ನಿನ್ನೆಗಳೊಂದಿಗೆ ಸೇಡು ತೀರಿಸಿಕೊಳ್ಳಲು ಇದಕ್ಕಿಂತ ಒಳ್ಳೆ ಮಾರ್ಗವಿದೆಯೇ?; ಕೇರಳ ಮಹಿಳೆಯ ಯಶೋಗಾಥೆ
ತಿರುವನಂತಪುರಂ, ಜೂನ್ 28: "ನಂಬಿ ಮದುವೆಯಾಗಿದ್ದ ಪತಿ ಅರ್ಧ ದಾರಿಗೇ ಕೈಬಿಟ್ಟಿದ್ದ. ಬಗಲಲ್ಲಿ ಆರು ತಿಂಗಳ ಮಗು ಅಳುತ್ತಿತ್ತು. ತವರು ಮನೆಯವರ ನಂಟೂ ಮುಗಿದು ಹೋಗಿತ್ತು. ಬದುಕುವುದೊಂದೇ ಏಕೈಕ ಗುರಿ ಎಂಬಂತೆ ಕಂಡ ಕಂಡ ಸಣ್ಣಪುಟ್ಟ ವ್ಯಾಪಾರಗಳನ್ನೆಲ್ಲಾ ಮಾಡಿದೆ. ಈಗ ಈ ಸ್ಥಾನದಲ್ಲಿ ನನ್ನನ್ನು ನಾನು ನೋಡಿಕೊಳ್ಳುತ್ತಿರುವುದಕ್ಕೆ ಸಂತಸ ಎನಿಸದೇ ಇರಲು ಸಾಧ್ಯವೇ?" ಕೇರಳದ ತಿರುವನಂತಪುರಂನಲ್ಲಿನ ವರ್ಕಳಂನಲ್ಲಿ ಪ್ರೊಬೇಷನರಿ ಸಬ್ ಇನ್ಸ್ಪೆಕ್ಟರ್ ಆಗಿ ನೇಮಕವಾಗಿರುವ 31 ವರ್ಷದ ಆನೀ ಶಿವಾ ಅವರ ಮಾತುಗಳಿವು.
ವರ್ಕಳದ ಪ್ರವಾಸಿ ತಾಣದಲ್ಲಿ ನಿಂಬೆ ಜ್ಯೂಸ್, ಐಸ್ ಕ್ರೀಂ ಮಾರಾಟ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಹದಿನೆಂಟು ವರ್ಷದ ಯುವತಿ ಈಗ ಅದೇ ಊರಿನಲ್ಲಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಆಗಿದ್ದಾರೆ. ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಮತ್ತೊಂದು ನಿದರ್ಶನ ನೀಡಿದ್ದಾರೆ. ಆನೀ ಶಿವಾ ಅವರ ಈ ಯಶೋಗಾಥೆ, ಬದುಕಿನಲ್ಲಿ ಸೋತ ಎಷ್ಟೋ ಮಹಿಳೆಯರಿಗೆ ಸ್ಫೂರ್ತಿಯಾಗುವಂತಿದೆ. ಮುಂದೆ ಓದಿ...
ಮನೆಯವರ ವಿರೋಧದ ನಡುವೆ ಮದುವೆ
ಹದಿನೆಂಟು ವರ್ಷವಿದ್ದಾಗ ಆನೀ ಶಿವಾ ಅವರು ಕಂಜಿರಂಕುಲಂನ ಕೆಎನ್ಎಂ ಸರ್ಕಾರಿ ಕಾಲೇಜಿನಲ್ಲಿ ಮೊದಲ ವರ್ಷದ ಪದವಿ ತರಗತಿ ಓದುತ್ತಿದ್ದರು. ಅದೇ ಸಮಯದಲ್ಲಿಯೇ ತನ್ನ ಕುಟುಂಬದ ವಿರೋಧ ಕಟ್ಟಿಕೊಂಡು ಮದುವೆಯಾದರು. ಒಂದು ಮಗುವೂ ಆಯಿತು. ಆದರೆ ಬದುಕು ಇನ್ನೊಂದು ಮುಖವನ್ನು ತೋರಿಸಿತ್ತು. ನಂಬಿಕೊಂಡು ಮದುವೆಯಾಗಿದ್ದ ಪತಿ ತೊರೆದು ಹೋಗಿದ್ದ. ತನ್ನ ತವರು ಮನೆ ಹಾದಿ ಹಿಡಿದರೂ, ಅವರ ಮನೆ ಬಾಗಿಲು ಇವರಿಗಾಗಿ ತೆರೆಯಲಿಲ್ಲ.
ನಿರ್ಗತಿಕ ಶವಗಳ ಅಂತ್ಯಸಂಸ್ಕಾರ ನಡೆಸಲು ನರ್ಸ್ ವೃತ್ತಿ ಬಿಟ್ಟುಬಂದ ಮಹಿಳೆ
ಜ್ಯೂಸ್, ಐಸ್ಕ್ರೀಂ ಮಾರಾಟ ಮಾಡುತ್ತಿದ್ದ ಮಹಿಳೆ
ಬೇರೆ ದಿಕ್ಕಿಲ್ಲದೇ ತನ್ನ ಅಜ್ಜಿ ಮನೆಯ ಶೆಡ್ನಲ್ಲಿ ಪುಟ್ಟ ಮಗ ಶಿವಸೂರ್ಯ ಜೊತೆ ಸ್ವಲ್ಪ ದಿನ ಕಳೆದರು. ಜೀವನ ಸಾಗಿಸಲು ಚಿಕ್ಕಪುಟ್ಟ ಕೆಲಸಗಳನ್ನು ಮಾಡಲು ಆರಂಭಿಸಿದರು. "ವರ್ಕಳದ ಶಿವಗಿರಿ ಆಶ್ರಮದ ಸ್ಟಾಲ್ಗಲ್ಲಿ ನಿಂಬೆ ಜ್ಯೂಸ್ ಮಾರಲು ಆರಂಭಿಸಿದೆ. ಐಸ್ಕ್ರೀಂ ಮಾರಾಟ ಮಾಡುತ್ತಿದ್ದೆ. ಕರಕುಶಲ ವಸ್ತುಗಳನ್ನು ಮಾರಾಟ ಮಾಡಲು ಆರಂಭಿಸಿದೆ. ಮನೆಮನೆಗೆ ಹೋಗಿ ಸಾಮಾನುಗಳನ್ನು ಮಾರಿದೆ. ಈ ಕೆಲಸಗಳನ್ನು ಮಾಡಿಕೊಂಡೇ ಸಮಾಜಶಾಸ್ತ್ರದಲ್ಲಿ ಪದವಿ ಪಡೆದುಕೊಂಡೆ. ಅಚ್ಚರಿ ಎಂಬಂತೆ ಅಂಥ ಸಮಯದಲ್ಲಿ ವ್ಯಕ್ತಿಯೊಬ್ಬರು ನನಗೆ ಓದಲು ಮಾರ್ಗದರ್ಶನ, ಹಣ ಸಹಾಯ ಮಾಡಲು ಮುಂದಾದರು" ಎಂದು ಸ್ಮರಿಸಿಕೊಳ್ಳುತ್ತಾರೆ ಶಿವಾ.
"ನಿನ್ನೆಗಳೊಂದಿಗೆ ಸೇಡು ತೀರಿಸಿಕೊಳ್ಳಲು ಇದಕ್ಕಿಂತ ಉತ್ತಮ ಮಾರ್ಗವಿದೆಯೇ?"
"ನಾನು ಓದುವ ಸಮಯದಲ್ಲಿ ಐಪಿಎಸ್ ಆಗಬೇಕೆಂದು ಕನಸು ಕಂಡಿದ್ದೆ. ಜೀವನ ನನಗೆ ಬೇರೆಯದನ್ನೇ ನೀಡಿತ್ತು. ಆದರೆ ನನಗೆ ಈಗ ಸಿಕ್ಕಿರುವ ಸ್ಥಾನ ಹಾಗೂ ಸಿಗುತ್ತಿರುವ ಬೆಂಬಲ ನೋಡಿದರೆ ಕಣ್ತುಂಬಿ ಬರುತ್ತದೆ" ಎಂದು ಸಂತಸ ವ್ಯಕ್ತಪಡಿಸುತ್ತಾರೆ ಆನೀ. ನನ್ನ ನೆನ್ನೆಗಳೊಂದಿಗೆ ಇದಕ್ಕಿಂತ ಇನ್ನೆಷ್ಟು ಉತ್ತಮವಾಗಿ ಸೇಡು ತೀರಿಸಿಕೊಳ್ಳಲು ಸಾಧ್ಯ ಎಂದು ತಮ್ಮ ಫೇಸ್ ಬುಕ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. "ಇದೇ ಜಾಗದಲ್ಲಿ ಪುಟ್ಟ ಮಗುವಿನೊಂದಿಗೆ ಅಳುತ್ತಾ ಕೂತಿದ್ದೆ. ಈಗ ಅದೇ ಜಾಗದಲ್ಲಿ ನಾನು ಸಬ್ ಇನ್ಸ್ಪೆಕ್ಟರ್ ಆಗಿರುವುದು ಹೆಮ್ಮೆ ಎನಿಸುತ್ತಿದೆ" ಎಂದಿದ್ದಾರೆ.
ನಾಸಾ ಗಗನಯಾನ ತರಬೇತಿಗೆ ಆಯ್ಕೆಯಾದ ಮೊದಲ ಅರಬ್ ಮಹಿಳೆ
"ಮಹಿಳೆ ತನ್ನ ಕಾಲ ಮೇಲೆ ತಾನು ನಿಲ್ಲಬೇಕು. ನನ್ನ ಈ ಒಂದು ಜೀವನ ಮತ್ತೊಂದು ನೊಂದ ಮಹಿಳೆಗೆ ಸ್ಫೂರ್ತಿಯಾಗಬೇಕು. ಒಬ್ಬೊರಿಗೊಬ್ಬರು ಸಹಾಯಕ್ಕೆ ನಿಲ್ಲಬೇಕು. ಎಲ್ಲಾ ತೊಡಕುಗಳನ್ನು ಹಿಮ್ಮೆಟ್ಟಿ ಎದ್ದು ನಿಲ್ಲಬೇಕು" ಎಂದು ಸ್ಫೂರ್ತಿದಾಯಕ ಮಾತುಗಳನ್ನು ಆಡುತ್ತಾರೆ.
|
ಕೇರಳ ಪೊಲೀಸರ ಶ್ಲಾಘನೆ
2014ರಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆಯಲು ತಿರುವನಂತಪುರಂ ತರಬೇತಿ ಕೇಂದ್ರಕ್ಕೆ ಸೇರ್ಪಡೆಗೊಂಡರು. ಮೂರು ವರ್ಷಗಳ ಕಾಲ ಮಹಿಳಾ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಬಳಿಕ 2019ರಲ್ಲಿ ನಡೆದ ಎಸ್ಐ ಆಯ್ಕೆ ಪರೀಕ್ಷೆ ಬರೆದು ಯಶಸ್ವಿಯಾದರು. ಒಂದೂವರೆ ವರ್ಷಗಳ ತರಬೇತಿ ಬಳಿಕ ಈಗ ಪ್ರೊಬೆಷನರಿ ಸಬ್ ಇನ್ ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ.
ಕೇರಳ ಪೊಲೀಸರು ಆನೀ ಶಿವಾ ಅವರನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದು, "ವಿಲ್ ಪವರ್ ಹಾಗೂ ಆತ್ಮವಿಶ್ವಾಸಕ್ಕೆ ನೈಜ ಮಾದರಿಯಿದು. ಆರು ತಿಂಗಳ ಮಗುವಿನೊಂದಿಗೆ ಬೀದಿಗೆ ಬಿದ್ದಿದ್ದ ಯುವತಿ ಈಗ ಸಬ್ ಇನ್ಸ್ಪೆಕ್ಟರ್ ಆಗಿರುವುದು ಸುಲಭ ಸಾಧನೆಯಲ್ಲ" ಎಂದಿದ್ದಾರೆ.