ಶಿವಾಜಿ ಪಾರ್ಕ್: ಶಿವಸೇನಾ-ಮರಾಠಿಗರ ಹೆಮ್ಮೆಯ ತಾಣದ ಸುತ್ತಾ ಮುತ್ತಾ
ಮುಂಬೈನ ಹೆಮ್ಮೆಯ ಸಾರ್ವಜನಿಕ ಉದ್ಯಾನವನ ಶಿವಾಜಿ ಪಾರ್ಕ್ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳಿಗೆ ವೇದಿಕೆಯಾಗಿ ಉಳಿದುಕೊಂಡಿದೆ. 1966ರಲ್ಲಿ ಶಿವಸೇನಾದಲ್ಲಿ ಮೊದಲ Rally ಕಂಡಿತ್ತು. ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅಂತಿಮಯಾತ್ರೆ, 1955ರಲ್ಲಿ ಮೊದಲ ಮುಖ್ಯಮಂತ್ರಿ ಮನೋಹರ್ ಜೋಶಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಿತ್ತು. ಈಗ ಠಾಕ್ರೆ ಕುಟುಂಬದಿಂದ ಮೊದಲ ಬಾರಿಗೆ ಮುಖ್ಯಮಂತ್ರಿ ಸ್ಥಾನಕ್ಕೇರಿರುವ ಉದ್ಧವ್ ಠಾಕ್ರೆ ಅವರ ಪ್ರತಿಜ್ಞಾ ವಿಧಿ ಸ್ವೀಕಾರಕ್ಕೂ ಸಾಕ್ಷಿಯಾಗಲಿದೆ.
ಮರಾಠಿಗರ ಹೆಮ್ಮೆಯ ಶಿವಾಜಿ ಪಾರ್ಕ್ 28 ಎಕರೆ ವಿಸ್ತೀರ್ಣದ ಮೈದಾನ. ದಾದರ್ ನಲ್ಲಿರುವ ಈ ಮೈದಾನ 17ನೇ ಶತಮಾನದ ಯೋಧ 'ಛತ್ರಪತಿ ಶಿವಾಜಿ ಮಹಾರಾಜ'ರ, ಹೆಸರಿನಲ್ಲಿದೆ. ಶಿವಸೇನಾದ ಹಿಂದೂ ಸಾಮಾಜ್ರ್ಯ ಸ್ಥಾಪನೆಯ ಅನೇಕ ಭಾಷಣಗಳನ್ನು ಈ ಪಾರ್ಕ್ ಕೇಳಿಸಿಕೊಂಡಿದೆ.
ದಾದರ್ ಪಟ್ಟಣ ಯೋಜನೆಯಡಿಯಲ್ಲಿ ಅಭಿವೃದ್ಧಿ
ದಾದರ್ -ವಡಾಲ-ಮಾತುಂಗ-ಸಿಯಾನ್-ಮಾಹಿಂ ಪಟ್ಟಣ ಅಭಿವೃದ್ಧಿ ಯೋಜನೆಯಡಿಯಲ್ಲಿ 28 ಎಕರೆಯ ಶಿವಾಜಿ ಪಾರ್ಕ್ ಮೈದಾನವೂ ಸೇರಿದೆ. 1925-26ರಲ್ಲಿ ದಾದರ್ ವಿನ್ಯಾಸಗೊಂಡಿದ್ದು, 1927ರಲ್ಲಿ ಶಿವಾಜಿ ಪಾರ್ಕ್ ಎಂದು ಛತ್ರಪತಿ ಶಿವಾಜಿ ಹೆಸರನ್ನಿಡಲಾಯಿತು ಎಂದು ಪಾರ್ಕಿಗೆ ಹೊಂದಿಕೊಂಡಂತೆ 8 ದಶಕಗಳಿಂದ ವಾಸವಿರುವ ಅಶೋಕ್ ರಾವತ್ ಕುಟುಂಬ ಸ್ಮರಿಸಿದ್ದಾರೆ.
ಶಿವಾಜಿ ಪಾರ್ಕ್ ನ ಒಳಭಾಗದಲ್ಲಿ ಅನೇಕ ಸಂಸ್ಥೆಗಳಿವೆ. ವೃತ್ತಾಕಾರದ ಕಟ್ಟೆಯಿಂದ ಹೊರಗೆ ಹೋಗಲು ಅನೇಕ ಕಡೆ ದಾರಿಗಳಿವೆ. ಪೂರ್ವದಿಕ್ಕಿನಲ್ಲಿ ಪಾದಯಾತ್ರಿಗಳಿಗಾಗಿ ಪುಟ್ಟ ದಾರಿ ಇದೆ. ಶಿವಾಜಿ ಪಾರ್ಕ್ ಪ್ರಮುಖದ್ವಾರದಲ್ಲಿ,' ಮೀನಾತಾಯಿ' ಯವರ ಪುಥಳಿ ಇದೆ. ಮೊದಲು ಈ ಜಾಗದಲ್ಲಿ 'ರಾಮ್ ಗಣೇಶ್ ಗಡ್ಕರಿ,' ಯವರ ಪುತ್ಥಳಿ ಇತ್ತು. ಇದು, ಮುಂಬಯಿನ ಹೆಚ್ಚು ಮರಾಠಿ ಜನ ವಾಸಿದುವ ಸ್ಥಳ. 1900ರಷ್ಟು ಹಳೆಯ ಕಟ್ಟಡಗಳಿವೆ.
ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ಪಾರ್ಕ್
ಶಿವಾಜಿ ಪಾರ್ಕ್ ಹಲವಾರು ಸಂಘಟನೆಗಳಿಗೆ ಜನಮತವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಇದೇ ಜಾಗದಲ್ಲಿ ಸ್ವಾತಂತ್ರ್ಯ ಚಳವಳಿಗಾರರು ಭಾಷಣಮಾಡುತ್ತಿದ್ದರು. 'ಶ್ರೀಮತಿ, ಇಂದಿರಾಗಾಂಧಿ', 'ಮೊರಾರ್ಜಿದೇಸಾಯಿ', 'ಯಶವಂತರಾವ್ ಚವ್ಹಾಣ್', 'ವಸಂತರಾವ್ ನಾಯಕ್', 'ಬಾಳ್ ಠಾಕ್ರೆ', 'ವಾಜಪಾಯಿ', 'ಜಗನ್ನಾಥರಾವ್ ಜೋಶಿ', 'ಎಸ್. ಎ. ಡಾಂಗೆ', 'ಜಾರ್ಜ್ ಫರ್ನಾಂಡೀಸ್', ಮುಂತಾದ ರಾಷ್ಟ್ರನಾಯಕರು ಜನರನ್ನುದ್ದೇಶಿಸಿ ಮಾತಾಡಿದ್ದರು. ಸ್ವಾತಂತ್ರ್ಯ ಬಂದನಂತರ ಭಾಷೆಯ ಆಧಾರದಮೇಲೆ ರಾಷ್ಟ್ರವನ್ನು ವಿಭಜಿಸಿದಾಗ, ಮಹಾರಾಷ್ಟ್ರದಲ್ಲಿ ಚಳವಳಿ ನಡೆದಿತ್ತು.
ಮಹಾರಾಷ್ಟ್ರ ನಿರ್ಮಾಣದಲ್ಲಿ ಪಾಲು
ಈಗಿನ ಮಹಾರಾಷ್ಟ್ರ ರಾಜ್ಯ, 1960 ರಲ್ಲಿ ನಿರ್ಮಾಣವಾಯಿತು. ಆಗಿನ ಕಾಲದ ಸುಪ್ರಸಿದ್ಧ, ಕವಿ, ನಾಟಕಕಾರ, ಪತ್ರಿಕೋದ್ಯಮಿ, ಸಾಮಾಜಿಕ ಕಾರ್ಯಕರ್ತ, "ಆಚಾರ್ಯ ಪ್ರಹ್ಲಾದ ಕೇಶವ್ ಅತ್ರೆ", ಯವರು ಒಂದು ಆಂದೋಲನವನ್ನು ನಡೆಸಿದರು. ಅವರು ಶಿವಾಜಿಪಾರ್ಕ್ ನ ಅಂಗಳದಿಂದ ಲಕ್ಷಾಂತರ ಜನರನ್ನು ಸಂಬೋಧಿಸಿ ಭಾಷಣ ಮಾಡಿದ್ದರು. 'ಲಾರ್ಡ್ ಆಫ್ ಶಿವಾಜಿ ಪಾರ್ಕ್' ಎಂದು ಕರೆಯಲ್ಪಟ್ಟಿದ್ದರು. 1965 ರ ಪಾಕಿಸ್ತಾನ್ ಮೇಲಿನ ನಮ್ಮ ವಿಜಯೋತ್ಸವವನ್ನು ಇಲ್ಲಿ ಸಂತಸದಿಂದ ನೆರವೇರಿಸಲಾಯಿತು. 'ಲಾಲ್ ಬಹಾದ್ದೂರ್ ಶಾಸ್ತ್ರಿ', ಮತ್ತು 'ಯಶವಂತ್ ರಾವ್ ಚೌಹಾನ್', ವಿಜಯಸಭೆಯನ್ನು ಉದ್ದೇಶಿಸಿ ಮಾತಾಡಿದ್ದರು.
ಕ್ರೀಡಾ ತಾಣವೂ ಹೌದು
ಇಲ್ಲಿ ವಾಸಿಸುವರು, ಕಲೆ, ಸಾಹಿತ್ಯ, ನಾಟಕ, ಕ್ರಿಕೆಟ್ ಆಟಗಾರರು, ವಾಣಿಜ್ಯವಲಯದಲ್ಲಿ ಮಂಚೂಣಿಯಲ್ಲಿರುವವರು ಹೆಚ್ಚಾಗಿ ಇದ್ದಾರೆ. ಕ್ರಿಕೆಟ್ ಗೆ ಆದ್ಯತೆಯಿಂದಿನ ದಿನಗಳಲ್ಲಿ, ಹಲವಾರು ಹೆಸರುವಾಸಿಯಾದ ಕ್ರಿಕೆಟ್ ಆಟಗಾರರು, ಶಿವಾಜಿ ಪಾರ್ಕ್, ಕ್ರಿಕೆಟ್ ಅಕ್ಯಾಡಮಿಗೆ ಸ್ಪೂರ್ತಿ ನೀಡಲು ಆಗಾಗ ಬರುತ್ತಾರೆ. ಅವರೆಲ್ಲಾ ಹತ್ತಿರದಲ್ಲೇ ವಾಸ್ತ್ಯವ್ಯಹೂಡಿದ್ದಾರೆ.
ರಮಾಕಾಂತ್ ಅಚ್ರೇಕರ್ ಅಕಾಡೆಮಿಯಿಂದ ಬಂದ ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ ಅಲ್ಲದೆ, ಗವಾಸ್ಕರ್, ಅಜಿತ್ ಅಗರ್ಕರ್, ಪ್ರವೀಣ್ ಆಮ್ರೆ, ಸಂಜಯ್ ಮಂಜ್ರೇಕರ್ ಅವರಿಗೂ ಶಿವಾಜಿ ಪಾರ್ಕ್ ನಂಟಿದೆ. ಕ್ರಿಕೆಟ್ ಅಲ್ಲದೆ, ಫುಟ್ಬಾಲ್, ಖೋ ಖೋ, ಮಲ್ಲಕಂಬ ಸೇರಿದಂತೆ ದೇಸಿ ಕ್ರೀಡೆಗಳಿಗೂ ಶಿವಾಜಿ ಪಾರ್ಕ್ ವೇದಿಕೆ ಒದಗಿಸಿದೆ.
ಶಿವಸೇನಾದ ರಾಜಕೀಯ ಜರ್ನಿಗೆ ಸಾಕ್ಷಿ
ಶಿವಾಜಿ ಪಾರ್ಕಿಗೆ ಹೊಂದಿಕೊಂಡಂತೆ ಶಿವಸೇನಾದ ಮುಖ್ಯ ಕಚೇರಿ ಶಿವ ಸೇನಾ ಭವನ ಇದೆ. ಸೇನಾ ಮುಖ್ಯಮಂತ್ರಿಯಾಗಿ ಮನೋಹರ್ ಜೋಶಿ ಪ್ರಮಾಣ ವಚನ ಸ್ವೀಕರಿಸಲು ಶಿವಾಜಿ ಪಾರ್ಕ್ ಸೂಕ್ತ ಎಂದು ಬಾಳಾಠಾಕ್ರೆ ಸೂಚಿಸಿದ್ದರು. ದಸರಾ ಮೇಳಾವ್, ಭಾರತೀಯ ಯುವ ಸೇನಾ ಕಾರ್ಯಕ್ರಮ, ಠಾಕ್ರೆ ಅಂತ್ಯ ಸಂಸ್ಕಾರ ಎಲ್ಲಕ್ಕೂ ಲಕ್ಷಾಂತರ ಮಂದಿ ಅಭಿಮಾನಿಗಳು ಶಿವಾಜಿಪಾರ್ಕ್ ನಲ್ಲಿ ಉಪಸ್ಥಿತರಿದ್ದರು. ಉದ್ಧವ್ ಅವರ ಕಸಿನ್ ರಾಜ್ ಠಾಕ್ರೆ ಅವರು ಮಹಾರಾಷ್ಟ್ರ ನವ ನಿರ್ಮಾಣ್ ಸೇನಾ ಸ್ಥಾಪನೆಗೂ ಇದೇ ಪಾರ್ಕ್ ಬೇಕಾಯಿತು.
ಕೇಶವ್ ಠಾಕ್ರೆ-ಸಾಮಾಜಿಕ ಕಾರ್ಯಕರ್ತ ಪ್ರಬೋಧಂಕರ್- ಬಾಳಾಸಾಹೇಬ್ ಠಾಕ್ರೆ- ಉದ್ಧವ್ ಠಾಕ್ರೆ- ರಾಜ್ ಠಾಕ್ರೆ ಹಾಗೂ ಹೊಸ ಪೀಳಿಗೆಯ ಆದಿತ್ಯ ಹೀಗೆ ಠಾಕ್ರೆ ಕುಟುಂಬಕ್ಕೂ ಶಿವಾಜಿ ಪಾರ್ಕಿಗೂ ಹತ್ತಿರದ ನಂಟಿದೆ. ಕಾಟೂರ್ನಿಸ್ಟ್ ಆಗಿ ಬಾಳಾ ಠಾಕ್ರೆ ಮಾರ್ಮಿಕ್ ಆರಂಭಿಸಿದ್ದು, ರಾಜ್ ಠಾಕ್ರೆ ತಂದೆ ಶ್ರೀಕಾಂತ್ ನಿವಾಸ ಕೂಡಾ ದಾದರ್ ನಲ್ಲಿತ್ತು. ಇನ್ನೂ ಒಂದು ಚುನಾವಣೆ ಎದುರಿಸದ ಉದ್ಧವ್ ಅವರು ಈಗ ಶಿವಾಜಿ ಪಾರ್ಕ್ ಒಳಗೊಂಡಿರುವ ಮಾಹಿಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ.