ಭೂಮಿ ಮೇಲೆ ಮತ್ತೊಂದು ಮಹಾಸಾಗರ ಪತ್ತೆ..! ವಿಜ್ಞಾನಿಗಳು ಕೊಟ್ಟ ಹೆಸರೇನು?
ಜಗತ್ತಿಗೆ ಹೇಗೆ 7 ಖಂಡಗಳೋ ಹಾಗೇ ಭೂಮಿ ಮೇಲೆ ಒಟ್ಟು 4 ಮಹಾಸಾಗರಗಳು ಎಂಬುದನ್ನು ಇಷ್ಟುದಿನ ಎಲ್ಲರೂ ಒಪ್ಪಿಕೊಂಡಿದ್ದರು. ಆದರೆ ಇದೀಗ ಕಾಲ ಬದಲಾಗಿದ್ದು, ವಿಜ್ಞಾನಿಗಳು ಮತ್ತೊಂದು ಮಹಾಸಾಗರ ಗುರುತಿಸಿ ಹೆಸರು ಕೂಡ ಇಟ್ಟಿದ್ದಾರೆ.
Recommended Video
ಅಂದಹಾಗೆ, ಇಲ್ಲಿಯವರೆಗೂ ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಮಹಾಸಾಗರ, ಹಿಂದೂ ಮಹಾಸಾಗರ, ಅರ್ಕ್ಟಿಕ್ ಮಹಾಸಾಗರಗಳು ಮಾತ್ರ ಪಟ್ಟಿಯಲ್ಲಿ ಇದ್ದವು. ಆದರೆ ಇನ್ನುಮುಂದೆ ಈ ಪಟ್ಟಿಗೆ ಹೊಸ ಹೆಸರು ಸೇರ್ಪಡೆಯಾಗಲಿದ್ದು, ವಿಶ್ವ ಸಾಗರ ದಿನದ ಹಿನ್ನೆಲೆಯಲ್ಲಿ ದಕ್ಷಿಣ ಮಹಾಸಾಗರವನ್ನು ಗುರುತಿಸಿ ಅಧಿಕೃತ ಮಾನ್ಯತೆ ನೀಡಿದೆ ನ್ಯಾಷನಲ್ ಜಿಯೋಗ್ರಾಫಿಕ್ ಸಂಸ್ಥೆ.
ಮತ್ತೊಂದು ಕೌತುಕದ ವಿಚಾರವೆಂದರೆ ಜಗತ್ತಿನ 5ನೇ ಮಹಾಸಾಗರ ಎಂದು ಗುರುತಿಸಿರುವ ದಕ್ಷಿಣ ಮಹಾಸಾಗರವನ್ನ ಬಹು ಹಿಂದೆಯೇ ಗುರುತಿಸಲಾಗಿತ್ತು ಎನ್ನಲಾಗಿದೆ. ಆದರೆ ಅಧಿಕೃತವಾಗಿ ಘೋಷಣೆ ಮಾಡಲು ಹಲವಾರು ಅಡೆತಡೆ ಇದ್ದವು. ಅಂತರರಾಷ್ಟ್ರೀಯ ಮಟ್ಟದಲ್ಲಿ ಒಪ್ಪಂದ ಏರ್ಪಡದ ಕಾರಣ ಜಾರಿಗೆ ಬಂದಿರಲಿಲ್ಲ. ಆದರೆ ಈಗ ದಕ್ಷಿಣದ ತುದಿಯಲ್ಲೊಂದು ಬಹುದೊಡ್ಡ ಮಹಾಸಾಗರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಂತಾಗಿದೆ.
ಅಬ್ಬಬ್ಬಾ ಶೇ. 30ರಷ್ಟು ದೊಡ್ಡದು..!
ಇದೀಗ ಅಧಿಕೃತವಾಗಿ ಮಾನ್ಯತೆ ಪಡೆದಿರುವ ದಕ್ಷಿಣ ಮಹಾಸಾಗರ ಭೂಮಿ ಮೇಲಿನ ಮಹಾಸಾಗರಗಳ ಪೈಕಿ ಶೇಕಡ 30ರಷ್ಟು ಪ್ರದೇಶವನ್ನ ಆವರಿಸಿದೆ. ಈ ಮೂಲಕ ಕೋಟ್ಯಂತರ ಜಲಚರಗಳಿಗೆ ಜಾಗ ನೀಡಿದಂತಾಗಿದೆ. ದಕ್ಷಿಣ ಮಹಾಸಾಗರ ಅಂಟಾರ್ಕ್ಟಿಕಾ ಪ್ರದೇಶ ಸುತ್ತುವರಿದಿದೆ. ದಕ್ಷಿಣ ಮಹಾಸಾಗರವನ್ನು ಗುರುತಿಸಿರುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ನಿರ್ಧಾರ ಎನ್ನುತ್ತಾರೆ ವಿಜ್ಞಾನಿಗಳು. ಭವಿಷ್ಯದಲ್ಲಿ ದಕ್ಷಿಣ ಧ್ರುವ ಪ್ರದೇಶವನ್ನ ಸಂರಕ್ಷಣೆ ಮಾಡಲು ವರ್ಗೀಕರಣ ಸಹಕಾರಿಯಾಗಿದೆ. ಏಕೆಂದರೆ ದಕ್ಷಿಣ ಧ್ರುವ ಪ್ರದೇಶ ಭಾರಿ ಪ್ರಮಾಣದ ಹಿಮ ಹೊಂದಿದ್ದು, ಸಾಕಷ್ಟು ಅಧ್ಯಯನಗಳಿಗೆ ಈ ನಿರ್ಧಾರ ಸಹಾಯ ಮಾಡಲಿದೆ.
ರಕ್ಷಿಸಬೇಕಾದ ಹೊಣೆ ಇದೆ
ತಾಪಮಾನ ಬದಲಾವಣೆ ಪರಿಣಾಮ ಒಂದಾ, ಎರಡಾ. ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅದನ್ನೆಲ್ಲಾ ಬರೆಯಲು ಸಮಯವೇ ಸಾಲುವುದಿಲ್ಲ. ಹೀಗೆ ಮನುಷ್ಯ ಸ್ವಾರ್ಥಕ್ಕಾಗಿ ಮಾಡಿದ ತಪ್ಪಿನಿಂದ ಭೂಮಿ ಇಂದು ನೂರಾರು ತೊಂದರೆ ಅನುಭವಿಸುತ್ತಿದೆ. ಇದೇ ರೀತಿ ದಕ್ಷಿಣ ಮಹಾಸಾಗರದ ಪರಿಸರ ಕೂಡ ತೊಂದರೆಯಲ್ಲಿ ಸಿಲುಕಿದೆ. ಒಂದು ಕಡೆ ದಕ್ಷಿಣ ಧ್ರುವ ಪ್ರದೇಶ ರಕ್ಷಿಸಬೇಕು, ಹಾಗೇ ದಕ್ಷಿಣ ಮಹಾಸಾಗರದಲ್ಲಿ ವಾಸವಿರುವ ಕೋಟ್ಯಂತರ ಜಲಚರಗಳನ್ನ ಉಳಿಸಬೇಕಿದೆ. ಅಳಿವಿನಂಚಿನಲ್ಲಿರುವ ಹಲವು ಜಲಚರಗಳು ಇಲ್ಲಿ ವಾಸಿಸುತ್ತಿವೆ.
ಮಾನವರ ಬದುಕು ಸರ್ವನಾಶ..?
ಅದು ಯಾವಾಗ ಮಾನವ ಆಧುನಿಕತೆ ಸೆಳೆತಕ್ಕೆ ಒಳಗಾದನೋ, ಅಂದಿನಿಂದಲೂ ಭೂಮಿ ಮೇಲಿನ ಇತರ ಜೀವಿಗಳಿಗೆ ನೆಮ್ಮದಿಯೇ ಇಲ್ಲ. ಈಗಾಗಲೇ ಮಾನವನ ದುರಾಸೆ ಪರಿಣಾಮ ನೂರಾರು ಬಗೆಯ ಪ್ರಾಣಿಗಳು, ಪಕ್ಷಿಗಳು ಹಾಗೂ ಸಸ್ಯ ಸಂತತಿ ನಾಶವಾಗಿ ಹೋಗಿದೆ. ಇದೀಗ ಆ ಸರದಿ ಪೆಂಗ್ವಿನ್ಸ್ ಪಾಲಿಗೆ ಬಂದು ನಿಂತಿದೆ. ದಕ್ಷಿಣ ಹಾಗೂ ಉತ್ತರ ಧ್ರುವದಲ್ಲಿ ತಾಪಮಾನ ಏರಿಕೆ ಪರಿಣಾಮ ಭಾರಿ ಪ್ರಮಾಣದಲ್ಲಿ ಹಿಮ ಕರಗುತ್ತಿದೆ. ಇದರಿಂದ ಇತರ ಜೀವಿಗಳ ಜೊತೆಗೆ ಮಾನವರ ಬದುಕು ಕೂಡ ಕಂಟಕಕ್ಕೆ ಸಿಲುಕಿದೆ.
ದ್ವೀಪರಾಷ್ಟ್ರಗಳ ಜನರ ಪರದಾಟ..!
ದ್ವೀಪ ರಾಷ್ಟ್ರಗಳು ರಜಾ ದಿನಗಳನ್ನು ಕಳೆಯಲು ಮಾತ್ರ ಸುಂದರ ತಾಣಗಳು. ಆದರೆ ಅಲ್ಲಿಯೇ ಜೀವಿಸಲು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಪ್ರಾಕೃತಿಕವಾಗಿ ಸೌಂದರ್ಯ ಹೊಂದಿದ್ದರೂ, ಪ್ರಾಕೃತಿಕ ವಿಕೋಪಗಳಿಗೂ ದ್ವೀಪ ರಾಷ್ಟ್ರಗಳು ತುತ್ತಾಗುತ್ತವೆ. ಉದಾಹರಣೆಗೆ ಪದೇ ಪದೇ ಜ್ವಾಲಾಮುಖಿಗಳ ಸ್ಫೋಟ. ಭೂಕಂಪನ ಸೇರಿದಂತೆ ಸುನಾಮಿಯ ಭಯ. ಹೀಗೆ ಸುತ್ತಲೂ ನೀರಿದ್ದು, ನಡುವೆ ರೊಟ್ಟಿಯ ತುಂಡಿನಷ್ಟು ಭೂಮಿ ಹೊಂದಿರುವ ದ್ವೀಪ ರಾಷ್ಟ್ರಗಳು ನಿತ್ಯ ಜೀವ ಭಯದಲ್ಲೇ ಬದುಕಬೇಕಾದ ಪರಿಸ್ಥಿತಿ ಇದೆ. ಆದರೆ ಅಲ್ಲಿನ ಜನರಿಗೆ ಇದು ಅನಿವಾರ್ಯ ಕೂಡ. ಬಾಯಲ್ಲಿ ಬಿದ್ದ ಬಿಸಿ ತುಪ್ಪದಂತೆ ಜೀವನ ಸವೆಸುತ್ತಾರೆ.