ದಣಿದ ದೇಹಕ್ಕೆ ಉಲ್ಲಾಸ ನೀಡುವ ನಿಂಬೆ ಜ್ಯೂಸ್
ಸಾಮಾನ್ಯವಾಗಿ ಬೇಸಿಗೆಯಲ್ಲಿ ನಿಂಬೆಹಣ್ಣಿನ ಪಾನೀಯಕ್ಕೆ ಹೆಚ್ಚಿನ ಬೇಡಿಕೆಯಿರುತ್ತದೆ. ತನ್ನದೇ ಆದ ರುಚಿ ಮಾತ್ರವಲ್ಲದೆ, ದಣಿವನ್ನು ನಿವಾರಿಸುವ ಶಕ್ತಿ ಇದಕ್ಕಿರುವುದರಿಂದಲೇ ಜನಸಾಮಾನ್ಯರು ಇದನ್ನು ಬಯಸುತ್ತಾರೆ.
ಇಷ್ಟಕ್ಕೂ ಬೇಸಿಗೆಯಲ್ಲಿ ನಿಂಬೆಹಣ್ಣಿನ ಪಾನೀಯವನ್ನು ಏಕೆ ಸೇವಿಸಬೇಕು ಎನ್ನುವುದನ್ನು ನೋಡಿದ್ದೇ ಆದರೆ, ಇದು ಕೇವಲ ಪಾನೀಯವಾಗಿಯಷ್ಟೆ ಉಳಿದಿಲ್ಲ. ಬದಲಾಗಿ ಬೇಸಿಗೆಯ ದಿನಗಳಲ್ಲಿ ಆರೋಗ್ಯವನ್ನು ಕಾಪಾಡುವ ಸಂಜೀವಿನಿಯಾಗಿಯೂ ಗಮನಸೆಳೆಯುತ್ತದೆ.
ಬೇಸಿಗೆಯಲ್ಲಿ ಕಾಡುವ ಕಾಮಾಲೆಯತ್ತ ಜಾಗ್ರತೆ ಇರಲಿ!
ನಿಂಬೆಹಣ್ಣು ದೇಹಕ್ಕೆ ಪೋಷಕ
ಹಾಗಾದರೆ ನಿಂಬೆಹಣ್ಣಿನ ಪಾನೀಯವನ್ನು ಸೇವಿಸುವುದರಿಂದ ಏನೆಲ್ಲ ಉಪಯೋಗವಿದೆ ಎಂಬುದನ್ನು ನೋಡಿದರೆ ಇದು ಬರೀ ದಾಹ ನೀಗುವುದು ಮಾತ್ರವಲ್ಲದೆ, ಹಲವು ರೀತಿಯಲ್ಲಿ ದೇಹಕ್ಕೆ ಪೋಷಕ ಶಕ್ತಿಯನ್ನು ನೀಡುತ್ತದೆ ಎಂಬುದು ಗೊತ್ತಾಗುತ್ತದೆ.
ನಾವು ನಿಂಬೆ ಹಣ್ಣಿನಲ್ಲಿರುವ ಆರೋಗ್ಯಕಾರಿ ಗುಣಗಳ ಪಟ್ಟಿ ಮಾಡುತ್ತಾ ಹೋದರೆ ಅದು ಬೆಳೆಯುತ್ತಾ ಹೋಗುತ್ತದೆ. ಅಷ್ಟೇ ಅಲ್ಲ ಅದರಲ್ಲಿ ಇಷ್ಟೊಂದು ಔಷಧೀಯ ಗುಣಗಳಿವೆಯಾ ಎಂದು ನಮ್ಮನ್ನು ಹುಬ್ಬೇರಿಸುವಂತೆ ಮಾಡಿ ಬಿಡುತ್ತದೆ.
ನಿಂಬೆಹಣ್ಣಿನಲ್ಲಿರುವ ಔಷಧೀಯ ಗುಣಗಳು
ನಾವೆಲ್ಲರೂ ತಕ್ಷಣಕ್ಕೆ ಯಾವುದೋ ಪಾನೀಯವನ್ನು ಸೇವಿಸಿ ಅಬ್ಬಾ ಎಂದು ಉಸಿರು ಬಿಡುತ್ತೇವೆ. ಆದರೆ ಅದರ ಬದಲಿಗೆ ನಾವೇ ನಿಂಬೆ ಹಣ್ಣಿನ ಪಾನೀಯವನ್ನು ತಯಾರಿಸಿಕೊಂಡು ಕುಡಿದರೆ ದಾಹ ಕಡಿಮೆಯಾಗುವುದಲ್ಲದೆ, ಆರೋಗ್ಯವನ್ನು ಕಾಪಾಡಿಕೊಳ್ಳಲು ಕೂಡ ಸಾಧ್ಯವಾಗುತ್ತದೆ.
ಹಾಗಾದರೆ ನಿಂಬೆಹಣ್ಣಿನಲ್ಲಿ ಏನೇನು ಔಷಧೀಯ ಗುಣವಿದೆ? ಯಾವ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ ಎಂಬುದನ್ನು ನೋಡಿದ್ದೇ ಆದರೆ ಇದರಲ್ಲಿ ಹಲವು ರೀತಿಯ ಆರೋಗ್ಯಕಾರಿ ಗುಣಗಳಿರುವುದು ತಿಳಿದು ಬರುತ್ತದೆ. ಜತೆಗೆ ಹಲವು ರೋಗಗಳಿಗೆ ರಾಮಬಾಣವಾಗಿಯೂ ಕೆಲಸ ಮಾಡುತ್ತದೆ.
ಕೊರೊನಾ ನಿಯಂತ್ರಿಸಿ ಆರೋಗ್ಯವಾಗಿ ಬೇಸಿಗೆ ಕಳೆಯೋಣ
ಉರಿಮೂತ್ರ ಸಮಸ್ಯೆಗೂ ಪರಿಹಾರ
ನಿಂಬೆ ಹಣ್ಣಿನ ರಸದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವ, ಕೊಬ್ಬು ಕರಗಿಸುವ, ವಾಂತಿಯನ್ನು ನಿಯಂತ್ರಿಸುವ, ಪಚನ ಕ್ರಿಯೆಯನ್ನು ಹೆಚ್ಚಿಸುವ ಹೀಗೆ ಹತ್ತು ಹಲವು ಉಪಯೋಗಗಳಿದೆ. ಇಷ್ಟೇ ಅಲ್ಲದೆ ಕ್ರಿಮಿಗಳನ್ನು ನಾಶ ಮಾಡುವ ಶಕ್ತಿಯೂ ಇದೆ. ಬಿಸಿಲಲ್ಲಿ ನಡೆದಾಡಿಯೋ, ಕೆಲಸ ಮಾಡಿಯೋ ಸುಸ್ತಾಗಿದ್ದರೆ ನಿಂಬೆಹಣ್ಣಿನ ಪಾನಕ ಸೇವಿಸಿದರೆ ಬಳಲಿಕೆ ದೂರವಾಗುತ್ತದೆ. ಉರಿಮೂತ್ರದ ಸಮಸ್ಯೆಯಿಂದ ಬಳಲುವವರು ಒಂದು ಚಮಚ ರಸದೊಂದಿಗೆ ಜೇನುತುಪ್ಪ ಬೆರೆಸಿ ಕುಡಿದರೆ ಶಮನವಾಗಲಿದೆ.
ತಲೆಹೊಟ್ಟಿನ ಸಮಸ್ಯೆಯಿಂದ ಬಳಲುವವರು ನಿಂಬೆ ರಸವನ್ನು ಸೀಗೆಕಾಯಿಪುಡಿಯೊಂದಿಗೆ ಬೆರೆಸಿಕೊಂಡು ತಲೆಗೆ ಹಚ್ಚಿ ಸ್ನಾನ ಮಾಡಿದರೆ ಹೊಟ್ಟು ಕಡಿಮೆಯಾಗುತ್ತದೆ. ಬರೀ ನಿಂಬೆ ರಸವನ್ನು ಕೂದಲಿಗೆ ಹಚ್ಚಿ ಕೆಲವು ಸಮಯಗಳ ಬಳಿಕ ಸ್ನಾನ ಮಾಡಿದರೆ ಕೂದಲು ಮೃದುವಾಗುತ್ತದೆಯಲ್ಲದೆ, ಉದುರುವುದು ಕಡಿಮೆಯಾಗುತ್ತದೆ.
ನಿಂಬೆರಸದಲ್ಲಿದೆ ಖನಿಜ, ಲವಣಗಳ ಸತ್ವ ಗುಣ
ಅಜೀರ್ಣದ ಸಮಸ್ಯೆಯಿಂದ ಉಂಟಾಗುವ ಹುಳಿತೇಗು ಕಂಡು ಬಂದರೆ ದಿನಕ್ಕೆ ಎರಡು ಬಾರಿಯಂತೆ ಎರಡು ಚಮಚ ನಿಂಬೆರಸವನ್ನು ಸೇವಿಸಿ ನಿಯಂತ್ರಿಸಬಹುದಾಗಿದೆ. ಲೆಮನ್ ಟೀ ಸೇವಿಸುವುದರಿಂದ ನೆಗಡಿ ಕಡಿಮೆಯಾಗುತ್ತದೆ. ಮೂತ್ರವಿಸರ್ಜನೆ ಸುಲಭವಾಗಿ ಆಗಲು ಒಂದು ಲೋಟ ಎಳನೀರಿಗೆ ನಿಂಬೆ ರಸವನ್ನು ಬೆರೆಸಿ ಸೇವಿಸಬೇಕು. ನಿಂಬೆ ಹಣ್ಣಿನ ಸಿಪ್ಪೆಯನ್ನು ಅರೆದು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ.
ಚೇಳು ಕಡಿದ ಜಾಗಕ್ಕೆ ನಿಂಬೆ ರಸವನ್ನು ಹಾಕುವುದರಿಂದ ಉರಿ ಶಮನವಾಗಲು ಸಾಧ್ಯವಾಗುತ್ತದೆ. ಒಂದು ಲೋಟ ಹಸುವಿನ ಹಾಲಿಗೆ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಮೂಲವ್ಯಾಧಿ ಕಡಿಮೆಯಾಗುತ್ತದೆ. ನಿಂಬೆರಸದಲ್ಲಿ ಖನಿಜ, ಲವಣಗಳ ಸತ್ವ ಗುಣಗಳಿದ್ದು, ರೋಗನಿರೋಧಕವಾಗಿಯೂ ಕಾರ್ಯನಿರ್ವಹಿಸುತ್ತಿದೆ.
ನಿಂಬೆ ಹಣ್ಣಿನ ಪಾನಕಕ್ಕೆ ಒತ್ತು ನೀಡಿ
ಬೇಸಿಗೆಯಲ್ಲಿ ನಿಂಬೆ ಹಣ್ಣಿನ ಪಾನಕವನ್ನು ಕಡಿಮೆ ಅವಧಿಯಲ್ಲಿ ತಯಾರಿಸಬಹುದಾಗಿದೆ. ಬೇರೆ ಕೆಮಿಕಲ್ ಮಿಶ್ರಿತ ಪಾನೀಯಗಳನ್ನು ಸೇವಿಸುವ ಬದಲಿಗೆ ನಾವೇ ಮನೆಯಲ್ಲಿ ತಯಾರಿಸಿದ ತಾಜಾ ನಿಂಬೆ ಹಣ್ಣಿನ ಪಾನೀಯವನ್ನು ಸೇವಿಸುವುದರಿಂದ ಇವತ್ತಿನ ಪರಿಸ್ಥಿತಿಯಲ್ಲಿ ಬಹಳಷ್ಟು ಉಪಯೋಗವಿರುವುದಂತು ನಿಜ.
ಅದು ಏನೇ ಇರಲಿ ತಮ್ಮ ನಿತ್ಯದ ಬಳಕೆಯಲ್ಲಿ ಹೆಚ್ಚು ಹೆಚ್ಚಾಗಿ ನಿಂಬೆ ಹಣ್ಣನ್ನು ಬೇರೆ ಬೇರೆ ರೀತಿಯಲ್ಲಿ ಬಳಸುತ್ತಾ ಬಂದರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.