ಬೇಸಿಗೆಯಲ್ಲಿ ಎಚ್ಚರ ತಪ್ಪಿದರೆ ಮಲೇರಿಯಾ ಬರಬಹುದು!
ಮನೆಯಿಂದ ಹೊರಗೆ ಬಂದರೆ ನೆತ್ತಿ ಸುಡುವ ಬಿಸಿಲು, ಮನೆಯೊಳಗಿದ್ದರೆ ಮೈಯೆಲ್ಲ ಉರಿಯುವ ಸೆಕೆ. ಹೀಗೆ ಬೇಸಿಗೆ ಎಂದರೆ ಒಂಥರಾ ಹಿಂಸೆ ಎನಿಸಿ ಬಿಡುತ್ತದೆ. ದೈಹಿಕ ಶ್ರಮ ವಹಿಸಿ ಕೆಲಸ ಮಾಡುವವರ ಪಾಡಂತು ಹೇಳ ತೀರದಾಗಿದೆ.
ಬೇಸಿಗೆ ಕಾಲದ ಕೊನೆಯ ದಿನಗಳಂತು ಭಯಾನಕವಾಗಿರುತ್ತದೆ. ಹಗಲಿನಲ್ಲಿ ಮೈಸುಡುವ ಬಿಸಿಲಿಗೆ ಸುಸ್ತಾದವರು ರಾತ್ರಿಯಾದರೂ ನೆಮ್ಮದಿಯಿಂದ ಮಲಗೋಣ ಎಂದರೆ ಸೆಕೆ ಜತೆಗೆ ಸೊಳ್ಳೆಗಳ ಹಾವಳಿಯೂ ಜಾಸ್ತಿಯಾಗಿರುತ್ತದೆ. ಏಕೆ ಹೀಗೆ ಎಂಬ ಪ್ರಶ್ನೆ ನಮ್ಮನ್ನು ಕಾಡುವುದು ಸಹಜ. ಈಗಾಗಲೇ ಬೇಸಿಗೆ ಕಾಲದ ಕೊನೆಯ ಹಂತಕ್ಕೆ ಬಂದು ತಲುಪಿದ್ದೇವೆ. ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಮಳೆಯೂ ಸುರಿದಿದೆ. ಮಳೆ ಬಂದಾಗ ಇಡೀ ವಾತಾವರಣ ತಂಪಾಗಿ ನೆಮ್ಮದಿಯುಸಿರು ಬಿಟ್ಟರೂ ಹಗಲಲ್ಲಿ ಮತ್ತೆ ಸೂರ್ಯನ ಪ್ರಖರತೆ ನಮ್ಮನ್ನು ಕಾಡತೊಡಗುತ್ತದೆ.
ಬೇಸಿಗೆಯಲ್ಲಿ ಕಾಡುವ ಕಾಮಾಲೆಯತ್ತ ಜಾಗ್ರತೆ ಇರಲಿ!
ಸೊಳ್ಳೆಗಳೆಷ್ಟು ಅಪಾಯಕಾರಿ ಗೊತ್ತಾ?
ಇದೀಗ ಸುರಿದ ಮಳೆಗೆ ಅಲ್ಲಲ್ಲಿ ಕೊಳಚೆ ಪ್ರದೇಶಗಳಲ್ಲಿ ಮಳೆ ನೀರು ನಿಂತು, ತ್ಯಾಜ್ಯಗಳು ಒಂದೆಡೆ ಸಂಗ್ರಹಗೊಂಡು ನಮಗೆ ಗೊತ್ತಿಲ್ಲದಂತೆ ಸೊಳ್ಳೆಗಳ ಉತ್ಪತ್ತಿಗೆ ದಾರಿ ಮಾಡಿಕೊಟ್ಟಿದೆ. ಬಹಳಷ್ಟು ಪ್ರದೇಶದಲ್ಲಿ ರಾತ್ರಿಯಾಯಿತೆಂದರೆ ಸೊಳ್ಳೆಗಳ ಹಾವಳಿಗೆ ತತ್ತರಿಸುವಂತಾಗಿದೆ. ಈ ಸೊಳ್ಳೆಗಳು ಎಷ್ಟು ಅಪಾಯಕಾರಿ ಎಂದರೆ ಯಾರಿಗೆ ಬೇಕಾದರೂ ಡೆಂಗ್ಯೂ, ಮಲೇರಿಯಾವನ್ನು ಹರಡಬಲ್ಲವು.
ಮೊದಲಿನಿಂದಲೂ ಬೇಸಿಗೆ ಕಾಲದ ಕೊನೆಯ ದಿನಗಳಲ್ಲಿ ಸೊಳ್ಳೆಗಳು ಒಂದಲ್ಲ ಒಂದು ರೀತಿಯ ಸೋಂಕುಗಳನ್ನು ಹರಡುತ್ತಲೇ ಬಂದಿವೆ. ಅದರಲ್ಲೂ ಈ ಹಿಂದೆ ಮಲೇರಿಯಾ ರೋಗವಂತು ಎಲ್ಲರನ್ನು ಬಿಟ್ಟು ಬಿಡದೆ ಕಾಡುತ್ತಿತ್ತು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೊರೊನಾ ಕಾರಣದಿಂದಾಗಿ ಇತರೆ ರೋಗಗಳ ಬಗ್ಗೆ ಜನ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಮಲೇರಿಯಾ ಹೋಗಿಯೇ ಬಿಟ್ಟಿದೆ ಎನ್ನುವಂತೆಯೂ ಇಲ್ಲ.
ಮಲೇರಿಯಾ ಕಾಡಬಹುದು ಹುಷಾರ್
ಎರಡು ವರ್ಷಗಳ ಕಾಲ ಇನ್ನಿಲ್ಲದಂತೆ ಕಾಡಿದ ಕೊರೊನಾ ಸೋಂಕು ಸ್ವಲ್ಪ ತಗ್ಗಿದೆ. ಕೊರೊನಾ ಭಯದಿಂದಾಗಿ ನಾವು ಬಹಳಷ್ಟು ಜಾಗ್ರತೆ ವಹಿಸಿದ್ದೆವು. ಹಾಗಾಗಿ ಇತರೆ ಮಲೇರಿಯಾ, ಡೆಂಗ್ಯೂ ಕಾಡಿರಲಿಲ್ಲ. ಆದರೆ ಈಗ ಮತ್ತೆ ಜನಜೀವನ ಯಥಾಸ್ಥಿತಿಗೆ ಬಂದಿರುವುದರಿಂದ ಎಂದಿನಂತೆ ಬೇಸಿಗೆಯಲ್ಲಿ ಕಾಡುತ್ತಿದ್ದ ಮಲೇರಿಯಾ ಮತ್ತೆ ಜನರ ಮೇಲೆ ದಾಳಿ ಮಾಡಿದರೂ ಅಚ್ಚರಿ ಪಡಬೇಕಾಗಿಲ್ಲ.
ಕೊರೊನಾ ಕಾಣಿಸಿಕೊಳ್ಳುವ ಮೊದಲು ಬೇಸಿಗೆಯಲ್ಲಿ ಜ್ವರ ಕಾಣಿಸಿಕೊಳ್ಳುತ್ತಿತ್ತು. ಕೆಲವರಿಗೆ ಒಂದೆರಡು ದಿನಗಳಲ್ಲಿ ವಾಸಿಯಾಗುತ್ತಿತ್ತು. ಮತ್ತೆ ಕೆಲವರನ್ನು ಇನ್ನಿಲ್ಲದಂತೆ ಕಾಡಿದ್ದು ಮಾತ್ರವಲ್ಲದೆ ಸಾವಿಗೂ ಕಾರಣವಾಗಿತ್ತು. ಹೀಗೆ ಕಾಡುತ್ತಿದ್ದ ಜ್ವರ ಮಲೇರಿಯಾ ಆಗಿರುತ್ತಿತ್ತು. ಅವತ್ತಿನ ದಿನಗಳಲ್ಲಿ ಮಲೇರಿಯಾ ಕೂಡ ಹಲವರ ಪ್ರಾಣಕ್ಕೆ ಕುತ್ತು ತಂದಿತ್ತು. ಸೊಳ್ಳೆಯಿಂದ ಹರಡುವ ರೋಗದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪ್ರಚಾರ ಮಾಡಿದರೂ ಕೂಡ ಕೆಲವೊಮ್ಮೆ ಗೊತ್ತೇ ಆಗದಂತೆ ಅಟಕಾಯಿಸಿಬಿಡುತ್ತಿತ್ತು.
Summer Health Tips: ಬೇಸಿಗೆಯಲ್ಲಿ ನೀರಿನಿಂದಲೂ ರೋಗಗಳು ಕಾಡಬಹುದು!
ಮಲೇರಿಯಾ ಹರಡುವ ಅನಾಫಿಲೀಸ್
ಇನ್ನು ಮಲೇರಿಯಾದ ಬಗ್ಗೆ ಹೇಳುವುದಾದರೆ ಇದರಲ್ಲಿ ನಾಲ್ಕು ಪ್ರಬೇಧಗಳಿದ್ದು, ಶೀಘ್ರ ಪತ್ತೆ, ತ್ವರಿತ ಚಿಕಿತ್ಸೆ ಎಂಬಂತೆ ರೋಗಕ್ಕೆ ಚಿಕಿತ್ಸೆಯೂ ಲಭ್ಯವಿದ್ದು, ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದಾಗಿದೆ. ಹಾಗೆಂದು ಮಲೇರಿಯಾ ರೋಗದ ನಿರ್ಲಕ್ಷ್ಯವೂ ಸಲ್ಲದು. ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ಜೀವಿಯಿಂದ ಉಂಟಾಗುವ ಮಲೇರಿಯಾ ರೋಗವು ಅನಾಫಿಲೀಸ್ ಜಾತಿಗೆ ಸೇರಿದ ಸೋಂಕಿತ ಹೆಣ್ಣು ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ರೋಗ ಹರಡುತ್ತದೆ.
ಬೇಸಿಗೆ ದಿನಗಳಲ್ಲಿ ಅನಾಫಿಲೀಸ್ ಜಾತಿಯ ಸೊಳ್ಳೆಗಳು ನೀರಿನ ತಾಣಗಳಾದ ಕೆರೆಗಳು, ಬಾವಿಗಳು, ಕಾಲುವೆ, ಹೊಂಡ, ಇತರೆ ಅನುಪಯುಕ್ತ ಘನತ್ಯಾಜ್ಯ ವಸ್ತುಗಳನ್ನು ಆಶ್ರಯ ತಾಣ ಮಾಡಿಕೊಂಡು ಅಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಮುಂದೆ ಮನುಷ್ಯನಿಗೆ ಕಚ್ಚುತ್ತಾ ತನ್ನೊಂದಿಗೆ ಮಲೇರಿಯಾ ರೋಗವನ್ನು ಹರಡುತ್ತಾ ಹೋಗುತ್ತವೆ.
ಸ್ವಯಂ ರಕ್ಷಣಾ ವಿಧಾನ ಸಹಕಾರಿ
ಮಲೇರಿಯಾ ರೋಗವನ್ನು ತಡೆಗಟ್ಟಲು ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಬೇಕು. ಮನೆಗಳ ಕಿಟಕಿ ಬಾಗಿಲುಗಳಿಗೆ ಸೊಳ್ಳೆಗಳು ನುಸುಳದಂತೆ ಜಾಲರಿ ಅಳವಡಿಸಿಕೊಳ್ಳಬೇಕು. ಮಲಗುವ ವೇಳೆ ಸೊಳ್ಳೆ ಪರದೆ ಕಟ್ಟಿಕೊಳ್ಳಬೇಕು. ಮನೆಯ ಸುತ್ತಮುತ್ತಲ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಮಲೇರಿಯಾ ಜ್ವರ ಹೆಚ್ಚು ಪ್ರಕರಣಗಳಿರುವ ಸ್ಥಳಗಳಿಗೆ ಹೋಗಿಬಂದಾಗ ಮಲೇರಿಯಾ ರಕ್ತ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.
ಜ್ವರ ಎಂದಾಕ್ಷಣ ಈಗ ಕೊರೊನಾ ಎಂದು ಭಯಪಡದೆ ರಕ್ತ ಪರೀಕ್ಷೆ ಮಾಡಿಸುವ ಮೂಲಕ ಮಲೇರಿಯಾ ಇದೆಯಾ ಎಂಬುದನ್ನು ತಿಳಿದುಕೊಳ್ಳಬೇಕು. ಜತೆಗೆ ಬೇಸಿಗೆ ಕಾಲವಾಗಿರುವುದರಿಂದ ಶುಚಿತ್ವ ಇಲ್ಲದ ಕಡೆಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಅವು ಮಲೇರಿಯಾದಂತಹ ಕಾಯಿಲೆಯನ್ನು ತರುವ ಕಾರಣ ಅಂತಹ ಪ್ರದೇಶಗಳನ್ನು ಗುರುತಿಸಿ ಸೊಳ್ಳೆಗಳ ನಿರ್ಮೂಲನೆಗೆ ಮುಂದಾಗಬೇಕು.
ಆರೋಗ್ಯದತ್ತ ಕಾಳಜಿ ವಹಿಸೋಣ
ಒಟ್ಟಾರೆಯಾಗಿ ಹೇಳಬೇಕೆಂದರೆ ಬೇಸಿಗೆ ನೆಮ್ಮದಿಯಾಗಿ ಇರುವ ಕಾಲವಂತು ಅಲ್ಲವೇ ಅಲ್ಲ. ಕೆಲಸ, ಓಡಾಟಗಳ ನಡುವೆಯೂ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಒಂದಷ್ಟು ಮುಂಜಾಗ್ರತೆ ವಹಿಸಿ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳುವ ಜಾಣತನವನ್ನು ಬೆಳೆಸಿಕೊಳ್ಳಬೇಕು.