ಹುಟ್ಟಿದ ಊರಿನಿಂದ 25 ವರ್ಷ ದೂರವಿದ್ದ ಸಿದ್ದಗಂಗಾ ಸ್ವಾಮೀಜಿ
ಬೆಂಗಳೂರು, ಜನವರಿ 21: ಈಗ ರಾಮನಗರ ಜಿಲ್ಲೆಗೆ ಸೇರಿರುವ ಮಾಗಡಿ ತಾಲ್ಲೂಕಿನ ವೀರಾಪುರ ಎಂಬ ಗ್ರಾಮ ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು. 1907ರ ಏಪ್ರಿಲ್ 1ರಂದು ಅವರು ಜನಿಸಿದ ಸಂದರ್ಭದಲ್ಲಿ ಅದು ಮೈಸೂರು ಸಂಸ್ಥಾನಕ್ಕೆ ಸೇರಿತ್ತು.
ಉನ್ನತ ಶಿಕ್ಷಣ ಪಡೆಯುವ ಹಂಬಲ ಹೊಂದಿದ್ದ ಶಿವಣ್ಣ (ಶಿವಕುಮಾರ ಸ್ವಾಮೀಜಿ) ಅವರು ಓದಿನಲ್ಲಿ ಚುರುಕಾಗಿದ್ದವರು. ಅವರ ತಂದೆ ಪಟೇಲ್ ಹೊನ್ನೇಗೌಡರಿಗೂ ಮಗ ಬಿ.ಎ. ಶಿಕ್ಷಣ ಪಡೆದು ಉನ್ನತ ಅಧಿಕಾರಿಯಾಗಬೇಕೆಂಬ ಆಸೆಯಿತ್ತು.
ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳ ಬದುಕಿನ ಹಾದಿ
ಆದರೆ, 1930ರಲ್ಲಿ ಸಿದ್ದಗಂಗಾ ಮಠದ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರ ಹಠಾತ್ ನಿಧನ ಅವರ ಬದುಕಿನಲ್ಲಿ ಬಹುದೊಡ್ಡ ತಿರುವಿಗೆ ಕಾರಣವಾಯಿತು. ಮರುಳಾರಾಧ್ಯರ ಕ್ರಿಯಾ ಸಮಾಧಿ ಕಾರ್ಯಕ್ಕೆ ಬಂದಿದ್ದ ಶಿವಣ್ಣ ಅವರ ಶಿಸ್ತಿನ ಬದುಕಿನ ಬಗ್ಗೆ ಉದ್ದಾನ ಸ್ವಾಮೀಜಿಗಳಿಗೆ ಅರಿವಿತ್ತು. ಆ ವೇಳೆ ಎಲ್ಲರ ಸಮ್ಮುಖದಲ್ಲಿಯೇ ಮಠದ ಉತ್ತರಾಧಿಕಾರಿ ಶಿವಣ್ಣ ಎಂದು ಘೋಷಣೆ ಮಾಡಿದರು.
ಕ್ರಿಯಾ ಸಮಾಧಿ ಕಾರ್ಯಕ್ಕೆ ಬಂದಿದ್ದ ಶಿವಣ್ಣ ಕಾವಿ, ರುದ್ರಾಕ್ಷಿ ಧರಿಸಿ ಸನ್ಯಾಸ ದೀಕ್ಷೆ ಪಡೆದು ಊರಿಗೆ ಬೆಂಗಳೂರಿಗೆ ಶಿಕ್ಷಣ ಪೂರೈಸಲು ಮರಳಿದ್ದರು.
ಬೇಸರಪಟ್ಟುಕೊಂಡ ತಂದೆ
ಅತ್ತ ಮಗ ಉನ್ನತ ಅಧಿಕಾರಿಯಾಗಬೇಕು ಎಂಬ ಆಸೆ ಹೊಂದಿದ್ದ ಹೊನ್ನೇಗೌಡರಿಗೆ ಮಗ ಸನ್ಯಾಸತ್ವ ಸ್ವೀಕಾರ ಮಾಡಿದ್ದು ಆಘಾತ ಉಂಟುಮಾಡಿತ್ತು. ಮಗ ಸನ್ಯಾಸಿ ಆಗುವುದು ಅವರಿಗೆ ಇಷ್ಟವಿರಲಿಲ್ಲ. ಇದನ್ನು ತಿಳಿದ ಉದ್ದಾನ ಶಿವಯೋಗಿಗಳು ಹೊನ್ನೇಗೌಡರಿಗೆ ಮಠದ ಅಗತ್ಯದ ಬಗ್ಗೆ ಮನವರಿಕೆ ಮಾಡಿ ಸಮಾಧಾನ ಹೇಳಲು ವೀರಾಪುರಕ್ಕೆ ತೆರಳಿದರು. ಆದರೆ, ಹೊನ್ನೇಗೌಡರು ಮನೆಯಲ್ಲಿ ಇರದೆ ಅವರಿಗೆ ಮುಖಾಮುಖಿಯಾಗುವುದನ್ನು ತಪ್ಪಿಸಿಕೊಂಡಿದ್ದರು.
ಮಠಕ್ಕೆ ಮರಳಿದ ಸ್ವಾಮೀಜಿ
ಮಠ ಹಾಗೂ ಸಮಾಜ ಸೇವೆಗೆ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಿದ್ದ ಖುಷಿಯಲ್ಲಿದ್ದ ಶಿವಯೋಗಿಗಳು, ತಂದೆಯ ಮನವೊಲಿಕೆಗಿಂತಲೂ ಮಠವನ್ನು ಚೆನ್ನಾಗಿ ನಡೆಸಿ ಲಕ್ಷಾಂತರ ಕುಟುಂಬಗಳ ಏಳಿಗೆಗೆ ಕಾರಣವಾಗಬಲ್ಲ ಅವರ ಮಗನನ್ನು ಉತ್ತರಾಧಿಕಾರಿಯನ್ನಾಗಿ ಬೆಳೆಸುವುದರಲ್ಲಿ ಯಾವ ತಪ್ಪೂ ಇಲ್ಲ ಎಂಬ ಅನಿಸಿಕೆ ಅವರಲ್ಲಿ ಮೂಡಿತು. ಹೀಗಾಗಿ ಅವರು ಮಠಕ್ಕೆ ವಾಪಸಾದರು.
ನಾಳೆ ಮಧ್ಯಾಹ್ನ 3 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ: ಎಚ್ಡಿಕೆ
ಸ್ವಾಮೀಜಿಗಳಲ್ಲಿ ಮೂಡಿದ ಬೇಸರ
ತಂದೆಯ ನಡವಳಿಕೆ ಶಿವಕುಮಾರ ಸ್ವಾಮೀಜಿ ಅವರಲ್ಲಿಯೂ ಬೇಸರ ಮೂಡಿಸಿತ್ತು. ಅಷ್ಟು ದೂರದಿಂದ ಸ್ವಾಮೀಜಿಗಳು ಮನೆಗೆ ನಡೆದುಕೊಂಡು ಬಂದಾಗ ತಂದೆ ಅವರಿಗೆ ಸಿಗದೆ ನಡೆದುಕೊಂಡ ರೀತಿ ಸರಿಯಲ್ಲ ಎಂದೆನಿಸಿತ್ತು. ಈ ಬೇಸರವೇ ಅವರು ಮನೆಯಿಂದ ಮತ್ತು ವೀರಾಪುರದಿಂದ ದೂರ ಉಳಿಯಲು ಕಾರಣ.
ಶಿವಯೋಗಿಗಳು ಭೇಟಿ ನೀಡಿದರೂ ಅವರಿಗೆ ಯಾವ ಗೌರವವೂ ಸಿಕ್ಕಲಿಲ್ಲ. ಅವರ ಕೃಪೆ ದಕ್ಕದ ಆ ಮನೆಗೆ ಅವ ಭಕ್ತನಾದ ತಾವು ಹೇಗೆ ತಾನೆ ಪ್ರವೇಶ ಮಾಡುವುದು ಎಂಬ ಪ್ರಶ್ನೆ ಅವರಲ್ಲಿ ಮೂಡಿತ್ತು. ವಿದ್ಯಾಭ್ಯಾಸ ಮುಗಿಸಿ ಮಠಕ್ಕೆ ತೆರಳಿ ಅಧಿಕಾರ ವಹಿಸಿಕೊಂಡ ಬಳಿಕವೂ ಅವರು ಊರಿಗೆ ಭೇಟಿ ನೀಡಲಿಲ್ಲ.
ಸುಮಾರು 25 ವರ್ಷ ಅವರು ಪೂರ್ವಾಶ್ರಮದ ಊರಿನ ಹಾದಿ ತುಳಿದಿರಲಿಲ್ಲ. ಅಲ್ಲಿಗೆ ಹೋಗಬಾರದು ಎಂಬ ದೃಢನಿಶ್ಚಯವೂ ಅವರಲ್ಲಿತ್ತು.
25 ವರ್ಷ ಕಾಲಿಟ್ಟಿರಲಿಲ್ಲ
1930 ರಿಂದ 1955ರವರೆಗೂ ಗ್ರಾಮದ ಅನೇಕ ಜನರು ಮಠಕ್ಕೆ ಭೇಟಿ ನೀಡಿ ಊರಿಗೆ ಬರುವಂತೆ ಆಹ್ವಾನ ನೀಡಿದ್ದರೂ ಸ್ವಾಮೀಜಿಗಳು ಸುತಾರಾಂ ಒಪ್ಪಿರಲಿಲ್ಲ.
ಆದರೆ, ಕೊನೆಗೂ ಒಂದು ದಿನ ಅವರು ವೀರಾಪುರಕ್ಕೆ ಹೋಗುವ ಗಳಿಗೆ ಬಂದಿತ್ತು. ಸ್ವಾಮೀಜಿಗಳ ಪೂರ್ವಾಶ್ರಮದ ಅಣ್ಣನ ಮಗ ತಾವು ನೂತನವಾಗಿ ಕಟ್ಟಿಸಿದ್ದ ಮನೆಯ ಗೃಹಪ್ರವೇಶ ಸಮಾರಂಭಕ್ಕೆ ಆಹ್ವಾನಿಸಿದ್ದರು.
ಆದರೆ, ಆ ಮನೆಗೆ ತಾವು ಪ್ರವೇಶಿಸಲು ಸಾಧ್ಯವಿಲ್ಲ ಎಂದು ನೇರವಾಗಿ ಸ್ವಾಮೀಜಿ ಹೇಳಿದ್ದರು.
ಲಿಂಗೈಕ್ಯ 'ನಡೆದಾಡುವ ದೇವರು' ಶ್ರೀಗಳನ್ನು ಸ್ಮರಿಸಿದ ಟ್ವಿಟ್ಟಿಗರು
ಕೊನೆಗೂ ಒಪ್ಪಿದ ಶ್ರೀಗಳು
ಅವರು ಬಂದೇ ಬರುತ್ತಾರೆ ಎಂಬ ನಿರೀಕ್ಷೆ ಹೊಂದಿದ್ದ ಪೂರ್ವಾಶ್ರಮದ ಸಂಬಂಧಿಕರಿಗೆ ನಿರಾಶೆಯಾದರೂ ಸಿದ್ದಲಿಂಗನ ಪ್ರತಿನಿಧಿಯಾದ ಸ್ವಾಮೀಜಿಗಳಿಂದ ಗೃಹಪ್ರವೇಶ ನಡೆಸಬೇಕು ಎಂಬ ಸಂಕಲ್ಪವಿದೆ ಎಂದು ಹೇಳಿದರು. ಮುಂದೆ ಆ ಮನೆಗೆ ಯಾರೂ ಹೋಗದೆ ಪಾಳುಬಿದ್ದರೂ ತೊಂದರೆಯಿಲ್ಲ. ಆದರೆ, ತಾವು ಬಂದು ಗೃಹಪ್ರವೇಶ ನಡೆಸಿಕೊಡಬೇಕು ಎಂದು ಕೋರಿದರು. ಇಲ್ಲದೆ ಇದ್ದರೆ ತಮ್ಮ ಬಯಕೆ ಏನಿದೆಯೋ ಹಾಗೆಯೇ ಆಗಲಿ ಎಂಬ ಮಾತನ್ನೂ ಸೇರಿಸಿದರು.
ಬಂದವರಲ್ಲಿ ಅವರು ಭಕ್ತರನ್ನು ಕಂಡರು. ಭಕ್ತರ ಮನಸ್ಸನ್ನು ನೋಯಿಸುವ ಇರಾದೆ ಸ್ವಾಮೀಜಿಗಳಲ್ಲಿ ಇರಲಿಲ್ಲ. ಹಳೆಯ ಘಟನೆಯನ್ನು ಮರೆತು 25 ವರ್ಷಗಳ ಬಳಿಕ ಕೊನೆಗೂ ತಮ್ಮ ಹುಟ್ಟೂರಿಗೆ ತೆರಳಲು ಒಪ್ಪಿಕೊಂಡರು.