ಈ ವರ್ಷವಾದರೂ ಖಾಸಗಿ ಶಾಲಾ ಶುಲ್ಕವಿವಾದಕ್ಕೆ ತೆರೆ ಎಳೆಯುತ್ತಾ ಸರ್ಕಾರ?
ಬೆಂಗಳೂರು, ಜೂ. 23: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಶಾಲೆಗಳು ತೆರೆಯುವ ಮುನ್ನವೇ 'ಶಾಲಾ ಶುಲ್ಕ ವಿವಾದ' ಮತ್ತೆ ರಾಜ್ಯದಲ್ಲಿ ಹುಟ್ಟಿಕೊಂಡಿದೆ. ಅರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಪೋಷಕರು ಕಡಿಮೆ ಶುಲ್ಕ ಮಾಡಿ ಅಂತ ಒಂದೆಡೆ ಗೋಳಾಡುತ್ತಿದ್ದಾರೆ. ಮೂರು ವರ್ಷದಿಂಧ ನಾವು ಸಂಕಷ್ಟಕ್ಕೆ ಒಳಗಾಗಿದ್ದೇವೆ ಎಂಬುದು ಖಾಸಗಿ ಆಡಳಿತ ಮಂಡಳಿಗಳ ಒತ್ತಾಯ. ಇದರ ನಡುವೆ ಶುಲ್ಕ ವಿವಾದ ಹೈಕೋರ್ಟ್ ಮೆಟ್ಟಿಲೇರಿದ್ದು, ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವ ಪ್ರಸ್ತಾಪವನ್ನು ಶಿಕ್ಷಣ ಇಲಾಖೆ ನ್ಯಾಯಾಲಯಕ್ಕೆ ಮನವಿ ಮಾಡಿದೆ. ವಾರ್ಷಿಕ ಶುಲ್ಕದಲ್ಲಿ ಶೇ. 25 ರಷ್ಟು ಶುಲ್ಕ ವಿನಾಯಿತಿ ವಿವಾದ ಇದೀಗ ನ್ಯಾಯಾಲಯದ ಅಂಗಳಕ್ಕೆ ಹೋಗಿದೆ.
ಶುಲ್ಕ ವಿವಾದದ ಹಿನ್ನೆಲೆ
ಕೊರೊನಾ ಸೋಂಕು ಅಪ್ಪಳಿಸಿದ ಪರಿಣಾಮ ಕೆಲಸ ಕಳೆದುಕೊಂಡ ಪೋಷಕರು ಶಾಲಾ ಶುಲ್ಕ ಕಟ್ಟಲಾಗದೇ ಸಂಕಷ್ಟ ಎದುರಿಸಿದರು. ವಿದ್ಯಾರ್ಥಿಗಳ ದಾಖಲಾತಿ ಇಲ್ಲದೇ, ದಾಖಲಾದವರು ಶುಲ್ಕ ಪಾವತಿಸದ ಪರಿಣಾಮ ಖಾಸಗಿ ಶಾಲೆಗಳು ಕೂಡ ಶಿಕ್ಷಕರಿಗೆ ವೇತನ ನೀಡದೇ ಹಿಂದೆಂದೂ ಎದುರಿಸದ ಸಂಕಷ್ಟ ಎದುರಿಸುತ್ತಿವೆ. ಪೋಷಕರ ಮತ್ತು ಖಾಸಗಿ ಶಾಲೆ ಆಡಳಿತ ಮಂಡಳಿಗಳ ನಡುವಿನ ತಿಕ್ಕಾಟ ಇತ್ಯರ್ಥ ಮಾಡುವ ನಿಟ್ಟಿನಲ್ಲಿ ಮಧ್ಯ ಪ್ರವೇಶಿಸಿದ ಸರ್ಕಾರ ಶೇ. 30 ರಷ್ಟು ಶಾಲಾ ಶುಲ್ಕ ಕಡಿತ ಮಾಡಬೇಕು ಎಂದು ಸೂಚಿಸಿತು. ಕೇವಲ ಶಾಲಾ ಶುಲ್ಕ ಮಾತ್ರ ಪಡೆಯಬೇಕು. ಅದರಲ್ಲಿ ಶೇ. 30 ರಷ್ಟು ಕಡಿತ ಮಾಡಬೇಕೆಂಬ ಸರ್ಕಾರದ ತೀರ್ಮಾನ ಅವೈಜ್ಞಾನಿಕ ಎಂಬ ವಾದ ಮುಂದಿಟ್ಟುಕೊಂಡು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಕೋರ್ಟ್ ಮೊರೆ ಹೋದವು. ಸದ್ಯ ಈ ಪ್ರಕರಣ ವಿಚಾರಣೆ ನಡೆಯುತ್ತಿದ್ದು, ಇದೀಗ ಶಿಕ್ಷಣ ಇಲಾಖೆ 2021-22 ನೇ ಸಾಲಿನ ಶುಲ್ಕ ವಿವಾದ ಇತ್ಯರ್ಥಕ್ಕೆ ಹೊಸ ಮಾರ್ಗ ಹಿಡಿದಿದೆ.
ಶಿಕ್ಷಣ ಸಚಿವರ ಅಡ್ಜೆಸ್ಟ್ಮೆಂಟ್ ಸೂತ್ರ
ಪ್ರಸಕ್ತ ಸಾಲಿನ ಶುಲ್ಕ ವಿವಾದ ಕುರಿತು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಮ್ಮ ಫೇಸ್ ಬುಕ್ ವಾಲ್ನಲ್ಲಿ ಪೋಷಕರ ಮತ್ತು ಖಾಸಗಿ ಶಾಲಾ ಸಂಸ್ಥೆಗಳ ಸಮಸ್ಯೆಗಳನ್ನು ಭಾವುಕರಾಗಿಯೇ ಹಂಚಿಕೊಂಡಿದ್ದಾರೆ. "ಇಡೀ ಸಮಾಜ ಆರ್ಥಿಕವಾಗಿ ಜರ್ಜರಿತವಾದಂತೆ ಪೋಷಕರು ಸಹ ಶುಲ್ಕ ಕಟ್ಟಲು ಅಸಮರ್ಥರಾದರು. ಇದರ ಪರಿಣಾಮ ಖಾಸಗಿ ಶಾಲಾ ಶಿಕ್ಷಕರಿಗೆ ವೇತನ ದೊರಕುವುದರಲ್ಲಿ ಸಮಸ್ಯೆ ಉಂಟಾಯಿತು. ಅನೇಕ ಶಾಲೆಗಳಲ್ಲಿ ಶಿಕ್ಷಕರಿಗೆ ಅರ್ಧವೇತನ, ಅಥವಾ ವೇತನವೇ ದೊರಕದ ಪರಿಸ್ಥಿತಿ ನಿರ್ಮಾಣವಾಯಿತು. ಅನೇಕ ಕಡೆ ಶಿಕ್ಷಕರು ತಮ್ಮ ವೃತ್ತಿಯನ್ನು ತೊರೆದು ಜೀವನ ನಿರ್ವಹಣೆಗೆ ಬೇರೆ ಬೇರೆ ಕೆಲಸಗಳಿಗೆ ಶರಣಾದರು. ಹಲವೆಡೆ ಶಾಲಾ ವ್ಯವಸ್ಥಾಪಕ ಮಂಡಳಿ ಹಾಗೂ ಪೋಷಕರ ನಡುವ ಸಂಘರ್ಷದ ವಾತಾವರಣ ಸೃಷ್ಟಿಯಾಯಿತು. ಶಿಕ್ಷಣ ಇಲಾಖೆಗೆ ಈ ಕುರಿತು ಅನೇಕ ದೂರುಗಳು ಬಂದಾಗ ಶಾಲೆಗಳು ಮತ್ತು ಪೋಷಕ ರು ಒಟ್ಟಿಗೆ ಕುಳಿತು ಸೂಕ್ತ ಸೂತ್ರಕ್ಕೆ ಬರಲು ಸೂಚಿಸಿದೆವು. ಶಾಲೆಗಳು ಪೋಷಕರ ಪರಿಸ್ಥಿತಿಯನ್ನು ಅರಿಯಬೇಕು. ಅದೇ ರೀತಿ ಪೋಷಕರು ಶಾಲಾ ಶಿಕ್ಷಕರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಇಬ್ಬರಿಗೂ ಹಿತ ಎನಿಸಬಹುದಾದ ನಿರ್ಣಯ ತೆಗೆದು ಕೊಳ್ಳುವುದು ಅಗತ್ಯ ಎಂಬುದನ್ನು ಅನೇಕ ಬಾರಿ ನಾನು ತಿಳಿಸಿದೆ ಎಂದು ಸುರೇಶ್ ಕುಮಾರ್ ಹಂಚಿಕೊಂಡಿದ್ದಾರೆ.
ಈ ಬಾರಿಯ ಸೂತ್ರ ಏನು ?
''ಪೋಷಕರ ಮತ್ತು ಶಾಲಾ ಆಡಳಿತ ಮಂಡಳಿಯ ತಿಕ್ಕಾಟದಲ್ಲಿ ವಿದ್ಯಾರ್ಥಿಗಳು ಬಡವಾಗಬಾರದು. ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಬಾರದು. ತಮ್ಮ ತಂದೆ ತಾಯಿ ಇಷ್ಟಪಟ್ಟು ತಮ್ಮನ್ನು ಸೇರಿಸಿದ ಶಾಲೆಯ ವಿರುದ್ಧವೇ ನಮ್ಮ ತಂದೆ ತಾಯಿ ಘೋಷಣೆ ಕೂಗುವ ಸನ್ನಿವೇಶವನ್ನು ಮಕ್ಕಳು ಗಮನಿಸಿದಾಗ ಆಗುವ ಪರಿಣಾಮವೇನು? ಶಾಲೆಗಳು ಆರ್ಥಿಕ ಅಶಕ್ತರಾದ ಪೋಷಕರಿಗೆ ಶೇ. 25 ರಷ್ಟು ರಿಯಾಯಿತಿ ನೀಡುವುದು ಸೂಕ್ತ. ಶಕ್ತ ಪೋಷಕರು ಶಾಲಾ ಶುಲ್ಕ ಪಾವತಿಸಿ ಶಿಕ್ಷಕರ ಉತ್ತಮ ಬದುಕಿಗೂ ಸ್ಪಂದಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಸಲಹೆ ನೀಡಲು ಹೈ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಗಳ ನೇತೃತ್ವದಲ್ಲಿ ಸಮಿತಿ ರಚಿಸಬೇಕೆಂಬ ಮನವಿಯನ್ನು ಶಿಕ್ಷಣ ಇಲಾಖೆಯ ಪರವಾಗಿ ಕಳೆದ ವಾರ ಹೈಕೋರ್ಟ್ ಮುಂದೆ ಮಂಡಿಸಲಾಗಿದೆ,'' ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಹೈಕೋರ್ಟ್ನಲ್ಲಿ ಆಕ್ಷೇಪ
ಶಿಕ್ಷಣ ಇಲಾಖೆಯ ಈ ಪ್ರಸ್ತಾಪಕ್ಕೆ ಆಕ್ಷೇಪಣೆ ವ್ಯಕ್ತಪಡಿಸಲು ಹೈಕೋರ್ಟ್ ಒಂದು ವಾರ ಕಾಲವಾಶ ನೀಡಿದೆ. ಶಿಕ್ಷಣ ತಜ್ಞರು, ಪೋಷಕರ ಪ್ರತಿನಿಧಿಗಳು, ಖಾಸಗಿ ಶಾಲೆಗಳ ಪ್ರತಿನಿಧಿಗಳ ಒಳಗೊಂಡ ಸಮಿತಿ ರಚಿಸಿ, ಸಮಿತಿ ನೀಡುವ ಶಿಫಾರಸು ಜಾರಿಗೆ ತರುವುದಾಗಿ ಶಿಕ್ಷಣ ಸಚಿವರು ಹೇಳಿಕೊಂಡಿದ್ದಾರೆ. ಈ ಭಾರಿಯೂ ಶಾಲಾ ಶುಲ್ಕ ಗೊಂದಲದಲ್ಲಿಯೇ ಶೈಕ್ಷಣಿಕ ವರ್ಷ ಆರಂಭವಾಗಿದೆ. ಇನ್ನು ಸಮಿತಿ ರಚನೆಯಾಗಿ ನೀಡುವ ಸಲಹೆಗಳನ್ನು ಒಪ್ಪಿ ಶಿಫಾರಸು ಮಾಡವುದು ಯಾವಾಗ ಎಂಬ ಪ್ರಶ್ನೆ ಕೂಡ ಎದುರಾಗಿದೆ.
ಶಿಕ್ಷಣ ಸಂಸ್ಥೆಗಳ ಪ್ರತಿರೋಧ
ಕಳೆದ ವರ್ಷ ಶೇ. 30 ರಷ್ಟು ಶಾಲಾ ಶುಲ್ಕ ಕಡಿಮೆ ಮಾಡಲು ಸರ್ಕಾರ ಸೂಚಿಸಿತ್ತು. ಮಧ್ಯಮ ಹಾಗೂ ಕೆಳ ವರ್ಗದ ಬಹುತೇಕ ಶಾಲೆಗಳು ಶೇ. 20 ರಷ್ಟು ಶುಲ್ಕ ಕಡಿಮೆ ಮಾಡಿವೆ. ವಿಪರ್ಯಾಸವೆಂದರೆ, ಶೇ. 50 ರಷ್ಟು ವಿದ್ಯಾರ್ಥಿಗಳು ಶಾಲೆಗೆ ದಾಖಲಾತಿ ಆಗಿಲ್ಲ. ಇನ್ನು ದಾಖಲಾತಿ ಆದವರ ಪೈಕಿ ಶೇ. 50 ರಷ್ಟ್ ಶುಲ್ಕ ವಸೂಲಿಯಾಗಿಲ್ಲ. ಬಾಕಿ ಶಾಲಾ ಶುಲ್ಕ ಪಾವತಿ ಮಾಡುವಂತೆ ಶಿಕ್ಷಣ ಸಚಿವರು ಸಣ್ಣ ಮನವಿ ಮಾಡಿಲ್ಲ. ಕಳೆದ ಮೂರು ವರ್ಷದಿಂದ ಶಾಲಾ ಶುಲ್ಕ ಹೆಚ್ಚಿಸಿಲ್ಲ. ಈ ವರ್ಷ ಹೆಚ್ಚಳ ಮಾಡುವ ಪ್ರಸ್ತಾಪವಿಲ್ಲ. ಆದರೆ, ಕನಿಷ್ಠ ಶಿಕ್ಷಣ ಸಂಸ್ಥೆಗಳ ಅಸ್ತಿತ್ವ ಉಳಿಸುವ ನಿಟ್ಟಿನಲ್ಲಿ ಶುಲ್ಕ ನಗಿದಿ ಮಾಡಲು ಸರ್ಕಾರ ಅವಕಾಶ ನೀಡಬೇಕು. ಶೇ. 25 ರಷ್ಟು ಶಾಲಾ ಶುಲ್ಕ ಕಡಿತ ಅಸಾಧ್ಯ. ರಾಜಸ್ತಾನದಲ್ಲಿ ಉಂಟಾಗಿದ್ದ ಶಾಲಾ ಶುಲ್ಕ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಶೇ. 10 ರಷ್ಟು ಶಾಲಾ ಶುಲ್ಕ ಕಡಿತಕ್ಕೆ ಅವಕಾಶ ನೀಡಿತ್ತು. ಯಾವ ವೈಜ್ಞಾನಿಕ ಆಧಾರವಾಗಿಟ್ಟುಕೊಂಡು ಶಿಕ್ಷಣ ಸಚಿವರು ಶೇ. 25 ರಷ್ಟು ಶಾಲಾ ಶುಲ್ಕ ಕಡಿತಕ್ಕೆ ಪ್ರಸ್ತಾಪ ಮಾಡುತ್ತಾರೆ. ಈ ಕುರಿತು ಖಾಸಗಿ ಶಾಲೆಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಹೈಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸುತ್ತೇವೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟಗಳ ಪ್ರತಿನಿಧಿಗಳು ಪ್ರಶ್ನೆ ಮಾಡಿದ್ದಾರೆ.