ಸಿಂಧಗಿ ಉಪ ಚುನಾವಣೆ: ತಾತ-ಮೊಮ್ಮಗನ ಜೋಡಿ ಮಾಡುವುದೇ ಮೋಡಿ?
ಹಾನಗಲ್ ಮತ್ತು ಸಿಂಧಗಿ ಅಸೆಂಬ್ಲಿ ಉಪ ಚುನಾವಣೆಗೆ ವೇದಿಕೆ ಸಿದ್ದವಾಗುತ್ತಿದೆ. ಅಕ್ಟೋಬರ್ ಹದಿಮೂರಕ್ಕೆ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ. ಮೂರೂ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದ್ದು, ನವೆಂಬರ್ ಎರಡರಂದು ಫಲಿತಾಂಶ ಪ್ರಕಟವಾಗಲಿದೆ.
ಒಂದು ಕಡೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತುಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ 'ಕೋಳಿ ಜಗಳ' ಮುಂದುವರಿದಿದೆ. ಕಾಲು ಕರೆದು ಜಗಳಕ್ಕೆ ಬರುತ್ತಿದ್ದಾರೆ ಎಂದು ಒಬ್ಬರು ಇನ್ನೊಬ್ಬರ ವಿರುದ್ದ ದೂರುತ್ತಿದ್ದಾರೆ.
ಉಪ ಚುನಾವಣೆ: ಬಿಜೆಪಿ-ಕಾಂಗ್ರೆಸ್ ನಾಯಕರನ್ನು ಕಂಗಾಲು ಮಾಡಿದ ದೇವೇಗೌಡರ ರಣತಂತ್ರ!
ಇನ್ನೊಂದು ಕಡೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೈಲೆಂಟ್ ಆಗಿ ಪ್ರಮುಖವಾಗಿ ಸಿಂಧಗಿಯಲ್ಲಿ ಜಯಗಳಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಜೆಡಿಎಸ್ಸಿನ ಇಬ್ಬರು ಯುವ ನಾಯಕರಾದ ಪ್ರಜ್ವಲ್ ರೇವಣ್ಣಗೆ ಸಿಂಧಗಿ ಮತ್ತು ನಿಖಿಲ್ ಕುಮಾರಸ್ವಾಮಿಗೆ ಹಾನಗಲ್ ಕ್ಷೇತ್ರದ ಉಸ್ತುವಾರಿಯನ್ನು ನೀಡಲಾಗಿದೆ.
ತಾತ ದೇವೇಗೌಡ್ರಿಗೆ ಮೊಮ್ಮಗ ಪ್ರಜ್ವಲ್ ಸಾಥ್ ನೀಡುತ್ತಿದ್ದಾರೆ. ಪಕ್ಷದಲ್ಲಿ ತಮ್ಮ ವರ್ಚಸ್ಸನ್ನು ಒರೆಗಚ್ಚಲು ಪ್ರಜ್ವಲಿಗೆ ಇದೊಂದು ಉತ್ತಮ ಅವಕಾಶ ಆಗಿರುವುದರಿಂದ, ಈಗಾಗಲೇ ಸ್ಥಳೀಯ ಮುಖಂಡರ ಜೊತೆಗೆ ಚರ್ಚೆಯಲ್ಲಿ ತೊಡಗಿದ್ದಾರೆ. ಪಕ್ಷ ಬಿಟ್ಟು ಹೋಗಿರುವ ನಾಯಕರ ವಿಶ್ವಾಸವನ್ನು ಮೊದಲು ತೆಗೆದುಕೊಳ್ಳಲು ಗೌಡ್ರು-ಪ್ರಜ್ವಲ್ ಮುಂದಾಗಿದ್ದಾರೆ.
ಉಪ ಚುನಾವಣೆ: ಜೆಡಿಎಸ್ ಸೋಲುವ ಅಭ್ಯರ್ಥಿಗೆ ಯಾರಾದರೂ ಮತ ಹಾಕುತ್ತಾರೇನ್ರೀ?
2018ರ ಚುನಾವಣೆಯಲ್ಲಿ ಜೆಡಿಎಸ್ಸಿನ ಎಂ.ಸಿ.ಮನಗೂಳಿ ವಿಜೇತರಾಗಿದ್ದರು
2018ರ ಚುನಾವಣೆಯಲ್ಲಿ ಜೆಡಿಎಸ್ಸಿನ ಎಂ.ಸಿ.ಮನಗೂಳಿ ವಿಜೇತರಾಗಿದ್ದರು. ಬಿಜೆಪಿ ಅಭ್ಯರ್ಥಿ ರಮೇಶ್ ಬೂಸನೂರು ಅವರನ್ನು ಮನಗೂಳಿ 9,305 ಮತಗಳಿಂದ ಸೋಲಿಸಿದ್ದರು. ಕಾಂಗ್ರೆಸ್ ಮೂರನೇ ಸ್ಥಾನವನ್ನು ಪಡೆದಿತ್ತು. ಹಾಗಾಗಿ, ಇಲ್ಲಿ ಜೆಡಿಎಸ್ ಮತಬ್ಯಾಂಕ್ ಇರುವುದು ಖಾತ್ರಿ ಎಂದರಿತಿರುವ ದೇವೇಗೌಡ್ರು, ಕ್ಷೇತ್ರವನ್ನು ಉಳಿಸಿಕೊಳ್ಳಲು ಈಗಾಗಲೇ ಆಖಾಡಕ್ಕೆ ಇಳಿದಿದ್ದಾರೆ. ಅಕ್ಟೋಬರ್ ಹದಿನೈದರ ನಂತರ ಪ್ರಜ್ವಲ್ ರೇವಣ್ಣ ಚುನಾವಣೆ ಮುಗಿಯುವವರೆಗೂ ಇಲ್ಲೇ ಬಿಡಾರ ಹೂಡಲು ನಿರ್ಧರಿಸಿದ್ದಾರೆ.
ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಿದ ಕೀರ್ತಿ ದೇವೇಗೌಡ್ರದ್ದು
ಕ್ಷೇತ್ರದಲ್ಲಿ ದೇವೇಗೌಡ್ರಿಗೆ ಉತ್ತಮ ಹೆಸರು ಇದೆ. ಕಾರಣ, ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಿ ಸಿಂಧಗಿ ಸೇರಿದಂತೆ ಲಕ್ಷಾಂತರ ಹೆಕ್ಟೇರ್ ಜಮೀನಿಗೆ ನೀರು ಒದಗಿಸಿದ ಕೀರ್ತಿ ದೇವೇಗೌಡ್ರದ್ದು. ಇದೇ, ಕಾರಣಕ್ಕಾಗಿ ದಿವಂಗತ ಮನಗೂಳಿಯವರು ಗೌಡ್ರ ಪ್ರತಿಮೆಯನ್ನು ನಿರ್ಮಿಸಿ, ಕೃತಜ್ಞತೆ ಸಲ್ಲಿಸಿದ್ದರು. ಈ ಒಂದು ಅಂಶ ಪಕ್ಷಕ್ಕೆ ಲಾಭ ತಂದು ಕೊಡುವ ಸಾಧ್ಯತೆಯಿದೆ. ಮನಗೂಳಿಯವರ ಪುತ್ರ ಅಶೋಕ್ ಮನಗೂಳಿಯವರು ಕಾಂಗ್ರೆಸ್ಸಿನಿಂದ ಸ್ಪರ್ಧಿಸುತ್ತಿರುವುದರಿಂದ ಜೆಡಿಎಸ್ಸಿಗೆ ಅನುಕಂಪದ ಮತ ಸಿಗುವುದು ಕಷ್ಟ.
ಮನಗೂಳಿ ಬಗ್ಗೆ ಸುಳ್ಳು ಸುದ್ದಿಯನ್ನು ಕಾಂಗ್ರೆಸ್ ಹಬ್ಬಿಸುತ್ತಿದೆ ಎಂದು ಜೆಡಿಎಸ್ ಪ್ರಚಾರ
"ಎಂ.ಸಿ. ಮನಗೂಳಿ ನಿಧನದ ಅನುಕಂಪದಲ್ಲಿ ತೇಲುವ ವ್ಯರ್ಥ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಇದ್ದ ಅವರ ಪುತ್ರನನ್ನು ಹೈಜಾಕ್ ಮಾಡಿ, ಜನರಿಗೆ ತಮ್ಮ ʼಸಿದ್ದಕಲೆʼ ದರ್ಶನ ಆಗುತ್ತಿದ್ದಂತೆಯೇ ಈಗ ಅನುಕಂಪ ಗಿಟ್ಟಿಸುವ ನಾಟಕ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು, ಮನಗೂಳಿಯವರು ನಿಧನರಾಗುವುದಕ್ಕೆ ಹದಿನೈದು ದಿನ ಮುನ್ನ ನನ್ನ ಬಳಿ ಬಂದು ಕಾಂಗ್ರೆಸ್ ಮಡಿಲಿಗೆ ಹಾಕುತ್ತಿದ್ದೇನೆಂದು ಸುಳ್ಳು ಹೇಳಿದ್ದಾರೆ" ಎಂದು ಕುಮಾರಸ್ವಾಮಿ ಹೇಳಿದ್ದರು. ಮನಗೂಳಿ ಬಗ್ಗೆ ಸುಳ್ಳು ಸುದ್ದಿಯನ್ನು ಕಾಂಗ್ರೆಸ್ ಹಬ್ಬಿಸುತ್ತಿದೆ ಎಂದು ಜೆಡಿಎಸ್ ಪ್ರಚಾರಕ್ಕೆ ಬಳಸಿಕೊಳ್ಳುವ ಸಾಧ್ಯತೆಯಿಲ್ಲದಿಲ್ಲ.
ಸಿಂಧಗಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಜಿಯಾ ಶಕೀಲ್ ಅಂಗಡಿ ಕಣದಲ್ಲಿ
ಸಿಂಧಗಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಜಿಯಾ ಶಕೀಲ್ ಅಂಗಡಿ ಕಣದಲ್ಲಿದ್ದಾರೆ. ಪಕ್ಷದ ಪಂಚರತ್ನ ಪರಿಕಲ್ಪನೆಯಂತೆ ಎರಡೂ ಕ್ಷೇತ್ರದ ಉಪ ಚುನಾವಣೆಗೆ ವಿದ್ಯಾವಂತರನ್ನು ಆಯ್ಕೆ ಮಾಡಲಾಗಿದೆ. ನಾಜಿಯಾ ಅವರು ಎಂಎ, ಬಿಎಡ್ ಪದವೀಧರರಾಗಿದ್ದು, ಪಕ್ಷದ ಸಕ್ರಿಯ ಕಾರ್ಯಕರ್ತರೂ ಆಗಿದ್ದಾರೆ. ವಿದ್ಯಾವಂತರು ಮತ್ತು ಯುವ ಸಮುದಾಯದ ಒಲವು ಗಿಟ್ಟಿಸಿಕೊಳ್ಳಲು ದೇವೇಗೌಡ್ರು ಮತ್ತು ಪ್ರಜ್ವಲ್ ರೇವಣ್ಣ ಮುಂದಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ತಾತ-ಮೊಮ್ಮಗನ ಜೋಡಿ ಸಿಂಧಗಿಯಲ್ಲಿ ಮೋಡಿ ಮಾಡುವುದೇ ಎನ್ನುವುದನ್ನು ಅರಿಯಲು ನವೆಂಬರ್ ಎರಡರ ವರೆಗೆ ಕಾಯಬೇಕಿದೆ.