Stories Of Strength; ಕಲಿಯಬೇಕಿದೆ ಚೈತನ್ಯ ಕಳೆದುಕೊಳ್ಳದೇ ಬದುಕುವ ಕಲೆ
ನವದೆಹಲಿ, ಜೂನ್ 03: ಕೊರೊನಾ ಎರಡನೇ ಅಲೆಯಲ್ಲಿ ಮಧ್ಯ ವಯಸ್ಕರು ಹಾಗೂ ಯುವಜನತೆ ಕೊರೊನಾ ಸೋಂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ತುತ್ತಾಗಿದ್ದಾರೆ. ಕೊರೊನಾ ನಂತರ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಹಾಗೂ ಯೆಲ್ಲೋ ಫಂಗಸ್ನಂಥ ಶಿಲೀಂಧ್ರ ಸೋಂಕಿನ ಪ್ರಕರಣ ಕಾಣಿಸಿಕೊಳ್ಳುತ್ತಿರುವುದು ಕೊರೊನಾ ನಡುವೆ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಆದರೆ ಈ ಆತಂಕದ ನಡುವೆಯೂ ತನ್ನ ಧೈರ್ಯದಿಂದ 96 ವಯಸ್ಸಿನ ಅಜ್ಜಿ ಕೊರೊನಾ ಗೆದ್ದು ಎಷ್ಟೋ ಮಂದಿಗೆ ಸ್ಫೂರ್ತಿಯಾಗಿದ್ದಾರೆ.
ದೆಹಲಿಯ ಶಹದಾರಾ ಪ್ರದೇಶದ ಪುಷ್ಪಾ ಶರ್ಮಾ ಎಂಬ 96 ವರ್ಷದ ಮಹಿಳೆ ಇದೀಗ ಕೊರೊನಾ ಗೆದ್ದು ಮನೆ ಮಾತಾಗಿದ್ದಾರೆ. ಈ ಇಳಿವಯಸ್ಸಿನಲ್ಲಿಯೂ ಕೊರೊನಾ ಮಾರಕ ಕಾಯಿಲೆಯನ್ನು ಗೆದ್ದಿರುವುದಕ್ಕೆ ನೆರೆ ಹೊರೆಯವರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...
ಮನೆಯಲ್ಲೇ ಚಿಕಿತ್ಸೆ ಪಡೆದರು
96 ವಯಸ್ಸಿನ ಪುಷ್ಪಾ ಅವರಿಗಲ್ಲದೇ ಅವರ ಮನೆಯವರಿಗೆಲ್ಲರಿಗೂ ಕೊರೊನಾ ಸೋಂಕು ತಗುಲಿತ್ತು. ಆದರೆ ಪುಷ್ಪಾ ಅವರ ಆರೋಗ್ಯದ ಕುರಿತೇ ಎಲ್ಲರಿಗೂ ಆತಂಕವಿತ್ತು. ಶರ್ಮಾ ಅವರು ತಮ್ಮ ಮಗ ಅರುಣ್ ಕುಮಾರ್ (67) ಹಾಗೂ ಸೊಸೆ ಮೀನಾ (64) ಅವರೊಂದಿಗೆ ವಾಸವಿದ್ದು ಏಪ್ರಿಲ್ 18ರಂದು ಇವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆದರೆ ಆಸ್ಪತ್ರೆಗೆ ಹೋಗದೇ ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದಾಗಿ ಹೇಳಿದರು.
Stories of strength; ನಾನೀಗ ಇನ್ನಷ್ಟು ಗಟ್ಟಿಯಾಗಿದ್ದೇನೆ; ಮಲೈಕಾ ಅರೋರಾ ಕೊರೊನಾ ಅನುಭವ...
ಸದಾ ನಗುತ್ತಲೇ ಎಲ್ಲವನ್ನೂ ಗೆದ್ದರು
ದೆಹಲಿಯಲ್ಲಿ ಅದಾಗಲೇ ಕೊರೊನಾ ಎರಡನೇ ಅಲೆ ತನ್ನ ಆರ್ಭಟ ತೋರಿತ್ತು. ಆಸ್ಪತ್ರೆಗಳ ಲಭ್ಯತೆಯೂ ಕಷ್ಟವಿತ್ತು. ಹೀಗಾಗಿ ಮನೆಯಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲು ತೀರ್ಮಾನಿಸಿದೆವು. ಆದರೆ ಆ ಸಮಯ ಅತಿ ಕಠಿಣವಾಗಿತ್ತು ಎಂದು ಮಗ ಅರುಣ್ ಕುಮಾರ್ ನೆನಪಿಸಿಕೊಳ್ಳುತ್ತಾರೆ. ಈ ಎಲ್ಲದರ ನಡುವೆಯೂ ನಮ್ಮಮ್ಮ ಕೊರೊನಾ ಗೆದ್ದಿದ್ದು ಅವರ ಆತ್ಮಬಲದಿಂದ. ತನಗೆ ಏನೂ ಆಗುವುದಿಲ್ಲ ಎಂದು ನಗುತ್ತಲೇ ಅವರು ಹೇಳುತ್ತಿದ್ದರು. ಆ ನಗುವೇ ಅವರಿಗೆ ಪಾಸಿಟಿವ್ ಶಕ್ತಿ ಎಂದು ವಿವರಿಸುತ್ತಾರೆ ಅರುಣ್ ಕುಮಾರ್.
ಮನೆಯಲ್ಲಿ ಸಕಾರಾತ್ಮಕ ವಾತಾವರಣವಿತ್ತು
ಅಮ್ಮನ ನಗುವಿನೊಂದಿಗೆ ಮನೆಯಲ್ಲಿನ ಸಕಾರಾತ್ಮಕ ವಾತಾವರಣವೂ ಅವರು ಗುಣಮುಖರಾಗಲು ನೆರವಾಗಿತ್ತು. ಇಡೀ ಕುಟುಂಬಕ್ಕೇ ಆ ಸಮಯ ಸವಾಲಿನದ್ದಾಗಿತ್ತು. ಮೇಲೆ ನಾವು ನಗುತ್ತಿದ್ದರೂ ಒಳಗೆ ಏನೋ ಆತಂಕ. ಪ್ರತಿ ಕ್ಷಣವೂ ಅವರು ಗುಣಮುಖರಾಗಬೇಕೆಂದು ಕೇಳಿಕೊಳ್ಳುತ್ತಿದ್ದೆವು. ಅವರ ನಂತರ ಕೆಲವೇ ದಿನಗಳಲ್ಲಿ ಮನೆಯವರೆಲ್ಲರಿಗೂ ಕೊರೊನಾ ತಗುಲಿತು. ನನಗೆ, ನನ್ನ ಪತ್ನಿ, ನನ್ನ ಮಗ ಸೊಸೆ ಎಲ್ಲರಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.
Recommended Video
ಚೈತನ್ಯ ಕಳೆದುಕೊಳ್ಳದೇ ಬದುಕುವ ಕಲೆ...
ಆದರೆ ಈ ಸಮಸ್ಯೆಯ ಗಂಭೀರತೆ ನನ್ನ ತಾಯಿಗೆ ಸೋಕದಂತೆ ನೋಡಿಕೊಂಡೆವು. ಜ್ವರ, ನೋವು, ಬಳಲುವಿಕೆ ಅವರನ್ನು ಕಾಡುತ್ತಿತ್ತು. ಅವರಲ್ಲಿ ಯಾವುದೇ ಕಾರಣಕ್ಕೂ ನೆಗೆಟಿವ್ ಆಲೋಚನೆ ಬರದಂತೆ ನೋಡಿಕೊಂಡೆವು. ಇದಕ್ಕಾಗಿ ಔಷಧಿಯೊಂದೇ ಸಾಕಾಗಲಿಲ್ಲ. ಔಷಧಿಗಳೊಂದಿಗೆ ಮನೆಯಲ್ಲಿ ವಾತಾವರಣವೂ ಅವರಿಗೆ ಪೂರಕವಾಗಿರುವಂತೆ ಎಲ್ಲರೂ ಶ್ರಮಿಸಿದೆವು. ಅಂಥ ಬಳಲಿಕೆ ನಡುವೆಯೂ ಚೈತನ್ಯದಿಂದಿದ್ದರು. ಎಂಥ ಸಂದರ್ಭದಲ್ಲಿಯೂ ಚೈತನ್ಯ ಕಳೆದುಕೊಳ್ಳದೇ ಬದುಕುವ ಕಲೆಯೇ ಅವರನ್ನು ಈ ಸೋಂಕಿನಿಂದ ಹೊರಗೆ ತರಲು ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.