ಕುವೆಂಪು ಮಿಷನ್ ಕಟಿಂಗ್... ಬೇಂದ್ರೆ ಬ್ಲೀಚಿಂಗ್... ಇದೇನಿದು?
ಕುವೆಂಪು ಮಿಷನ್ ಕಟಿಂಗ್, ದ.ರಾ.ಬೇಂದ್ರೆ ಬ್ಲೀಚಿಂಗ್, ಮಾಸ್ತಿ ಸಿಜರ್ ಕಟಿಂಗ್, ಕಾರಂತ ಹೇರ್ ಸೆಟ್ಟಿಂಗ್, ಅನಂತಮೂರ್ತಿ ದಾಡಿ ಟ್ರಿಮ್ಮಿಂಗ್, ಗೋಕಾಕ್ ಫೇಸ್ ಮಸಾಜ್, ಮಾಸ್ಟರ್ ಹಿರಣ್ಣಯ್ಯ ಹೆಡ್ ಮಸಾಜ್... ಇದೇನಪ್ಪಾ ಎಂದು ಹುಬ್ಬೇರಿಸಬೇಡಿ.
ಇದು ಕನ್ನಡದ ಕವಿ, ಸಾಹಿತಿಗಳ ನೆನಪು ಮಾಡುವ ಮೂಲಕ ಕನ್ನಡ ಭಾಷೆಯನ್ನು ಸದಾ ಹಸಿರಾಗಿಸುವ ಒಂದು ಪ್ರಯತ್ನ. ಮೈಸೂರಿನ ಕನ್ನಡ ಅಭಿಮಾನಿ ಕೇಶಾಲಂಕಾರಿಯೊಬ್ಬರು ತಮ್ಮ ಸಲೂನ್ ನಲ್ಲಿ ಮಾಡುವ ವಿವಿಧ ನಮೂನೆಯ ಕೇಶಾಲಂಕಾರಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಇಟ್ಟಿದ್ದಾರೆ. ಈ ಮೂಲಕ ಕನ್ನಡ ಭಾಷೆಯನ್ನು ಉಳಿಸುವ ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮುಂದೆ ಓದಿ...
ಕರ್ನಾಟಕದಲ್ಲಿ 2021ರವರೆಗೂ ಕನ್ನಡ ಕಾಯಕ ವರ್ಷ ಆಚರಣೆ
ಕನ್ನಡ ಉಳಿದಿರುವುದು ಎಲ್ಲಿ ಗೊತ್ತಾ?
ಸಾಮಾನ್ಯವಾಗಿ ಕನ್ನಡದ ಸೇವೆ ನವೆಂಬರ್ ತಿಂಗಳಿಗಷ್ಟೆ ಸೀಮಿತವಾಗಿರುತ್ತದೆ. ಒಂದಷ್ಟು ಕಾರ್ಯಕ್ರಮಗಳನ್ನು ಮಾಡಿಬಿಟ್ಟರೆ ಕನ್ನಡ ಉದ್ಧಾರವಾಯಿತು ಎಂದುಕೊಳ್ಳುತ್ತೇವೆ. ಆದರೆ ಇವತ್ತಿಗೂ ಕನ್ನಡ ಉಳಿದಿರುವುದು ಎಲ್ಲಿ ಎಂದು ಹುಡುಕುತ್ತಾ ಹೋದರೆ ಆಟೋ, ಟ್ಯಾಕ್ಸಿ ನಿಲ್ದಾಣಗಳಲ್ಲಿ, ಸಣ್ಣಪುಟ್ಟ ಅಂಗಡಿಗಳಲ್ಲಿ, ಹಳ್ಳಿಗಳ ಚಾವಡಿಗಳಲ್ಲಿ ಎಂದರೆ ತಪ್ಪಾಗಲಾರದು. ಹಾಗೆಯೇ ಕನ್ನಡದ ಸೇವೆ ಮಾಡಬೇಕೆಂಬ ಆಸಕ್ತಿಯಿದ್ದರೆ ಹೀಗೂ ಸೇವೆ ಮಾಡಬಹುದು ಎಂಬುದನ್ನು ಸಾಂಸ್ಕೃತಿಕ ನಗರಿ ಮೈಸೂರಿನ ವಿದ್ಯಾರಣ್ಯಪುರಂನ ಸಲೂನ್ ಮಾಲೀಕ ಮಂಜುನಾಥ್ ಅವರನ್ನು ನೋಡಿ ಕಲಿಯಬೇಕಾಗಿದೆ. ಇವರದು ಸರ್ವ ಕಾಲಕ್ಕೂ ಸಲ್ಲುವ ಕನ್ನಡದ ಸೇವೆ.
ಜ್ಞಾನಪೀಠ ಪುರಸ್ಕೃತರ ಹೆಸರಿನಲ್ಲಿ ಕೇಶಾಲಂಕಾರ
ವಿದ್ಯಾರಣ್ಯಪುರಂನ ಸುಯೇಜ್ ಫಾರಂ ರಸ್ತೆಯಲ್ಲಿರುವ ತಮ್ಮ ಸೂಪರ್ ಸ್ಟೈಲ್ ಮೆನ್ಸ್ ಸಲೂನ್ ನಲ್ಲಿ ಕನ್ನಡದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಹಾಗೂ ಕನ್ನಡ ಸಾಹಿತ್ಯ ಲೋಕದ ದಿಗ್ಗಜರುಗಳ ಫೋಟೊಗಳನ್ನು ಹಾಕುವ ಮೂಲಕ ಕನ್ನಡದ ಮಹತ್ವವನ್ನು ಜನತೆಗೆ ಸಾರುತ್ತಿದ್ದಾರೆ. ತಮ್ಮ ತಂದೆಯ ಕಸುಬನ್ನು ಮುಂದುವರೆಸುತ್ತಾ ಬಂದಿರುವ ಮಂಜುನಾಥ್ 2011ರಲ್ಲಿ ನಗರ ಪಾಲಿಕೆಯ ಸದಸ್ಯರೂ ಆಗಿದ್ದರು. ಸವಿತ ಸುದ್ದಿ ಎಂಬ ಪತ್ರಿಕೆಯನ್ನು ಹೊರತಂದು ಹಲವು ಕಾರಣಗಳಿಂದ ಪತ್ರಿಕೆಯ ಪ್ರಕಟಣೆ ಸ್ಥಗಿತಗೊಳಿಸಿದ್ದಾರೆ. ಸತತ 25 ವರ್ಷಗಳಿಂದ ಸಲೂನ್ ನಡೆಸುತ್ತಿದ್ದು, ಇಲ್ಲಿ ಕುವೆಂಪು ಮಿಷನ್ ಕಟಿಂಗ್, ದ.ರಾ. ಬೇಂದ್ರೆ ಬ್ಲೀಚಿಂಗ್, ಮಾಸ್ತಿ ಸೀಜರ್ ಕಟಿಂಗ್, ಕಾರಂತ ಹೇರ್ ಸೆಟ್ಟಿಂಗ್, ಅನಂತಮೂರ್ತಿ ದಾಡಿ ಟ್ರಿಮ್ಮಿಂಗ್, ಗೋಕಾಕ್ ಫೇಸ್ ಮಸಾಜ್, ಮಾಸ್ಟರ್ ಹಿರಣ್ಣಯ್ಯ ಹೆಡ್ ಮಸಾಜ್ ಹೀಗೆ ವಿವಿಧ ಸಾಹಿತಿಗಳ ಶೈಲಿಯ ಕಟಿಂಗ್ ಮಾಡುತ್ತಿರುವುದು ವಿಶೇಷವಾಗಿದೆ.
ಕನ್ನಡ ಸೇವೆಗೆ ವಾಟಾಳ್ ನಾಗರಾಜ್ ಸ್ಫೂರ್ತಿ
ಸಾಮಾನ್ಯವಾಗಿ ಎಲ್ಲ ಸಲೂನ್ ಗಳಲ್ಲಿ ಸಿನಿಮಾ ನಟರ ಕೇಶಾಲಂಕಾರದ ಚಿತ್ರಗಳನ್ನು ಹಾಕಲಾಗಿರುತ್ತದೆ. ಇದು ಕೇವಲ ಜನರನ್ನು ಸೆಳೆಯಲು. ಆದರೆ ನಮ್ಮ ಕನ್ನಡದ ಶ್ರೀಮಂತಿಕೆಯನ್ನು ಇಂದಿನ ಯುವ ಜನತೆಗೆ ತಿಳಿಸಲು ಹಾಗೂ ಕನ್ನಡದ ಅಭಿಮಾನವನ್ನು ಮೆರೆಯಲು ವರ್ಷದ 365 ದಿನ ಕನ್ನಡ ರಾರಾಜಿಸುತ್ತಿರಲಿ ಎಂಬ ಬಯಕೆಯಂತೆ ಮತ್ತು ವಾಟಾಳ್ ನಾಗರಾಜ್ ಅವರ ಸ್ಫೂರ್ತಿಯಿಂದ ಕನ್ನಡದ ಸೇವೆಯನ್ನು ಮಾಡುತ್ತಾ ಕನ್ನಡ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿರುವುದು ಮಂಜುನಾಥ್ ಅವರ ಸಾಧನೆಯಾಗಿದೆ.
ಸಲೂನ್ ನಲ್ಲಿಯೇ ಕನ್ನಡ ರಾಜ್ಯೋತ್ಸವ ಆಚರಣೆ
ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ದಿನ ತಮ್ಮ ಅಂಗಡಿಯನ್ನು ಕನ್ನಡದ ಬಾವುಟಗಳಿಂದ ಸಿಂಗರಿಸುವುದಲ್ಲದೆ, ಅಂಗಡಿಗೆ ಬರುವ ಗ್ರಾಹಕರಿಗೆ ಸಿಹಿ ಹಂಚಿ ಕೆಲವು ಸಾಹಿತಿಗಳ ಪುಸ್ತಕಗಳನ್ನು ಓದಲು ನೀಡಿ ರಾಜ್ಯೋತ್ಸವವನ್ನು ಆಚರಿಸುವುದು ಇವರು ಪ್ರತಿವರ್ಷ ಮಾಡಿಕೊಂಡು ಬಂದ ಆಚರಣೆಯಾಗಿದೆ. ಅದು ಏನೇ ಇರಲಿ ಕನ್ನಡವನ್ನು ಕಾಪಾಡಬೇಕೆಂದರೆ ಹೀಗೂ ಮಾಡಬಹುದು ಎಂಬುದನ್ನು ಮಂಜುನಾಥ್ ತೋರಿಸಿಕೊಟ್ಟಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.