ಕ್ಷೇತ್ರ ಪರಿಚಯ: ಕಾಂಗ್ರೆಸ್ ಭದ್ರಕೋಟೆ ಶಿವಾಜಿನಗರ ಸಮಸ್ಯೆಗಳ ಆಗರ
ಕಾಂಗ್ರೆಸ್ ನ ನಿಷ್ಠಾವಂತ ನಾಯಕ ರೋಷನ್ ಬೇಗ್ ಇದ್ದಕ್ಕಿದ್ದಂತೆ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ನಂತರ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಅನರ್ಹತೆಯ ಶಿಕ್ಷೆಗೊಳಗಾಗಿದ್ದು ಹಳೇ ವಿಷಯ.
ಬೆಂಗಳೂರಿನ ಶಿವಾಜಿನಗರವನ್ನು ಕಾಂಗ್ರೆಸ್ಸಿನ ಭದ್ರಕೋಟೆಯನ್ನಾಗಿ ಮಾಡಿದ್ದ ರೋಷನ್ ಬೇಗ್, ಈ ಬಾರಿ ಚುನಾವಣೆಗೆ ನಿಲ್ಲುವುದಕ್ಕೆ ಸಾಧ್ಯವಿಲ್ಲ. ಅನರ್ಹರಿಗೆ ಚುನಾವಣೆಗೆ ನಿಲ್ಲಲು ಅವಕಾಶ ನೀಡಬಾರದು ಎಂದು ಈಗಾಗಲೇ ಚುನಾವಣಾ ಆಯೋಗ ಹೇಳಿದೆ. ಈ ಕುರಿತು ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರಾದರೂ ರೋಷನ್ ಬೇಗ್ ಅವರ ಸ್ಪರ್ಧೆ ಸಾಧ್ಯವಿಲ್ಲ ಎಂದಾದರೆ ಈ ಕ್ಷೇತ್ರದಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬುದು ಕುತೂಹಲ ಸೃಷ್ಟಿಸಿದೆ.
ಶಿವಾಜಿನಗರ : ಅಧಿಪತ್ಯಕ್ಕೆ ಬೇಗ್-ಕಟ್ಟಾ ಕಾದಾಟ
ರಾಮಸ್ವಾಮಿ ಪಾಳ್ಯ, ಜಯಮಹಲ್, ಹಲಸೂರು, ಭಾರತಿ ನಗರ, ಶಿವಾಜಿ ನಗರ, ವಸಂತ ನಗರ, ಸಂಪಂಗಿರಾಮ ನಗರ ವಾರ್ಡ್ ಗಳು ಈ ಕ್ಷೇತ್ರದ ಅಡಿಯಲ್ಲಿ ಬರುತ್ತವೆ.ಬೆಂಗಳೂರಿನ ಹಲವು ಪ್ರದೇಶಗಳಂತೆ ಶಿವಾಜಿನಗರ ಸಹ ಟ್ರಾಫಿಕ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆಯನ್ನು ಎದುರಿಸುತ್ತಿದೆ. ಜೊತೆಗೆ ಕಾನೂನು ಸುವ್ಯವಸ್ಥೆಯ ಬಗ್ಗೆಯೂ ದೂರುಗಳು ಆಗಾಗ ಕೇಳಿಬರುತ್ತವೆ.
ಕ್ಷೇತ್ರದ ರಾಜಕೀಯ ಇತಿಗಾಸ ಕೆದಕುವುದಕ್ಕೆ ಹೋದರೆ, ಶಿವಾಜಿನಗರ ಕ್ಷೇತ್ರದಲ್ಲಿ ಈವರೆಗೆ ನಡೆದ 11 ಚುನಾವಣೆಯಲ್ಲಿ 5 ಬಾರಿ ಕಾಂಗ್ರೆಸ್, ಎರಡು ಬಾರಿ ಬಿಜೆಪಿ ಹಾಗೂ ಜನತಾದಳ ಮತ್ತು ಒಂದು ಬಾರಿ ಜನತಾಪಕ್ಷ ಗೆಲುವು ಸಾಧಿಸಿವೆ. 2008, 2013 ಮತ್ತು 2018 ರಲ್ಲಿ ಸತತವಾಗಿ ಮೂರು ಬಾರಿ ಈ ಕ್ಷೇತ್ರದಿಂದ ರೋಶನ್ ಬೇಗ್ ಗೆದ್ದಿದ್ದರು.
ರೋಷನ್ ಬೇಗ್ ಮುಂತಾಗಿ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೆದ್ದು ಹೊರಬಂದ ಹದಿನೇಳು ಶಾಸಕರಿಗೂ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೀಡಿದ್ದರು. ಆದರೆ ಶಿವಾಜಿನಗರದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರೂ ಬಿ ಎಸ್ ಯಡಿಯೂರಪ್ಪನವರಿಗೆ ಆಪ್ತರು. ಅಕಸ್ಮಾತ್ ನರ್ಹರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದಾದರೆ ತಮ್ಮ ಪುತ್ರನಿಗಾದರೂ ಟಿಕೆಟ್ ನೀಡಬೇಕು ಎಂಬುದು ಬೇಗ್ ಒತ್ತಾಯ. ಕಿನ್ನು ಕಾಂಗ್ರೆಸ್ ನಿಂದ ವಿಧಾನ ಪರಿಷತ್ ಸದಸಯರಾದ ರಿಜ್ವಾನ್ ಅರ್ಷದ್, ಸಿಎಂ ಇಬ್ರಾಹಿಂ ಮುಂತಾದವರು ಟಿಕೆಟ್ ಆಕಾಂಕ್ಷಿಗಳಾಗಿದ್ದರೆ. ಒಟ್ಟಿನಲ್ಲಿ ಶಿವಾಜಿನಗರ ಫಲಿತಾಂಶಕ್ಕಿಂತ ಅಭ್ಯರ್ಥಿ ಯಾರಾಗುತ್ತಾರೆ ಎಂಬುದೇ ಕುತೂಹಲ ಕೆರಳಿಸಿದೆ.
ಈ ಕ್ಷೇತ್ರದಲ್ಲಿ ಒಟ್ಟು 191528 ಮತದಾರರಿದ್ದು, ಅವರಲ್ಲಿ ಮಹಿಳೆಯರು 94085, ಪುರುಷರು 97441.
2018 ರ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೋಷನ್ ಬೇಗ್ 59742 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು 44702 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡಿದ್ದರು.