ರಾಜಕುಮಾರ ಸಲಿಂಗಿಯಾದರೆ? ಭಾರತದ ಈ ಮರಿದೊರೆ ಪಟ್ಟ ಪಾಡು ಅಷ್ಟಿಷ್ಟಲ್ಲ
ನವದೆಹಲಿ, ಏ. 25: ಜಗತ್ತಿಗೆ ಕಾಮಸೂತ್ರ ನೀಡಿದ ನಾಡಾಗಿರುವ ಭಾರತದಲ್ಲಿ ಸೆಕ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡಲು ಈಗಲೂ ಬಹಳ ಮಂದಿಗೆ ಹಿಂಜರಿಕೆ. ಅದೇ ಹೀಗಾದರೆ ಇನ್ನು, ಸಲಿಂಗಿ, ತೃತೀಯ ಲಿಂಗಿಗಳ (Third Gender) ಪಾಡು ಹೇಳತೀರದು. ಭಾರತದಲ್ಲಿ ಅನೇಕ ಮಂದಿ ದ್ವಿಲಿಂಗಿ (Bi-sexual) ಗಳಿದ್ದರೂ ಅವರ್ಯಾರೂ ಬಹಿರಂಗವಾಗಿ ಹೇಳಿಕೊಳ್ಳುವ ಧೈರ್ಯ ಮಾಡುವುದಿಲ್ಲ. ತಾನೊಬ್ಬ 'ಗೇ' (Gay) ಎಂದು ಸಾರ್ವಜನಿಕವಾಗಿ ಗುರುತಿಸಿಕೊಂಡ ಗಂಡು ಕಂಡರೆ ಭಯಪಡುವ, ಹೀಗಳೆಯುವ, ಲೇವಡಿ ಮಾಡುವವರೇ ಹೆಚ್ಚು. ಆ 'ಗೇ' ಎಂಥ ದೊಡ್ಡ ಕುಟುಂಬದವನೇ ಆಗಲೇ, ಒಂದು ಪ್ರದೇಶದ ದೊರೆಯೇ ಆಗಲಿ ಆ ಕಳಂಕ ತಪ್ಪಿದ್ದಲ್ಲ.
ಗುಜರಾತ್ ರಾಜ್ಯದ ರಾಜಕುಮಾರ ಮಾನವೇಂದ್ರ ಸಿಂಗ್ ಗೋಹಿಲ್ ಅವರ ನೋವಿನ ಕಥೆ ಈ ಸ್ಥಿತಿಗೆ ಕೈಗನ್ನಡಿಯಾಗಿದೆ. ದೇಶದ ಲೈಂಗಿಕ ಅಲ್ಪಸಂಖ್ಯಾತ (ಎಲ್ಜಿಬಿಟಿಕ್ಯೂ) ಸಮುದಾಯದವರ ಬವಣೆಗೆ ಇವರು ಪ್ರತಿಬಿಂಬ ಆಗಿರುವುದಷ್ಟೇ ಅಲ್ಲ, ಅವರಿಗೆ ಆಶಾಕಿರಣವೂ ಆಗಿದ್ದಾರೆ.
ಮೊದಲ ಸಲಿಂಗಿ ನ್ಯಾಯಮೂರ್ತಿ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ ಸೌರಭ್ ಕೃಪಾಲ್
ಯಾರು ಈ ಗೋಹಿಲ್? : ಗುಜರಾತ್ನ ರಾಜಪೀಪಲಾ ಸಂಸ್ಥಾನದ ಗೌರವ ಮಹಾರಾಜ ಪದವಿಗೆ ಮಾನವೇಂದ್ರ ಸಿಂಗ್ ಗೋಹಿಲ್ ಅವರು ಉತ್ತರಾಧಿಕಾರಿಯಾಗಿದ್ದಾರೆ. ಎಲ್ಲವೂ ಸರಿ ಇದ್ದರೆ ದೇಶಾದ್ಯಂತ ಇರುವ ಹತ್ತಾರು ರಾಜಕುಮಾರರ ರೀತಿ ಗೋಹಿಲ್ ತಮ್ಮ ಪಾಡಿಗೆ ವ್ಯವಹಾರ ಮಾಡಿಕೊಂಡಿರುತ್ತಿದ್ದರು. ಆದರೆ, ಮಾನವೇಂದ್ರ ಅವರು ಸಲಿಂಗಿಯಾಗಿದ್ದಾರೆ. ಆ ವಿಷಯವನ್ನು ಬಹಿರಂಗವಾಗಿ ಹೇಳಿಕೊಳ್ಳುವ ಧೈರ್ಯವನ್ನೂ ಮಾಡಿದರು. ಅಗ ಅವರ ವಯಸ್ಸು 41. ಈತನ ಕತೆ ಮುಂದೆ ಓದಿ...
ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಚಿಲಿ
ರಾಜಪೀಪಲಾ ಮನೆತನಕ್ಕೆ ಅವಮಾನ ಎಂದರು
ಸ್ಥಳೀಯ ಪತ್ರಿಕೆಯೊಂದರಲ್ಲಿ ಸಂದರ್ಶನ ನೀಡುವ ವೇಳೆ ಮಾನವೇಂದ್ರ ಸಿಂಗ್ ಗೋಹಿಲ್ ತಾನೊಬ್ಬ ಸಲಿಂಗಿ ಎಂಬ ವಿಚಾರವನ್ನು ಹೊರಗೆಡವಿದ್ದರು. ಆಗ ಸಮಾಜದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ರಾಜಪೀಪಲಾ ಮೊದಲಾದ ಪ್ರದೇಶಗಳಲ್ಲಿ ಜನರು ಪ್ರತಿಭಟನೆ ನಡೆಸಿದರು. ಭಾರತದ ಸಂಸ್ಕೃತಿ ಮತ್ತು ರಾಜಪೀಪಲಾ ಮನೆತನಕ್ಕೆ ಅವಮಾನ ಮಾಡಿದ್ದಾರೆಂದು ಆಕ್ರೋಶ ಹೊರಹಾಕಿದ್ದರು. ಹಲವರು ಜೀವ ಬೆದರಿಕೆ ಹಾಕಿದರು. ಅಷ್ಟೇ ಅಲ್ಲ, ರಾಜಪೀಪಲಾ ಸಂಸ್ಥಾನದ ರಾಜ ಮತ್ತು ರಾಣಿ ಮಾನವೇಂದ್ರನನ್ನು ತಮ್ಮ ಮಗನೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಆಕ್ರೋಶ ಭುಗಿಲೆದ್ದಿತ್ತಂತೆ.
ಹುಡುಗಿ ಜೊತೆ ಬಲವಂತ ಮದುವೆಗೆ ಯತ್ನ:
ಮಾನವೇಂದ್ರ ಒಬ್ಬ ಗೇ ಎಂಬ ವಿಚಾರ ಸಾರ್ವತ್ರಿಕೊಳ್ಳುತ್ತಿದ್ದಂತೆಯೇ ಸಂಸ್ಥಾನದ ರಾಜಮನೆತನದವರು ಕಂಗಾಲಾದರು. ಈತನಿಗೆ ಮದುವೆ ಮಾಡಿಸಿದರೆ ಎಲ್ಲಾ ಸರಿಹೋಗುತ್ತದೆಂದು ಬಗೆದು ಬಲವಂತವಾಗಿ ಒಂದು ಹುಡುಗಿ ಜೊತೆ ಮದುವೆ ಮಾಡಿಸಲಾಯಿತು. ಆದರೆ ಅದ್ಯಾವುದೂ ಗೋಹಿಲ್ ಲೈಂಗಿಕತೆಯನ್ನು ಬದಲಿಸಲಿಲ್ಲ.
"ಮದುವೆ ಬಳಿಕ ಹೆಂಡತಿ ಜೊತೆ ಎಲ್ಲಾ ಸರಿ ಹೋಗುತ್ತದೆ. ಮಕ್ಕಳಾಗುತ್ತವೆ, ನಾನೂ ಎಲ್ಲರಂತೆ 'ಸಹಜ'ವಾಗಿ ಬದುಕಬಹುದು ಎಂದು ಭಾವಿಸಿದ್ದೆ. ಆದರೆ, ಸಹಜವಾಗಿ ಇರಲು ಬಹಳ ಕಷ್ಟವಾಗುತ್ತಿತ್ತು. ನಾನೊಬ್ಬ ಸಲಿಂಗಿ ಎಂದು ಯಾರೂ ನನಗೆ ಹೇಳಲಿಲ್ಲ. ಯಾರಿಗೂ ಗೊತ್ತಿರಲಿಲ್ಲ. ಈ ಸಲಿಂಗಿತನ ಸಹಜವಾದುದು. ಇದು ಬದಲಾಗುವುದಿಲ್ಲ. ಇದು ಖಾಹಿಲೆಯಲ್ಲ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು" ಎಂದು ಓಪ್ರಾ ವಿನ್ಫ್ರೇ (Oprah Winfrey) ಶೋನಲ್ಲಿ ಇತ್ತೀಚೆಗೆ ಮಾನವೇಂದ್ರ ಸಿಂಗ್ ಗೋಹಿಲ್ ಹೇಳಿಕೊಂಡಿದ್ದಾರೆ.
ಶಾಕ್ ಥೆರಪಿ:
ಕೇವಲ ಹೀಗಳಿಕೆ, ಬಲವಂತದ ಮದುವೆ ಮುಂತಾದವನ್ನಷ್ಟೇ ರಾಜಕುಮಾರ ಅನುಭವಿಸಿಲಿಲ್ಲ. ಆತನ ಲೈಂಗಿಕತೆ ಮತ್ತು ಮನಃಸ್ಥಿತಿಯನ್ನು ಪರಿವರ್ತಿಸಲೆಂದು ಎಲೆಕ್ಟ್ರೋಶಾಕ್ ಥೆರಪಿಯನ್ನೂ (Electro-shock Therapy) ಬಲವಂತವಾಗಿ ಮಾಡಿಲಾಯಿತಂತೆ. ಇದು ಮಾನವೇಂದ್ರ ಅವರನ್ನು ಮಾನಸಿಕವಾಗಿ ಬಹಳ ಘಾಸಿ ಉಂಟು ಮಾಡಿತ್ತು. ಈ ನೋವು ಅವರ ಮನಸ್ಸಿನಿಂದ ಹಲವು ವರ್ಷಗಳಾದರೂ ಹೋಗಿರಲಿಲ್ಲ. ಗೋಹಿಲ್ ಒಮ್ಮೆ ಆತ್ಮಹತ್ಯೆಗೂ ಯತ್ನಿಸಲು ನಿರ್ಧಾರ ಮಾಡಿದ್ದರಂತೆ.
ಲಕ್ಷ್ಯ ಟ್ರಸ್ಟ್ ಸ್ಥಾಪಿಸಿ ಹೋರಾಟ:
ಮಾನವೇಂದ್ರ ಸಿಂಗ್ ಗೋಹಿಲ್ ಅವರಿಗೆ ತಾನೊಬ್ಬ ಗೇ ಎಂಬ ವಿಚಾರ ಅರಿವಿಗೆ ಬಂದಿದ್ದು 12ನೇ ವಯಸ್ಸಿನಲ್ಲಿ. ಆದರೆ, ಅದನ್ನ ಸಾರ್ವಜನಿಕವಾಗಿ ಹೇಳಿಕೊಂಡಿದ್ದು 41ನೇ ವಯಸ್ಸಿನಲ್ಲಿ. ಅಲ್ಲಿಯವರೆಗೆ ಅವರ ಮಾನಸಿಕ ತುಮುಲಾಟ ಬಣ್ಣಿಸಲು ಅಸಾಧ್ಯ. ಹಾಗೆಯೇ, ಸಾರ್ವತ್ರಿಕವಾಗಿ ಹೇಳಿಕೊಂಡ ಬಳಿಕ ಆದ ಅವಮಾನ ಇನ್ನೂ ಘೋರ.
ಇದರ ಜೊತೆಗೆ ಎಲೆಕ್ಟ್ರಿಕ್ ಶಾಕ್ ಥೆರಪಿ ಕೂಡ ಅವರನ್ನ ಮಾನಸಿಕವಾಗಿ ಜರ್ಝರಿತಗೊಳಿಸಿತ್ತು. ಇದೆಲ್ಲವನ್ನೂ ಅನುಭವಿಸಿದ ಬಳಿಕ ಮಾನವೇಂದ್ರ ಅವರು ತಮ್ಮ ಹಕ್ಕಿಗಾಗಿ ಹೋರಾಡಲು ನಿರ್ಧರಿಸಿದರು. ಕೇವಲ ತಮ್ಮೊಬ್ಬರಿಗಷ್ಟೇ ಅಲ್ಲ, ತಮ್ಮಂತಿರುವ ಲೈಂಗಿ ಅಲ್ಪಸಂಖ್ಯಾತ ಸಮುದಾಯದ ಹಕ್ಕಿಗಾಗಿ ಹೋರಾಡಲು ಲಕ್ಷ್ಯ ಟ್ರಸ್ಟ್ ಸ್ಥಾಪನೆ ಮಾಡಿ ಕೆಲಸ ಮಾಡುತ್ತಿದ್ದಾರೆ.
(ಒನ್ಇಂಡಿಯಾ ಸುದ್ದಿ)
Recommended Video