ಕೋಲಾರ ವಕೀಲ ಶಿವಣ್ಣನ ಕೈಹಿಡಿಯಿತು ಈ ಸಾವಯವ ಕೃಷಿ
ಕೋಲಾರ, ಫೆಬ್ರುವರಿ 1: ಕೋಲಾರ ಜಿಲ್ಲೆ ಹೇಳಿ ಕೇಳಿ ಬರದ ನಾಡು. ಕೃಷಿ ಮಾಡೋದಿರಲಿ, ಕುಡಿಯೋಕೂ ನೀರು ಸಿಗೋದು ಕಷ್ಟ. ಆದರೆ ಇಲ್ಲೊಬ್ಬ ವಕೀಲರು ಕೃಷಿಯಲ್ಲಿ ತೊಡಗಿ ಭಿನ್ನ ಪ್ರಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ಅಲ್ಪ ನೀರಿನ ನಡುವೆ ಲಾಭದಾಯಕವಾಗಿ ಕೃಷಿ ನಡೆಸುತ್ತಿದ್ದಾರೆ.
ಅವರೇ ಕೋಲಾರ ಜಿಲ್ಲೆಯ ತೊಟ್ಲಿ ಗ್ರಾಮದ ಶಿವಣ್ಣ. ತಮ್ಮ ಒಂದೂವರೆ ಎಕರೆ ಜಾಗದಲ್ಲಿ ಸಾವಯವ ಪದ್ಧತಿಯನ್ನು ಅನುಸರಿಸಿ ಪಪ್ಪಾಯ ಬೆಳೆಗಳನ್ನು ಬೆಳೆದು ಲಾಭದತ್ತ ಮುಖ ಮಾಡಿದ್ದಾರೆ. ಕೃಷಿಯಲ್ಲಿ ಶ್ರಮದೊಂದಿಗೆ ಬುದ್ಧಿವಂತಿಕೆಯೂ ಇದ್ದರೆ ಲಾಭ ಕಟ್ಟಿಟ್ಟ ಬುತ್ತಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಶಿವಣ್ಣ ಅವರು ಕೈಗೊಂಡ ಕೃಷಿ ಪದ್ಧತಿ, ಕೃಷಿ ಸಮಸ್ಯೆಗಳನ್ನು ಅವರು ನೀಗಿದ ರೀತಿಯ ಕಥನ ಇಲ್ಲಿದೆ...
ಓದಿದ್ದು ಎಲ್ ಎಲ್ ಬಿಯಾದರೂ ಕೃಷಿಯತ್ತ ಆಸಕ್ತಿ
ಶಿವಣ್ಣ ಅವರು ಓದಿದ್ದು ಎಲ್ ಎಲ್ ಬಿ. ವಕೀಲಿ ವೃತ್ತಿ ಜೊತೆಗಿದೆ. ಆದರೆ ವಂಶಪಾರಂಪರ್ಯವಾಗಿ ಬಂದಿರುವ ಕೃಷಿಯನ್ನೂ ಇವರು ಕೈಬಿಟ್ಟಿಲ್ಲ. ತಮ್ಮ ಜಮೀನಿನಲ್ಲಿ ಹಲವು ವರ್ಷಗಳಿಂದ ಕೃಷಿ ಕೈಗೊಂಡಿರುವ ಇವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಪಪ್ಪಾಯ ಬೆಳೆ ಬೆಳೆದಿದ್ದಾರೆ. ವೃತ್ತಿಯೊಂದಿಗೆ ಪ್ರವೃತ್ತಿಯಾಗಿ ಕೃಷಿಯನ್ನೂ ಲಾಭದಾಯಕವಾಗಿ ನಡೆಸುತ್ತಿದ್ದಾರೆ.
ಕೃಷಿ ಜೊತೆ ಕೋಳಿ ಸಾಕಣೆ; ಇದು ಕೋಲಾರ ರೈತನ ಯಶೋಗಾಥೆ
ಬರದ ನಾಡಲ್ಲಿ ಕೃಷಿ ಸುಲಭವೇ?
ಕೋಲಾರ ನೀರಿನ ಬವಣೆ ಎದುರಿಸುತ್ತಿರುವ ಜಿಲ್ಲೆ. ನೀರಿಲ್ಲದೆ ಸಾಕಷ್ಟು ವರ್ಷಗಳಿಂದ ಇವರ ಒಂದೂವರೆ ಎಕರೆ ಜಮೀನು ಪಾಳುಬಿದ್ದಂತಾಗಿತ್ತು. ಆದರೆ ನೀರಿನ ವ್ಯವಸ್ಥೆ ಮಾಡಿ ಹೇಗಾದರೂ ಕೃಷಿ ಮಾಡಬೇಕೆಂದು ಮುಂದಾದರು ಶಿವಣ್ಣ. ಹೀಗಾಗೇ ಪಪ್ಪಾಯ ಬೆಳೆಗಳನ್ನು ಬೆಳೆಯುವ ಆಲೋಚನೆ ಮಾಡಿದರು. ಬೋರ್ ಮೂಲಕ ನೀರಾವರಿ ವ್ಯವಸ್ಥೆ ಮಾಡಿಸಿದರು. ಅಲ್ಪ ಸ್ವಲ್ಪ ನೀರು ದೊರೆಯಲು ಸಾಧ್ಯವಾಯಿತು. ಪಪ್ಪಾಯಿ ಸಸಿಗಳನ್ನು ಹಾಕಲು ಪ್ರಾರಂಭಿಸಿದರು. ಕೃಷಿ ಹೊಂಡವನ್ನೂ ನಿರ್ಮಿಸಿಕೊಂಡರು.
ಹೂಜಿ ಹುಳು ಕಾಟ ಯಾರನ್ನೂ ಬಿಟ್ಟಿಲ್ಲ
ಪಪ್ಪಾಯ ಬೆಳೆದದ್ದಾಯಿತು. ಆದರೆ ಕೋಲಾರದಲ್ಲಿ ಟೊಮಾಟೊ ಹಾಗೂ ಮಾವಿನ ಬೆಳೆಗಳಿಗೆ ಅತಿ ಹೆಚ್ಚು ಕಾಡುವ ಹೂಜಿ ಹುಳುಗಳು ಪಪ್ಪಾಯಕ್ಕೂ ತಗುಲಿತು. ಕೇವಲ ಬೆಳೆಗಳನ್ನಲ್ಲದೆ ರೈತನ ಜೀವನವನ್ನು ತಿಂದು ಹಾಕುವ ಮಟ್ಟಕ್ಕೆ ಹುಳುಗಳು ಸಮಸ್ಯೆಯಾದವು. ಹೀಗಾಗಿ ಪಪ್ಪಾಯ ಬೆಳೆದಿರುವ ಜಿಲ್ಲೆಯ ಕೆಲ ರೈತರು ಇಳುವರಿ ಸರಿಯಾಗಿ ಬರುತ್ತಿಲ್ಲ ಎಂದು ತಾವೇ ಹಾಕಿದ್ದ ಪಪಾಯ ಗಿಡಗಳನ್ನು ಕಿತ್ತು ಹಾಕಿ ಬೇರೆ ಬೆಳೆಗಳನ್ನು ಮುಂದಾದರು. ಶಿವಣ್ಣ ಅವರಿಗೂ ಹೂಜಿ ಹುಳಗಳ ಕಾಟ ತಲೆ ನೋವು ತಂದಿತ್ತು. ಇನ್ನೇನು ಹೂ ಬಿಡುತ್ತಿದೆ ಅನ್ನುವ ವೇಳೆಗೆ ಹೂಜಿ ಹುಳಗಳು ಆಕ್ರಮಿಸಿಕೊಂಡು ಬೆಳೆಗಳನ್ನೇ ನಾಶ ಮಾಡುತ್ತಿತ್ತು. ಇಂಥ ಸಮಯದಲ್ಲಿ ತಮ್ಮದೇ ಆದ ಕೆಲ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಅಪಾಯಕಾರಿ ಹೂಜಿ ಹುಳಗಳಿಂದ ಪಪ್ಪಾಯ ಗಿಡಗಳನ್ನು ರಕ್ಷಿಸಿಕೊಂಡರು ಇವರು.
ಸ್ವಾವಲಂಬಿ ಜೀವನಕ್ಕೆ ಆಧಾರವಾದ ಅಣಬೆ ಬೇಸಾಯ
ಹೂಜಿ ಹುಳುವಿಗೆ ಶಿವಣ್ಣನ ಐಡಿಯಾ!
ಆರಂಭದಲ್ಲಿ ಸ್ನೇಹಿತರು, ಸಂಬಂಧಿಕರು, ಔಷಧಿ ಅಂಗಡಿಯವರು ಬೇಡ ಅಂದರೂ ಪಪ್ಪಾಯ ಬೆಳೆಗೆ ಕೈ ಹಾಕಿದ್ದಕ್ಕೆ ನಿರಾಸೆಯಲ್ಲಿದ್ದರು. ಆದರೆ ಈ ಸಮಸ್ಯೆಯಿಂದ ಇದರಿಂದ ಹೇಗಾದರೂ ಮಾಡಿ ಹೊರಬರಬೇಕು ಎಂದು ತೀರ್ಮಾನಿಸಿ ಸಾವಯವ ಕೃಷಿ ಪದ್ಧತಿ ಮೊರೆ ಹೋದರು. ಮೊದಲಿಗೆ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಗಮ್ ಮಿಶ್ರಿತ ಪೇಪರ್ ಗಳನ್ನು ಅಂಟಿಸಿ ಪ್ರತಿಯೊಂದು ಗಿಡಗಳಿಗೂ ಕಟ್ಟಿಕೊಂಡು ಬಂದರು. ಆದರೂ ಹುಳಗಳ ಕಾಟ ನಿಲ್ಲಲಿಲ್ಲ. ಬಳಿಕ ಸಗಣಿ, ಹಸುವಿನ ಗಂಜಲ ಹಾಗೂ ಬೆಲ್ಲದ ಪಾಕವನ್ನು ಮಿಶ್ರಣ ಮಾಡಿ ಗಿಡಗಳ ಮೇಲೆ ಚಿಮ್ಮಿಸುತ್ತಾ ಪ್ರತಿ ಗಿಡಗಳಿಗೆ ಕಟ್ಟಿದ್ದ ಪ್ಲಾಸ್ಟಿಕ್ ಡಬ್ಬಿಗಳ ಜೊತೆ ದಾರದಲ್ಲಿ ಬಿಸ್ಕೆಟ್ ಕಟ್ಟಿದರು. ಡಬ್ಬಿ ಒಳಗೆ ಹೂಜಿ ಸಾಯುವ ಮಾತ್ರೆಯನ್ನೂ ಹಾಕಿದ್ದರು. ಬಿಸ್ಕೆಟ್ ತಿನ್ನಲು ಬರುವ ಹುಳಗಳು ಡಬ್ಬಿ ಒಳಗೆ ಬಿದ್ದು ಗಮ್ ಪೇಪರ್ ಗಳಿಗೆ ಸಿಲುಕಿ ಹೊರ ಬರಲಾಗದೆ ಒಳಗಿರುವ ಮಾತ್ರೆಗಳನ್ನು ತಿಂದು ಸತ್ತವು. ಒಂದೊಂದು ಡಬ್ಬಿಗಳಲ್ಲಿ ನೂರರಿಂದ ಇನ್ನೂರು ಹುಳಗಳು ಸತ್ತು ಬೀಳುತ್ತಿದ್ದು, ಇದೀಗ ಈ ಸಮಸ್ಯೆಯಿಂದ ರೈತ ಶಿವಣ್ಣ ಸಂಪೂರ್ಣ ದೂರ ಉಳಿದರು. ಇನ್ನೇನು ಕೆಲವೇ ದಿನಗಳಲ್ಲಿ ಪಪ್ಪಾಯ ಇಳುವರಿ ನೀಡಲಿದೆ.