Stories Of Strength; ಕೊರೊನಾ ರೋಗಿಗಳಿಗೆ ಹುರುಪು ತುಂಬುತ್ತಿರುವ ಆಸಿಡ್ ದಾಳಿ ಸಂತ್ರಸ್ತರು...
ಆಗ್ರಾ, ಜೂನ್ 05: ನೋವಲ್ಲಿ ಯಾರಿದ್ದರೂ ಅವರಿಗೆ ಸಾಂತ್ವನ ಹೇಳಬೇಕು. ಅವರಲ್ಲಿ ಜೀವನ ಚೈತನ್ಯ ತುಂಬಬೇಕು ಎಂಬ ಶುದ್ಧ ಮನಸ್ಸಿನೊಂದಿಗೆ ತಮ್ಮ ನೋವ ನಡುವೆಯೂ ಮತ್ತೊಬ್ಬರಿಗೆ ನೆರವಾಗಲು ಮುಂದಾಗಿ, ಇದೀಗ ಕೊರೊನಾ ಸೋಂಕಿಗೆ ತುತ್ತಾದವರಲ್ಲಿಯೂ ನಗುವ ಹುರುಪು ತರಲು ಮುಂದಾಗಿದ್ದಾರೆ ಆಗ್ರಾದ ಈ ಆಸಿಡ್ ದಾಳಿ ಸಂತ್ರಸ್ತೆಯರು.
ಕೊರೊನಾ ಸೋಂಕಿನ ಎರಡನೇ ಅಲೆಗೆ ಇಡೀ ದೇಶವೇ ತತ್ತರಿಸಿದೆ. ಸೋಂಕಿನಿಂದ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಇಂಥ ವಾತಾವರಣದ ನಡುವೆ ಕೊರೊನಾ ಸೋಂಕಿನಿಂದ ಬಳಲುತ್ತಿರುವವರ ಮನಃಸ್ಥಿತಿಯೇ ಭಿನ್ನವಾಗಿರುತ್ತದೆ. ಜೊತೆಗೆ ಬಡತನವಿದ್ದರಂತೂ ಆತಂಕ, ಭಯವೇ ಮೈತುಂಬಿಕೊಂಡಂತೆ. ಹೀಗಾಗಿ ಅಂಥ ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ, ಚನ್ವ ಸಂಸ್ಥೆ ಹಾಗೂ ಆಸಿಡ್ ದಾಳಿ ಸಂತ್ರಸ್ತೆಯರೇ ನಡೆಸುತ್ತಿರುವ ಶೆರೋಸ್ ಹ್ಯಾಂಗೌಟ್ ಕಫೆ ಸೇರಿ 'Smile Goal Hai' ಅಭಿಯಾನ ಆರಂಭಿಸಿವೆ.
Stories of strength; ನಾನೀಗ ಇನ್ನಷ್ಟು ಗಟ್ಟಿಯಾಗಿದ್ದೇನೆ; ಮಲೈಕಾ ಅರೋರಾ ಕೊರೊನಾ ಅನುಭವ...
ಕೊರೊನಾ ಒಡ್ಡಿರುವ ಈ ಸವಾಲಿನ ಸಂದರ್ಭದಲ್ಲಿ ಕೊರೊನಾ ರೋಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದೆ ಈ ಅಭಿಯಾನ. ಕೊರೊನಾ ರೋಗಿಗಳಿಗೆ ಧೈರ್ಯ ತುಂಬುತ್ತಾ ಮಾನಸಿಕವಾಗಿ ಗಟ್ಟಿಗೊಳ್ಳಲು ಈ ಸಂಸ್ಥೆ ಸದಸ್ಯರು ಪ್ರೇರಣೆ ನೀಡುತ್ತಿದ್ದಾರೆ. ಇಷ್ಟೇ ಅಲ್ಲ, ಕೊರೊನಾ ರೋಗಿಗಳಿಗೆ ಪ್ರತಿನಿತ್ಯ ಆಹಾರ ನೀಡುವ ಹಾಗೂ ಆರ್ಥಿಕವಾಗಿ ಹಿಂದುಳಿದ ರೋಗಿಗಳ ಚಿಕಿತ್ಸೆ ವೆಚ್ಚ ಭರಿಸುವ ಕೆಲಸವನ್ನೂ ಮಾಡುತ್ತಿವೆ.
ಮೇ 17ರಿಂದ ಈ ಅಭಿಯಾನ ಆರಂಭಿಸಲಾಗಿದೆ. ಆಗ್ರಾದ ಜಿಲ್ಲಾಸ್ಪತ್ರೆಗಳಿಗೆ ಭೇಟಿ ನೀಡಿ ಕೊರೊನಾ ರೋಗಿಗಳಿಗೆ ಆಹಾರ ನೀಡುತ್ತಿದ್ದಾರೆ. ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವವರಿಗೆ, ಫುಟ್ಪಾತ್, ಕೊಳೆಗೇರಿಗಳಲ್ಲಿರುವವರಿಗೂ ನೆರವಾಗುವ ಕೆಲಸ ಮಾಡುತ್ತಿದ್ದಾರೆ. ಮೊದಲು 40-50 ಮಂದಿಗೆ ಆಹಾರ ನೀಡಲು ಆರಂಭಿಸಿದೆವು. ಈಗ ರೋಗಿಗಳ ಸಂಖ್ಯೆಯಲ್ಲಿ ಕಡಿಮೆ ಆಗಿದೆ. ಈಗ ಸುಮಾರು 20 ರೋಗಿಗಳಿಗೆ ನೀಡುತ್ತಿದ್ದೇವೆ. ಫುಟ್ ಪಾತ್, ಕೊಳೆಗೇರಿಗಳಲ್ಲಿ 70-80 ಜನರಿಗೆ ಆಹಾರ ನೀಡುತ್ತಿದ್ದೇವೆ ಎಂದು ಸಂಸ್ಥೆಯ ಸದಸ್ಯೆ ಆಶಿಶ್ ಶುಕ್ಲಾ ಹೇಳುತ್ತಾರೆ.
ಸಬ್ಜಿ, ದಾಲ್, ರೋಟಿ, ರಾಯ್ತಾ, ಸಲಾಡ್ ಅನ್ನು ಶೆರೋಸ್ ಕೆಫೆಯಲ್ಲಿ ತಯಾರಿಸುತ್ತೇವೆ. ಕೊರೊನಾ ನಿಯಮಗಳನ್ನು ಪಾಲಿಸಿ ಹಂಚುತ್ತಿದ್ದೇವೆ. ಈ ಒಂದು ಸೇವೆ ನನಗೆ ಹಾಗೂ ನನ್ನ ತಂಡಕ್ಕೆ ಖುಷಿ ನೀಡುತ್ತದೆ. ನಾವು ಸಹಾಯ ಮಾಡಿದವರ ಮುಖದಲ್ಲಿ ನಗು ಮೂಡುವುದನ್ನು ನೋಡುವುದು ಎಷ್ಟು ಒಳ್ಳೆ ಅನುಭವ ನೀಡುತ್ತದಲ್ಲವೇ? ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಈ ನಗುವಿನ ಅವಶ್ಯಕತೆ ಹೆಚ್ಚೇ ಇದೆ ಎಂದು ಆಸಿಡ್ ದಾಳಿ ಸಂತ್ರಸ್ತೆ ಆಶಾ ಹೇಳುತ್ತಾರೆ.
ಕೊರೊನಾ ನಂತರವೂ ಈ ಸೇವೆ ಮುಂದುವರೆಸುತ್ತೇವೆ. ಆಹಾರವಿಲ್ಲದೇ ಇರುವುದು ಎಷ್ಟು ಕಷ್ಟ ಎಂಬುದು ನಮಗೆ ಗೊತ್ತಾಗಿದೆ. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಹಾಯ ಮುಂದುವರೆಸುತ್ತೇವೆ ಎಂದು ಶೆರೋಸ್ ಕೆಫೆ ವಕ್ತಾರ ಅಜಯ್ ತೋಮರ್ ಹೇಳುತ್ತಾರೆ.
ಕೊರೊನಾ ಕರಾಳ ದಿನಗಳ ನಡುವೆ ಇವರ ಈ ಸಣ್ಣ ಪ್ರಯತ್ನ ಎಂಥ ಆಶಾ ಭಾವನೆ ಮೂಡಿಸುತ್ತದಲ್ಲವೇ?