ಅಕ್ಷರ ಕಲಿಸಿದ... ಬದುಕೋದನ್ನು ತೋರಿಸಿದ ಗುರುಗಳಿಗಿರಲಿ ನಮನ
ಸೆಪ್ಟಂಬರ್ 5 ಅನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ನಮಗೆ ವಿದ್ಯೆ ಕಲಿಸಿದ, ಬದುಕಲು ದಾರಿ ತೋರಿಸಿದ ಶಿಕ್ಷಕರನ್ನು ನಾವು ಈ ದಿನ ನೆನಪಿಸಿಕೊಳ್ಳುತ್ತೇವೆ. ಅವರು ಬರೀ ವಿದ್ಯೆ ಮಾತ್ರ ಕಲಿಸದೆ ಬಹಳಷ್ಟು ಸಂದರ್ಭ ಬದುಕುವುದನ್ನು ಕಲಿಸಿಕೊಟ್ಟಿರುತ್ತಾರೆ.
ಹಿಂದಿನ ಕಾಲದಲ್ಲಿ ಈಗಿನಂತೆ ಶಾಲಾ ಕಾಲೇಜುಗಳಿರಲಿಲ್ಲ. ವಿದ್ಯೆಯನ್ನು ಶಿಷ್ಯರು ಗುರುಕುಲದಲ್ಲಿ ಕಲಿಯಬೇಕಾಗಿತ್ತು. ಶಿಷ್ಯರು ಗುರುಗಳ ಸೇವೆ ಮಾಡುತ್ತಾ ವಿದ್ಯೆಯನ್ನು ಕಲಿಯುತ್ತಿದ್ದರು. ಇವತ್ತು ಹಾಗಿಲ್ಲ. ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿದ್ಯೆ ಧಾರೆ ಎರೆಯುತ್ತಾರೆ. ನಾವು ಎಷ್ಟೇ ಓದಿರಲಿ, ಕಾಲೇಜುಗಳನ್ನು ಬದಲಿಸಿರಲಿ, ನಮಗೆ ತಕ್ಷಣ ನೆನಪಿಗೆ ಬರುವುದು ನಿನ್ನೆ ಮೊನ್ನೆ ಕಲಿತ ಕಾಲೇಜಿನ ಉಪನ್ಯಾಸಕರಲ್ಲ. ಬದಲಿಗೆ ಅ ಆ ಇ ಈ ಅಥವಾ ಎ ಬಿ ಸಿ ಡಿ ಕಲಿಸಿದ ಪ್ರಾಥಮಿಕ ಶಾಲಾ ಶಿಕ್ಷಕರು. ಚಿಕ್ಕಂದಿನಿಂದಲೇ ಅವರು ನಮಗೆ ಮಾದರಿಯಾಗಿರುತ್ತಾರೆ. ಅವರು ಹೇಳಿಕೊಟ್ಟ ನೀತಿಪಾಠಗಳು ನಮ್ಮ ಬದುಕಿನಲ್ಲಿ ಆಳವಾಗಿ ಬೇರೂರಿಬಿಟ್ಟಿರುತ್ತವೆ.
ಶಿಕ್ಷಕರ ದಿನ 2019: ದಿನಾಚರಣೆ ಹಿನ್ನೆಲೆ ಮತ್ತು ಮಹತ್ವ
ಬಹುಶಃ ಈ ಜಗತ್ತಿನಲ್ಲಿ ನಮ್ಮ ಅಭಿವೃದ್ಧಿ, ಏಳಿಗೆಯನ್ನು ಕಂಡು ಅಥವಾ ಕೇಳಿ ಸಂತೋಷ ಪಡುವ ಜೀವವಿದ್ದರೆ ಅದು ನಮ್ಮ ಶಿಕ್ಷಕರು ಎಂಬುದನ್ನು ಹೆಮ್ಮೆಯಿಂದ ನಾವು ಹೇಳಬಹುದು. ಲಕ್ಷಾಂತರ ಶಿಷ್ಯರಿಗೆ ವಿದ್ಯೆ ಧಾರೆ ಎರೆದ ಶಿಕ್ಷಕರಿಗೆ ವಿದ್ಯಾರ್ಥಿಗಳ ನೆನಪು ಮಸುಕಾಗಿ ಹೋಗಿರುತ್ತದೆ. ಆದರೆ ಯಾವತ್ತಾದರೂ ನೀವು ಅವರನ್ನು ಮಾತನಾಡಿಸಿ ನಿಮ್ಮ ವಿದ್ಯಾರ್ಥಿ ಅಂತ ಹೇಳಿ ನೋಡಿ ಎಷ್ಟೊಂದು ಖುಷಿ ಪಡುತ್ತಾರೆ...
ಯಾರಿಂದ ಜೀವನಕ್ಕೆ ಅದ್ಭುತ ಉತ್ತೇಜನ ದೊರೆಯುವುದೋ ಅವನೇ ಗುರು. ಯಾರಿಗೆ ಇದು ನೀಡಲ್ಪಡುವದೋ ಅವನೇ ಶಿಷ್ಯ ಎಂದು ಹೇಳಲಾಗಿದೆ. ಇಂತಹದೊಂದು ಸಂಬಂಧ ಎಲ್ಲಾ ಸಂಬಂಧಗಳಿಗೂ ಮಿಗಿಲಾದದ್ದು. ಶಿಷ್ಯನಿಗೆ ಅದ್ಭುತ ಉತ್ತೇಜನ ಶಕ್ತಿಯನ್ನು ಧಾರೆಯೆರೆಯುವ ಗುರುವಿಗೆ ಆ ಶಕ್ತಿಯಿರಬೇಕು. ಹಾಗೆಯೇ ಅದನ್ನು ಸ್ವೀಕರಿಸುವ ಶಿಷ್ಯ ಯೋಗ್ಯನಾಗಿರಬೇಕು.
'ಆಶ್ವರ್ಯೋ ವಕ್ತಾ ಕುಶಲೋ ಅಸ್ಯಲಬ್ದಾ' ಎನ್ನುವಂತೆ ಗುರುವು ಅದ್ಭುತ ವ್ಯಕ್ತಿಯಾಗಿರಬೇಕು. ಶಿಷ್ಯನು ಜಾಣನಾಗಿರಬೇಕು. ಇಬ್ಬರೂ ಅದ್ಭುತ ವ್ಯಕ್ತಿಗಳಾದಾಗ ಮಾತ್ರ ಅಸಾಧಾರಣ ಆಧ್ಯಾತ್ಮಿಕ ಜಾಗೃತಿ ಉಂಟಾಗುತ್ತದೆ. ಇಲ್ಲದಿದ್ದರೆ ಶಿಷ್ಯ ತನ್ನಲ್ಲಿ ಏಳುವ ತಾತ್ಕಾಲಿಕ ಉದ್ವೇಗವನ್ನು ನಿಜವಾದ ಆಧ್ಯಾತ್ಮಿಕ ಹಂಬಲ ಎಂದು ತಪ್ಪು ತಿಳಿಯಬಹುದು. ಅಷ್ಟೇ ಅಲ್ಲ ಅದನ್ನು ನಮ್ಮ ಜೀವನದಲ್ಲಿ ಪರೀಕ್ಷಿಸಿಕೊಳ್ಳಬಹುದು.
ಹೆಂಡತಿ ಆಸೆ ಈಡೇರಿಸಲು ನಿವೃತ್ತಿಯಾದ ದಿನ ಹೆಲಿಕಾಪ್ಟರ್ ಬುಕ್ ಮಾಡಿದ ಶಿಕ್ಷಕ
ಬಹಳಷ್ಟು ಸಲ ನಮ್ಮ ಜೀವನದಲ್ಲಿ ಹಲವು ರೀತಿಯಲ್ಲಿ ಆಘಾತ ಉಂಟಾಗಬಹುದು. ಪ್ರಪಂಚ ನಮ್ಮ ಕೈಗಳಿಂದ ನುಸುಳಿ ಹೋದಂತೆ ಭಾಸವಾಗಬಹುದು. ಇನ್ನೇನೋ ಕೆಲವು ರೀತಿಯ ಕ್ಷಣಿಕ ಉದ್ವೇಗ ಏಳಬಹುದು. ಈ ರೀತಿ ಆದಾಗ ನಿಷ್ಕಲ್ಮಷವಾದ ಆಧ್ಯಾತ್ಮಿಕ ದಾಹ ಪ್ರಾಪ್ತವಾಗುವುದಿಲ್ಲ. ಈ ಸಂದರ್ಭ ಗುರುವಿನ ಸಹಾಯ ಬೇಕಾಗುತ್ತದೆ. ಕೆಲವೊಮ್ಮೆ ಯೋಗ್ಯ ಗುರುವು ದೊರೆಯದೇ ಹೋದಾಗ ಹಲವು ರೀತಿಯ ಅಪಾಯಗಳು ಎದುರಾಗುತ್ತವೆ. ಅಜ್ಞಾನದಲ್ಲಿ ಮುಳುಗಿ ಹೋದ ಗುರುಗಳು ಅಹಂಕಾರದಿಂದ ಉನ್ನತರಾಗಿ ತಾವೇ ಸರ್ವಜ್ಞರೆಂಬಂತೆ ವರ್ತಿಸುತ್ತಾರೆ. ಆಗ ಕುರುಡ ಕುರುಡನಿಗೆ ಮಾರ್ಗದರ್ಶಕನಾಗಿ ಇಬ್ಬರೂ ಹಳ್ಳಕ್ಕೆ ಬಿದ್ದಂತಾಗುತ್ತದೆ.
ಪುರಾಣ ಕಾಲದಿಂದಲೂ ಗುರುವಿಗೆ ಪೂಜ್ಯ ಭಾವವಿದೆ. ಗುರು ತಾನು ಪಡೆದುದನ್ನು ತನ್ನ ಶಿಷ್ಯರಿಗೆ ಧಾರೆ ಎರೆದಾಗ ಮಾತ್ರ ಆತನ ಬದುಕು ಸಾರ್ಥಕವಾಗುತ್ತದೆ. ಇವತ್ತು ನಾವು ಏನಾಗಿದ್ದೇವೆಯೋ ಅದಕ್ಕೆ ನಮ್ಮ ಗುರುಗಳ ನಿಸ್ವಾರ್ಥ ಸೇವೆಯೂ ಕಾರಣವಾಗಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ಅಂಥ ಗುರುಗಳಿಗೊಂದು ನಮನವಿರಲಿ...