ಅನ್ನ, ಶಿಕ್ಷಣ ಅಂದರೆ ಶಿವಕುಮಾರಸ್ವಾಮಿಗಳಲ್ಲದೆ ಇನ್ಯಾರ ನೆನಪು?
ಅದೆಷ್ಟು ಸಾವಿರ ಮಕ್ಕಳ ಪಾಲಿನ ಅನ್ನದ ತುತ್ತು, ಬದುಕಿನುದ್ದಕ್ಕೂ ಬೆಳಕು ತೋರುವ ಶಿಕ್ಷಣದ ಕಂದೀಲು ಆಗಿದ್ದ ಶಿವಕುಮಾರ ಸ್ವಾಮಿ ಅವರ ಬಗ್ಗೆ ಬರೆದಷ್ಟೂ ತಿಳಿದಷ್ಟೂ ಸಂಗತಿಗಳು ಎದುರಾಗುತ್ತಲೇ ಇರುತ್ತವೆ. ಪ್ರತಿ ವರ್ಷ ಸಿದ್ದಗಂಗಾ ಮಠದಲ್ಲಿ ನಡೆಯುವ ವಸ್ತು ಪ್ರದರ್ಶನ ಮೇಳದ ಬಗ್ಗೆ ತಿಳಿಯದವರು ಯಾರು?
ಅಲ್ಲಿ ನಡೆಯುವ ರಾಸುಗಳ ಸಂತೆ, ಅಲ್ಲಿಗೆ ಬರುವ ರೈತರು, ಕಲಾವಿದರಿಗೆ ಸಿಗುವ ಅವಕಾಶ, ಸಣ್ಣ-ಪುಟ್ಟ ವ್ಯಾಪಾರಿಗಳ ಬದುಕಿಗೂ ಅದರಿಂದ ಆಗುವ ಅನುಕೂಲ... ಪ್ರಾಯಶಃ ಶಿವರಾತ್ರಿಯಿಂದ ಆರಂಭ ಆಗುತ್ತಿದ್ದ ಜಾತ್ರೆ ತಿಂಗಳ ಕಾಲ ನಡೆಯುತ್ತಿತ್ತು. ಇನ್ನು ಸಿದ್ದಗಂಗಾ ಮಠದ ಪಲ್ಲಕ್ಕಿ ಉತ್ಸವ ಹಾಗೂ ರಥ ಯಾತ್ರೆ ಕೂಡ ಅಷ್ಟೇ ಸೊಗಸು.
ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳ ಬದುಕಿನ ಹಾದಿ
ಇನ್ನು ಮಠದಲ್ಲಿ ಶಿಕ್ಷಕರಿಗೆ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡಲಾಗುತ್ತಿತ್ತು. ಸಾವಯವ ಕೃಷಿಕರ ಸಮ್ಮೇಳನಕ್ಕೆ ಸ್ಥಳಾವಕಾಶ ನೀಡುತ್ತಿದುದನ್ನು ರೈತರು ನೆನೆಯುತ್ತಾರೆ. ಮಠಕ್ಕೆ ಹೋದವರು 'ಪ್ರಸಾದ' ತೆಗೆದುಕೊಳ್ಳದೆ ವಾಪಸಾದ ಸಂದರ್ಭಗಳು ಕೂಡ ಅಪರೂಪ. ದಿನವೂ ಸಾವಿರಾರು ಮಂದಿಗೆ ಪ್ರಸಾದ ದೊರೆಯುವಂತೆ ಮಾಡಿದ್ದ ಶಿವಕುಮಾರ ಸ್ವಾಮೀಜಿ ಒಂದು ವ್ಯವಸ್ಥೆಯಂತೆ ಇದ್ದರು.
ಲಕ್ಷಾಂತರ ಮಂದಿ ಅನುಕೂಲ ಪಡೆದಿದ್ದಾರೆ
ಅಷ್ಟೇ ಅಲ್ಲ, ವಿದ್ಯಾ-ಜ್ಞಾನ ಪ್ರಸಾರಕ್ಕಾಗಿ ಅವರು ಕಟ್ಟಿದ ವಿದ್ಯಾ ಸಂಸ್ಥೆಗಳ ತೂಕವೇ ಮತ್ತೊಂದು ಬಗೆಯದು. ಸಿದ್ದಗಂಗಾ ಮಠದಲ್ಲಿ ಉಚಿತ ಶಿಕ್ಷಣ, ಊಟ, ವಸತಿ ವ್ಯವಸ್ಥೆ ಪಡೆದ ಲಕ್ಷಾಂತರ ಮಂದಿ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ-ವಿದೇಶಗಳಲ್ಲೂ ಇದ್ದಾರೆ. ಸರಕಾರದ ಆಯಕಟ್ಟಿನ ಜಾಗಗಳಲ್ಲಿ ಅಧಿಕಾರದಲ್ಲಿದ್ದಾರೆ. ಹೆಮ್ಮೆಯ ವೃತ್ತಿಗಳನ್ನು ಆರಿಸಿಕೊಂಡಿದ್ದಾರೆ.
ಕನ್ನಡ ಪಂಡಿತ ಕೋರ್ಸ್ ಮಾನ್ಯತೆ ಸಿಗಬೇಕಿತ್ತು
ರಾಷ್ಟ್ರೀಯ ಹೆದ್ದಾರಿ ಪಕ್ಕಕ್ಕೆ ಇರುವ ಕ್ಯಾತ್ಸಂದ್ರಕ್ಕೆ ತುಮಕೂರು ಪಟ್ಟಣದ- ಬೆಂಗಳೂರು ನಗರದ ಯಾವ ಗಾಳಿ ಕೂಡ ಸೋಕಿರಲಿಲ್ಲ. ಅದಕ್ಕೆ ಮುಖ್ಯ ಕಾರಣವಾಗಿದ್ದವರು ಶಿವಕುಮಾರ ಸ್ವಾಮೀಜಿ. ಸಿದ್ದಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಪಂಡಿತ್ ಅನ್ನೋ ಕೋರ್ಸ್ ಆರಂಭಿಸಲಾಗಿತ್ತು. ಅದು ಎಷ್ಟು ಚೆನ್ನಾಗಿ ರೂಪುಗೊಂಡಿತ್ತು ಅಂದರೆ, ವಿಶ್ವವಿದ್ಯಾಲಯ ಮಟ್ಟದಲ್ಲಿ ಸ್ನಾತಕೋತ್ತರ ಪದವೀಧರರಿಗೆ ಕೂಡ ಇಂಥ ಒಳ್ಳೆ ಸಿಲಬಸ್ ಸಿಗುವುದು ಕಷ್ಟವಿತ್ತು.
ಶಿವಕುಮಾರ ಸ್ವಾಮೀಜಿಗಳು ಸಿದ್ದಗಂಗಾ ಮಠಾಧೀಶರಾಗಿದ್ದು ಒಂದು ವಿಸ್ಮಯ
ಸರಕಾರದಿಂದ ಮಾನ್ಯತೆ ದೊರಕಿಸಲು ಯತ್ನಿಸಿದರು
ಕನ್ನಡ ಪಂಡಿತ್ ಕೋರ್ಸ್ ಗೆ ರಾಜ್ಯ ಸರಕಾರದ ಮಾನ್ಯತೆ ದೊರಕಿಸಿಕೊಳ್ಳುವುದಕ್ಕೆ ಶಿಕ್ಷಣ ಸಂಸ್ಥೆ ಬಹಳ ಕಷ್ಟಪಟ್ಟಿತು. ಆದರೆ ಸಾಧ್ಯವಾಗಿರಲಿಲ್ಲ. ಆದರೆ ಈ ಸಿಲಬಸ್ ನಿಂದ ಪ್ರಭಾವಿತರಾಗಿ ಕೋರ್ಸ್ ಮಾಡಿದ ಎಷ್ಟೋ ಮಂದಿ ನಾನಾ ಕೆಲಸಗಳನ್ನು ಹುಡುಕಿಕೊಳ್ಳಬೇಕಾಯಿತು. ಆದರೆ ಈ ಕೋರ್ಸ್ ಬಗ್ಗೆ ಶಿವಕುಮಾರ ಸ್ವಾಮೀಜಿಗೆ ಬಹಳ ಅಂದರೆ ಬಹಳ ಪ್ರೀತಿ ಇತ್ತು.
ಶಿಸ್ತಿಗೆ ಮತ್ತೊಂದು ಹೆಸರಿನಂತಿದ್ದರು
ಶಿವಕುಮಾರ ಸ್ವಾಮೀಜಿ ಶಿಸ್ತು ಅಂದರೆ ಅದಕ್ಕೆ ಆ ಹೆಸರಿನಿಂದಲೇ ಕರೆಯಬೇಕು. ಆಹ್ವಾನ ನೀಡುವ ಎಲ್ಲ ಕಾರ್ಯಕ್ರಮಗಳಿಗೂ ವಯೋ ಸಹಜ ಕಾರಣಗಳಿಗಾಗಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ ತಾವು ತೆರಳುತ್ತಿದ್ದ ಕಾರ್ಯಕ್ರಮಕ್ಕೆ ಸಮಯಕ್ಕೆ ಸರಿಯಾಗಿ ಹೋಗಿ, ಗುರು ವಂದನೆ, ತಮ್ಮ ಭಾಷಣ ಮುಗಿಸಿ ಹೊರಟೇ ಬಿಡುತ್ತಿದ್ದರು.
ನಡೆದಾಡುವ ದೇವರ ಶ್ರೀವಾಣಿ: ದೇಹಕ್ಕೆ ಹಸಿವಾದರೆ ಪ್ರಸಾದ, ಮನಸ್ಸಿನ ಹಸಿವಿಗೆ ಪ್ರಾರ್ಥನೆ
ಇಡೀ ತುಮಕೂರು ಪೂರ್ತಿ ಶಿವಕುಮಾರ ಸ್ವಾಮೀಜಿ ಕಾಣುತ್ತಾರೆ
ಸಿದ್ದಗಂಗಾ ಶಿಕ್ಷಣ ಸಂಸ್ಥೆಗಳು ಈ ಮಟ್ಟದಲ್ಲಿ ಬೆಳೆಯಲು ಏಕೈಕ ಶಕ್ತಿ ಆಗಿದ್ದವರು ಶಿವಕುಮಾರ ಸ್ವಾಮೀಜಿ. ಅತ್ಯುತ್ತಮ ಉಪನ್ಯಾಸಕರು ಈ ಕಾಲೇಜುಗಳಿಗೆ ಬರುವಂತಾಗಲು ಸಹ ಅವರೇ ಕಾರಣ. ತುಮಕೂರಿನಲ್ಲಿ ಬಹಳ ಕಡೆ ಸಿದ್ದಗಂಗೆ ಹೆಸರು ಕಾಣುತ್ತದೆ. ಶಿವಕುಮಾರ ಸ್ವಾಮೀಜಿ ಉಲ್ಲೇಖ ಕಾಣುತ್ತದೆ. ಇಡೀ ಊರಿಗೆ ತಮ್ಮ ಹೆಸರು ನೀಡಿದ, ಮನುಷ್ಯತ್ವವನ್ನೇ ಉಸಿರಾಡಿದ ಸಾರ್ಥಕ ಜೀವವೊಂದು ದೈಹಿಕವಾಗಿ ನಮ್ಮನ್ನು ಬಿಟ್ಟು ಅಗಲಿದೆ.