ಕಾಕಾಸುರ ಮಾದಪ್ಪರ ಪಾಕ ಮೈಸೂರ್ ಪಾಕ್ ಆಯ್ತು-ಮೈಸೂರ್ ಪಾಕ್ ಹಿಂದಿನ ಪುಟ್ಟ ಕಥೆ
ಮೈಸೂರ್ ಪಾಕ್ ಎಂದಾಕ್ಷಣ ಎಲ್ಲರಿಗೂ ಮೈಸೂರು ನೆನಪಾಗಿ ಬಿಡುತ್ತದೆ. ಮೈಸೂರ್ ಪಾಕ್ ಎಂಬ ಈ ಸಿಹಿ ತಿನಿಸು ಮೈಸೂರನ್ನು ದೇಶ ವಿದೇಶಗಳ ಮಟ್ಟಕ್ಕೆ ಕರೆದೊಯ್ದಿದೆ. ಇಷ್ಟಕ್ಕೂ ಈ ಮೈಸೂರ್ ಪಾಕ್ ನಲ್ಲಿ ಅಂಥದ್ದೇನಿದೆ? ಇದರ ಸೃಷ್ಟಿಯ ಕಥೆಯೇ ರೋಮಾಂಚನಕಾರಿ.
ಮೈಸೂರು ಅರಮನೆಯ ಪಾಕ ಶಾಲೆಯಲ್ಲಿ ನೂರಾರು ವರ್ಷಗಳ ಹಿಂದೆ ಜನ್ಮ ತಾಳಿದ ಮೈಸೂರ್ ಪಾಕ್ ಜನಪ್ರಿಯ ಖಾದ್ಯ. ಇದನ್ನು ತಯಾರು ಮಾಡಿದವರು ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಪನವರು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯಲ್ಲಿ ರಾಜ ಕುಟುಂಬಕ್ಕೆ ಬೇಕಾದ ಸಿಹಿ ಮತ್ತು ಖಾರದ ತಿನಿಸನ್ನು ಇವರೇ ತಯಾರಿಸುತ್ತಿದ್ದರು.
ಮೈಸೂರ್ ಪಾಕ್ ತನ್ನದೆಂದ ತಮಿಳುನಾಡು! ಏನಿದು ವಿವಾದ?
ಒಮ್ಮೆ ಮಹಾರಾಜರು ತಿಂಡಿ ತಯಾರಿಸುವುದರಲ್ಲಿ ಜಾಣ್ಮೆ ಹೊಂದಿದ್ದ ಕಾಕಾಸುರ ಮಾದಪ್ಪನವರಿಗೆ ಹೊಸದಾದ ಯಾವುದಾದರೊಂದು ತಿಂಡಿ ತಯಾರಿಸುವಂತೆ ಆಜ್ಞೆ ಮಾಡಿದರು. ಹೀಗಾಗಿ ಏನು ಹೊಸ ತಿಂಡಿ ತಯಾರಿಸುವುದು ಎಂದು ಅವರು ಆಲೋಚಿಸತೊಡಗಿದರು. ಕೊನೆಗೆ ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜ ನಾಲ್ವಡಿ ಕೃಷ್ಣರಾಜಒಡೆಯರಿಗೆ ಕೊಟ್ಟರು. ಇದರ ರುಚಿ ನೋಡಿದ ಮಹಾರಾಜರಿಗೆ ತುಂಬಾ ಖುಷಿಯಾಗಿ ಕಾಕಾಸುರ ಮಾದಪ್ಪನವರನ್ನು ಬೆನ್ನು ತಟ್ಟಿ ಪ್ರಶಂಶಿಸಿದರು.
ಆದರೆ ಈ ಹೊಸ ತಿಂಡಿಗೆ ಏನಾದರೊಂದು ಹೆಸರಿಡಬೇಕಲ್ಲವೆ? ಏನು ಹೆಸರು ಇಡುವುದೆಂದು ಮಹಾರಾಜರು ಆಲೋಚಿಸಿದರು. ಆಗ ಅವರಿಗೊಂದು ಯೋಚನೆ ಬಂದಿತು. ರುಚಿ ಶುಚಿಯಾದ ಅಡುಗೆಗೆ ನಳಪಾಕ ಎಂದು ಕರೆಯುತ್ತೇವೆ. ಇದು ಮೈಸೂರು ಅರಮನೆಯಲ್ಲಿ ತಯಾರಾಗಿದ್ದರಿಂದ "ಮೈಸೂರು ಪಾಕ" ಎಂದು ಹೆಸರಿಡೋಣ ಎಂದು ನಿರ್ಧರಿಸಿದರು. ಅವತ್ತಿನಿಂದಲೇ ಆ ತಿಂಡಿಯನ್ನು ಮೈಸೂರು ಪಾಕ ಎಂದು ಕರೆಯಲಾಯಿತು. ಮುಂದೆ ಅದು ಮೈಸೂರ್ ಪಾಕ್ ಆಗಿ ಮೈಸೂರಿನ ಖ್ಯಾತಿಯನ್ನು ವಿಶ್ವಕ್ಕೆ ಸಾರಿತು.