ನಿವೃತ್ತಿ ಮಾತಾಡಿದ ಸೋನಿಯಾಗೆ ಥ್ಯಾಂಕ್ಸ್: ಇವರೆಲ್ಲ ಏನು ಮಾಡಬೇಕು?
Recommended Video
'ರಾಜಕೀಯ ನಿವೃತ್ತಿ' ಎಂಬ ಪದವೇ ನಮಗೆ, ಅಂದರೆ ಭಾರತೀಯರಿಗೆ ತೀರಾ ಹೊಸದು. ನೆನಪಿನ ಶಕ್ತಿಯೇ ಕುಂದು ಹೋಗಿ, ಸ್ವಂತ ಬಲದಿಂದ ಸಹಿಯನ್ನೂ ಮಾಡಲಾಗದ ರಾಜಕಾರಣಿಗಳು 'ಮುತ್ಸದ್ಧಿ' ಎಂಬ ಕೋಟಾದಡಿ ಚಲಾವಣೆಯಲ್ಲಿರುತ್ತಾರೆ. ಆದರೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಿವೃತ್ತಿ ಎಂಬ ಪದವನ್ನಾದರೂ ಬಳಸಿದ್ದಾರೆ.
ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದರೆ ನಾನಿನ್ನು ನಿವೃತ್ತಿ ಆಗಬಹುದು ಎಂಬ ಮಾತನ್ನಾದರೂ ಆಡಿದ್ದಾರೆ. ಭಾರತದ ರಾಜಕೀಯ ಅವರ ಮೇಲೆ ಪ್ರಭಾವ ಬೀರಿಲ್ಲ ಎಂಬುದರ ಸೂಚನೆ ಕೂಡ ಇದಾಗಿರಬಹುದು. ಇಲ್ಲದಿದ್ದರೆ ರಾಜಕಾರಣ ಅಂದರೆ ಅಲ್ಲಿ ನಿವೃತ್ತಿ ಎಂಬುದಕ್ಕೆ ಮಾನ್ಯತೆಯೂ ಇಲ್ಲ, ಘನತೆಯೂ ಇಲ್ಲ ಎಂಬ ಸಂಗತಿಯನ್ನು ನಿರ್ಲಕ್ಷಿಸುತ್ತಿರಲಿಲ್ಲವೇನೋ.
ಎಲ್ಲಿ ಶುರು ಮಾಡಿದರೋ ಅಂಥದೇ ಸನ್ನಿವೇಶದಲ್ಲಿ ಸೋನಿಯಾ ಗಾಂಧಿ ನಿವೃತ್ತಿ
ಹೊಸ ತಲೆಮಾರಿನ ರಾಜಕಾರಣಿಗಳು ವಿದ್ಯಾಭ್ಯಾಸದ ಬಗ್ಗೆ ಮಾತನಾಡುತ್ತಿದ್ದಾರೆ, ನಿವೃತ್ತಿ ಇರಬೇಕು ಎಂಬ ಬಗ್ಗೆ ಧ್ವನಿ ಎತ್ತಿದ್ದಾರೆ. ಒಂದಿಷ್ಟು ಸಂಸ್ಕಾರ, ಸಭ್ಯ ಎನಿಸುವ ಭಾಷೆ, ಹೇಳಿದ ಮಾತಿಗೆ ಅಂಟಿಕೊಳ್ಳುವ ಘನತೆ ಬಗ್ಗೆ ಈಗಲೂ ಗಟ್ಟಿಯಾದ ಧ್ವನಿ ಎತ್ತಿಲ್ಲ ಅನ್ನೋ ಮಾತು ಬಿಡಿ. ಆದರೆ ಸೋನಿಯಾ ಗಾಂಧಿಯವರು ನಿವೃತ್ತಿ ಘೋಷಿಸುವ ಮೂಲಕ ಖಂಡಿತಾ 'ಮಾದರಿ' ಆಗಬೇಕು.
ಪ್ರಾದೇಶಿಕ ಪಕ್ಷಗಳ ವಿಚಾರವನ್ನು ಬಿಡಿ, ರಾಷ್ಟ್ರೀಯ ಪಕ್ಷಗಳಲ್ಲಿ ಈಚೆಗೆ 'ಹಿರಿಯರ'ನ್ನು ಪಕ್ಕಕ್ಕೆ ಸರಿಸುವ, 'ಗೌರವ' ಸ್ಥಾನದಲ್ಲಿ ಬಲವಂತವಾಗಿ ಕೂರಿಸುವ ಕೆಲಸ ಆಗುತ್ತಿದೆ. ಇಂಥ ಸನ್ನಿವೇಶದಲ್ಲಿ ನೆನಪಾಗುವ ಕೆಲವು ರಾಜಕೀಯ 'ಜಟ್ಟಿ'ಗಳನ್ನು ನೆನಪಿಸಿಕೊಳ್ಳೋಣ: ವಯಸ್ಸಿನ ಕಾರಣಕ್ಕೆ.
ಡಿಎಂಕೆ ಆಮ್ಲಜನಕ ಕರುಣಾನಿಧಿ
ತಮಿಳುನಾಡಿನ ಡಿಎಂಕೆ ಪರಮೋಚ್ಚ ನಾಯಕ ಎಂ.ಕರುಣಾನಿಧಿ ಅವರಿಗೆ 93 ವರ್ಷ ವಯಸ್ಸು. ವ್ಹೀಲ್ ಛೇರ್ ಮೇಲೆ ವಿರಾಜಮಾನರಾಗಿರುವ ಅವರೇ ಇಂದಿಗೂ ಆ ಪಕ್ಷದ ಶಕ್ತಿ ಕೇಂದ್ರ. ಅನಾರೋಗ್ಯ, ಅಧಿಕಾರ ಇಲ್ಲದ ವರ್ಷಗಳು, ಕುಟುಂಬದ ಸದಸ್ಯರ ಮೇಲಿನ ಆರೋಪಗಳು ಇವ್ಯಾವೂ ಕರುಣಾನಿಧಿಯವರ ಉತ್ಸಾಹ ಕಸಿದಿಲ್ಲ. ತಮ್ಮ ಮಗ ಎಂ.ಕೆ.ಸ್ಟಾಲಿನ್ ಗೆ ಪಕ್ಷದ ಜವಾಬ್ದಾರಿ ವಹಿಸಿದ್ದಾರೆ. ಆದರೂ ಇಂದಿಗೂ ಕರುಣಾನಿಧಿ ಅವರೇ ಪಕ್ಷದ ಪಾಲಿಗೆ ಆಮ್ಲಜನಕ.
ಒಂದು ವರ್ಷದ ನಂತರ ಶುಕ್ರವಾರ (ಡಿಸೆಂಬರ್ 15) ತಮಿಳುನಾಡಿನ ಚೆನ್ನೈನಲ್ಲಿರುವ ಪಕ್ಷದ ಕಚೇರಿಗೆ ಭೇಟಿ ನೀಡಿ, ಕಾರ್ಯಕರ್ತರ ಜತೆ ಮಾತುಕತೆ ಕೂಡ ಮಾಡಿದ್ದಾರೆ ಕರುಣಾನಿಧಿ. ರಾಜಕೀಯ ನಿವೃತ್ತಿ ಎಂಬ ಪದ ಕೇಳಿದರೆ ಸ್ವತಃ ಕವಿಯಾದ ಕರುಣಾನಿಧಿಯವರು ನಕ್ಕು ಸುಮ್ಮನಾಗುತ್ತಾರೆ ಅಷ್ಟೇ.
ಬಿಜೆಪಿಯ 'ಭೀಷ್ಮ'ನಿಗೆ ಗೌರವ ಸ್ಥಾನ
ಬಿಜೆಪಿಯ ಭೀಷ್ಮ ಎಲ್.ಕೆ.ಅಡ್ವಾಣಿ ಅವರಿಗೆ ತೊಂಬತ್ತರ ಹರೆಯ. ಈ ದೇಶದ ಉಪ ಪ್ರಧಾನಿ ಹುದ್ದೆವರೆಗೆ ತಲುಪಿದ ಗಟ್ಟಿ ಆಸಾಮಿ. ಅಡ್ವಾಣಿ ಹಾಗೂ ವಾಜಪೇಯಿ ದೇಶದ ರಾಜಕೀಯ ಕಂಡ ಅದ್ಭುತ ಕಾಂಬಿನೇಷನ್. ಇನ್ನೇನು ಪ್ರಧಾನಿ ಆದರೂ ಅನ್ನೋ ಸಮಯದಲ್ಲಿ ದುರದೃಷ್ಟ ಜತೆಯಾದ ಶಾಪಗ್ರಸ್ತರಂತೆ ಕಾಣುತ್ತಾರೆ ಅಡ್ವಾಣಿ.
ಈ ಬಾರಿ ರಾಷ್ಟ್ರಪತಿ ಆದರೂ ಅನ್ನೋ ಹೊತ್ತಿಗೂ ಎದ್ದು ನಿಂತಿದ್ದು ಬಾಬರಿ ಧ್ವಂಸ ಪ್ರಕರಣ. ಆದರೆ ಆರೋಗ್ಯದಲ್ಲೇನೂ ಏರುಪೇರಾದಂತೆ ಕಾಣುವುದಿಲ್ಲ. ಸ್ಫುಟವಾದ ನೆನಪು, ಇನ್ನೊಬ್ಬರ ಸಹಾಯವಿಲ್ಲದ ನಡೆದಾಡಬಹುದಾದ ದೈಹಿಕ ತಾಕತ್ತು ಉಳಿದುಕೊಂಡಿದ್ದರೂ ಪ್ರಸ್ತುತ ಬಿಜೆಪಿಯಲ್ಲಿ 'ಗೌರವ' ಸ್ಥಾನದಲ್ಲಿದ್ದುಕೊಂಡು ಗೌಣವಾಗಿದ್ದು ಬಿಟ್ಟಿದ್ದಾರೆ.
ರಾಜಕೀಯ ಇತಿಹಾಸದ ಪಠ್ಯಪುಸ್ತಕದಂತೆ ಕಾಣುವ ಎಸ್ಸೆಂ ಕೃಷ್ಣ
ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (ಎಸ್ಸೆಂ ಕೃಷ್ಣ)ರಿಗೆ ಈಗ ಎಂಬತ್ತೈದರ ಹರೆಯ. ಕರ್ನಾಟಕದ, ಅಷ್ಟೇ ಏಕೆ ಭಾರತೀಯ ರಾಜಕೀಯ ಇತಿಹಾಸದಲ್ಲೇ ಪಠ್ಯಪುಸ್ತಕದಂತೆ ಕಾಣುವ 'ಶಿಸ್ತುಗಾರ ಪುಟ್ಟಸ್ವಾಮಿ' ಇವರು. ದೇವೇಗೌಡರಿಗಿಂತ ಒಂದು ವರ್ಷಕ್ಕೆ ಹಿರಿಯರು. ಆದರೆ ಅಪರಿಮಿತ ಜೀವನೋತ್ಸಾಹ. ನಾಟಕ- ಸಂಗೀತ ಅಂದರೆ ಇಂದಿಗೂ ಆಸ್ವಾದಿಸುವ ಅಭಿರುಚಿ ಇರುವವರು.
ಪ್ರಾಯಶಃ ನೆನಪಿನ ಶಕ್ತಿ ಒಂದಿಷ್ಟು ಕೈ ಕೊಟ್ಟಿರುವಂತಿದೆ. ಜತೆಗೆ ಸ್ವಲ್ಪ ಮಟ್ಟಿಗೆ ಕೇಳಿಸಿಕೊಳ್ಳುವುದರಲ್ಲಿ ಸಮಸ್ಯೆ ಇದ್ದಂತಿದೆ. ಬಿಟ್ಟರೆ ದೈಹಿಕವಾಗಿ ತುಂಬ ಜರ್ಝರಿತರೇನಾಗಿಲ್ಲ. ಕಾಂಗ್ರೆಸ್ ಪಕ್ಷದಲ್ಲಿನ ಸುದೀರ್ಘ ಪಯಣ ಹಾಗೂ ವಿವಿಧ ಅಧಿಕಾರಗಳನ್ನು ಅನುಭವಿಸಿದ ನಂತರ ಈಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ದೇವೇಗೌಡರೆಂಬ ಆಲದ ಮರ
ರಾಜಕಾರಣದಲ್ಲಿ ಎಂಥವರಿಗೂ ಸ್ಫೂರ್ತಿಯಾಗಬಲ್ಲ, ಬಿಳಿ ಹಾಳೆಯಂತೆ ಯಾವ ಆರೋಪವೂ ಇಲ್ಲದ (ಮಕ್ಕಳ ಮೇಲಿನ ವ್ಯಾಮೋಹ ಎಂಬ ವಿರೋಧಿಗಳ ಆರೋಪ ಹೊರತುಪಡಿಸಿ) ಮುತ್ಸದ್ಧಿ ಎಚ್.ಡಿ.ದೇವೇಗೌಡರಿಗೆ ಈಗ ಎಂಬತ್ನಾಲ್ಕು ವರ್ಷ ವಯಸ್ಸು. ಜೆಡಿಎಸ್ ನ ಪರಮೋಚ್ಚ ನಾಯಕ. ದೇಶದ ಪ್ರಧಾನಿ ಹುದ್ದೆವರೆಗೆ ತಲುಪಿದ ಕರ್ನಾಟಕದ ಹೆಮ್ಮೆ.
ದೇವೇಗೌಡರು ಅಧಿಕಾರ ಅನುಭವಿಸಿದ ಒಟ್ಟಾರೆ ಅವಧಿಯೇ ಐದು ವರ್ಷ ದಾಟಲಾರದೇನೋ! ಸಚಿವರಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಯಾವ ಸ್ಥಾನದಲ್ಲೂ ಪೂರ್ಣಾವಧಿ ಪೂರೈಸಿದವರಲ್ಲ. ಅವೆಲ್ಲವನ್ನೂ ಒಟ್ಟು ಸೇರಿಸಿದರೂ ಐದು ವರ್ಷ ಆಗಲಾರದೇನೋ. ಆದರೆ ಇಂದಿಗೂ ಅವರ ಪ್ರಸ್ತುತತೆ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲೂ ಕಡಿಮೆಯಾಗಿಲ್ಲ. ದೈಹಿಕವಾಗಿ ಶಕ್ತಿ ಕುಂದಿರುವ ದೇವೇಗೌಡರು ಈಗಲೂ ಯೋಗ ಮಾಡ್ತಾರೆ. ನಿವೃ.... ಆ ಪದವನ್ನು ಕೂಡ ಅವರ ವಿಚಾರದಲ್ಲಿ ಪೂರ್ಣ ಮಾಡಲು ಸಾಧ್ಯವಿಲ್ಲ ಬಿಡಿ.
ದಾವಣಗೆರೆ ಧಣಿಗಳಾದ ಶಾಮನೂರು ಶಿವಶಂಕರಪ್ಪ
ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮತ್ತೊಂದು ಅಂದರೆ ನೆನಪಾಗುವುದು ಮಾಜಿ ಸಚಿವ- ಕಾಂಗ್ರೆಸ್ ಶಾಸಕ, ದಾವಣಗೆರೆಯ ಶಾಮನೂರು ಶಿವಶಂಕರಪ್ಪನವರು. ಎಂಬತ್ತಾರು ವರ್ಷ ವಯಸ್ಸಿನ ಶಾಮನೂರು ಅವರ ಪ್ರಭಾವಳಿಯನ್ನು ಕರ್ನಾಟಕದ ಅರ್ಧ ಭಾಗದಲ್ಲಿ ಕಾಣಬಹುದು.
ಅಗಾಧವಾದ ಸಾಮ್ರಾಜ್ಯ ಹೊಂದಿರುವ ಶಾಮನೂರು ಶಿವಶಂಕರಪ್ಪ ವಯೋ ಸಹಜ ಕಾರಣಕ್ಕೆ ಸಚಿವ ಸ್ಥಾನದಿಂದ ಹಿಂದೆ ಸರಿಯಬೇಕಾಯಿತು. ಅವರಿಗೆ ಆರೋಗ್ಯ ಸಮಸ್ಯೆಗಳಿದ್ದು, ಸಚಿವ ಸ್ಥಾನ ನಿಭಾಯಿಸುವುದು ಕಷ್ಟ ಎಂಬ ಕಾರಣ ನೀಡಿಯೇ ಅವರ ಮಗ ಎಸ್ ಎಸ್ ಮಲ್ಲಿಕಾರ್ಜುನ್ ರನ್ನು ಸಚಿವರನ್ನಾಗಿ ಮಾಡಲಾಗಿದೆ.