ಚಂಚಲ ಮನಸ್ಸಿಗೆ ಅಂಕುಶ ಹಾಕಲು ಆಧ್ಯಾತ್ಮಿಕ ಚಿಂತಕರು ನೀಡಿದ ಪರಿಹಾರಗಳು
ಚಂಚಲ ಮನಸ್ಸು ನಮ್ಮದಾದರೆ ಖಂಡಿತ ನಾವು ಏನನ್ನೂ ಸಾಧಿಸಲಾರೆವು ಎಂಬುವುದು ಎಲ್ಲರ ಅರಿವಿಗೆ ಬಂದ ವಿಚಾರವೇ... ನಾವು ಒಂದಲ್ಲ ಒಂದು ಕಾರಣಕ್ಕೆ ನಮ್ಮ ಚಂಚಲ ಮನಸ್ಸಿನಿಂದಾಗಿ ಅವಕಾಶಗಳನ್ನು ಕಳೆದುಕೊಂಡಿರಬಹುದು, ನಷ್ಟ ಅನುಭವಿಸಿರಬಹುದು, ಹಲವು ಸಮಸ್ಯೆಗಳನ್ನು ಎದುರಿಸಿರಬಹುದು. ಬಹಳಷ್ಟು ಸಾರಿ ನನ್ನ ಮನಸ್ಸು ಸರಿಯಿಲ್ಲ. ಹಾಗಾಗಿ ಏನು ನಿರ್ಧಾರ ಕೈಗೊಳ್ಳಲಾಗುತ್ತಿಲ್ಲ ಎಂಬಂತಹ ನಿರಾಶೆಯ ಮಾತುಗಳನ್ನಾಡುತ್ತೇವೆ.
ಇಂತಹ ಮಾತುಗಳು ನಮ್ಮಲ್ಲಿರುವ ಆತ್ಮವಿಶ್ವಾಸವನ್ನು ಕುಂದಿಸಿ ಬಿಡುತ್ತದೆ ಎನ್ನುವುದನ್ನು ತಳ್ಳಿಹಾಕಲಾಗುವುದಿಲ್ಲ. ಇಂತಹ ಚಂಚಲ ಮನಸ್ಸಿಗೆ ನಾವು ಬ್ರೇಕ್ ಹಾಕದಿದ್ದರೆ ನಮ್ಮ ಜೀವನದಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ. ಹಲವು ಸಂದರ್ಭಗಳಲ್ಲಿ ಈಗ ಇದ್ದ ಮನಸ್ಥಿತಿ ಸ್ವಲ್ಪ ಹೊತ್ತಿಗೆ ಇಲ್ಲದಾಗುತ್ತದೆ.
ಇದರಿಂದ ನಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲಾಗದೆ ಇತರರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಹೀಗಾದಾಗ ಯಾವುದೇ ದೃಢ ನಿರ್ಧಾರ ಕೈಗೊಳ್ಳಲಾಗದೆ ನಮಗೆ ನಾವೇ ವಂಚನೆ ಮಾಡಿಕೊಂಡಂತಾಗುತ್ತದೆ. ಚಂಚಲ ಮನಸ್ಸಿನಿಂದ ಆಗುವ ಅನಾಹುತಗಳು ಒಂದೆರಡಲ್ಲ. ಅದು ಎಲ್ಲರ ಅರಿವಿಗೂ ಬಂದಿರುತ್ತದೆ.
ಗಾಳಿಗೋಪುರ ಕಟ್ಟುವುದು, ಹಗಲು ಕನಸು ಕಾಣುವುದು ಬಿಡಿ...
ಹಾಗಾದರೆ ನಮ್ಮೆಲ್ಲರನ್ನು ಕಾಡುವ ಚಂಚಲ ಮನಸ್ಸಿಗೆ ಅಂಕುಶ ಹಾಕಲು ಸಾಧ್ಯವಿಲ್ಲವೆ? ಚಂಚಲ ಮನಸ್ಸನ್ನು ಹಿಡಿತದಲ್ಲಿಟ್ಟು ಕೊಳ್ಳುವುದಾದರೂ ಹೇಗೆ? ಹೀಗೆ ಹತ್ತಾರು ಪ್ರಶ್ನೆಗಳು ನಮ್ಮನ್ನು ಕಾಡದಿರದು. ಇಂತಹ ಮನಸ್ಥಿತಿಗೆ ಅಧ್ಯಾತ್ಮಿಕ ಚಿಂತಕರು ಕೆಲವೊಂದು ಪರಿಹಾರಗಳನ್ನು ಕೂಡ ನೀಡಿದ್ದಾರೆ.
ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆ
ಸದಾ ಚಂಚಲವಾಗಿರುವ ಮನಸ್ಸನ್ನು ಹಿಡಿದು ನಮ್ಮ ಅಂಕೆಯಲ್ಲಿಟ್ಟುಕೊಳ್ಳದೇ ಹೋದರೆ, ಗಾಳಿ ಬಂದು ದೋಣಿಯನ್ನು ಸೆಳೆದುಕೊಂಡು ಹೋಗುವ ರೀತಿ ನಮ್ಮನ್ನು ಮನಸ್ಸು ಮತ್ತೆಲ್ಲಿಗೋ ಎಳೆದೊಯ್ದು ಬಿಡಬಹುದು. ಇಂತಹ ಸಂದರ್ಭಗಳಲ್ಲಿ ನಾವು ಕೆಲವೊಂದು ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆಯೂ ಇರುತ್ತದೆ.
ಒತ್ತಡದ ಬದುಕಿನಲ್ಲಿ ಮನಸ್ಸನ್ನು ಆರೋಗ್ಯವಾಗಿಡುವುದು ಹೇಗೆ?
ಚಂಚಲ ಮನಸ್ಸಿಗೆ ಕಡಿವಾಣ ಹಾಕದೇ ಹೋದರೆ ಮಾನಸಿಕ ಶಾಂತಿ ಕಳೆದುಕೊಂಡು ಉದ್ವೇಗಗಳಿಗೆ ಬಲಿಯಾಗಿ ಹಠಮಾರಿತನದ ಮನೋರೋಗಗಳಿಗೆ ಒಳಗಾಗುವಂತಹ ಸನ್ನಿವೇಶ ಸೃಷ್ಠಿಯಾಗಿ ಬಿಡುತ್ತದೆ. ಅಸೂಯೆ, ದ್ವೇಷ, ಕ್ರೋಧ, ಭಯ, ಈರ್ಷ್ಯೆ, ಕಾಮ, ಲೋಭ, ಕಪಟ, ಪ್ರಲೋಭನೆಯಂತಹ ಮಾಲಿನ್ಯಗಳು ಪರಿಣಾಮ ಬೀರುವುದರಿಂದ ಮನಸ್ಸು ಚಂಚಲವಾಗಿ ಬಿಡುತ್ತದೆ.
ಮನಸ್ಸನ್ನು ಪರಿಶುದ್ಧವಾಗಿಸಿಕೊಳ್ಳಬೇಕು
ಆದ್ದರಿಂದ ಮೊದಲಿಗೆ ನಾವು ಮನಸ್ಸನ್ನು ಪರಿಶುದ್ಧವಾಗಿಸಿಕೊಳ್ಳಬೇಕು. ಮನಸ್ಸು ಪರಿಶುದ್ಧವಾದರೆ ನಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಸುಲಭವಾಗುತ್ತದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಮನಸ್ಸು ಪರಿಶುದ್ಧವಾದಷ್ಟು ಅದರ ನಿಗ್ರಹ ಸುಲಭ. ಆದ್ದರಿಂದ ಮನಸ್ಸಿನ ಪರಿಶುದ್ಧತೆಗೆ ಆದ್ಯತೆ ನೀಡಬೇಕು.
ಪರಿಪೂರ್ಣವಾದ ನೈತಿಕ ವರ್ತನೆಗಳಿಂದ ಸಮಗ್ರವಾದ ಮನೋನಿಗ್ರಹ ಸಾಧ್ಯ. ನಿಜವಾದ ನೀತಿವಂತ ಬೇರೇನೂ ಮಾಡಬೇಕಾಗಿಲ್ಲ. ಆತ ಚಾಂಚಲ್ಯಗಳಿಂದ ಮುಕ್ತನಾಗಿರುತ್ತಾನಂತೆ. ಅಂಡಲೆಯುವ ಮನಸ್ಸನ್ನು ಕಟ್ಟಿ ಹಾಕುವ ಮುನ್ನ ಅದನ್ನು ಚೆನ್ನಾಗಿ ತಿಳಿದುಕೊಳ್ಳಬೇಕು.
ಬಯಕೆಯಿಲ್ಲದ ಮನುಷ್ಯ ಮನುಷ್ಯನೇ ಅಲ್ಲ, ಅದಕ್ಕೆ ಅಂತ್ಯವೂ ಇಲ್ಲ...
ಶಿಸ್ತು ರೂಢಿಸಿಕೊಳ್ಳಬೇಕು
ಅಷ್ಟೇ ಅಲ್ಲ ಎಲ್ಲೆಲ್ಲೊ ಅಂಡಲೆಯುವ ಮನಸ್ಸನ್ನು ಹಿಡಿದು ವಿಚಾರದ ಗೂಟಕ್ಕೆ ಕಟ್ಟಿಹಾಕಬೇಕು. ಇದು ಒಮ್ಮೆಗೆ ಆಗುವ ಕೆಲಸವಲ್ಲ. ಇದನ್ನು ಆಗಾಗ್ಗೆ ಮಾಡುತ್ತಲೇ ಇರಬೇಕು ಎಂದು ಹೇಳುತ್ತಾರೆ ಸ್ವಾಮಿ ವಿವೇಕಾನಂದರು. ಮನಸ್ಸಿನ ಚಾಂಚಲ್ಯವನ್ನು ದೂರ ಅಟ್ಟಬೇಕಾದರೆ ಮೊದಲಿಗೆ ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು.
ಒಳ್ಳೆಯ ವಿಚಾರಗಳಿಗೆ ಮನಸ್ಸನ್ನು ಒಡ್ಡಬೇಕು
ಮನಸ್ಸಿನಲ್ಲಿ ಅನಪೇಕ್ಷಣೀಯ ಬಯಕೆ, ಗೊಂದಲಗಳು ಸುಳಿಯದಂತೆ ಸದಾ ಒಳ್ಳೆಯ ವಿಚಾರಗಳಿಗೆ ಮನಸ್ಸನ್ನು ಒಡ್ಡಬೇಕು. ಕೆಲವೊಂದು ಸಂದರ್ಭಗಳಲ್ಲಿ ನಾವು ಮನಸ್ಸಿನಾಚೆಗೆ ಪ್ರೇಕ್ಷಕನಂತೆ ನಿಂತು ನೋಡುವ ಗುಣವನ್ನು ರೂಢಿಸಿಕೊಳ್ಳಬೇಕು ಎಂಬ ಮಾತನ್ನು ಮಾತ್ರ ಮರೆಯಬಾರದು.