ಜೀವಜಲದ ಉಳಿವಿನ 'ಉನ್ನತ' ಕಾರ್ಯಕ್ಕೆ ನೃತ್ಯದ ಸಾಥ್!
ನವರಸಗಳನ್ನೇ ಪ್ರಧಾನವಾಗಿರಿಸಿಕೊಂಡ ಕಾರಣಕ್ಕೆ ಭಾರತೀಯ ನೃತ್ಯ ಪ್ರಕಾರ ಉಳಿದೆಲ್ಲವಕ್ಕಿಂತ ಭಿನ್ನವಾಗಿ, ಅಷ್ಟೇ ಮಹೋನ್ನತವಾಗಿ ನಿಲ್ಲುತ್ತದೆ. ಅದರಲ್ಲೂ ಭರತ ನಾಟ್ಯ ಕಲೆಯಂತೂ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ, ನಮ್ಮ ಪರಂಪರೆಯ ಪ್ರವರ್ತನೆಯ ಸಾಧನವಾಗಿ ಬೆಳಗುತ್ತಿದೆ.
ಈ ಭರತನಾಟ್ಯ ಪ್ರಕಾರದ ಮೂಲಕ ಕೇವಲ ಭಾರತೀಯ ಸಂಸ್ಕೃತಿಯನ್ನು ಔನ್ನತ್ಯಕ್ಕೇರಿಸುವುದಷ್ಟೇ ಅಲ್ಲದೆ, ಜೀವಿಯ ಉಳಿವಿಗೆ ಅತ್ಯಗತ್ಯವಾದ ಜೀವಜಲದ ಉಳಿವಿಗಾಗಿ ಹೋರಾಡುತ್ತಿರುವ ಹಾಸನದ ಉನ್ನತ್ ಜೈನ್ ನೃತ್ಯದ ನಿಜವಾದ ಉದ್ದೇಶವನ್ನು ಸಾಬೀತುಪಡಿಸಿದ್ದಾರೆ.
ಬರಾವಲೋಕನ: ಕಾಣೆಯಾಗಿರೋ ಮಂಗಳೂರಿನ 64 ಕೆರೆ ಹುಡಿಕಿಕೊಡಿ ಪ್ಲೀಸ್!!
ಕನ್ನಡಿಗ ಉನ್ನತ್ ಜೈನ್ ಅವರು ತಮ್ಮ ಅಮೋಘ ನೃತ್ಯ ಪ್ರತಿಭೆಯ ಮೂಲಕ ಅಮೆರಿಕ, ರಷ್ಯಾ, ಮಲೇಶಿಯಾ, ಥೈಲೆಂಡ್, ಶ್ರೀಲಂಕಾ ಸೇರಿದಂತೆ ಹಲವು ದೇಶಗಳಲ್ಲಿ ಕಾರ್ಯಕ್ರಮ ನೀಡಿ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೈತುಂಬ ಸಂಬಳ ಸಿಗುತ್ತಿದ್ದ ಕೆಲಸವನ್ನೂ ಬಿಟ್ಟು, ಇದೀಗ ಹಾಸನದಲ್ಲಿ ಕೆರೆ ಉಳಿಸುವ ಮಹೋನ್ನತ ಕಾರ್ಯಕ್ಕೆ ಕೈಹಾಕಿದ್ದಾರೆ, ಅದೂ ನೃತ್ಯದ ಮೂಲಕ!
ಬೆಳೆವ ಕುಡಿ ಮೊಳಕೆಯಲ್ಲಿ...
ಹಾಸನದ ಎಚ್.ಬಿ.ರತ್ನರಾಜು ಮತ್ತು ಜಯಪದ್ಮಾ ದಂಪತಿಯ ಪುತ್ರ ಉನ್ನತ್ ಅವರಿಗೆ ಚಿಕ್ಕ ವಯಸ್ಸಿನಿಂದಲೂ ನೃತ್ಯವೆಂದರೆ ಹುಚ್ಚು ಹಿಡಿವಷ್ಟು ಪ್ರೀತಿ. ಜೊತೆಗೆ ಅಂದುಕೊಂಡಿದ್ದನ್ನು ಮಾಡಿಯೇ ತೀರುವ ಮನಸ್ಥಿತಿ ಬೇರೆ. ಏಳನೇ ವಯಸ್ಸಿನಿಂದ ನೃತ್ಯಾಭ್ಯಾಸ ಆರಂಭಿಸಿರುವ ಅವರು ಕಳೆದ 25 ವರ್ಷಗಳಿಂದ ಈ ಕ್ಷೇತ್ರದೊಂದಿಗೆ ಅವಿನಾಭಾವ ನಂಟು ಹೊಂದಿದ್ದಾರೆ. ಕಳೆದ ಹತ್ತು ವರ್ಷದಿಂದ ವೃತ್ತಿಪರ ನೃತ್ಯಗಾರರಾಗಿದ್ದಾರೆ. ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದ ನೃತ್ಯಗಾರ್ತಿ ವಿಧುಷಿ ಅಂಬಾಳೆ ರಾಜೇಶ್ವರಿ ಅವರ ಶಿಷ್ಯರಾದ ಉನ್ನತ್ ಭಾರತದ ಹಲವು ರಾಜ್ಯಗಳಲ್ಲಿ, ಜೊತೆಗೆ ವಿದೇಶಗಳಲ್ಲೂ ನೃತ್ಯ ಪ್ರದರ್ಶನ ನೀಡಿದ್ದಾರೆ.
ಕೆರೆಗಳನ್ನು ಮುಚ್ಚಿಸಿದ್ದೇ ಬೆಂಗಳೂರಿನ ಈ ದೈನೇಸಿ ಸ್ಥಿತಿಗೆ ಕಾರಣ!
ಅರಸಿ ಬಂದ ಗರಿ
ಒರಿಸ್ಸಾದಿಂದ ಏಕಲವ್ಯ ಸನ್ಮಾನ, ಆಂಧ್ರ ಪ್ರದೇಶದಿಂದ ಅಭಿನಯ ನೃತ್ಯ ಕೌಮುದಿ, ನಾಟ್ಯ ಕೌಸ್ತುಬ , ಮುಂಬೈಯಿಂದ ನಟರಾಜ ಗೋಪಿ ಕೃಷ್ಣ ಸಮ್ಮಾನ್, ಕೆರಳದಿಂದ ಕಲಾಮಂದಿರ ಪುರಸ್ಕಾರಂ, ಛತ್ತೀಸಘಡದಿಂದ ನಾಟ್ಯ ಮಯೂರಂ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದ ಇವರು ದೂರದರ್ಶನದ 'ಎ' ಗ್ರೇಡ್ ಕಲಾವಿದರೂ ಹೌದು.
ಹಲವಾರು ವಿದ್ಯಾರ್ಥಿಗಳಿಗೆ ಗುರುವಾಗಿರುವಿಕೆ
ಉನ್ನತ್ ಜೈನ್ ಕಟ್ಟಿರುವ ನಾಟ್ಯಕಲಾ ನಿವಾಸ ಬೆಸ್ಟ್ ಕಲ್ಚರಲ್ ರಿವೈವಲ್ ಸೆಂಟರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ರತ್ನಕಲಾ ಪದ್ಮ ಕುಟೀರ ಟ್ರಸ್ಟ್ ಗೆ ಇವರು ವ್ಯವಸ್ಥಾಪಕ ಟ್ರಸ್ಟಿಯೂ ಹೌದು. ಇವರ ಬಳಿ ಇದುವರೆಗೆ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ.
ಜೀವಜಲದ ಉಳಿವಿನತ್ತ ಹೆಜ್ಜೆ
ಹಾಸನದಲ್ಲಿ ಅಂತಾರಾಷ್ಟ್ರೀಯ ಕಲಾವಿದರಾದ ಶ್ರೀಯುತ ದೇಸಾಯಿ ಎಂಬುವವರು ಆರಂಭಿಸಿದ್ದ ಹಸಿರು ಭೂಮಿ ಪ್ರತಿಷ್ಠಾನ ಎಂಬ ಸಂಸ್ಥೆಯೊಂದಿಗೆ ಕೈಜೋಡಿಸಿ ಮೂರರಿಂದ ನಾಲ್ಕು ತಿಂಗಳಿನಿಂದ ಕೆರೆ ಅಭಿವೃದ್ಧಿ ಮತ್ತು ಉಳಿಸುವುವ ಕೆಲಸ ಆರಂಭಿಸಲಾಗಿದೆ. ಹಾಸನದಲ್ಲಿರುವ ಕೆರೆಗಳ(ಬತ್ತಿ ಹೋದ ಕೆರೆಗಳೂ ಸೇರಿ) ಎದುರಲ್ಲಿ ನೃತ್ಯ ಪ್ರದರ್ಶನ ನೀಡಿ, ಅಲ್ಲಿಗೆ ಜನರನ್ನು ಕರೆಸಿ ನೀರನ್ನು ಉಳಿಸಬೇಕಾದ ಅಗತ್ಯವನ್ನು ನೃತ್ಯದ ಮೂಲಕ ತೋರಿಸಿಕೊಡುವ ಕೆಲಸ ಮಾಡಲಾಗುತ್ತಿದೆ. ಪಿಪಿಟಿ, ಡಾಕ್ಯುಮೆಂಟರಿಗಳ ಮೂಲಕವೂ ಜನರಲ್ಲಿ ಕೆರೆಗಳ ಉಳಿಸುವ ಕುರಿತು ಅರಿವು ಮೂಡುವಂತೆ ಮಾಡಲಾಗುತ್ತಿದೆ.
ವಲಸೆ ಹಕ್ಕಿಗಳ ಪರಿಚಯ
ನೃತ್ಯದ ಮೂಲಕ ಆಯಾ ಕೆರೆಗೆ ವಲಸೆ ಬರುವ ಹಕ್ಕಿಗಳು, ಅಲ್ಲಿನ ಜೀವ ವೈವಿಧ್ಯಗಳ ಪರಿಚಯ ಮಾಡಿಕೊಡಲಾಗುತ್ತದೆ. ಜನರಿಂದ ಪ್ರತಿಕ್ರಿಯೆ ಬಹಳ ಚೆನ್ನಾಗಿಲ್ಲವಾದರೂ ಇವರು ಪ್ರಯತ್ನ ಮಾತ್ರ ಬಿಟ್ಟಿಲ್ಲ. "ಅಭಿವೃದ್ಧಿಯ ಹೆಸರಿನಲ್ಲಿ ಇಡೀ ಹಾಸನಕ್ಕೆ ನಿರುಣಿಸುವುದಕ್ಕೂ ಶಕ್ಯವಾಗಿದ್ದ ಚನ್ನಪಟ್ಟಣ ಕೆರೆಯನ್ನೂ ನಾಶಮಾಡಲಾಗಿದೆ. ಹಾಸನದ ಹುಣಸಿನ ಕೆರೆ, ಸತ್ಯಮಂಗಳ ಕೆರೆಗಳ ಉಳಿವಿಗೆ ನಾವೀಗ ಕಂಕಣಬದ್ಧರಾಗಿದ್ದೇವೆ. ಹಲವು ಕೆರೆಗಳಿದ್ದ ಜಾಗದಲ್ಲಿ ಬಿಲ್ಡಿಂಗ್ ಗಳು ತಲೆ ಎತ್ತಿವೆ. ಇವನ್ನೆಲ್ಲ ನೋಡಿದರೆ ನೋವಾಗುತ್ತದೆ. ಅದಕ್ಕೆಂದೇ ಹಸಿರು ಭೂಮಿ ಪ್ರತಿಷ್ಠಾನದೊಂದಿಗೆ ಸೇರಿ ಈ ಕಾರ್ಯಕ್ಕೆ ಕೈಹಾಕಿದ್ದೇವೆ. ನಮಗೆ ಮತ್ತಷ್ಟು ಜನಬೆಂಬಲ ಬೇಕಿದೆ" ಎನ್ನುತ್ತಾರೆ ಉನ್ನತ್ ಜೈನ್.
ಕೈಜೋಡಿಸುವವರು, ಬೆನ್ನುತಟ್ಟುವವರು ಬೇಕಾಗಿದ್ದಾರೆ...
ಕೆರೆಗಳನ್ನು ಅಭಿವೃದ್ಧಿ ಮಾಡುವುದರಿಂದ ಹಾಸನದ ಜನರಿಗೆ, ರೈತರಿಗೆ ಸಹಾಯವಾಗುತ್ತೆ ಮಾತ್ರವಲ್ಲ, ಇಲ್ಲಿನ ಪ್ರವಾಸೋದ್ಯಮವನ್ನೂ ಈ ಮೂಲಕ ಅಭಿವೃದ್ಧಿಪಡಿಸಬಹುದು. ಅದಕ್ಕಾಗಿ ನಮಗೆ ಸಣ್ಣ ನೀರಾವರಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಸರ್ಕಾರದ ಕಡೆಯಿಂದ ನೆರವು ಸಿಗಬೇಕಿದೆ.
ಮುಂದಿನ ತಲೆಮಾರಿಗೆ ನಾವೇನು ಕೊಡುತ್ತೇವೆ?
"ನಾವು ನಮ್ಮ ಮುಂದಿನ ತಲೆಮಾರಿಗೆ ಆಸ್ತಿ ಮಾಡಿಕೊಡಬಹುದು, ಹಣ, ಒಡವೆ ಐಷಾರಾಮಿ ಬದುಕು ಕೊಡಬಹುದು. ಆದರೆ ಅವೆಲ್ಲಕ್ಕಿಂತ ಮುಖ್ಯ ಪಂಚಭೂತಗಳಲ್ಲಿ ಪ್ರಮುಖವಾದ ಶುದ್ಧ ನೀರು, ಗಾಳಿ. ಅದನ್ನು ಉಳಿಸಿದರೆ ಇನ್ನ್ಯಾವ ಆಸ್ತಿ, ಹಣವೂ ಬೇಕಿಲ್ಲ. ಈ ಅರಿವು ಜನರಲ್ಲಿ ಮೂಡಿದರೆ ನಮ್ಮ ಶ್ರಮವೂ ಸಾರ್ಥಕ" ಎಂದು ಭರವಸೆ ತುಂಬಿದ ದನಿಯಲ್ಲಿ ನುಡಿಯುತ್ತಾರೆ ಉನ್ನತ್. ಉನ್ನತ್ ಅವರ ಉನ್ನತ ಕನಸು ನನಸಾಗಲಿ ಎಂಬುದು ನಮ್ಮ ಹಾರೈಕೆ.