ವೈಕುಂಠ ಏಕಾದಶಿ, ಮುಕ್ಕೋಟಿ ದ್ವಾದಶಿ ಆಚರಣೆ ಹೇಗೆ, ವಿಶೇಷ ಏನು?
Recommended Video
ಆಸ್ತಿಕ ಬಂಧುಗಳೇ ಇದೇ ತಿಂಗಳ ಇಪ್ಪತ್ತೊಂಬತ್ತನೇ ತಾರೀಕು ವೈಕುಂಠ ಏಕಾದಶಿ ಹಾಗೂ ಮೂವತ್ತರಂದು ಮುಕ್ಕೋಟಿ ದ್ವಾದಶಿ ಇದೆ. ಈ ಎರಡು ದಿನದ ಮಹತ್ವವನ್ನು ನಿಮಗೆ ತಿಳಿಸುವ ಸಲುವಾಗಿಯೇ ಈ ಲೇಖನ. ಸಾಮಾನ್ಯವಾಗಿ ಉದ್ಭವಿಸುವ ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಲಾಗಿದೆ. ಅದರಂತೆ ನಡೆದುಕೊಳ್ಳುವ ಮೂಲಕ ಜಗನ್ನಿಯಾಮಕನಾದ ಆ ವಿಷ್ಣುವಿನ ಕೃಪೆಗೆ ಪಾತ್ರರಾಗಿ.
ವಿಶೇಷ: ವೈಕುಂಠ ಏಕಾದಶಿ ಆಚರಣೆ, ಉಪವಾಸದ ಮಹತ್ವ!
ಏನಿದು ವೈಕುಂಠ ಏಕಾದಶಿ?
ಆ ದಿನದಂದು ವೈಕುಂಠದ ಉತ್ತರ ದ್ವಾರ ತೆರೆಯುತ್ತದೆ. ದೇವತೆಗಳೆಲ್ಲ ಮಹಾವಿಷ್ಣುವಿನ ದರ್ಶನ ಪಡೆಯುವ ಸಲುವಾಗಿ ಆ ದ್ವಾರದ ಮೂಲಕ ತೆರಳುತ್ತಾರೆ. ಆದ್ದರಿಂದ ದೇವಾಲಯಗಳ ಉತ್ತರ ದಿಕ್ಕಿನ ದ್ವಾರಗಳನ್ನು ತೆರೆಯಲಾಗುತ್ತದೆ. ಆ ಮೂಲಕ ದರ್ಶನ ಪಡೆಯಲಾಗುತ್ತದೆ.
ಮುಕ್ಕೋಟಿ ದ್ವಾದಶಿ ಅಂದರೇನು?
ಏಕಾದಶಿಯ ಮರು ದಿನ ದ್ವಾದಶಿ. ಮೂವತ್ತ್ಮೂರು ಕೋಟಿ ದೇವತೆಗಳು ಅಂದು ತಿರುಮಲದ ದೇವಾಲಯ ಪಕ್ಕದಲ್ಲಿರುವ ಸ್ವಾಮಿ ಪುಷ್ಕರಣಿಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಆದ್ದರಿಂದ ಮುಕ್ಕೋಟಿ ದ್ವಾದಶಿ ಎಂಬ ಹೆಸರಿದೆ.
ಯಾವ ಕ್ಷೇತ್ರದಲ್ಲಿ ವಿಷ್ಣುವಿನ ದರ್ಶನ ಮಾಡಿದರೆ ಶ್ರೇಷ್ಠ?
ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಮಹಾವಿಷ್ಣುವಿನ ದರ್ಶನ ಮಾಡಬೇಕು. ಶ್ರೀರಂಗಂ, ತಿರುಮಲ, ಶ್ರೀಮೂಷ್ಣಂ, ತೋತಾದ್ರಿ, ನೈಮಿಷಾರಣ್ಯ, ಬದರೀಕಾಶ್ರಮ, ಸಾಲಿಗ್ರಾಮ (ನೇಪಾಳದ ಗಂಡಕೀ ನದಿ ಬಳಿಯಿದೆ), ಪುಷ್ಕರ (ರಾಜಸ್ತಾನ) ಇವು ಸ್ವಯಂ ವ್ಯಕ್ತ ಕ್ಷೇತ್ರಗಳು. ಇಲ್ಲಿ ವಿಷ್ಣು ದರ್ಶನ ಮಾಡಿದರೆ ಶ್ರೇಷ್ಠ.
ವೈಕುಂಠ ಏಕಾದಶಿ ಆಚರಣೆ ಹೇಗೆ ಮಾಡಬೇಕು?
ಅಂದು ದೈಹಿಕವಾಗಿ ಸದೃಢವಾಗಿರುವವರು ನಿಟ್ಟುಪವಾಸ ಮಾಡಬೇಕು. ಅಶಕ್ತರು ಉಪ್ಪು, ಹುಳಿ, ಖಾರ ಇರುವ ತಿಂಡಿ ಸೇವಿಸದೆ ಬಾಳೆಹಣ್ಣು, ಹಾಲು, ಸಜ್ಜಿಗೆ ಸ್ವೀಕರಿಸಬಹುದು. ಇನ್ನುಳಿದ ತಿಂಡಿಗಳ ಬಗ್ಗೆ ಶಾಸ್ತ್ರ ಸಮ್ಮತವಾದ ಅಭಿಪ್ರಾಯಗಳಿಲ್ಲ.
ಮುಕ್ಕೋಟಿ ದ್ವಾದಶಿ ಆಚರಣೆ ಹೇಗೆ?
ಏಕಾದಶಿಯ ಮರುದಿಅದಂದು ಸೂರ್ಯೋದಕ್ಕೆ ಪಾರಣೆ (ಊಟ) ಮುಗಿಸಿರಬೇಕು. ಅಂದರೆ ಬೆಳಗ್ಗೆ ಎಂಟು ಗಂಟೆಯೊಳಗೆ ಊಟ ಮಾಡಿ ಮುಗಿಸಿರಬೇಕು. ಆಗ ಪುಣ್ಯ ಪ್ರಾಪ್ತಿ ಆಗುತ್ತದೆ.
ವೈಕುಂಠ ಏಕಾದಶಿ- ಮುಕ್ಕೋಟಿ ದ್ವಾದಶಿ ಆಚರಣೆಯಿಂದ ಫಲವೇನು?
ಈ ರೀತಿ ಆಚರಣೆಯಿಂದ ಮೋಕ್ಷ ಸಿಗುತ್ತದೆ. ಜತೆಗೆ ಅಂದು ದೇವರ ಸ್ಮರಣೆ ಎಷ್ಟು ಹೆಚ್ಚು ಮಾಡಿದರೆ ಅಷ್ಟು ಶುಭ ಫಲ.
ಮುಕ್ಕೋಟಿ ದ್ವಾದಶಿಯಂದು ಬೇರೆ ಯಾವ ಲೌಕಿಕ ಇಷ್ಟಾರ್ಥವನ್ನು ಬೇಡಿಕೊಳ್ಳಬಹುದು?
ಇದರಿಂದ ಮನೆಯಲ್ಲಿನ ಅಶಾಂತಿ ನಿವಾರಣೆ ಆಗುತ್ತದೆ. ಸಂಪತ್ತು ಹಾಗೂ ಸಂತಾನ ಅಪೇಕ್ಷಿತರು ತಮ್ಮ ಮನಸಿನ ಬಯಕೆಯನ್ನು ಬೇಡಿಕೊಂಡರೆ, ಆ ಭಗವಂತ ನೆರವೇರಿಸುತ್ತಾನೆ.
ಮುಕ್ಕೋಟಿ ದ್ವಾದಶಿಯಂದು ಬೇರೆ ಯಾವ ದಾನ- ಧರ್ಮ ಮಾಡಬಹುದು?
ಅಂದು ಒಬ್ಬ ಬ್ರಾಹ್ಮಣ ದಂಪತಿಗೆ ಊಟ ಹಾಕಿದರೂ ಒಂದು ಲಕ್ಷ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಮಾಡಿದ ಫಲ ದೊರಕುತ್ತದೆ. ಧನುರ್ಮಾಸದಲ್ಲಿ ಹುಗ್ಗಿಯನ್ನು ದೇವರಿಗೆ ನೈವೇದ್ಯ ಮಾಡುವುದು ಬಹಳ ಶ್ರೇಷ್ಠ. ಅದೇ ರೀತಿ ಗೋದಾನ ಮಾಡಬೇಕು ಅಂದುಕೊಂಡವರಿಗೆ ಇದು ಒಳ್ಳೆ ಕಾಲ.