ಅಂಧ ಬಾಲಕ ಮೈಸೂರು ಆಸ್ಥಾನದ ವಿದ್ವಾಂಸನಾದ ಕಥೆ
ಮೈಸೂರು ಇತರೆ ನಗರಕ್ಕಿಂತ ವಿಭಿನ್ನ ಮತ್ತು ವಿಶಿಷ್ಟವೂ ಹೌದು. ನಗರದಲ್ಲೊಂದು ಸುತ್ತು ಹೊಡೆದರೆ ಇಲ್ಲಿನ ಪಾರಂಪರಿಕ ಕಟ್ಟಡಗಳು, ಶಾಲೆಗಳು, ಪ್ರತಿಮೆಗಳು, ಅರಮನೆಗಳು ಇತಿಹಾಸದ ಕತೆಗಳನ್ನು ಹೇಳುತ್ತವೆ.
ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಸೀತಾವಿಲಾಸಛತ್ರ ಅರಮನೆಯ ಪಿಟೀಲು ವಿದ್ವಾಂಸರಿಗೆ ಆಸರೆಯಾಗಿತ್ತು ಎನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಮೈಸೂರಿನ ಇತಿಹಾಸವನ್ನು ನೋಡುತ್ತಾ ಹೋದರೆ ನಾವೆಲ್ಲರೂ ಅಚ್ಚರಿ ಪಡುವಂತಹ ಸಾವಿರಾರು ನಿದರ್ಶನಗಳು ನಮಗೆ ಸಿಗುತ್ತವೆ.
ಮೈಸೂರು ದಸರಾ ವೈಭವಕ್ಕೆ ಸಾಕ್ಷಿಯಾಗಿರುವ ಸೀತಾವಿಲಾಸ ಛತ್ರ
ಸಂಗೀತ ಪ್ರೇಮಿಗಳಾಗಿದ್ದ ಮಹಾರಾಜರು
ವರ್ಷಕ್ಕೊಮ್ಮೆ ನಡೆಯುವ ನಾಡಹಬ್ಬ ದಸರಾ ಕಲೆ, ಕ್ರೀಡೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ, ಪಾರಂಪರಿಕತೆಗೆ ಹಿಡಿದ ಕನ್ನಡಿಯಾಗಿದೆ. ಮೈಸೂರು ಮಹಾರಾಜರು ಸಂಗೀತ ಪ್ರೇಮಿಗಳಾಗಿದ್ದರು ಎನ್ನುವುದಕ್ಕೆ ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣ ಬಿಡಾರಂ ಕೃಷ್ಣಪ್ಪ, ಕೆ.ವಾಸುದೇವಾಚಾರ್ಯರು, ಗಾನವಿಶಾರದ ಬಿ.ದೇವೇಂದ್ರಪ್ಪ ಹೀಗೆ ಇವರೆಲ್ಲ ಇದ್ದದ್ದೇ ಸಾಕ್ಷಿ. ಆದರೆ ಇವರೆಲ್ಲರ ನಡುವೆ ಅಂದು ಅರಮನೆಯ ಆಸ್ಥಾನದಲ್ಲಿ ಪಿಟೀಲು ವಿದ್ವಾಂಸರಾಗಿದ್ದ ಶಿವರುದ್ರಪ್ಪರವ ಬದುಕಿನ ಕಥೆ ಮಾತ್ರ ಮನಕಲಕುವಂಥದ್ದಾಗಿದೆ.
ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುತ್ತಿದ್ದ ಬಾಲಕ
ಅಂಧ ಪಿಟೀಲು ವಿದ್ವಾನ್ ಶಿವರುದ್ರಪ್ಪ ಅವರು ಅರಮನೆಯ ಪಿಟೀಲು ವಿದ್ವಾಂಸರಾಗುವ ಮುನ್ನ ತಮ್ಮ ಹುಟ್ಟೂರು ಬೆಂಗಳೂರು ಜಿಲ್ಲೆ ಆನೇಕಲ್ ನಲ್ಲಿ, ಎಂಟು ವರ್ಷದ ಬಾಲ್ಯದಲ್ಲೇ ಕಣ್ಣುಗಳನ್ನು ಕಳೆದುಕೊಂಡು ಕುರುಡಾದ ಕಾರಣದಿಂದ ಜೀವನ ನಿರ್ವಹಣೆಗಾಗಿ ಅನಿವಾರ್ಯವಾಗಿ ಭಿಕ್ಷೆ ಬೇಡಬೇಕಾಯಿತು. ಅವತ್ತು ಅವರು ಆನೇಕಲ್ ನ ಬೀದಿ ಬೀದಿಗಳಲ್ಲಿ ಹಾಡು ಹೇಳುತ್ತ ಭಿಕ್ಷೆ ಬೇಡುತ್ತಿದ್ದರಂತೆ.
ಸುಮಧುರವಾಗಿ ಹಾಡುತ್ತಾ ಭಿಕ್ಷೆ ಬೇಡುತ್ತಿದ್ದ ಬಾಲಕ ಶಿವರುದ್ರಪ್ಪನನ್ನು ಗಮನಿಸಿದ ವ್ಯಕ್ತಿಯೊಬ್ಬರು ನೀನು ಚೆನ್ನಾಗಿ ಹಾಡುತ್ತೀಯಾ, ನೀನೇಕೆ ಮೈಸೂರಿಗೆ ಹೋಗಿ ಮಹಾರಾಜರನ್ನು ಕಾಣಬಾರದು ಎಂದು ಸಲಹೆ ನೀಡಿದರಂತೆ. ಅವರ ಸಲಹೆಯನ್ನು ಮಹಾ ಪ್ರಸಾದವೆಂದು ಭಾವಿಸಿದ ಬಾಲಕ ಶಿವರುದ್ರಪ್ಪ ತಾತನೊಡನೆ ಕಾಲ್ನಡಿಗೆಯಲ್ಲೇ ಮೈಸೂರಿಗೆ ಬಂದು ಮುಂದೆ ಏನು ಮಾಡುವುದು ಎಂಬುದು ತೋಚದೆ ತೊಗರಿಬೀದಿಯಲ್ಲಿ ಹಾಡು ಹಾಡುತ್ತ ಭಿಕ್ಷೆ ಬೇಡುತ್ತಿದ್ದನೆಂತೆ.
ಬೆಳಕಲಿ ಝಗಮಗಿಸುವ ಮೈಸೂರು ಅರಮನೆಯ ಚೆಂದದ ಚಿತ್ರಗಳು
ಹಾಡಿಗೆ ಮನಸೋತು ಸಲಹೆ ನೀಡಿದ ಮಹಿಳೆ
ಈತನ ಹಾಡಿಗೆ ಮನಸೋತ ಮಹಿಳೆಯೊಬ್ಬರು, ನೀನು ಚೆನ್ನಾಗಿ ಹಾಡುತ್ತಿದ್ದು ಮಹಾರಾಜರನ್ನು ಕಂಡು ಅವರಿಂದ ಸಹಾಯ ಪಡೆಯುವಂತೆಯೂ ಅಲ್ಲದೆ ಇಂದು ಚಾಮುಂಡಿ ಬೆಟ್ಟಕ್ಕೆ ಮಹಾರಾಜರು ಹೋಗುತ್ತಿರುವುದರಿಂದ ನೀನು ಅಲ್ಲಿಗೆ ಹೋಗಿ ಅವರನ್ನು ನೋಡು, ಏನಾದರೂ ಸಹಾಯ ಆಗಬಹುದು ಎಂದು ಹೇಳಿದರಂತೆ. ಆ ಮಹಿಳೆಯ ಮಾತಿನಂತೆ ಆತ ತನ್ನ ತಾತನೊಂದಿಗೆ ಚಾಮುಂಡಿ ಬೆಟ್ಟದ ಕಡೆಗೆ ನಡೆದು ಹೋದನು.
ಚಾಮುಂಡಿ ಬೆಟ್ಟಕ್ಕೆದಲ್ಲಿ ಹಾಡುತ್ತಾ ಮಹಾರಾಜರಿಗಾಗಿ ಕಾದು ಕುಳಿತನಂತೆ. ಎಂದಿನಂತೆ ಪೂಜೆಗೆ ನಾಲ್ವಡಿಯವರು ದೇವಾಲಯದೊಳಕ್ಕೆ ಹೋಗುವಾಗ ಭಕ್ತಿಯಿಂದ ಹಾಡಿನಲ್ಲಿ ಮೈಮರೆತಿದ್ದ ಅಂಧ ಬಾಲಕನ್ನು ನೋಡಿದರು. ಹೀಗಾಗಿ ದೇವಸ್ಥಾನದ ಒಳಕ್ಕೆ ಹೋಗಿ ಪೂಜೆ ಮಾಡಿ, ಹೊರಬಂದ ಮೇಲೆ ಬಾಲಕನನ್ನು ಮಾತನಾಡಿಸಿದರಂತೆ. ಸನಿಹದಲ್ಲೇ ಇದ್ದ ಬಾಲಕನ ತಾತ ಮಹಾರಾಜರಲ್ಲಿ ನನ್ನ ಮೊಮ್ಮಗನ ಭವಿಷ್ಯಕ್ಕೆ ಕರುಣೆತೋರಿ ಎಂದು ಬೇಡಿದರಂತೆ.
ಆಶ್ರಯ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್
ಅಂಧ ಬಾಲಕನ ತಾತನ ಮನವಿಯನ್ನು ಮನ್ನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಾತ, ಮೊಮ್ಮಗನನ್ನು ಕಾರಿನಲ್ಲಿ ಕೂರಿಸಿಕೊಂಡು ಬಂದು ಅರಮನೆಯ ಕರಿಕಲ್ ತೊಟ್ಟಿ ಬಳಿ ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದರು. ಜತೆಗೆ ಇವರಿಗೆ ಸಕಲ ಸೌಕರ್ಯವನ್ನೂ ನೀಡಿ, ಅಂಧ ಬಾಲಕ ಶಿವರುದ್ರಪ್ಪನಿಗೆ ಬಿಡಾರಂ ಕೃಷ್ಣಪ್ಪನವರಂತಹ ಸಂಗೀತ ದಿಗ್ಗಜರಿಂದ ಸಂಗೀತ ಕಲಿಸಿದರು. ಇದಲ್ಲದೆ ಅವರನ್ನು ತಮ್ಮ ಆಸ್ಥಾನ ವಿದ್ವಾಂಸರನ್ನಾಗಿ ಮಾಡಿಕೊಂಡು ಗೌರವ ನೀಡಿದರು. ರಾಜರ ಕೃಪಾಶೀರ್ವಾದಕ್ಕೆ ಪಾತ್ರರಾದ ಶಿವರುದ್ರಪ್ಪನವರು ಅವರಿಂದ ಅನೇಕ ಪ್ರಶಸ್ತಿ, ಪದಕಗಳ ಗೌರವಕ್ಕೆ ಭಾಜನರಾದರು. ಅವರ ವಾಸ್ತವ್ಯಕ್ಕೆ ಸೀತಾ ವಿಲಾಸ ಛತ್ರದ ಒಂದು ಭಾಗದಲ್ಲಿ ವಾಸವಿರಲು ವ್ಯವಸ್ಥೆ ಮಾಡಿದರು.
ಇಂತಹ ಅಪರೂಪದ ಸಂಗೀತ ವಿದ್ವಾಂಸ ಶಿವರುದ್ರಪ್ಪನವರು 103ನೇ ವಯಸ್ಸಿನಲ್ಲಿ ಅಂದರೆ 1992 ಆಗಸ್ಟ್ 22ರಂದು ನಿಧನ ಹೊಂದಿದರು. ಇಂತಹ ಮಹಾನ್ ಸಂಗೀತ ನಿರ್ದೇಶಕರಿಗೆ ಸೂರು ನೀಡಿದ್ದು ಸೀತಾವಿಲಾಸ ಛತ್ರ ಎನ್ನುವುದು ಕೂಡ ಹೆಮ್ಮೆಯ ವಿಚಾರವಾಗಿದೆ.