ಸುದರ್ಶನ್ ಪಟ್ನಾಯಕ್: ಮರಳು ಶಿಲ್ಪ ಕಲಾವಿದನ ಕೈಚಳಕ ವಿಶ್ವಖ್ಯಾತ
ಒಡಿಶಾದ ಮರಳು ಕಲಾವಿದ ಸುದರ್ಶನ್ ಪಟ್ನಾಯಿಕ್ ಹೆಸರು ಈಗ ಬಹಳ ಮಂದಿಗೆ ಪರಿಚಿತ ಇರಬಹುದು. ಮರಳು ಶಿಲ್ಪಕಲೆಯಲ್ಲಿಯಲ್ಲಿ ಅಪ್ರತಿಮ ಸಾಧನೆ ಮಾಡಿದ ಅಪೂರ್ವ ಕಲಾವಿದ.
ಸ್ವಾತಂತ್ರ್ಯೋತ್ಸವ ಇರಲಿ, ಗಣರಾಜ್ಯೋತ್ಸವ ಇರಲಿ, ಅಥವಾ ಗಣ್ಯರು ಮೃತಪಟ್ಟಾಗಾಗಲಿ, ಪ್ರಮುಖ ಘಟನೆಗಳ ಸಂದರ್ಭದಲ್ಲಿ ಸುದರ್ಶನ್ ಪಟ್ನಾಯಿಕ್ ತಮ್ಮ ಮರಳು ಶಿಲ್ಪದ ಮೂಲಕ ಗೌರವ ಸಲ್ಲಿಸುವುದನ್ನು ಮರೆಯುವುದಿಲ್ಲ. ಅಷ್ಟೇ ಅಲ್ಲ, ಜನಸಾಮಾನ್ಯರನ್ನು ಬಾದಿಸುವ ಮುಖ್ಯ ಸಮಸ್ಯೆಗಳ ಬಗ್ಗೆಯೂ ಇವರು ತಮ್ಮ ಶಿಲ್ಪಕಲೆಯ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಾರೆ.
ಒಡಿಶಾದ ಪುರಿ ಜಿಲ್ಲೆಯವರಾದ ಸುದರ್ಶನ ಪಟ್ನಾಯಿಕ್ ಅವರ ಮರಳುಶಿಲ್ಪ ಕಲೆ ನಮ್ಮ ದೇಶದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಪ್ರಖ್ಯಾತವಾಗಿದೆ. ಭಾರತದ ಮೊದಲ ಮರಳುಶಿಲ್ಪ ಕಲಾವಿದರಾದ ಅವರು ಹಲವು ದಾಖಲೆಗಳನ್ನು ಸ್ಥಾಪಿಸಿದ್ದಾರೆ.
ಇವರ ಮರಳು ಶಿಲ್ಪ ಕಲೆಗಳಲ್ಲಿ ಸಾಮಾಜಿಕ ಜಾಗೃತಿ, ಪರಿಸರ ಜಾಗೃತಿ ಇತ್ಯಾದಿ ಅನೇಕ ವಿಚಾರಗಳಿವೆ. ದೇಶ ವಿದೇಶಗಳ ಹಲವು ಗಣ್ಯರ ಕಲಾಕೃತಿಗಳನ್ನು ರಚಿಸಿದ್ದಾರೆ. ಇವರ ಬಗ್ಗೆ ಒಂದು ಪರಿಚಯಾತ್ಮಕ ಸಂಕ್ಷಿಪ್ತ ಲೇಖನ ಇದು.
ಯಾರು ಸುದರ್ಶನ್ ಪಟ್ನಾಯಕ್?
ಸುದರ್ಶನ ಪಟ್ನಾಯಕ್ ಒಡಿಶಾ ರಾಜ್ಯದ ರಾಜಧಾನಿ ಭುವನೇಶ್ವರ್ನಿಂದ 60 ಕಿಮೀ ದೂರದಲ್ಲಿರುವ ಐತಿಹಾಸಿಕ ಪುರಿ ಜಿಲ್ಲೆಯ ಕುಗ್ರಾಮವೊಂದರಲ್ಲಿ 1977, ಏಪ್ರಿಲ್ 15ರಂದು ಜನಿಸಿದರು.
ಏಳನೇ ವಯಸ್ಸಿನಲ್ಲೇ ಮರಳಿನಲ್ಲಿ ಕಲಾಕೃತಿಗಳನ್ನು ರಚಿಸಲು ಆರಂಭಿಸಿದ್ದರು. ಭಾರತದಲ್ಲಿ ಇಂಥದ್ದೊಂದು ಕಲೆಯನ್ನು ಶುರು ಮಾಡಿದ್ದು ಸುದರ್ಶನ್ ಪಟ್ನಾಯಕ್ ಅವರೇ ಮೊದಲು. ಅಚ್ಚರಿ ಎಂದರೆ ಇವರು ಈ ಕಲೆಯನ್ನು ಯಾರಿಂದಲೂ ಕಲಿತಿದ್ದಲ್ಲ, ಸ್ವಯಂ ಆಗಿ ಕಲಿತು ಈ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಡಾಡುತ್ತಾ ಕಲಿತ ಈ ವಿದ್ಯೆ ಇದೀಗ ಇವರನ್ನು ಮಹೋನ್ನತ ಕಲಾವಿದನನ್ನಾಗಿಸಿದೆ.
ಸುದರ್ಶನ್ ಪಟ್ನಾಯಕ್ ಕಡುಬಡತನದ ಕುಟುಂಬದಲ್ಲಿ ಹುಟ್ಟಿದವರು. ಮಕ್ಕಳನ್ನು ಓದಿಸಲೂ ಹಣ ಇಲ್ಲದಷ್ಟು ಬಡ ಕುಟುಂಬ ಅವರದ್ದು. ಸರಕಾರಿ ಶಾಲೆಯಲ್ಲಿ ಓದಿದ ಅವರು ಆ ವಯಸ್ಸಿನಲ್ಲಿ ಪಾಠಕ್ಕಿಂತ ಆಟವೇ ಹೆಚ್ಚು. ಶಾಲೆಗೆ ಹೋಗುವಾಗ ಬರುವಾಗೆಲ್ಲಾ ಪುರಿಯ ಜಗನ್ನಾಥ ದೇವಸ್ಥಾನದ ಗೋಲ್ಡನ್ ಸೀ ಬೀಚ್ಗೆ ತೆರಳಿ ಅಲ್ಲಿ ಮರಳಿನಲ್ಲಿ ಚಿತ್ರಗಳನ್ನು ಬಿಡಿಸುವ ಆಟ ಆಡುತ್ತಿದ್ದರು.
ಆಡುತ್ತಾ ಆಡುತ್ತಾ ಅವರು ಮರಳಿನಲ್ಲಿ ವಿಭಿನ್ನ ಬಗೆಯ ಕೃತಿಗಳನ್ನು ನಿರ್ಮಿಸಲು ತೊಡಗಿದರು. 12ನೇ ವಯಸ್ಸಿಗೆ ಅವರು ಮರಳು ಶಿಲ್ಪಕಲೆಯನ್ನು ಗಂಭೀರವಾಗಿ ಪರಿಗಣಿಸಲು ತೊಡಗಿದರು. ಸಮುದ್ರ ತೀರದಲ್ಲಿ ಬೇರೆ ಬೇರೆ ಪ್ರತಿಮೆಗಳನ್ನು ಕಟ್ಟಲು ಆರಂಭಿಸಿದರು. ಹಲವು ಬಾರಿ ಇಡೀ ದಿನ ಈ ಪ್ರತಿಮೆ ನಿರ್ಮಾಣಕ್ಕೆ ಕಾಲ ವ್ಯಯಿಸುತ್ತಿದ್ದರು.
ಜನರ ಪ್ರತಿಕ್ರಿಯೆ ಗಮನಿಸುತ್ತಿದ್ದರು
ಸುದರ್ಶನ್ ಪಟ್ನಾಯಕ್ ಅವರಿಗೆ ಮರಳಿನಲ್ಲಿ ಆಕಾರಗಳನ್ನು ಕಟ್ಟುವುದೆಂದರೆ ಅದೆಂತಹದ್ದೋ ಒಲವು. ಸಮುದ್ರತೀರ ಮತ್ತು ಮರಳು ಅವರ ಜೀವನದ ಪ್ರಮುಖ ಭಾಗಗಳೇ ಆದವು. ಪುರಿ ಕಡಲತೀರದಲ್ಲಿ ಮರಳಿನಲ್ಲಿ ಸಣ್ಣ ಕೃತಿಗಳನ್ನು ರಚಿಸಿದ ಬಳಿಕ ಸುದರ್ಶನ್ ಪಟ್ನಾಯಕ್ ಅಲ್ಲಿಂದ ಮರೆಯಾಗಿ ಹೋಗುತ್ತಿದ್ದರು. ಕೆಲ ಗಂಟೆಗಳ ಬಳಿಕ ಅಲ್ಲಿಗೆ ವಾಪಸ್ ಬರುತ್ತಿದ್ದರು. ಅಷ್ಟರಲ್ಲಿ ಬೀಚ್ಗೆ ಬರುತ್ತಿದ್ದ ಜನರು ಈ ಮರಳು ಶಿಲ್ಪವನ್ನು ನೋಡಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ನೋಡುವ ತವಕ ಮತ್ತು ಆಸಕ್ತಿ ಸುದರ್ಶನ್ಗೆ ಇತ್ತು.
ಜನರು ಇವರ ಕೃತಿಗಳನ್ನು ಮೆಚ್ಚಿಕೊಳ್ಳುವುದು ಹೆಚ್ಚಾದಂತೆಲ್ಲಾ ಸುದರ್ಶನ್ ಪಟ್ನಾಯಕ್ ಈ ಕಲೆಯನ್ನು ಗಂಭೀರವಾಗಿ ಪರಿಗಣಿಸತೊಡಗಿದರು. ಇವರ ಕಲಾಕೃತಿಗಳು ಮಾಧ್ಯಮಗಳ ಗಮನ ಸೆಳೆಯಲು ಆರಂಭಿಸಿದವು. ರಾಷ್ಟ್ರೀಯ ಮಾಧ್ಯಮಗಳೂ ಇವರ ಕಲೆ ಬಗ್ಗೆ ಬರೆಯತೊಡಗಿದವು. ಪುರಿ ಜಗನ್ನಾಥ ದೇವಸ್ಥಾನಕ್ಕೆ ದೇಶ ವಿದೇಶಗಳಿಂದ ಜನರು ಬರುವುದರಿಂದ ಇವರ ಮರಳು ಶಿಲ್ಪಗಳು ಬಹಳ ಬೇಗ ಪ್ರಚಾರ ಪಡೆದುಕೊಂಡವು.
ಮರಳು ಶಿಲ್ಪಕಲಾ ಸಂಸ್ಥೆ
ಸುದರ್ಶನ್ ಪಟ್ನಾಯಕ್ ಕೆಲ ವರ್ಷಗಳಲ್ಲಿ ತಕ್ಕಮಟ್ಟಿಗೆ ಸೆಲಬ್ರಿಟಿ ಆಗಿ ಹೋದರು. ತಾನು ಸ್ವಂತವಾಗಿ ಕಲಿತ ಈ ಕಲೆಯನ್ನು ಉಳಿಸಿ ಬೆಳೆಸುವ ಸಂಕಲ್ಪ ತೊಟ್ಟ ಸುದರ್ಶನ್ ಪಟ್ನಾಯಕ್ ಪುರಿಯಲ್ಲಿ ಸ್ಯಾಂಡ್ ಆರ್ಟ್ ಇನ್ಸ್ಟಿಟ್ಯೂಟ್ ಆರಂಭಿಸಿದರು. ಇದರಲ್ಲಿ ಮಕ್ಕಳಿಗೆ ಮರಳು ಶಿಲ್ಪಕಲೆ ಬಗ್ಗೆ ತರಬೇತಿ ನೀಡಿದರು.
ಈಗ ಅಂತಾರಾಷ್ಟ್ರೀಯ ಮರಳು ಶಿಲ್ಪ ಕಲಾ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಸುದರ್ಶನ್ ಪಟ್ನಾಯಕ್, ಜಾಗತಿಕವಾಗಿ ದೊಡ್ಡ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ. ಭಾರತದ ಕೀರ್ತಿಪತಾಕೆ ಹಾರಿಸುತ್ತಿದ್ದಾರೆ.
ಕುತೂಹಲವೆಂದರೆ ಪುರಿಯಲ್ಲಿ ಮರಳು ಶಿಲ್ಪಕಲೆಯ ಪ್ರಾಚೀನ ಪರಂಪರೆ ಇದೆ ಎನ್ನುವುದಕ್ಕೆ ಹಲವು ಸಾಕ್ಷ್ಯಗಳು ಇವೆ. ಪುರಿ ಜಿಲ್ಲೆಯವರೇ ಆದ ಸುದರ್ಶನ್ ಪಟ್ನಾಯಕ್ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಆದರೆ, ಯಾವುದೇ ಗುರು ಇಲ್ಲದೇ ತಾನೇ ಸ್ವಂತವಾಗಿ ಈ ವಿದ್ಯೆ ಕಲಿತಿರುವ ಸುದರ್ಶನ್ ಪಟ್ನಾಯಕ್ ಸದ್ಯಕ್ಕೆ ಭಾರತದಲ್ಲಿ ಮರಳಿ ಶಿಲ್ಪಕಲೆಯ ಪಿತಾಮಹ ಎನಿಸಿರುವುದರಲ್ಲಿ ಅಚ್ಚರಿ ಇಲ್ಲ.
ವಿಶ್ವದಾಖಲೆಗಳು
ಸುದರ್ಶನ್ ಪಟ್ನಾಯಕ್ ಅವರ ಮರಳು ಕಲಾಕೃತಿಗಳಲ್ಲಿ ಪೊಡಮೂಡಿದ ವ್ಯಕ್ತಿಗಳು, ಘಟನೆಗಳು ಹಲವು. ನಮ್ಮ ಪೇಜಾವರಶ್ರೀಗಳು ಮೃತಪಟ್ಟಾಗ ಅವರ ಪ್ರತಿಮೆಯನ್ನು ಮರಳಿನಲ್ಲಿ ಕಡೆದವರು ಅವರು. ಡೊನಾಲ್ಡ್ ಟ್ರಂಪ್, ಮೈಕೇಲ್ ಜಾಕ್ಸನ್ ಇತ್ಯಾದಿ ವ್ಯಕ್ತಿಗಳ ಮರಳು ಶಿಲ್ಪವನ್ನು ರಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಮೆಗಳು ಮೂಡಿವೆ.
ಹಿಂದೆ ಅವರು 25 ಅಡಿ ಎತ್ತರದ ಸಾಂಟಾ ಕ್ಲಾಸ್ ಪ್ರತಿಮೆಯನ್ನು ಮರಳಿನಲ್ಲಿ ರಚಿಸಿದ್ದರು. ಅದು ಲಿಮ್ಕಾ ವಿಶ್ವದಾಖಲೆ ಪುಟಕ್ಕೆ ಸೇರಿದೆ. ಹಾಗೆಯೇ 100 ಸಾಂಟಾ ಕ್ಲಾಸ್ ಪ್ರತಿಮೆ ರಚಿಸಿ ಗಿನ್ನೆಸ್ ದಾಖಲೆ ಬರೆದಿದ್ದರು.
ಆಗ್ರಾದ ತಾಜ್ ಮಹಲ್ ಬಳಿ ಸುದರ್ಶನ್ ಪಟ್ನಾಯಕ್ ಪುಟ್ಟದೊಂದು ಕಪ್ಪು ತಾಜ್ ಮಹಲ್ ಅನ್ನು ಮರಳಿನಲ್ಲಿ ಕಟ್ಟಿದ್ದರು. ಆ ಕಲಾಕೃತಿಗೆ ಬಹಳ ಪ್ರಶಂಸೆ ವ್ಯಕ್ತವಾಗಿತ್ತು.
(ಒನ್ಇಂಡಿಯಾ ಸುದ್ದಿ)
Recommended Video