ಈ ಜಿಲ್ಲೆಯಲ್ಲಿ ಗೆದ್ದೋನೇ ಬಾಸ್: ಕುಂದಾನಗರಿಯಲ್ಲಿ ಯಾರಿಗೆ ಲಾಸ್?
ಬೆಳಗಾವಿ, ನವೆಂಬರ್.13: ಸುಪ್ರೀಂಕೋರ್ಟ್ ತೀರ್ಪು ಬರೋವರೆಗೂ ಮಾತ್ರ ಬೇರೆಯವರ ಹವಾ. ಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆ ರಾಜ್ಯದಲ್ಲಿ ಅನರ್ಹ ಶಾಸಕರದ್ದೇ ಹವಾ. ಇಂಥದೊಂದು ಟಾಕ್ ಇದೀಗ ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿದೆ.
ಕಾಂಗ್ರೆಸ್ ಗೆ ಕೈ ಕೊಟ್ಟ 17 ಅನರ್ಹ ಶಾಸಕರ ಆಟ ಇನ್ನೇನು ಮುಗೀತು ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಕಾಂಗ್ರೆಸ್ ಕೂಡಾ ಉಪ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಪತನವಾಗುತ್ತದೆ ಎಂದುಕೊಂಡಿತ್ತು. ಆದರೆ, ಈಗ ಎಲ್ಲ ಲೆಕ್ಕಾಚಾರಗಳು ಉಲ್ಟಾ ಹೊಡೆಯುವ ಲಕ್ಷಣಗಳು ಎದ್ದು ಕಾಣುತ್ತಿವೆ.
ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು
ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎನ್.ವಿ.ರಮಣ್ ನೇತೃತ್ವದ ತ್ರಿಸದಸ್ಯ ಪೀಠ ಮಹತ್ವದ ತೀರ್ಪು ಹೊರಡಿಸಿದೆ. ಈ ಹಿಂದಿನ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ನೀಡಿದ್ದ ಅನರ್ಹತೆ ತೀರ್ಪನ್ನು ಕೋರ್ಟ್ ಎತ್ತಿ ಹಿಡಿದಿದೆ. ಆದರೆ, 15 ಮಂದಿ ಅನರ್ಹ ಶಾಸಕರಿಗೂ ಕೂಡಾ ಕೋರ್ಟ್ ಸಿಹಿಸುದ್ದಿ ನೀಡಿದೆ.
ಅನರ್ಹ ಶಾಸಕರಿಗೆ ಕಣಕ್ಕಿಳಿಯಲು ಚಾನ್ಸ್!
ರಾಜ್ಯದ 15ನೇ ವಿಧಾನಸಭಾ ಚುನಾವಣೆ ಅವಧಿ ಮುಗಿಯುವವರೆಗೂ ಅಂದರೆ ಮುಂದಿನ ಮೂರೂವರೆ ವರ್ಷಗಳವರೆಗೂ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಅನರ್ಹ ಶಾಸಕರಿಗೆ ಕೋರ್ಟ್ ಸಿಹಿಸುದ್ದಿ ಕೊಟ್ಟಿದೆ. 17 ಮಂದಿ ಶಾಸಕರನ್ನು ಅನರ್ಹಗೊಳಿಸಿದ ಕ್ರಮವನ್ನು ಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಶಾಸಕರ ಅನರ್ಹತೆಯ ಅವಧಿಯನ್ನು ಸ್ಪೀಕರ್ ನಿರ್ಧರಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ. ಜೊತೆಗೆ ರಾಜ್ಯದಲ್ಲಿ ಘೋಷಣೆ ಆಗಿರುವ 15 ಉಪ ಚುನಾವಣೆಯಲ್ಲಿ ಅನರ್ಹಗೊಂಡ ಶಾಸಕರು ಸ್ಪರ್ಧಿಸಬಹುದು ಎಂದು ಕೋರ್ಟ್ ತೀರ್ಪು ನೀಡಿದೆ.
ಕನಕಗಿರಿ ಬಂಡೆ ವಿರುದ್ಧ ಬಂಡೆದ್ದ ಬ್ರದರ್ಸ್
15 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಫೈಕಿ ಎಲ್ಲ ಪಕ್ಷಗಳಿಗೂ ಪ್ರತಿಷ್ಠೆ ಆಗಿರುವುದು ಬೆಳಗಾವಿ. ಜಿಲ್ಲೆಯ ರಾಜಕಾರಣವೇ ಕಳೆದ ಮೈತ್ರಿ ಸರ್ಕಾರಕ್ಕೆ ಮುಳುವಾಗಿತ್ತು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದವು. ಜಿಲ್ಲೆಯ ರಾಜಕಾರಣಕ್ಕೆ ಟ್ರಬಲ್ ಶೂಟರ್ ಎಂಟ್ರಿ ಕೊಟ್ಟಿದ್ದು, ಜಾರಕಿಹೊಳಿ ಬ್ರದರ್ಸ್ ಕೆರಳಿ ನಿಲ್ಲುವಂತೆ ಮಾಡಿತ್ತು. ದೋಸ್ತಿ ಸರ್ಕಾರದ ವಿರುದ್ಧ ತೊಡೆ ತಟ್ಟಿದ ಜಾರಕಿಹೊಳಿ ಸಹೋದರರ ಪೈಕಿ ಸತೀಶ್ ಸೈಲೆಂಟ್ ಆದರು. ಆದರೆ, ರಮೇಶ್ ಜಾರಕಿಹೊಳಿ ಅಷ್ಟಕ್ಕೆ ಸುಮ್ಮನಾಗಲಿಲ್ಲ.
ಸುಪ್ರೀಂಕೋರ್ಟ್ ತೀರ್ಪು: ಅನರ್ಹ ಶಾಸಕರು ಏನಂತಾರೆ?
ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದ ಸಾಹುಕಾರ್!
ಪಿಎಲ್ ಡಿ ಬ್ಯಾಂಕ್ ಚುನಾವಣೆ ಜಾರಕಿಹೊಳಿ ಬ್ರದರ್ಸ್ ಗೆ ಪ್ರತಿಷ್ಠೆಯಾಗಿತ್ತು. ಇದೇ ವಿಚಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬೆಂಬಲ ನೀಡಿದ್ದು, ರಮೇಶ್ ಜಾರಕಿಹೊಳಿ ಕಣ್ಣು ಕೆಂಪಾಗಿಸಿತು. ಅಲ್ಲಿಂದ ಶುರುವಾಗಿದ್ದೇ ನೋಡಿ ಕುಂದಾನಗರಿಯಲ್ಲಿ ಕಾದಾಟ. ಸ್ವಪಕ್ಷದ ವಿರುದ್ಧವೇ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಬಂಡಾಯ ಬಾವುಟ ಹಾರಿಸಿದರು. ಮೈತ್ರಿ ಸರ್ಕಾರಕ್ಕೂ ತಮ್ಮ ಬೆಂಬಲವಿಲ್ಲ ಎಂಬಂತೆ ಸೆಡ್ಡು ಹೊಡೆದರು.
ಅಂದು ಶತ್ರುವಿನ ಶತ್ರು ಆಗಿದ್ದನು ಮಿತ್ರ
ರಮೇಶ್ ಜಾರಕಿಹೊಳಿಯನ್ನು ಇಟ್ಟುಕೊಂಡೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈತ್ರಿ ಸರ್ಕಾರದ ವಿರುದ್ಧ ತಮ್ಮ ರಾಜಕೀಯ ದಾಳ ಉರುಳಿಸುತ್ತಿದ್ದರು ಎನ್ನಲಾಗುತ್ತಿತ್ತು. ನಂತರದ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ವಿರುದ್ಧವೇ ರಮೇಶ್ ಜಾರಕಿಹೊಳಿ ಕೆರಳಿ ನಿಂತರು. ಅಲ್ಲಿಂದ ಮುಂದೆ ಅತೃಪ್ತರನ್ನು ಒಗ್ಗೂಡಿಸುವ ಕೆಲಸ ಶುರುವಾಯಿತು. ಮೈತ್ರಿ ಸರ್ಕಾರದಿಂದ ನೊಂದಿರುವ ಶಾಸಕರನ್ನೆಲ್ಲ ಒಗ್ಗೂಡಿಸಿ, ಬಂಡಾಯ ಬಾವುಟ ಹಾರಿಸಲು ಬೆಳಗಾವಿ ಸಾಹುಕಾರ್ ಮುಂದಾದರು. ಇದರ ಪರಿಣಾಮದಿಂದ 17 ಶಾಸಕರು ಒಂದಾಗಿ ರಾಜೀನಾಮೆ ಸಲ್ಲಿಸಿದರು. ಅಂದುಕೊಂಡಂತೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನವಾಯಿತು.
ಅನರ್ಹ ಶಾಸಕರ ಕುರಿತು ಸುಪ್ರೀಂ ತೀರ್ಪು: ಅನರ್ಹರ ಪರ ವಕೀಲ ಹೇಳಿದ್ದೇನು?
ಬೆಳಗಾವಿಯಲ್ಲಿ ಯಾರ ಬಾಯಿಗೆ ಕುಂದಾ?
ಈ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದೇ ಬೆಳಗಾವಿಯ ರಾಜಕಾರಣ. ಇಲ್ಲಿ ಹೊತ್ತಿಕೊಂಡ ಬೆಂಕಿ ಇಡೀ ಮೈತ್ರಿ ಸರ್ಕಾರವನ್ನೇ ಬಲಿ ತೆಗೆದುಕೊಂಡಿತು. ಈಗ ಮತ್ತೆ ಇದೇ ಬೆಳಗಾವಿಯ ಮೇಲೆ ಎಲ್ಲರ ಲಕ್ಷ್ಯ ನೆಟ್ಟಿದೆ. ಏಕೆಂದರೆ ಈ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಗೋಕಾಕ್, ಅಥಣಿ, ಕಾಗವಾಡಗಳ ಸದ್ಯದ ರಾಜಕೀಯ ಚಿತ್ರಣ ಹೇಗಿರುತ್ತದೆ ಎಂಬುದರ ಕುರಿತು ಸಂಪೂರ್ಣ ವರದಿ ನಿಮ್ಮ ಮುಂದಿದೆ.
ಗೋಕಾಕ್ ನಲ್ಲಿ ಕಾಂಗ್ರೆಸ್ ಗೆ ಗುದ್ದು ಕೊಡುತ್ತಾರಾ ಸಾಹುಕಾರ್?
ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬದ್ದೇ ರಾಜಕಾರಣ. ಇಲ್ಲಿ ಇವರಿಗೆ ಪರ್ಯಾಯ ನಾಯಕರೇ ಇಲ್ಲ. ಅದರಲ್ಲೂ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿಗೆ ಸೆಡ್ಡು ಹೊಡೆಯುವಂತಾ ನಾಯಕರೇ ಇಲ್ಲ ಎಂದು ಹೇಳಲಾಗುತ್ತಿದೆ. ಪ್ರತಿಬಾರಿ ಗೋಕಾಕ್ ನಲ್ಲಿ ರಮೇಶ್ ಜಾರಕಿಹೊಳಿ ಗೆಲುವು ನಿಶ್ಚಿತವಾಗಿರುತ್ತದೆ. ಈಗ ಎದುರಾಗಿರುವ ಮಿನಿ ಸಮರದಲ್ಲೂ ಸಾಹುಕಾರ್ ಗೆಲುವು ಗ್ಯಾರಂಟಿ ಎನ್ನುವಂತಾ ವಾತಾವರಣ ಎದ್ದು ಕಾಣುತ್ತಿದೆ.
ಅನರ್ಹ ಶಾಸಕರ ತೀರ್ಪು: ಸ್ಪೀಕರ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಗೋಕಾಕ್ ನಲ್ಲಿ ಪೂಜಾರಿಗೆ ಒಲಿದ ಲಕ್ಷ್ಮಿ
ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ರಮೇಶ್ ಜಾರಿಕಿಹೊಳಿ ಬಿಜೆಪಿಯಿಂದ ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಆಗಿದೆ. ಆದರೆ, ಕಾಂಗ್ರೆಸ್ ನಲ್ಲಿ ರಮೇಶ್ ಜಾರಕಿಹೊಳಿಗೆ ಸೆಡ್ಡು ಹೊಡೆಯುವಂತಾ ನಾಯಕರೇ ಇಲ್ಲ. ಇದರ ನಡುವೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಕಟ್ಟಾಳು ಅಶೋಕ್ ಪೂಜಾರಿಗೆ ಗೋಕಾಕ್ ನಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿಸಲು ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ. ಆ ಮೂಲಕ, ರಮೇಶ್ ಜಾರಕಿಹೊಳಿಗೆ ಸವಾಲ್ ಎಸೆಯಲು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಂತ್ರ ಹೆಣೆದಿದ್ದಾರೆ. ಇದರ ಹಿಂದೆ ಮತ್ತದೇ ಒನ್ ಆಂಡ್ ಒನ್ಲಿ ಲೀಡರ್ ಡಿ.ಕೆ.ಶಿವಕುಮಾರ್ ಇದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಾಗವಾಡದಲ್ಲಿ 'ಶ್ರೀಮಂತ'ನ ಕೈ ಹಿಡಿದ ಕೇಸರಿ!
ಬೆಳಗಾವಿ ಜಿಲ್ಲೆಯ ಮತ್ತೊಂದು ವಿಧಾನಸಭಾ ಕ್ಷೇತ್ರವೇ ಕಾಗವಾಡ. ಇಲ್ಲಿ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್ ಗೆ ಬಿಜೆಪಿ ನಿಷ್ಠೆ ತೋರುವ ಲಕ್ಷಣಗಳು ಎದ್ದು ಕಾಣುತ್ತಿವೆ. ಕಳೆದ ಬಾರಿ ಕಾಂಗ್ರೆಸ್ ನಿಂದ ಗೆದ್ದ ಶ್ರೀಮಂತ್ ಪಾಟೀಲ್ ಬಿಜೆಪಿಗೆ ಸೇರುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಅಷ್ಟೇ ಅಲ್ಲ, ಈ ಬಾರಿ ಕಮಲ ಹಿಡಿದು ಅಖಾಡಕ್ಕೆ ಇಳಿಯಲು ಶ್ರೀಮಂತ್ ಪಾಟೀಲ್ ರೆಡಿಯಾಗಿದ್ದಾರೆ. ಬಿಜೆಪಿಯ ಟಿಕೆಟ್ ಈ ಬಾರಿ ಶ್ರೀಮಂತ್ ಪಾಟೀಲ್ ಅಥವಾ ಅವರ ಪುತ್ರ ಶ್ರೀನಿವಾಸ್ ಪಾಟೀಲ್ ಗೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಮುಖ್ಯಮಂತ್ರಿ ಮನೆ ಬಾಗಿಲು ಹುಡುಕಿಕೊಂಡು ಬಂದ 'ಲಕ್ಷ್ಮಿ'
ಕೈಕೊಟ್ಟ ಬಿಜೆಪಿಗೆ 'ಕಾಗೆ' ಹಾರಿಸುತ್ತಾರಾ ರಾಜು?
ಕಾಗವಾಡದಲ್ಲಿ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್ ಗೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿದ್ದು, ಮಾಜಿ ಸಚಿವ ರಾಜು ಕಾಗೆ ಕಣ್ಣು ಕೆಂಪಾಗಿಸಿದೆ. ಇತ್ತೀಚಿಗೆ ಬಂಡಾಯ ಬಾವುಟ ಹಾರಿಸಿದ್ದ ರಾಜು ಕಾಗೆ ಕಾಂಗ್ರೆಸ್ ಗೆ ಹೋಗುವುದು ಬಹುತೇಕ ಕನ್ಫರ್ಮ್ ಆಗಿದೆ. ಕಾಂಗ್ರೆಸ್ ನಿಂದಲೇ ಟಿಕೆಟ್ ಪಡೆದು ಮತ್ತೆ ಕಾಗವಾಡದಲ್ಲಿ ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗುತ್ತಿದೆ. ಇದು ಬಿಜೆಪಿ ಪಾಲಿಗೆ ಸ್ವಲ್ಪ ಹಿನ್ನಡೆ ಅನುಭವಿಸುವಂತೆ ಮಾಡಿದೆ.
'ಮಹೇಶ್ವರ'ನಿಗೆ ಅಡ್ಡಿಯಾಗುತ್ತಾ 'ಲಕ್ಷ್ಮಣ' ರೇಖೆ?
ಬೆಳಗಾವಿ ಜಿಲ್ಲೆಯಲ್ಲೇ ಕುತೂಹಲ ಕೆರಳಿಸಿರುವ ಮತ್ತೊಂದು ಕ್ಷೇತ್ರವೇ ಅಥಣಿ. ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಕ್ಷೇತ್ರದಲ್ಲಿ ಕಳೆದ ಬಾರಿ ಮಹೇಶ್ ಕುಮಟಳ್ಳಿ ಜಯಭೇರಿ ಬಾರಿಸಿದ್ದರು. ಅದೇ ಶಾಸಕ ಇಂದು ಅನರ್ಹಗೊಂಡಿದ್ದು, ಅವರಿಗೆ ಟಿಕೆಟ್ ನೀಡಲು ಬಿಜೆಪಿ ಸ್ಕೆಚ್ ಹಾಕಿಕೊಂಡಿದೆ. ಇದರಲ್ಲಿ ಬಿಜೆಪಿಗೆ ಮತ್ತೊಂದು ಸವಾಲು ಎದುರಾಗಿದೆ. ಈಗಾಗಲೇ ಉಪ ಮುಖ್ಯಮಂತ್ರಿ ಆಗಿರುವ ಲಕ್ಷ್ಮಣ್ ಸವದಿಗೆ ಟಿಕೆಟ್ ನೀಡಬೇಕೋ ಅಥವಾ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಬೇಕೋ ಎಂಬುದು ಪ್ರಶ್ನೆಯಾಗಿ ಕಾಡುತ್ತಿದೆ. ಆದರೆ, ಅಥಣಿಯಲ್ಲಿ ಕಾಂಗ್ರೆಸ್ ಗೆ ಯಾವುದೇ ಗೊಂದಲಗಳಿಲ್ಲ. ಗಜಾನನ ಮಂಗಸೂಳಿ ಎಂಬುವವರನ್ನು ಅಖಾಡಕ್ಕಿಳಿಸಲು ಕಾಂಗ್ರೆಸ್ ತಂತ್ರ ಹೆಣೆದಿದೆ.
ಇನ್ನೇನಿದ್ದರೂ ಸೋಲು-ಗೆಲುವಿನ ಲೆಕ್ಕಾಚಾರ
ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದ್ದಾಗಿದೆ. ನವೆಂಬರ್.18ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಡಿಸೆಂಬರ್.05ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಅದಾಗಿ ಮೂರು ದಿನಕ್ಕೆ ಅಂದರೆ ಡಿಸೆಂಬರ್.11ರಂದು ಉಪ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ. ಅಂದು ಅನರ್ಹಗೊಂಡ ಶಾಸಕರ ಬಗ್ಗೆ ಪ್ರಜೆಗಳ ತೀರ್ಪು ಏನು ಎಂಬುದು ಗೊತ್ತಾಗಲಿದೆ.