ವಿದ್ಯುತ್ ಆಘಾತ ಅನುಭವಿಸುತ್ತಿರುವ ರಾಜ್ಯಗಳು ಯಾವ್ಯಾವು?
ಬೆಂಗಳೂರು, ಏ. 29: ಬೇಸಿಗೆ ಬಿರುಬಿಸಿಲು ಇನ್ನೂ ಸಂಪೂರ್ಣ ತಾರಕಕ್ಕೇರುವ ಮುನ್ನವೇ ಬಹುತೇಕ ಇಡೀ ದೇಶವೇ ಬಿಸಿಗಾಳಿಗೆ ಬೆಂದುಹೋಗುತ್ತಿದೆ. ಇದರ ಜೊತೆಗೆ, ವಿದ್ಯುತ್ ಕಡಿತದ ಬಿಸಿಗೆ ಜನಜೀವನ ಇನ್ನೂ ಹೈರಾಣವಾಗಿ ಹೋಗುತ್ತಿದೆ. ಭಾರತದ ವಿದ್ಯುತ್ ಕ್ಷೇತ್ರ ಹಾಗು ಅದರ ಉತ್ಪಾದನೆಯಿಂದ ಹಿಡಿದು ಪೂರೈಕೆಯವರೆಗಿನ ಸರಪಳಿ ವ್ಯವಸ್ಥೆಯಲ್ಲಿರುವ ಅಧ್ವಾನ ಸ್ಥಿತಿಯಿಂದಾಗಿ ಪವರ್ ಬಿಕ್ಕಟ್ಟು ಸೃಷ್ಟಿಯಾಗಿದೆ. ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಷಿ ಅವರಿಗೆ ತಲೆ ತುರಿಸಿಕೊಳ್ಳಲೂ ಪುರುಸೊತ್ತು ಇಲ್ಲದಷ್ಟು ಮಾಡಬೇಕಿರುವ ಕೆಲಸಗಳು ಬಹಳ ಇವೆ. ಕರ್ನಾಟಕ ಹೊರತುಪಡಿಸಿ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ವಿದ್ಯುತ್ ಸಮಸ್ಯೆ ಇದೆ. ಅದೃಷ್ಟಕ್ಕೆ ನಮ್ಮ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಪರ್ಯಾಯ ಮೂಲಗಳಿವೆ.
ಕಲ್ಲಿದ್ದಲು, ಜಲವಿದ್ಯುತ್, ವಾಯುಶಕ್ತಿ, ಸೌರಶಕ್ತಿ ಹೇಗೆ ವಿವಿಧ ಮೂಲಗಳಿಂದ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಕಲ್ಲಿದ್ದಲು ಪೂರೈಕೆ ನಿಂತುಹೋದರೂ ಬೇರೆ ಮೂಲಗಳಿಂದ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿದೆ. ಆದರೆ, ಬೇರೆ ರಾಜ್ಯಗಳಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲ ಮೇಲೆ ಹೆಚ್ಚು ಅವಲಂಬನೆಯಾಗಿದೆ. ಇದು ಪವರ್ ಕ್ರೈಸಿಸ್ಗೆ ಮುನ್ನುಡಿ ಬರೆದಿದೆ. ಹಲವು ವರ್ಷಗಳ ಬಳಿಕ ಭಾರತ ಅತಿಹೆಚ್ಚು ವಿದ್ಯುತ್ ಬಿಕ್ಕಟ್ಟು ಎದುರಿಸುವಂತಾಗಿದೆ. ವಿದ್ಯುತ್ ಬಿಕ್ಕಟ್ಟು ಎದುರಿಸುತ್ತಿರುವ ಪ್ರಮುಖ ರಾಜ್ಯಗಳು ಯಾವ್ಯಾವು ಎಂಬುದನ್ನು ನೋಡುವುದಾದರೆ...
ಪವರ್ ಕಟ್ಗೆ ಕಾರಣ Coal ಮಣ್ಣು ಮಸಿ ಅಲ್ಲ, ಪೇಮೆಂಟ್ ಕಟ್
ರಾಷ್ಟ್ರರಾಜಧಾನಿ ನಿವಾಸಿಗಳಿಗೆ ಕಾದಿದೆ ಪವರ್ ಕಟ್:
ದೆಹಲಿಯಲ್ಲಿ ಸದ್ಯ ವಿದ್ಯುತ್ ಪೂರೈಕೆ ಅಗುತ್ತಿದೆಯಾದರೂ ಅದು ಏಳೆಂಟು ದಿನಗಳವರೆಗೆ ಮಾತ್ರ ಸಾಧ್ಯವಾಗಬಹುದು. ಇಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಐದಾರು ಎನ್ಟಿಪಿಸಿ ಘಟಕಗಳಲ್ಲಿ ಕಲ್ಲಿದ್ದಲು ಸಂಗ್ರಹ ಬಹಳ ಬೇಗ ಖಾಲಿ ಆಗುತ್ತಿದೆ. ಇನ್ನೊಂದು ವಾರದಲ್ಲಿ ಕಲ್ಲಿದ್ದಲು ಪೂರೈಕೆ ಆಗದೇ ಇದ್ದಲ್ಲಿ ಯಾವುದೇ ಘಟಕಗಳಲ್ಲೂ ಕಲ್ಲಿದ್ದಲು ಇರುವುದಿಲ್ಲ. ವಿದ್ಯುತ್ ಉತ್ಪಾದನೆ ಶೂನ್ಯಕ್ಕೆ ಬಂದು ಮುಟ್ಟುತ್ತು. ಈಗ ಬೆಚ್ಚಿಬೆವರಿಳಿಸುವ ಉಷ್ಣಗಾಳಿಯಿಂದಾಗಿ ದೆಹಲಿಯಲ್ಲಿ ವಿದ್ಯುತ್ಗೆ ಇರುವ ಬೇಡಿಕೆ 6 ಸಾವಿರ ಮೆಗಾವ್ಯಾಟ್ ದಾಖಲೆ ಮಟ್ಟ ಮುಟ್ಟಿದೆ. ಇಂಥ ಸ್ಥಿತಿಯಲ್ಲಿ ವಿದ್ಯುತ್ ಪೂರೈಕೆ ನಿಂತುಹೋದರೆ ಜನಜೀವನದ ಗತಿ?
ಹರ್ಯಾಣದಲ್ಲಿ 1500 ಮೆ.ವ್ಯಾ. ಕೊರತೆ:
ದೆಹಲಿಗೆ ಬಗುಲಲ್ಲೇ ಇರುವ ಹರ್ಯಾಣ ರಾಜ್ಯದಲ್ಲಿ ದಿನಕ್ಕೆ 9 ಸಾವಿರ ಮೆ. ವ್ಯಾ. ವಿದ್ಯುತ್ ಅಗತ್ಯತೆ ಇದೆ. ಛತ್ತೀಸ್ಗಡ, ಮಧ್ಯಪ್ರದೇಶ ಮೊದಲಾದ ಕೆಲ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡುತ್ತಿದೆ. ಆದರೂ ಇಲ್ಲಿ 1509 ಮೆಗಾ ವ್ಯಾಟ್ ಕೊರತೆ ಬಿದ್ದಿದೆ. ಹೀಗಾಗಿ, ಕೆಲ ಪ್ರದೇಶಗಳಲ್ಲಿ ಐದಾರು ಗಂಟೆ ಲೋಡ್ ಶೆಡ್ಡಿಂಗ್ ಮಾಡುವುದು ಅನಿವಾರ್ಯವಾಗಿದೆ.
ಉ.ಪ್ರ.ದಲ್ಲಿ 3 ಸಾವಿರ ಮೆ.ವ್ಯಾ. ಕೊರತೆ:
ದೇಶದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರಪ್ರದೇಶಕ್ಕೆ 23 ಸಾವಿರ ಮೆ.ವ್ಯಾ. ವಿದ್ಯುತ್ ಬೇಕು. ಅದೂ ಇದೂ ಸರ್ಕಸ್ ಮಾಡಿದರೂ ಇಲ್ಲಿ 3 ಸಾವಿರ ಮೆ ವ್ಯಾಟ್ ವಿದ್ಯುತ್ ಕೊರತೆಯಾಗುತ್ತಿದೆ. ಇದರಿಂದಾಗಿ ಸರಕಾರವು ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳಲ್ಲಿ ಪವರ್ ಕಟ್ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಕೆಲ ಪ್ರದೇಶಗಳಲ್ಲಿ ದಿನಕ್ಕೆ ಏಳೆಂಟು ತಾಸು ವಿದ್ಯುತ್ ಪೂರೈಕೆ ಸ್ಥಗಿತ ಮಾಡಲಾಗುತ್ತಿದೆ.
ಆಂಧ್ರದಲ್ಲಿ ಶೇ. 40 ವಿದ್ಯುತ್ ಕೊರತೆ:
ಆಂಧ್ರದಲ್ಲಿ ವಿದ್ಯುತ್ಗೆ ಇರುವ ಬೇಡಿಕೆಯಲ್ಲಿ ಪೂರೈಕೆ ಆಗುತ್ತಿರುವುದು ಕೇವಲ ಶೇ. 60 ಪ್ರಮಾಣ ಮಾತ್ರ. ಅಲ್ಲಿ ಬಹುತೇಕ ಶೇ. 40ರಷ್ಟು ವಿದ್ಯುತ್ ಕೊರತೆ ಇದೆ. ಇದನ್ನು ಸರಿದೂಗಿಸಲು ಕೈಗಾರಿಕೆಗಳಿಗೆ ಎರಡು ದಿನ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ.
ಬಿಹಾರದಲ್ಲಿ 300 ಮೆ.ವ್ಯಾ. ಕೊರತೆ
ಬಿಹಾರದಲ್ಲಿ ದಿನಕ್ಕೆ 6 ಸಾವಿರ ಮೆ.ವ್ಯಾ. ವಿದ್ಯುತ್ ಅಗತ್ಯ ಇದೆ. ವಿವಿಧ ಮೂಲಗಳಿಂದ ಸುಮಾರು 5 ಸಾವಿರ ಮೆ. ವ್ಯಾ. ವಿದ್ಯುತ್ ಅನ್ನು ಸರಕಾರ ಹೊಂದಿಸುತ್ತಿದೆ. ಆದರೂ ಸುಮಾರು 300 ಮೆ. ವ್ಯಾ. ನಷ್ಟು ವಿದ್ಯುತ್ ಕೊರತೆ ಬೀಳುತ್ತಿದೆ. ಇದು ತೀರಾ ಹೆಚ್ಚಿನ ಕೊರತೆ ಅಲ್ಲವಾದರೂ ವಿವಿಧ ಪ್ರದೇಶಗಳಲ್ಲಿ ಕೆಲ ಹೊತ್ತು ಲೋಡ್ ಶೆಡ್ಡಿಂಗ್ ಮಾಡುವುದು ಅನಿವಾರ್ಯ.
ರಾಜಸ್ಥಾನದಲ್ಲಿ ಗ್ರಾಮೀಣಭಾಗಕ್ಕೆ ಕತ್ತಲೆ:
ಉಷ್ಣಾಂಶ ಬಹಳ ಹೆಚ್ಚು ಇರುವ ರಾಜಸ್ಥಾನ ರಾಜ್ಯದಲ್ಲಿ ಈ ಬಾರಿ ವಿದ್ಯುತ್ಗೆ ಇರುವ ಬೇಡಿಕೆ ಶೇ. 31ರಷ್ಟು ಏರಿದೆ. ಇಷ್ಟು ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಹುತೇಕ ಎಲ್ಲಾ ಪ್ರದೇಶಗಳಲ್ಲೂ 5-7ಗಂಟೆ ಲೋಡ್ ಶೆಡ್ಡಿಂಗ್ ಆಗುತ್ತಿದೆ. ಅದರಲ್ಲೂ ಗ್ರಾಮೀಣ ಭಾಗಗಳಲ್ಲೇ ಅತಿ ಹೆಚ್ಚು ವಿದ್ಯುತ್ ಕಡಿತವಿದೆ.
ಕೇರಳದಲ್ಲೂ ಪವರ್ ಕ್ರೈಸಿಸ್:
ಕೇರಳ ರಾಜ್ಯದಲ್ಲೂ ಇದೀಗ ಪವರ್ ಕ್ರೈಸಿಸ್ ಶುರುವಾಗಿದೆ. ಕಲ್ಲಿದ್ದಲು ಅಭಾವದಿಂದಾಗಿ ವಿದ್ಯುತ್ ಉತ್ಪಾದನೆ ಕಡಿಮೆ ಆಗಿದ್ದು ಅಲ್ಲಿ 400 ಮೆಗಾ ವ್ಯಾಟ್ ವಿದ್ಯುತ್ ಕೊರತೆ ಆಗಿದೆ. ಹೀಗಾಗಿ, ಕೇರಳ ರಾಜ್ಯ ಲೋಡ್ ಶೆಡ್ಡಿಂಗ್ ಕ್ರಮ ಕೈಗೊಳ್ಳದೇ ಬೇರೆ ದಾರಿ ಇಲ್ಲದಂತಾಗಿದೆ.
ಪಂಜಾಬ್ನಲ್ಲಿ ನಿಯಮಿತ ಲೋಡ್ ಶೆಡ್ಡಿಂಗ್:
ಪಂಜಾಬ್ ರಾಜ್ಯ ಈ ಬಾರಿ ಬೇಸಿಗೆಯ ಬಿಸಿಗೆ ನಲುಗಿಹೋಗುತ್ತಿದೆ. ಇಲ್ಲಿ ವಿದ್ಯುತ್ಗೆ ಇರುವ ಬೇಡಿಕೆ ಮಾಮೂಲಿಗಿಂತ ಶೇ. 40ರಷ್ಟು ಹೆಚ್ಚಾಗಿದೆ. ಶೇ. 20ರಷ್ಟು ವಿದ್ಯುತ್ ಅಭಾವ ಸೃಷ್ಟಿಯಾಗಿದೆ. ಉಷ್ಣವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಬಹುತೇಕ ಖಾಲಿ ಆಗಿದೆ. ಮುಂದಿನ ದಿನಗಳಲ್ಲಿ ಇನ್ನೂ ತೀವ್ರ ಸಮಸ್ಯೆ ಕಾಡಲಿದೆ. ಹೀಗಾಗಿ, ನಿಯಮಿತವಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಮೊತ್ತಮೊದಲ ಬಾರಿಗೆ ಪಂಜಾಬ್ನಲ್ಲಿ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಸವಾಲೆಂದರೆ ಸದಕ್ಕೆ ಇದೆಯೇ.
(ಒನ್ಇಂಡಿಯಾ ಸುದ್ದಿ)