ಋತುಮತಿಯಾಗಿದ್ದ ನಮ್ಮನ್ನೂ ಒಳಗೇ ಕೂರಿಸಿ ಊಟ ಹಾಕಿಸಿದ ಮಹಾಮಹಿಮ ಶ್ರೀ!
ಸಿದ್ದಗಂಗಾ ಮಠದ ಶ್ರೀಗಳು ತಮ್ಮ ಭೌತಿಕ ದೇಹವನ್ನು ಬಿಟ್ಟು ಮರೆಯಾಗಿರುವುದು ಸತ್ಯ. ಆದರೆ ತಮ್ಮ ಮಾದರಿ ವ್ಯಕ್ತಿತ್ವದ ಮೂಲಕ ಅಸಂಖ್ಯಾತ ಭಕ್ತರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ, ಬದುಕಿಗೆ ಮಾದರಿ ಹಾದಿ ತೋರಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ತಮ್ಮ 111 ವರ್ಷ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಜನವರಿ 21 ರಂದು ಬೆಳಿಗ್ಗೆ 11:44 ಕ್ಕೆ ದೇಹತ್ಯಾಗ ಮಾಡಿದ ಅವರ ಅಗಲಿಕೆಗೆ ಇಡೀ ದೇಶವೂ ಕಂಬನಿ ಮಿಡಿದಿದೆ. ತಮ್ಮ ನೂರಾರು ಮಾನವೀಯ ನಡೆಯ ಮೂಲಕ ಮನುಕುಲಕ್ಕೆ ಆದರ್ಶಪ್ರಾಯರಾದ ಶ್ರೀಗಳೊಂದಿಗೆ ಒಡನಾಟ ನಡೆಸಿದವರೇ ಧನ್ಯರು. ತಮ್ಮನ್ನು ಭೇಟಿಯಾಗುವ ಪ್ರತಿಯೊಬ್ಬರನ್ನು ಸೆಳೆವ ಚುಂಬಕ ವ್ಯಕ್ತಿತ್ವ ಶ್ರೀಗಳದ್ದು.
ತಮ್ಮ ಸಮಾಧಿಯ ನಿರ್ಮಾಣಕ್ಕೆ ತಾವೇ ಅಡಿಗಲ್ಲು ಹಾಕಿದ್ದ ಸಿದ್ದಗಂಗಾಶ್ರೀಗಳು!
ಋತುಮತಿಯಾದ ಮಹಿಳೆಯರನ್ನು ಮೈಲಿಗೆ ಎಂಬಂತೆ ನೋಡುವ ಕಾಲದಲ್ಲೂ, ಮುಟ್ಟಾದ ಮಹಿಳೆಯರನ್ನು ಎಲ್ಲರೊಂದಿಗೇ ಕೂರಿಸಿ ಊಟ ಮಾಡುವುದಕ್ಕೆ ಅನುವು ಮಾಡಿಕೊಟ್ಟ ದಯಾಮಯಿ ಸಿದ್ದಗಂಗೆಯ ಶಿವಕುಮಾರ ಶ್ರೀಗಳು. ಅವರ ಆದರ್ಶ ವ್ಯಕ್ತಿತ್ವದ ದ್ಯೋತಕವಾಗಿ ನಿಲ್ಲುವ ಅನುಭವವೊಂದನ್ನು ಸುಷ್ಮಾ ರಾವ್ ಎಂಬುವವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಶತಾಯುಷಿ ಸಂತರಾದ ಶಿವಕುಮಾರ ಸ್ವಾಮೀಜಿ ಅವರ ಮಾದರಿ ವ್ಯಕ್ತಿತ್ವಕ್ಕೆ ಕನ್ನಡಿಯಾಗುವ ಆ ಘಟನೆಯನ್ನು ಸುಷ್ಮಾ ಅವರ ಮಾತಿನಲ್ಲೇ ಕೇಳಿ...
ಮರೆಯಲಾಗದ ಅನುಭವ
"ನನಗಾಗ 13 ವರ್ಷ ವಯಸ್ಸು. ತುಮಕೂರಿನ ಶಿವಗಂಗೆಗೆ ಶಾಲಾ ಪ್ರವಾಸಕ್ಕೆಂದು ಹೋಗಿದ್ದೆವು. ಮಧ್ಯಾಹ್ನ ವಾಪಸ್ಸಾಗುವಾಗ ಊಟಕ್ಕೆಂದು ಸಿದ್ದಗಂಗಾ ಮಠಕ್ಕೆ ತೆರಳಿದ್ದೆವು.
ನಮ್ಮಲ್ಲಿ ಕೆಲವು ಹೆಣ್ಣುಮಕ್ಕಳಿಗೆ ಊಟಕ್ಕೆ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಹಿರಿಯರೊಬ್ಬರು ಹೇಳಿದ್ದರು. ನಾವೆಲ್ಲ ಪ್ರತ್ಯೇಕ ಸ್ಥಳದಲ್ಲಿ ನಿಂತಿರುವಾಗಲೇ ನಮ್ಮತ್ತ ಹಿರಿಯರೊಬ್ಬರು ಧಾವಿಸಿ ಬಂದರು. ಕಾವಿ ಬಟ್ಟೆ ಧರಿಸಿದ್ದ ಅವರ ಸುತ್ತ ಮುತ್ತ ಕೆಲವು ಶಿಷ್ಯರಿದ್ದರು. ಅವರು ನಮ್ಮ ಬಳಿ ಬಂದು, 'ಇಲ್ಯಾಕೆ ನಿಂತಿದ್ದೀರಿ?' ಎಂದು ಪ್ರಶ್ನಿಸಿದರು. ನಾವು ಮುಜುಗರ ಪಟ್ಟುಕೊಂಡು, 'ನಾವು ಮುಟ್ಟಾಗಿದ್ದೇವೆ. ಆದ್ದರಿಂದ ನಮಗೆ ಪ್ರತ್ಯೇಕವಾಗಿ ಬಡಿಸುವುದಾಗಿ ಹೇಳಿದರು' ಎಂದೆವು."ಋತುಮತಿಯಾಗುವುದಕ್ಕೆ ಹೆಮ್ಮೆಪಡಿ ಎಂದರು ಶ್ರೀಗಳು!
"ಬಹಳ ಖೇದಗೊಂಡ ಆ ಹಿರಿಯರು, "ಇದೊಂದು ನೈಸರ್ಗಿಕ ಪ್ರಕ್ರಿಯೆ. ಅದಕ್ಕಾಗಿ ನಾಚಿಕೆ ಪಟ್ಟುಕೊಳ್ಳುವಂಥದ್ದು ಏನೂ ಇಲ್ಲ. ಅದಕ್ಕಾಗಿ ಪ್ರತ್ಯೇಕವಾಗಿ ಕೂರುವುದೂ ಬೇಕಿಲ್ಲ. ಬನ್ನಿ ಎಲ್ಲರೊಂದಿಗೆ ಊಟ ಮಾಡಿ. ಇದು ಪ್ರತಿ ಮಹಿಳೆಯೂ ಅನುಭವಿಸಬೇಕಾದ ಸಹಜ ಪ್ರಕ್ರಿಯೆ. ಅದಕ್ಕಾಗಿ ಬೇಸರ, ನಾಚಿಕೆ ಬೇಡ. ಹೆಮ್ಮೆಪಡಿ" ಎಂದು ನಮ್ಮನ್ನು ಎಲ್ಲರೊಂದಿಗೂ ಕೂರಸಿ ಊಟ ಮಾಡುವಂತೆ ಹೇಳಿದರು."
ಪ್ರತಿಯೊಬ್ಬರಿಗೂ ಮಾದರಿ ಈ ನಡೆದಾಡುವ ದೇವರು
"ನಮಗೆ
ನಂತರ
ತಿಳಿಯಿತು,
'ಅವರನ್ನು
ನಡೆದಾಡುವ
ದೇವರು
ಎಂದು
ಕರೆಯುತ್ತಾರೆ,
ಅವರೇ
ಲಕ್ಷಾಂತರ
ಜನರಿಗೆ
ವಿದ್ಯೆ,
ಅನ್ನ
ನೀಡಿದ
ಕರುಣಾಮಯಿ
ಸಿದ್ದಗಂಗಾ
ಮಠಾಧೀಶ
ಶ್ರೀ
ಶಿವಕುಮಾರ
ಸ್ವಾಮೀಜಿ'
ಎಂದು.
ಅವರ
ಕಾಲಿಗೊರಗಿ
ನಮಸ್ಕರಿಸಿದ
ನಾವೇ
ಧನ್ಯವರು.
ಆ
'ನಡೆದಾಡುವ
ದೇವರು'
ಪ್ರತಿಯೊಬ್ಬರಿಗೂ
ಮಾದರಿ..."
ಶ್ರೀಗಳ ನಡೆಗೆ ನಮೋ ನಮಃ!
ಸುಷ್ಮಾ ರಾವ್ ಅವರು ಫೇಸ್ ಬುಕ್ ನಲ್ಲಿ ತಮ್ಮ ಅನುಭವವನ್ನು ಬರೆದುಕೊಳ್ಳುತ್ತಿದ್ದಂತೆಯೇ ನೂರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀಗಳಿಗೆ ತಲೆಬಾಗಿದ್ದಾರೆ. ಆರುನೂರಕ್ಕೂ ಹೆಚ್ಚು ಜನ ಈ ಪೋಸ್ಟ್ ಅನ್ನು ಲೈಕ್ ಮಾಡಿದ್ದರೆ, ಸುಮಾರು 200 ಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ.