Story of strength: ನನ್ನ ದೇಹ ಕೊರೊನಾವನ್ನೇ ಗೆದ್ದು ಬಂದಿತ್ತು, ಮನಸ್ಸು "ಪಾಸಿಟಿವ್" ಆಗಿತ್ತು...
"ನಾನೇ ಏಕೆ?"- ಕೊರೊನಾ ಸೋಂಕು ದೃಢಪಟ್ಟ ನಂತರ ನನ್ನನ್ನು ಕಾಡಿದ ಮೊಟ್ಟ ಮೊದಲ ಪ್ರಶ್ನೆಯಿದು...
ನಾನು ಆರೋಗ್ಯವಾಗಿಯೇ ಇದ್ದೆ. ನನಗೆ ಬೇರೆ ಯಾವ ಆರೋಗ್ಯ ಸಮಸ್ಯೆಯೂ ಇರಲಿಲ್ಲ. ಜೊತೆಗೆ ಕೊರೊನಾ ಸೋಂಕನ್ನು ದೂರವಿಡಲು ಅನುಸರಿಸಬೇಕಾದ ಎಲ್ಲಾ ಮಾರ್ಗವನ್ನೂ ಅನುಸರಿಸುತ್ತಿದ್ದೆ. ಅಷ್ಟೇ ಏಕೆ, ಕೊರೊನಾ ಸೋಂಕಿನ ಎರಡು ಡೋಸ್ಗಳ ಲಸಿಕೆಯನ್ನೂ ಪಡೆದುಕೊಂಡಿದ್ದೆ. ಆದರೂ ಕೊರೊನಾಗೆ ನನ್ನ ಮೇಲೆ ಏಕೆ ಕಣ್ಣು ಬಿತ್ತು? ಕೊರೊನಾ ನನ್ನನ್ನು ಏಕೆ ಕಾಡುತ್ತಿದೆ?
ಕೊರೊನಾವೈರಸ್ ವಿರುದ್ಧ ಹೋರಾಡಿ ಗೆದ್ದಿದ್ದು ಹೇಗೆ 'ಧಾರಾವಿ'?
ಹೀಗೆಲ್ಲಾ "ನೆಗೆಟಿವ್" ಆಲೋಚನೆಗಳೇ ಆವರಿಸಿದ್ದ ಈ ಹೊತ್ತಲ್ಲೇ ಮನಸ್ಸಿನಲ್ಲಿ "ಪಾಸಿಟಿವ್" ಆಗಿರಬೇಕಾದ ಸವಾಲು ಎದುರಾಗಿದ್ದು. ಈ ಸವಾಲನ್ನು ನಾನು ಹೇಗೆ ಎದುರಿಸಿ ಗೆದ್ದು ಬಂದೆ? ಇಲ್ಲಿದೆ ನೋಡಿ ನನ್ನ ಕೊರೊನಾ ಗೆದ್ದ ಕಥೆ...
ಕೊರೊನಾ ಬರುತ್ತದೆಂಬ ಸಣ್ಣ ಸುಳಿವೂ ಇರಲಿಲ್ಲ...
ಕೊರೊನಾ ನನಗೆ ಬರುತ್ತದೆ ಎಂಬ ಸಣ್ಣ ಸುಳಿವೂ ಇಲ್ಲದ ಹೊತ್ತಿನಲ್ಲಿ ಸಣ್ಣದಾಗಿ ಮೈಯಲ್ಲಿ ಚಳಿ ಕಾಣಿಸಿಕೊಂಡಿತ್ತು. ಚಳಿ ಬೆನ್ನಲ್ಲೇ ಜ್ವರವೂ ಬಂತು. ನೋಡನೋಡುತ್ತಿದ್ದಂತೆ ನಿಯಂತ್ರಣಕ್ಕೆ ಬಾರದಂತೆ ನೆಗಡಿ ಶುರುವಾಯಿತು. ನಾಲ್ಕು ದಿನ ಇವೆಲ್ಲಾ ಮುಂದುವರೆಯಿತು. ಕೊನೆಗೆ ಇದು ಕೊರೊನಾ ಲಕ್ಷಣಗಳಾದ ಕಾರಣ ಏಪ್ರಿಲ್ 26ರಂದು ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿದೆ. ನಂತರ ಸುಸ್ತೂ ಹೆಚ್ಚಾಯಿತು. ನಾಲಗೆ ರುಚಿ ಕಳೆದುಕೊಂಡಿತ್ತು. ಏನು ತಿನ್ನುತ್ತಿದ್ದೇನೆ ಎಂಬುದೂ ತಿಳಿಯದಂತಾಯಿತು. ವಾಸನೆಯಂತೂ ಕಳೆದುಹೋಗಿತ್ತು...
ಚಿಕಿತ್ಸೆಗಳ ನಡುವೆ ಮನಸ್ಸು ಎಲ್ಲೆಲ್ಲೋ ಓಡುತ್ತಿತ್ತು...
ಮೇ 3ರಂದು ಶೀತ ಏಕಾಏಕಿ ಏರಿಕೆಯಾಗಿ ಹೋಯಿತು. ಉಸಿರಾಟದಲ್ಲಿ ಕೊಂಚ ಏರುಪೇರು ಆದಂತೆ ಕಂಡಿತ್ತು. ಇನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ಅಂದುಕೊಂಡು ಕೊನೆಗೆ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಾದೆ. ಸಿಟಿ ಸ್ಯಾನ್, ಚೆಸ್ಟ್ ಸ್ಕಿಯಾಗ್ರಾಮ್ ನಡೆಸಿದರು. ಇದರಲ್ಲಿ 9/25 ಬಂದಿತ್ತು. ವೈದ್ಯರು ಕೆಲವು ಸ್ಟೆರಾಯ್ಡ್ಗಳನ್ನು ಕೊಡಲು ಆರಂಭಿಸಿದರು. ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಕ್ಲೆಕ್ಸೇನ್, ಆ್ಯಂಟಿಬಯೋಟಿಕ್ ಸೆಫಾಲೊಸ್ಪೊರಿನ್ ನೀಡಿದರು.
ಈ ಎಲ್ಲಾ ಚಿಕಿತ್ಸೆಗಳ ನಡುವೆ ಮನಸ್ಸು ಎಲ್ಲೆಲ್ಲೋ ಓಡುತ್ತಿತ್ತು. ಇದರ ಬೆನ್ನಲ್ಲೇ, ವೈರಸ್ನ ವಿರುದ್ಧ ಹೋರಾಡುವ ಬದಲು ದೇಹದಲ್ಲಿನ ಜೀವಕೋಶಗಳು ತಮ್ಮೊಂದಿಗೇ ಹೋರಾಟಕ್ಕೆ ಇಳಿಯುವ ಸ್ಥಿತಿಯಾದ "ಸೈಟೊಕೈನ್ ಸ್ಟಾರ್ಮ್" ಕಾಣಿಸಿಕೊಂಡಿತು (ಸಂಧಿವಾತ ಇರುವ ಸಂದರ್ಭ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ). ಅದಕ್ಕೂ ಔಷಧಿ ನೀಡಿದರು. ಹೆಚ್ಚಿನ ಚಿಕಿತ್ಸೆಗೆ ಐಸಿಯುಗೆ ದಾಖಲಿಸಿದರು. ಅಲ್ಲಿ ಆಮ್ಲಜನಕ ಬೆಂಬಲಿತವಾದೆ.ಔಟ್ ಆಫ್ ದಿ ಬಾಕ್ಸ್ ಯಶಸ್ವೀ ಪ್ರಯೋಗ: ನೂರಕ್ಕೆ 100 ಗುಣಮುಖರಾದ ಕೊರೊನಾ ಸೋಂಕಿತರು
ಇದು ಜೀವ, ಜೀವನ ನಿಲ್ಲುವ ಸೂಚನೆಯೇ?
ಎದೆಯಲ್ಲಿ ಕಟ್ಟಿಕೊಂಡಂತಿರುವ ಉಸಿರು, ಆಮ್ಲಜನಕ ಬೇಡುವ ದೇಹ, ಎಲ್ಲಕ್ಕೂ ಪ್ರತಿಕ್ರಿಯಿಸಲೇಬೇಕಾದ ಪರಿಸ್ಥಿತಿ. ಐಸಿಯು ಎಂಬ ಕೋಣೆ... ಕಣ್ಣು ಮುಚ್ಚಲು ಬಿಡದ ಬಣ್ಣಬಣ್ಣದ ವೆಂಟಿಲೇಟರ್ ಲೈಟ್ಗಳು, ಸೈರನ್ಗಳು, ಪಕ್ಕದ ಬೆಡ್ಗಳಲ್ಲಿನ ನೋವು ನರಳಾಟದ ದೃಶ್ಯಗಳು... ಇವೆಲ್ಲವುಗಳ ನಡುವೆ ತೊಯ್ದಾಡುತ್ತಿರುವ ಮನಸ್ಸು... ಏನನ್ನೂ ಯೋಚಿಸಲಾಗದ, ಯೋಚಿಸಲು ಬಿಡದ ಆತಂಕ... ಭಯವೇ ಇಡೀ ದೇಹವನ್ನು ಆವರಿಸಿದಂತೆ. ಇದು ಜೀವ, ಜೀವನ ನಿಲ್ಲುವ ಸೂಚನೆಯೇ? ಸ್ಮಶಾನದ ಚಿತ್ರ ಒಮ್ಮೆ ಕಣ್ಣ ಮುಂದೆ ಹಾದು ಹೋಯಿತು...
"ಪಾಸಿಟಿವ್" ಆಗಿರುವ ಕಲೆ ಕಲಿತುಕೊಂಡ ಮನಸ್ಸು
ಆದರೆ ಭಯದ ನಡುವೆಯೇ ಧೈರ್ಯ ಹೋರಾಟಕ್ಕೆ ನಿಂತಿತು. ನೆಗೆಟಿವ್ ಆಲೋಚನೆಗಳೊಂದಿಗೆ ಮನಸ್ಸು "ಪಾಸಿಟಿವ್" ಆಗಿರುವ ಕಲೆಯನ್ನೂ ಕಲಿತುಕೊಂಡಿತು. ಅದೇನೋ ಆಶ್ಚರ್ಯ ಎಂಬಂತೆ ಧೈರ್ಯವೊಂದು ಹುಟ್ಟಿಕೊಂಡಿತ್ತು. ಉಸಿರು ಸರಾಗವಾದ ಅನುಭವ. ಕೃತಕ ಆಮ್ಲಜನಕದ ಅವಶ್ಯಕತೆಯೂ ಸ್ವಲ್ಪ ತಗ್ಗಿದಂತೆ ಕಂಡಿತು. ಮನಸ್ಸಿನ ಆಲೋಚನೆಗಳೂ ಸ್ಪಷ್ಟವಾದಂತೆ ಅನ್ನಿಸಿತ್ತು. ವೈದ್ಯರು, ನರ್ಸ್ಗಳ ಮುಖದ ಮೇಲಿದ್ದ ನಗುವೂ ನನ್ನ ಚೇತರಿಕೆಗೆ ಕಾರಣವಾಯಿತು ಎನ್ನಿ... ನನ್ನ ದೇಹ ಕೊರೊನಾ ಸಂಕೋಲೆಗಳನ್ನೇ ಒಡೆದುಹಾಕಿತ್ತು... ಇದಕ್ಕಿಂತ ಇನ್ನೇನು ಬೇಕು?...
Recommended Video
ಈ ಕಾಲ ಕಳೆದುಹೋಗುವುದು...
ಅದೃಷ್ಟ ನನ್ನೆಡೆಗೆ ನಗು ಬೀರಿದಂತೆ ಕಂಡಿತು... ವೈದ್ಯಕೀಯ ತಂಡದ ಬೆಂಬಲ ಇದಕ್ಕೆ ಕಾರಣವಾಗಿತ್ತು. ಬಹಳ ಮುಖ್ಯವಾಗಿ ಮಕ್ಕಳು ಮತ್ತು ಸಂಗಾತಿಯ ಪ್ರೀತಿ, ಸಂಬಂಧಿಗಳು, ಸ್ನೇಹಿತರ ವಿಶ್ವಾಸ, ಪ್ರಾರ್ಥನೆ ನನ್ನನ್ನು ಗೆಲ್ಲಿಸಿದಂತೆ ಅನ್ನಿಸಿತ್ತು. ಕ್ರಮೇಣ ದೇಹದಲ್ಲಿ ಚೇತರಿಕೆ ಕಂಡುಬಂತು. ಹನ್ನೊಂದು ದಿನಗಳಲ್ಲಿ ನಾನು ಮನೆಗೆ ಹಿಂದಿರುಗಿದ್ದೆ.
ಕೊರೊನಾದಿಂದ ಎಲ್ಲರೂ ಪಾಠ ಕಲಿಯಲೇಬೇಕಿದೆ. ಕೊರೊನಾ ಸೋಂಕಿನ ವಿರುದ್ಧ ತೆಗೆದುಕೊಂಡ ಲಸಿಕೆ ನನಗೆ ರಕ್ಷಣೆ ನೀಡಿತು. ಕಾರು ಅಪಘಾತವಾದ ಸಮಯ ಸೀಟ್ ಬೆಲ್ಟ್ ಧರಿಸಿದ್ದ ಕಾರಣಕ್ಕೇ ಜೀವಂತವಾಗಿ ಉಳಿದ ಎಷ್ಟೋ ಉದಾಹರಣೆಗಳಿವೆ. ಹಾಗೆ ಲಸಿಕೆ ಕೂಡ. ಆದ್ದರಿಂದ ದಯವಿಟ್ಟು ಲಸಿಕೆ ಹಾಕಿಸಿಕೊಳ್ಳಿ. ಜಗತ್ತಿನಲ್ಲಿ ಎಲ್ಲರೂ ಗುಣಮುಖವಾಗಬೇಕಿದೆ. ಈ ಕಾಲ ಕಳೆದುಹೋಗಬೇಕಿದೆ. ಎಲ್ಲರೊಂದಿಗೂ ಸಂತೋಷ ಹಂಚಬೇಕಿದೆ...ನನಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದಗಳು...