪಟ್ಟರು. ಸುಶಾಂತ್ ಆಪ್ತರು, ಮಾಜಿ, ಹಾಲಿ ಗೆಳತಿಯ ಮೇಲೆ ಅನುಮಾನ ವ್ಯಕ್ತವಾಯಿತು. ಮಾಜಿ ಮ್ಯಾನೇಜರ್ ಆತ್ಮಹತ್ಯೆ ಜೊತೆ ಹೋಲಿಸಲಾಯಿತು. ಸ್ಥಳೀಯ ಪೊಲೀಸರಿಂದ ಆರಂಭವಾದ ತನಿಖೆ ಸಿಬಿಐ ತನಕ ಬಂದು ನಿಂತಿದೆ. ಆದರೂ, ಇಂದಿಗೂ ಸಾವಿನ ನಿಗೂಢತೆ ಬಯಲಾಗಿಲ್ಲ. ಸುಶಾಂತ್ ಆತ್ಮಹತ್ಯೆ ಕೇಸ್ ಬದಲಿಗೆ ಬಾಲಿವುಡ್ ಗಾಂಜಾ ಕೇಸ್ ಹೆಚ್ಚು ಚರ್ಚಿತವಾಗುತ್ತಿದೆ.
34 ವರ್ಷ ವಯಸ್ಸಿಗೆ ಆತ್ಮಹತ್ಯೆಗೆ ಶರಣಾಗಿರುವ ಸುಶಾಂತ್ ಅವರು ಕಿರುತೆರೆಯಲ್ಲಿ ಮಿಂಚಿ ನಂತರ ಬಾಲಿವುಡ್ ನಲ್ಲಿ ದೊಡ್ಡ ಹೆಸರು ಮಾಡಿದವರು. ಪವಿತ್ರಾ ರಿಸ್ತಾ ಸೀರಿಯಲ್ ನಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡು ಮನೆ ಮಾತಾಗಿದ್ದರು. ಮೊದಲಿಗೆ ಅಭಿಶೇಕ್ ಕಪೂರ್ ಅವರ ಕಾಯ್ ಪೋ ಚೇ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚೇತನ್ ಭಗತ್ ಕಾದಂಬರಿ ದಿ ತ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್ ಆಧಾರಿತ ಚಿತ್ರ ಇದಾಗಿದೆ. ಝಲಕ್ ದಿಕ್ಲಾ ಜಾ ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ ಮಿಂಚಿದ್ದ ಸುಶಾಂತ್ ತಮ್ಮದೇ ಅಭಿಮಾನಿ ವರ್ಗ ಹೊಂದಿದ್ದರು.
ಬಿಹಾರದ ಪೂರ್ನಿಯಾ ಜಿಲ್ಲೆಯ ಮೂಲದ ಸುಶಾಂತ್ ಸಿಂಗ್ ಅವರು ಪಾಟ್ನಾದಲ್ಲಿ 1986ರಲ್ಲಿ ಜನಿಸಿದ್ದರು. ಸುಶಾಂತ್ ಸೋದರಿ ಮೀತು ಸಿಂಗ್ ಹಾಗೂ ಅವರ ತಾಯಿ 2002ರಲ್ಲಿ ಮೃತರಾಗುತ್ತಾರೆ. ಸುಶಾಂತ್ ಸೋದರಿ ರಾಜ್ಯಮಟ್ಟದ ಕ್ರಿಕೆಟರ್ ಆಗಿದ್ದರು. ಬಿಹಾರ ತೊರೆದು ದೆಹಲಿಗೆ ಬಂದ ಸುಶಾಂತ್ ಮೊದಲ ಚಿತ್ರದಲ್ಲಿ ಕೂಡಾ ಕ್ರಿಕೆಟ್ ಪ್ರಧಾನ ವಿಷಯವಾಗಿದೆ. ಅವರಿಗೆ ಹೆಸರು ತಂದುಕೊಟ್ಟ ಧೋನಿ ಪಾತ್ರ ಕೂಡಾ ಕ್ರಿಕೆಟರ್ ಕುರಿತಾಗಿದೆ. ನೋವು ಮರೆಯಲು ಬಣ್ಣದ ಲೋಕಕ್ಕೆ ಬಂದಿದ್ದ ಸುಶಾಂತ್, ನೋವು ನುಂಗಲಾರದೆ ಶಾಶ್ವತವಾಗಿ ಇಹಲೋಕ ಯಾತ್ರೆ ಮುಗಿಸಿದ್ದರು.
ಜೂನ್ 14, 2020: 34 ವರ್ಷ ವಯಸ್ಸಿನ ಸುಶಾಂತ್ ತಮ್ಮ ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆ. ಸಿಆರ್ ಪಿಸಿ ಸೆಕ್ಷನ್ ಅಡಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡ ಸ್ಥಳೀಯ ಪೊಲೀಸರು.
ಜೂನ್ 18: ಮುಂಬೈ ಪೊಲೀಸರ ಮುಂದೆ ತನ್ನ ಹೇಳಿಕೆ ದಾಖಲಿಸಿದ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ.
ಜುಲೈ 6: ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿರಿಂದ ಹೇಳಿಕೆ ದಾಖಲು.
ಜುಲೈ 18: ಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಂಸ್ ಚೇರ್ಮನ್ ಆದಿತ್ಯಾ ಚೋಪ್ರಾದಿಂದ ಹೇಳಿಕೆ ದಾಖಲು.
ಜುಲೈ 25: ಸುಶಾಂತ್ ತಂದೆ ಕೆಕೆ ಸಿಂಗ್ ರಿಂದ ಪಾಟ್ನದಲ್ಲಿ ಎಫ್ಐಆರ್ ದಾಖಲು, ರಿಯಾ ಹಾಗೂ ಕುಟುಂಬಸ್ಥರ ಮೇಲೆ ದೂರು.
ಜುಲೈ 27: ನಿರ್ದೇಶಕ ಮಹೇಶ್ ಭಟ್ ಹೇಳಿಕೆ ದಾಖಲಿಸಿಕೊಂಡ ಮುಂಬೈ ಪೊಲೀಸ್.
ಜುಲೈ 29: ಪಾಟ್ನಾದಲ್ಲಿ ದಾಖಲಾಗಿರುವ ಕೇಸ್ ಮುಂಬೈಗೆ ವರ್ಗಾಯಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೇಟ್ಟಿಲೇರಿದ ರಿಯಾ.
ಜುಲೈ 31: ಮನಿ ಲಾಂಡ್ರಿಂಗ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಜಾರಿ ನಿರ್ದೇಶನಾಲಯ.
ಆಗಸ್ಟ್ 4: ಸಿಬಿಐ ತನಿಖೆಗೆ ಶಿಫಾರಸು ಮಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್. ಇದು ಅನಗತ್ಯ ಎಂದ ಮುಂಬೈ ಪೊಲೀಸ್, 54 ಮಂದಿ ಹೇಳಿಕೆಯ ಆಧಾರ ಇದೆ ಎಂದ ಪೊಲೀಸ್ ಆಯುಕ್ತ.
ಆಗಸ್ಟ್ 6: ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿಕೊಂಡ ಸಿಬಿಐ.
ಆಗಸ್ಟ್ 8: ರಿಯಾ ಅರ್ಜಿಯನ್ನು ವಿರೋಧಿಸಿ ಸುಪ್ರೀಂನಲ್ಲಿ ಪ್ರತಿ ಅರ್ಜಿ ಹಾಕಿದ ಕೆಕೆ ಸಿಂಗ್.
ಆಗಸ್ಟ್ 10: ಮಾಧ್ಯಮಗಳಿಂದ ವಿಚಾರಣೆಯನ್ನು ಪ್ರಶ್ನಿಸಿ ಮತ್ತೊಮ್ಮೆ ಸುಪ್ರೀಂನಲ್ಲಿ ಅರ್ಜಿ ಹಾಕಿದ ರಿಯಾ.
ಆಗಸ್ಟ್ 11: ಮಹಾರಾಷ್ಟ್ರ ಸರ್ಕಾರ ಹಾಗೂ ಬಿಹಾರ ಸರ್ಕಾರ ನಡುವೆ ಜಟಾಪಟಿ. ಬಿಹಾರ ಪೊಲೀಸರು ವ್ಯಾಪ್ತಿ ಮೀರಿ ತನಿಖೆ ನಡೆಸುತ್ತಿದ್ದಾರೆ ಎಂದ ಮಹಾ ಸರ್ಕಾರ. ಈ ನಡುವೆ ರಿಯಾ ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್.
ಆಗಸ್ಟ್ 19: ಪಾಟ್ನಾದಲ್ಲಿ ದಾಖಲಾದ ಎಫ್ಐಆರ್ ಸಿಬಿಐಗೆ ಹಸ್ತಾಂತರಿಸಿದ ವಿಧಾನ ಸರಿಯಿದೆ ಎಂದು ಎತ್ತಿಹಿಡಿದ ಸುಪ್ರೀಂಕೋರ್ಟ್.
ಆಗಸ್ಟ್ 26: ರಿಯಾ ಚಕ್ರವರ್ತಿ ವಿರುದ್ಧ ಜಾರಿ ನಿರ್ದೇಶನಾಲಯದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ನಾರ್ಕೊಟಿಕ್ಸ್ ನಿಯಂತ್ರಣ ವಿಭಾಗ.
ಅಕ್ಟೋಬರ್ 5: ಸುಶಾಂತ್ ಮರಣೋತ್ತರ ಪರೀಕ್ಷೆ ಬಗ್ಗೆ ಎದ್ದಿದ್ದ ಅನುಮಾನ ಬಗೆಹರಿಸಲು ಏಮ್ಸ್ ವೈದ್ಯರಿಂದ ಮತ್ತೊಮ್ಮೆ ಪರೀಕ್ಷೆ. ಸಿಬಿಐಗೆ ಅಂತಿಮ ವರದಿ ಸಲ್ಲಿಕೆ. ಕೊಲೆ ಶಂಕೆ ತಳ್ಳಿ ಹಾಕಿದ ವರದಿ. ಆತ್ಮಹತ್ಯೆ ಎಂದು ಅಂತಿಮ ಷರಾ.
ಮೇ 28, 2021: ಸುಶಾಂತ್ ಫ್ಲಾಟ್ ಮೇಟ್ ಸಿದ್ದಾರ್ಥ್ ಪಿಥಾನಿಯನ್ನು ಡ್ರಗ್ಸ್ ಕೇಸಿನಲ್ಲಿ ಬಂಧಿಸಿದ ಎನ್ ಸಿ ಬಿ. ಸಿಬಿಐ ಇನ್ನೂ ಈ ಬಗ್ಗೆ ಚಾರ್ಚ್ ಶೀಟ್ ದಾಖಲಿಸಿಲ್ಲ. ಸಿಬಿಐ ಅಂತಿಮ ವರದಿ ಬಗ್ಗೆ ಇನ್ನೂ ಕುತೂಹಲ ಇದ್ದೇ ಇದೆ.