ಶ್ರೀಲಂಕಾ ಬಿಕ್ಕಟ್ಟಿಗೆ ಏನು ಕಾರಣ? ಒಂದು ಅವಲೋಕನ
ಶ್ರೀಲಂಕಾ ಬಹಳ ಕೆಟ್ಟ ಆರ್ಥಿಕ ಪರಿಸ್ಥಿತಿಗೆ ಸಿಲುಕಿ ವಿಲವಿಲ ಒದ್ದಾಡುತ್ತಿದೆ. ಜನೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿ ಅಲ್ಲಿನ ಜನಜೀವನ ಕಂಗೆಟ್ಟುಹೋಗಿದೆ. ದೊಂಬಿ, ಗಲಾಟೆ, ಪ್ರತಿಭಟನೆಗಳು ಲಂಕಾದ್ಯಂತ ನಿತ್ಯ ನಡೆಯುತ್ತಿವೆ. ಶ್ರೀಲಂಕಾಗೆ ಸಾಲ ಸಿಗುವುದೇ ದುಸ್ತರವಾಗಿದೆ. ಇರುವ ಸಾಲಕ್ಕೆ ಬಡ್ಡಿ ಕಟ್ಟುವ ಸಾಮರ್ಥ್ಯವೂ ಲಂಕಾಗೆ ಕಡಿಮೆ ಆಗಿದೆ. ಪೆಟ್ರೋಲ್ ಬೆಲೆ ಪ್ರತೀ ಲೀಟರ್ಗೆ 300 ರೂಪಾಯಿಗೂ (ಲಂಕಾ ರೂ) ಹೆಚ್ಚು ಬೆಲೆಗೆ ಏರಿದೆ. ಬಹುತೇಕ ಕಡೆ ನಿತ್ಯ 12 ತಾಸು ಪವರ್ ಕಟ್ ಮಾಡುವ ಸ್ಥಿತಿ ಇದೆ.
ಅಧ್ಯಕ್ಷ ಗೋಟಾಬಯ ರಾಜಪಕ್ಸ ತಮ್ಮ ಸರಕಾರಗಳಿಂದ ಆದ ಕೆಲ ತಪ್ಪು ನಿರ್ಧಾರಗಳನ್ನ ಒಪ್ಪಿಕೊಂಡಿದ್ದಾರೆ. ಹಾಗೆಯೇ, ಆರ್ಥಿಕ ಚೇತರಿಕೆ ಬೇಕಾದ ಅಗತ್ಯ ಕ್ರಮಗಳನ್ನ ಕೈಗೊಳ್ಳುವ ಪ್ರಯತ್ನದಲ್ಲಿದ್ದಾರೆ.
ಆರ್ಥಿಕ ಬಿಕ್ಕಟ್ಟಿಗೆ ನಮ್ಮ ತಪ್ಪುಗಳೇ ಕಾರಣ: ದಿವಾಳಿಯಾದ ಮೇಲೆ ಒಪ್ಪಿಕೊಂಡ ಶ್ರೀಲಂಕಾ ಅಧ್ಯಕ್ಷ
ಅಷ್ಟಕ್ಕೂ ಲಂಕಾದ ಈ ಆರ್ಥಿಕ ದುಸ್ಥಿತಿಗೆ ಏನು ಕಾರಣ? ಪರಿಣಿತರ ಪ್ರಕಾರ, ಹಲವು ವರ್ಷಗಳಿಂದ ವಿವಿಧ ಸರಕಾರಗಳು ಕೈಗೊಂಡ ತಪ್ಪು ನಿರ್ಧಾರಗಳು ಕಾರಣ ಎನ್ನುವುದು ಒಂದು. ಹಾಗೆಯೇ, ಲಂಕಾ ಕೈಗೆ ನಿಲುಕದ ಕಾರಣಗಳೂ ಇನ್ನೊಂದೆಡೆ ಇವೆ. ಕೋವಿಡ್ ಹಾಗು ರಷ್ಯಾ ಉಕ್ರೇನ್ ಯುದ್ಧ ಇದಕ್ಕೆ ಉದಾಹರಣೆ.
ಶಿಸ್ತು ಕಳೆದುಕೊಂಡ ಆರ್ಥಿಕತೆ:
ಶ್ರೀಲಂಕಾದ ವಿವಿಧ ಸರಕಾರಗಳು ಆರ್ಥಿಕ ಶಿಸ್ತು ಅಥವಾ ವಿತ್ತೀಯ ಶಿಸ್ತು ಕಾಯ್ದುಕೊಳ್ಳದೇ ಹೋಗಿವೆ. ಹೀಗಾಗಿ, ಇವತ್ತಿನ ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸುವ ಸಾಮರ್ಥ್ಯ ಲಂಕಾಗೆ ಕುಂಠಿತವಾಗಿದೆ. ಲಂಕಾದ ಬಜೆಟ್ನಲ್ಲಿ ಸತತವಾಗಿ ವಿತ್ತೀಯ ಕೊರತೆ ಎದುರಾಗಿದೆ. ಹಾಗೆಯೇ, ಕರೆಂಟ್ ಅಕೌಂಟ್ ಕೊರತೆಯೂ ಸತತವಾಗಿ ಕಾಡಿದೆ. ಇವೆರಡೂ ಕೂಡ ಒಂದು ಆರ್ಥಿಕತೆಯನ್ನ ಅಪಾಯಕ್ಕೆ ದೂಡುತ್ತವೆ. 2019ರಲ್ಲಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಸಂಸ್ಥೆ ಈ ವಿಚಾರದ ಬಗ್ಗೆ ಒಂದು ಎಚ್ಚರಿಕೆ ಸಂದೇಶವನ್ನೂ ರವಾನಿಸಿತ್ತು. ಲಂಕಾದ್ದು ದ್ವಿ ಕೊರತೆ ಆರ್ಥಿಕತೆಗೆ (Twin Deficit Economy) ಉದಾಹರಣೆ ಆಗಿದೆ ಎಂದು ಹೇಳಿತ್ತು.
ವಿತ್ತೀಯ ಕೊರತೆಯಾಗಲೀ (Budget Deficit) ಚಾಲ್ತಿ ಖಾತೆ ಕೊರತೆಯಾಗಲೀ (Current Account Deficit) ದೇಶದ ಆದಾಯಕ್ಕಿಂತಲೂ ಖರ್ಚು ಹೆಚ್ಚಾಗಿರುವುದನ್ನು ಸೂಚಿಸುತ್ತದೆ. ಇದು ದೀರ್ಘ ಕಾಲ ಮುಂದುವರಿದರೆ ಅದರ ದುಷ್ಪರಿಣಾಮಗಳಿಂದ ಆರ್ಥಿಕ ಶಕ್ತಿ ತೀರಾ ದುರ್ಬಲಗೊಳ್ಳುತ್ತದೆ ಎಂಬುದು ತಜ್ಞರ ಅನಿಸಿಕೆ.
ಅಮೆರಿಕವೇ ಅತಿಹೆಚ್ಚು ಸಾಲಗಾರ; ಭಾರತ, ರಷ್ಯಾ ಸೇರಿ ಪ್ರಮುಖ ದೇಶಗಳ ಸಾಲ ಎಷ್ಟೆಷ್ಟು?
ತೆರಿಗೆ ಕಡಿತದ ಹೊಡೆತ:
ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಗೋಟಾಬಯ ರಾಜಪಕ್ಸ ಅವರು ತೆರಿಗೆ ಕಡಿತಕ್ಕೆ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ಅಧಿಕಾರಕ್ಕೆ ಬಂದ ಬಳಿಕ ಸಾಕಷ್ಟು ಸಬ್ಸಿಡಿ, ತೆರಿಗೆ ಕಡಿತ ಇತ್ಯಾದಿ ಕ್ರಮ ಕೈಗೊಂಡರು. ತೆರಿಗೆ ಕಡಿತದಿಂದ ಆರ್ಥಿಕತೆಯಲ್ಲಿ ಹಣದ ಚಲನೆಯಾಗಬಹುದು ಎಂಬ ಆಶಯವೂ ಇತ್ತು. ಆದರೆ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳು ಶ್ರೀಲಂಕಾವನ್ನು ಉಪೇಕ್ಷಿಸಿದವು. ಪರಿಣಾಮವಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಲಂಕಾಗೆ ಸಾಲ ಸಿಗುವುದು ದುಸ್ತರವಾಯಿತು. ಇದು ಈಗಿನ ದಿಢೀರ್ ಆರ್ಥಿಕ ಹೊಡೆತಕ್ಕೆ ಎಡೆ ಮಾಡಿಕೊಟ್ಟಿತು. ಅದರ ವಿದೇಶ ವಿನಿಯಮ ಮೀಸಲು ಹಣ ಎರಡು ವರ್ಷದಲ್ಲಿ ಶೇ. 70ರಷ್ಟು ಕಡಿಮೆ ಆಗಿದೆ.
ಸಾವಯವ ಕೃಷಿಗೆ ಒತ್ತು ಕೊಟ್ಟಿದ್ದೂ ಒಂದು ಹೊಡೆತ:
ಶ್ರೀಲಂಕಾ ಸರಕಾರ ಸಾವಯವ ಕೃಷಿಗೆ ಪುಷ್ಟಿ ನೀಡುವ ಭರದಲ್ಲಿ ಎಲ್ಲಾ ರಸಗೊಬ್ಬರಗಳನ್ನು ನಿಷೇಧ ಮಾಡಿತು. ಇದರಿಂದ ರೈತರ ಬೆಳೆ ಇಳುವರಿ ತೀರಾ ಕಡಿಮೆ ಆಯಿತು. ಇದೂ ಕೂಡ ಲಂಕಾದ ಆರ್ಥಿಕ ಹಿನ್ನಡೆಗೆ ಕಾರಣವಾಯಿತು.
ಲಂಕಾದ ಪ್ರವಾಸೋದ್ಯಮಕ್ಕೆ ಸಂಚಕಾರ ಕೋವಿಡ್ ಎಫೆಕ್ಟ್:
ಶ್ರೀಲಂಕಾದ ಆರ್ಥಿಕತೆ ಹೆಚ್ಚಾಗಿ ನಿಂತಿರುವುದು ಅದರ ಪ್ರವಾಸೋದ್ಯಮದಿಂದ. ಆದರೆ, ಎರಡು ವರ್ಷಗಳ ಹಿಂದೆ ಬಂದ ಕೋವಿಡ್ ವ್ಯಾಧಿ ಲಂಕಾದ ಪ್ರವಾಸೋದ್ಯಮಕ್ಕೆ ಸಂಚಕಾರ ತಂದಿತು. ಪ್ರವಾಸಿಗರ ಆಗಮನ ಇಲ್ಲದೆ ಲಂಕಾದ ಆರ್ಥಿಕತೆ ಚೇತರಿಕೆ ಕಾಣಲು ಅಸಾಧ್ಯವಾಯಿತು. ಇದರ ಜೊತೆಗೆ ಪ್ರವಾಹದಂಥ ನೈಸರ್ಗಿಕ ವಿಕೋಪವೂ ಲಂಕಾ ಆರ್ಥಿಕತೆಗೆ ಧಕ್ಕೆ ತಂದಿತು.
ವಿಪರೀತ ಸಾಲ
ಶ್ರೀಲಂಕಾದ ವಿವಿಧ ಸರಕಾರಗಳು ಬಹುದೊಡ್ಡ ಯೋಜನೆಗಳಿಗಾಗಿ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಮನಬಂದಂತೆ ಸಾಲಗಳನ್ನು ಪಡೆದಿವೆ. ಚೀನಾ, ಜಪಾನ್ ಮತ್ತು ಎಡಿಬಿಯಿಂದ ಲಂಕಾ ಬಹಳಷ್ಟು ಸಾಲ ಪಡೆದಿವೆ. ಈಗ ಹೊಸ ಸಾಲ ಹುಟ್ಟುತ್ತಿಲ್ಲ. ಸಾಲದ ಸುಳಿಗೆ ಲಂಕಾ ಸಿಲುಕಿಕೊಂಡಿದೆ.
ರೂಪಾಯಿ ಅಪಮೌಲ್ಯ
ಲಂಕಾ ಸರಕಾರ ತನ್ನ ಕರೆನ್ಸಿಯನ್ನ ವಿದೇಶಿ ವಿನಿಮಯ ಮಾರುಕಟ್ಟೆಗೆ ಅನುಗುಣವಾಗಿ ಬದಲಾಗುವ ರೀತಿಯಲ್ಲಿ ಕ್ರಮ ಕೈಗೊಂಡರು. ಇದರಿಂದ ಡಾಲರ್ ಎದುರು ಲಂಕಾ ರೂಪಾಯಿ ಮೌಲ್ಯ ಇನ್ನಷ್ಟು ಕುಸಿಯಿತು. ಐಎಂಎಫ್ನಿಂದ ಸಾಲ ಪಡೆಯಲು ಅನುವಾಗುವುದು ಲಂಕಾ ಸರಕಾರದ ಈ ಕ್ರಮಕ್ಕೆ ಕಾರಣ. ಆದರೆ, ಪೆಟ್ರೋಲ್ ಇತ್ಯಾದಿ ಆಮದು ವಸ್ತುಗಳ ಬೆಲೆ ಗಗನಕ್ಕೇರಿತು, ಒಂದು ಲೀಟರ್ ಪೆಟ್ರೋಲ್ ಲಂಕನ್ ರೂಪಾಯಿ ಲೆಕ್ಕದಲ್ಲಿ 340 ರೂಪಾಯಿಗೆ ಏರಿದೆ. ತತ್ಪರಿಣಾಮವಾಗಿ ಇತರ ಅಗತ್ಯ ವಸ್ತುಗಳ ಬೆಲೆಗಳೂ ಏರಿಕೆಯಾಗಿ ಲಂಕಾ ಜನಸಾಮಾನ್ಯರ ಜೀವನವನ್ನು ಹೈರಾಣಗೊಳಿಸಿದೆ.
ಮುಂದಿನ ದಾರಿ:
ಲಂಕಾದ ಒಟ್ಟು ಸಾಲ 12.55 ಬಿಲಿಯನ್ ಡಾಲರ್ ಇದೆ. ಈ ವರ್ಷ ಲಂಕಾ 4 ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿಸಬೇಕಿದೆ. ಅದಕ್ಕೆ ಮೀಸಲು ನಿಧಿ ಉಳಿದಿರುವುದೇ 2.31 ಬಿಲಿಯನ್ ಡಾಲರ್ ಹಣ ಮಾತ್ರವೇ. ಹೀಗಾಗಿ, ಚೀನಾ, ಭಾರತ ದೇಶಗಳಿಂದ ಹಣದ ನೆರವಿಗೆ ಲಂಕಾ ಮನವಿ ಮಾಡಿದೆ. ಭಾರತ ನೆರವಿಗೆ ಸಿದ್ಧವಾಗಿದೆ. ಮೊದಲು ಹಿಂದೇಟು ಹಾಕುತ್ತಿದ್ದ ಚೀನಾ ಇದೀಗ ಮೂರ್ನಾಲ್ಕು ಬಿಲಿಯನ್ ಡಾಲರ್ ಸಾಲ ಕೊಡಲು ಒಪ್ಪಿದೆ. ಹಾಗೆಯೇ, ಐಎಂಎಫ್ನಿಂದ ಸಾಲ ಪಡೆಯಲು ಲಂಕಾ ನಿರ್ಧರಿಸಿದೆ. ಇದರಿಂದಲಾದರೂ ಲಂಕಾ ಆರ್ಥಿಕತೆ ಒಂದಷ್ಟು ಚೇತರಿಕೆ ಕಾಣುವ ಆಶಯ ಇದೆ.
(ಒನ್ಇಂಡಿಯಾ ಸುದ್ದಿ)
Recommended Video