ಬಿಜೆಪಿ ಸೆಂಟ್ರಲೈಸ್ಡ್: ಕಟೀಲ್ ಆಯ್ಕೆ ಹಿಂದಿರುವ 'ಶಾ ಲೆಕ್ಕಾಚಾರ' ಇಷ್ಟೆ...
ಕರ್ನಾಟಕ ಬಿಜೆಪಿಗೆ ಅಧ್ಯಕ್ಷರಾಗಿ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಆಯ್ಕೆಯಾಗಿದ್ದಾರೆ. ಆದರೆ ಯಾವ ಅಳತೆಗೋಲಿನಲ್ಲಿ ನಳಿನ್ ಆಯ್ಕೆ ಆಗಿದೆ ಎಂದು ಸ್ವತಃ ಬಿಜೆಪಿಗರೇ ತಲೆ ಕೆರೆದುಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಅವರಂಥ ಪ್ರಭಾವಿ ಜನ ನಾಯಕ ನಿರ್ವಹಿಸಿದ ಹುದ್ದೆಗೆ, ತನ್ನ ಕ್ಷೇತ್ರದ ಹೊರತಾಗಿ ಯಾವುದೇ ಪ್ರಭಾವ ಹೊಂದಿರದ ನಳಿನ್ ಆಯ್ಕೆಯಾದದ್ದು ಇದಕ್ಕೆ ಮೂಲಕ ಕಾರಣ.
ಹಾಗೇ ಒಮ್ಮೆ ಕಣ್ಣಾಡಿಸಿದರೆ ಗೊತ್ತಾಗುವ ಸಂಗತಿ ಏನೆಂದರೆ, ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸುತ್ತಿರುವುದೇ ಸಂಸದರನ್ನು. ಹಾಗಿಲ್ಲದಿದ್ದರೆ ಅಮಿತ್ ಶಾಗೆ ಆಪ್ತರಾಗಿರಲೇ ಬೇಕು. ಇನ್ನು ಅವರು ಸಂಸದರಾಗಿದ್ದರಷ್ಟೇ ಆಯಿತು. ಅದಕ್ಕಿಂತ ಹೆಚ್ಚಿನ ಅರ್ಹತೆ ಅಂದರೆ, ಹೈ ಕಮಾಂಡ್ ನಿರ್ದೇಶನವನ್ನು ಶಿರಸಾ ವಹಿಸಿ ಪಾಲಿಸಬೇಕು. ರಾಜ್ಯಾಧ್ಯಕ್ಷ ಹುದ್ದೆಗೆ ಶಾಸಕರು ಅಂತ ಇದ್ದಿದ್ದರೆ ಅದು ಯಡಿಯೂರಪ್ಪ ಅವರಿಗೆ ನೀಡಿದ್ದಿರಬಹುದು.
ಬಿಜೆಪಿ ಹೊಸ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪರಿಚಯ
ಉಳಿದಂತೆ ಬಹುಪಾಲು ಎಲ್ಲಿ ನೋಡಿದರೂ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಕಾಣುವವರು ಸಂಸದರೇ. ಅಲ್ಲಿಗೆ ಬಿಜೆಪಿಯಲ್ಲಿ ರಾಷ್ಟ್ರಾಧ್ಯಕ್ಷ ಹುದ್ದೆ ಬಿಟ್ಟು ಉಳಿದ ಹುದ್ದೆಗಳು ಉತ್ಸವ ಮೂರ್ತಿಗಳಂತೆ ಮಾತ್ರ. ಒಂದು ಕಾಲ ಇತ್ತು. ಅದು ಕೂಡ ಕಾಂಗ್ರೆಸ್ ನಲ್ಲಿ. ಯಾರು ರಾಜ್ಯಾಧ್ಯಕ್ಷರಾಗಿ ಇರುತ್ತಾರೋ ಅವರೇ ಮುಖ್ಯಮಂತ್ರಿ ಸ್ಥಾನಕ್ಕೆ ಏರುತ್ತಾರೆ ಎಂಬ ಲೆಕ್ಕಾಚಾರ ಇರುತ್ತಿತ್ತು.
ಕೇಂದ್ರದಿಂದಲೇ ಎಲ್ಲ ತೀರ್ಮಾನ ಜಾರಿ
ಬಿಜೆಪಿ ಸಹ ಕೆಲವು ಕಡೆ ಅದನ್ನು ಅನ್ವಯಿಸಿ, ಮುಖ್ಯಮಂತ್ರಿಗಳಾಗಿ ಮಾಡಿದ್ದು ಇದೆ. ಅದರಲ್ಲಿ ಯಡಿಯೂರಪ್ಪ ಕೂಡ ಒಬ್ಬರು. ಆದರೆ ಈಗ ಬಿಜೆಪಿಯಲ್ಲಿ ಅಧಿಕಾರವು ಕೇಂದ್ರೀಕೃತವಾಗಿದೆ. ಅದು ಅಮಿತ್ ಶಾ ಹಿಡಿತದಲ್ಲಿದ್ದು, ರಾಜ್ಯ ಮುಖಂಡರು ಹೆಸರಿಗೆ ಮಾತ್ರ ಇರುತ್ತಾರೆ. ಎಲ್ಲ ನಿರ್ಧಾರಗಳು ಕೇಂದ್ರದಿಂದಲೇ ಲಾಗೂ ಆಗುತ್ತವೆ. ಅಲ್ಲಿಗೆ ಬಿಜೆಪಿಯಲ್ಲಿ ರಾಷ್ಟ್ರಾಧ್ಯಕ್ಷ ಹುದ್ದೆಯೊಂದು ಮಾತ್ರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತವೆ. ಉಳಿದದ್ದು ನೆಪಕ್ಕೆ ಮಾತ್ರ ಎನ್ನುತ್ತವೆ ಬಿಜೆಪಿಯ ಆಂತರಿಕ ಮೂಲಗಳು.
ಹತ್ತನೇ ತರಗತಿ ನಳಿನ್ ಕುಮಾರ್ ಕಟೀಲ್ ಕರ್ನಾಟಕಕ್ಕೆ
ಈಗ ಕರ್ನಾಟಕದ ವಿಚಾರದಲ್ಲೂ ಅದೇ ಆಗಿದೆ. ನಳಿನ್ ಕುಮಾರ್ ಅವರು ಕರ್ನಾಟಕದ ಪ್ರಬಲ ಸಮುದಾಯಕ್ಕೆ ಸೇರಿದವರಲ್ಲ. ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡಿರುವ ಅವರು ಪ್ರಖರ ವಾಗ್ಮಿಯೂ ಅಲ್ಲ. ಈಗಲೂ ಸಾಮಾಜಿಕ ಜಾಲತಾಣದಲ್ಲಿ ನಳಿನ್ ನೀಡಿದ್ದ ಹೇಳಿಕೆಗಳು ಟ್ರಾಲ್ ಆಗುತ್ತಲೇ ಇವೆ. ಈ ಎಲ್ಲ ವಿಚಾರವನ್ನು ಅಳೆದು- ತೂಗಿ, ಬಿಜೆಪಿ ಹೈ ಕಮಾಂಡ್ ಸ್ಥಳೀಯ ಪ್ರಭಾವಿ ಮುಖಂಡರು ಬೆಳೆಯುವುದು ಬೇಡ ಎಂದು ನಿರ್ಧಾರ ಮಾಡಿಯಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಸ್ಥಳೀಯ ಮುಖಂಡರು ನಾಮ್ ಕೇ ವಾಸ್ಥೆ ಎಂಬಂತೆ
ಸ್ಥಳೀಯ ಮುಖಂಡರನ್ನು ಬೆಳೆಸಬೇಕು. ಅವರ ಅಗತ್ಯ ಕಂಡುಬಂದಲ್ಲಿ ರಾಷ್ಟ್ರ ಸೇವೆಗೆ ನಿಯೋಜಿಸಬೇಕು. ಇಂಥ ವಿಚಾರಧಾರೆ ಇದ್ದ ಬಿಜೆಪಿಯಲ್ಲಿ ಈಗ ಸ್ಪಷ್ಟ ಬದಲಾವಣೆ ಗೋಚರಿಸುತ್ತದೆ. ಸ್ವತಃ ನರೇಂದ್ರ ಮೋದಿ, ಅಮಿತ್ ಶಾ ಸಹ ಒಂದು ರಾಜ್ಯದಿಂದ ರಾಷ್ಟ್ರ ಮಟ್ಟದ ನಾಯಕರಾಗಿ ಬೆಳೆದವರು. ವಿಪರ್ಯಾಸ ಏನೆಂದರೆ, ಅವರಿಬ್ಬರ ನಾಯಕತ್ವದ ಅಡಿಯಲ್ಲೇ ಸ್ಥಳೀಯ ನಾಯಕರು ನೆಪಕ್ಕೆ, ನಾಮ್ ಕೇ ವಾಸ್ಥೆ ಎಂಬಂತಾಗುತ್ತಿದ್ದಾರೆ.
ವ್ಯಕ್ತಿ ಕೇಂದ್ರಿತ ಪಕ್ಷವಲ್ಲ ಎನ್ನುತ್ತಿದ್ದ ಆ ಬಿಜೆಪಿ ಎಲ್ಲಿ?
ಯಾವುದೇ ರಾಜ್ಯದ ಚುನಾವಣೆ ಪ್ರಚಾರದ ವೇಳೆಯಲ್ಲೂ ಈ ಬದಲಾವಣೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕೂಡ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮುಂಚೂಣಿಯಲ್ಲಿ ಇದ್ದರು. ಸ್ವತಃ ಯಡಿಯೂರಪ್ಪ ಅವರೇ ನೆಪಕ್ಕೆ ಮಾತ್ರ ಎಂಬಂತಾಗಿದ್ದರು. ಈಗಲೂ ಚುನಾವಣೆ ಪ್ರಚಾರದ ವೇಳೆ, ನರೇಂದ್ರ ಮೋದಿ ಅವರನ್ನು ನೋಡಿ ಮತ ಹಾಕಿ ಅನ್ನೋದೇ ಬಿಜೆಪಿ ಅಭ್ಯರ್ಥಿಗಳ ಓನಾಮ. ನಮ್ಮದು ವ್ಯಕ್ತಿ ಕೇಂದ್ರಿತ ಪಕ್ಷವಲ್ಲ ಎನ್ನುತ್ತಿದ್ದ ಬಿಜೆಪಿ ಈಗ ಏನಾಯಿತು?