ಕಾಂಗ್ರೆಸ್ ಬಣ ರಾಜಕೀಯ ಒಪ್ಪಿಕೊಂಡು, ಸಿದ್ದರಾಮೋತ್ಸವದಲ್ಲಿ ಇತಿಶ್ರೀ ಹಾಡಿದ ರಾಹುಲ್ ಗಾಂಧಿ
ರಾಜ್ಯ ರಾಜಕೀಯದಲ್ಲಿ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸದ್ದು ಮಾಡುತ್ತಿದ್ದ ವಿಚಾರವೆಂದರೆ ಅದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಆಯೋಜಿಸಲಾದ ಅಮೃತ ಮಹೋತ್ಸವ ಕಾರ್ಯಕ್ರಮ.
ಮಾಧ್ಯಮ ಲೋಕದಲ್ಲಿ ಇದು ಸಿದ್ದರಾಮೋತ್ಸವ ಎಂದೇ ಬಿಂಬಿತವಾಗಿದ್ದದ್ದು ಗೊತ್ತಿರುವ ವಿಚಾರ. ಪ್ರಸಕ್ತ ರಾಜಕೀಯದಲ್ಲಿ ಈ ಕಾರ್ಯಕ್ರಮ ಹತ್ತು ಹಲವು ವಿಚಾರದಲ್ಲಿ ಮಹತ್ವವನ್ನು ಪಡೆದುಕೊಂಡಿದೆ.
ಬಿಜೆಪಿ ಆಡಳಿತದಿಂದ ಬೇಸತ್ತ ಜನತೆ, 2023ಕ್ಕೆ ಕಾಂಗ್ರೆಸ್ಗೆ ಮತ್ತೆ ಅಧಿಕಾರ: ರಾಹುಲ್ ಗಾಂಧಿ ವಿಶ್ವಾಸ
ಕೆಪಿಸಿಸಿಯಲ್ಲಿ ಎರಡು ಬಣಗಳಿವೆ ಎನ್ನುವ ಮಾತು ಒಂದು ಕಡೆಯಾದರೆ, ಈ ಅಮೃತ ಮಹೋತ್ಸವ ಆಚರಿಸುವ ವಿಚಾರದಲ್ಲಿ ಪರವಿರೋಧ ಇದ್ದದ್ದು ಗೊತ್ತಿರುವ ವಿಚಾರ. ವ್ಯಕ್ತಿ ಪೂಜೆ ಬೇಡ ಪಕ್ಷ ಪೂಜೆ ಇರಲಿ ಎನ್ನುವುದು ಡಿ.ಕೆ.ಶಿವಕುಮಾರ್ ಅವರ ವಾದವಾಗಿದ್ದರೆ, ನನ್ನ ಗೆಳೆಯರು, ಹಿತೈಶಿಗಳು ಹುಟ್ಟುಹಬ್ಬ ಆಚರಿಸಿಕೊಂಡರೆ ತಪ್ಪೇನು ಎನ್ನುವುದು ಖುದ್ದು ಸಿದ್ದರಾಮಯ್ಯ ಹೇಳಿದಂತಹ ಮಾತಾಗಿತ್ತು.
ಅದೇನೆ ಇರಲಿ, ಸಿದ್ದರಾಮೋತ್ಸವ ನಿರೀಕ್ಷೆಗೂ ಮೀರಿ ಯಶಸ್ಸನ್ನು ಪಡೆದುಕೊಂಡಿದ್ದಂತೂ ಹೌದು. ಅಮೃತ ಮಹೋತ್ಸವ ಸಮಿತಿ ಸುಮಾರು ಐದಾರು ಲಕ್ಷ ಜನ ಸೇರಬಹುದು ಎಂದು ನಿರೀಕ್ಷಿಸಿದ್ದರೆ, ಅದಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣವನ್ನು ಹಲವು ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ರಾಹುಲ್ ಗಾಂಧಿ ಭಾಷಣದಲ್ಲಿ ವಿಶೇಷವಾಗಿ ಇಬ್ಬರು ನಾಯಕರ ಉಲ್ಲೇಖ
ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿ ಮಾತನಾಡಿದಂತಹ ಹಲವು ವಿಚಾರಗಳ ಪೈಕಿ, ರಾಜಕೀಯವಾಗಿ ಅವಲೋಕಿಸಬೇಕಾದಂತಹ ವಿಚಾರ ಏನೆಂದರೆ, ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ಹೆಸರನ್ನು ಅವರು ಪದೇಪದೇ ಉಲ್ಲೇಖಿಸಿದ್ದದ್ದು. ವೇದಿಕೆಯಲ್ಲಿ ಕಾಂಗ್ರೆಸ್ಸಿನ ಘಟಾನುಗಟಿಗಳು ಇದ್ದರೂ, ರಾಹುಲ್ ಗಾಂಧಿ ಇವರಿಬ್ಬರ ಹೆಸರನ್ನು ಮಾತ್ರ ವಿಶೇಷವಾಗಿ ತಮ್ಮ ಭಾಷಣದಲ್ಲಿ ಉಲ್ಲೇಖಿಸುತ್ತಿದ್ದರು.
ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಅವರು ಆಲಿಂಗನ
"ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಅವರು ಆಲಿಂಗನ ಮಾಡಿಕೊಂಡದ್ದು ನನಗೆ ಸಂತೋಷವನ್ನು ತಂದಿದೆ. ಇಬ್ಬರು ನಾಯಕರು ಸೇರಿ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ" ಎನ್ನುವ ಮಾತನ್ನು ರಾಹುಲ್ ಗಾಂಧಿ ಹೇಳಿದ್ದರು. ಹಾಗಾದರೆ, ಕೆಪಿಸಿಸಿಯಲ್ಲಿ ಇದೆ ಎನ್ನಲಾಗುತ್ತಿರುವ ಬಣ ರಾಜಕೀಯವನ್ನು ರಾಹುಲ್ ಗಾಂಧಿ ಪರೋಕ್ಷವಾಗಿ ಒಪ್ಪಿಕೊಂಡರೇ ಎನ್ನುವುದು ಈಗ ಚರ್ಚೆಯ ವಿಷಯವಾಗಿದೆ.
ಇವರಿಬ್ಬರ ಹೆಸರನ್ನು ಮಾತ್ರ ಉಲ್ಲೇಖಿಸಿರುವ ಹಿಂದಿನ ಮರ್ಮವೇನು?
"ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ, ಬಿಜೆಪಿ ಹಾಗೂ ಆರ್ಎಸ್ಎಸ್ ಅನ್ನು ಸೋಲಿಸಲಿದೆ. ಕರ್ನಾಟಕದಲ್ಲಿ ಅದು ಸಾಧ್ಯವಾಗುತ್ತದೆ. ಇವರಿಬ್ಬರು ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಸಂಘಟಿಸುತ್ತಾರೆ ಎಂಬ ವಿಶ್ವಾಸ ಇದೆ"ಎಂದು ರಾಹುಲ್ ಗಾಂಧಿ ಹೇಳಿದಾಗ ನೆರೆದಿದ್ದ ಜನಸ್ತೋಮದ ಭಾರೀ ಕರತಾಡನವೇನೂ ಸಿಕ್ಕಿತು, ಆದರೆ.. ವಿಶೇಷವಾಗಿ ಇವರಿಬ್ಬರ ಹೆಸರನ್ನು ಮಾತ್ರ ಉಲ್ಲೇಖಿಸಿರುವ ಹಿಂದಿನ ಮರ್ಮವೇನು ಎನ್ನುವ ಪ್ರಶ್ನೆ ಎದುರಾಗದೇ ಇರದು.
ಸಿದ್ದರಾಮಯ್ಯನವರ ಆಪ್ತ ವಲಯ ಆಯೋಜಿಸಿದ್ದ ಅಮೃತ ಮಹೋತ್ಸವ ಕಾರ್ಯಕ್ರಮ
ಸಿದ್ದರಾಮಯ್ಯನವರ ಆಪ್ತ ವಲಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಪತಿಷ್ಠೆಯಾಗಿ ತೆಗೆದುಕೊಂಡಿತ್ತು. ಇದು ಪಕ್ಷದ ಕಾರ್ಯಕ್ರಮವಲ್ಲ ಎಂದು ಡಿ.ಕೆ.ಶಿವಕುಮಾರ್ ಕೂಡಾ ಹೇಳುತ್ತಿದ್ದರು. ಒಟ್ಟಿನಲ್ಲಿ ಸಿದ್ದರಾಮಯ್ಯನವರ ಬಣ ಈ ಕಾರ್ಯಕ್ರಮವನ್ನು ಭರ್ಜರಿ ಶಕ್ತಿ ಪ್ರದರ್ಶನದ ವೇದಿಕೆಯಾಗಿ ರೂಪಿಸಿಕೊಳ್ಳಲು ಯಶಸ್ವಿಯಾಯಿತು. ಈ ಮೂಲಕ ಕಳೆದ ಕೆಲವು ತಿಂಗಳ ಹಿಂದೆ ಆರಂಭವಾಗಿದ್ದ ಕಾಂಗ್ರೆಸ್ ಒಳಗಿನ ಬಣ ರಾಜಕೀಯ ವರದಿಗಳಿಗೆ ಸಿದ್ದರಾಮೋತ್ಸವ ಇತಿಶ್ರೀ ಹಾಡಿತಾ? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.