ನೋಟು ರದ್ದತಿ ಸಮರ್ಥಿಸಿಕೊಂಡಿದ್ದ ಶಕ್ತಿಕಾಂತ್ ದಾಸ್ ಆಯ್ಕೆ ಏಕೆ?
ನವದೆಹಲಿ, ಡಿಸೆಂಬರ್ 12: ಆರ್ ಬಿಐ ನೂತನ ಗವರ್ನರ್ ಆಗಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಶಕ್ತಿಕಾಂತ ದಾಸ ಅವರನ್ನು ನೇಮಿಸಿರುವುದು ಭಾರತೀಯ ಆರ್ಥಿಕತೆಯನ್ನು ಭಾರಿ ಅಪಾಯಕ್ಕೆ ನೂಕಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೇಂದ್ರ ಹಣಕಾಸು ವ್ಯವಹಾರಗಳ ಮಾಜಿ ಕಾರ್ಯದರ್ಶಿ ಮತ್ತು 15ನೇ ಹಣಕಾಸು ಆಯೋಗದ ಹಾಲಿ ಸದಸ್ಯರಾಗಿರುವ ದಾಸ್, 2016ರ ನವೆಂಬರ್ನಲ್ಲಿ ಅಪನಗದೀಕರಣದ ಬಳಿಕ ಉಂಟಾದ ಸಂಕಟದ ಸಂದರ್ಭದಲ್ಲಿ ಎರಡು ಭಾರಿ ಸುದ್ದಿಗೋಷ್ಠಿ ನಡೆಸುವ ಮೂಲಕ ಅವರು ಭಾರತೀಯರಿಗೆ ಪರಿಚಿತರು.
ಆರ್ಬಿಐ ಗವರ್ನರ್ ದಾಸ್ ಆಯ್ಕೆಗೆ ಸುಬ್ರಮಣಿಯನ್ ಸ್ವಾಮಿ ವಿರೋಧ, ಮೋದಿಗೆ ಪತ್ರ
ಈ ವೇಳೆ ಅವರು ಸರ್ಕಾರವು 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ್ದನ್ನು ಸಮರ್ಥಿಸಿಕೊಂಡಿದ್ದರು.
ಕಪ್ಪುಹಣವನ್ನು ನಿಯಂತ್ರಿಸಲು, ನಕಲಿ ನೋಟುಗಳ ಹಾವಳಿ ತಡೆಯಲು, ಡಿಜಿಟಲ್ ಪಾವತಿಗೆ ಉತ್ತೇಜನ ನೀಡಲು ಮತ್ತು ಮನೆಯಲ್ಲಿ ಬಳಕೆಯಾಗದೆ ಉಳಿದ ಹಣದ ಸಂಗ್ರಹವನ್ನು ಬ್ಯಾಂಕುಗಳಿಗೆ ತರುವ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕುಗಳು ಸಾಲ ಪೂರೈಸಲು ಇದರಿಂದ ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕ
ಶಕ್ತಿಕಾಂತ ದಾಸ್ ಅವರು ಆರ್ ಬಿಐ ಮುಖ್ಯಸ್ಥರ ಸ್ಥಾನಕ್ಕೆ ಏಕೆ ಕೆಟ್ಟ ಆಯ್ಕೆ ಎಂಬುದರ ಬಗ್ಗೆ ಸ್ಕ್ರಾಲ್ ಡಾಟ್ ಇನ್ ವೆಬ್ಸೈಟ್ನಲ್ಲಿ ಪ್ರಕಟವಾದ ಅಭಿಪ್ರಾಯ ಬರಹದ ಸಾರ ಇಲ್ಲಿದೆ...
ಸರ್ಕಾರದ ನಿರ್ಧಾರಗಳ ಉದ್ಘೋಷಕ!
ನೋಟು ನಿಷೇಧದ ಬೆನ್ನಲ್ಲೇ ಹಣದ ಹರಿವನ್ನು ನಿಯಂತ್ರಿಸಲು ಸರ್ಕಾರ ತೆಗೆದುಕೊಂಡ ವಿವಿಧ ಕ್ರಮಗಳನ್ನು ದಾಸ್ ಅವರೇ ಪ್ರಕಟಿಸಿದ್ದರು.
ನಗದು ಹಣದ ಕೊರತೆಯಿಂದಾಗಿ ಬ್ಯಾಂಕುಗಳ ಮುಂದೆ ಉದ್ದನೆಯ ಸರದಿ ಸಾಲುಗಳಿದ್ದವು. ಅದಕ್ಕೆ ಕಾರಣ ದೈನಂದಿನ ವಿತ್ ಡ್ರಾ ಮಿತಿಯನ್ನು 4,500ದಿಂದ 2000 ರೂ.ಗೆ ಇಳಿಸಿದ್ದು. 2016ರ ಡಿಸೆಂಬರ್ 30ರವರೆಗೂ ಬ್ಯಾಂಕ್ ಕೌಂಟರ್ಗಳಲ್ಲಿ ಮಾತ್ರ ಹಳೆಯ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂಬ ಸರ್ಕಾರದ ನಿರ್ಧಾರವನ್ನು ಸಹ ದಾಸ್ ಅವರೇ ಪ್ರಕಟಿಸಿದ್ದರು.
ಸಂಸ್ಥೆಗೆ ಗೊತ್ತೇ ಇರಲಿಲ್ಲ!
ನೋಟುಗಳನ್ನು ವಿನಿಮಯ ಮಾಡಿಕೊಂಡ ಜನರ ಬೆರಳುಗಳಿಗೆ ಅಳಿಸಲು ಸಾಧ್ಯವಾಗದ ಶಾಯಿ ಗುರುತು ಹಾಕುವ ಕೇಂದ್ರದ ನಿರ್ಧಾರವನ್ನು ಕೂಡ ದಾಸ್ ಸಮರ್ಥಿಸಿಕೊಂಡಿದ್ದರು. ಹಣ ವಿನಿಮಯ ಮಾಡಿಕೊಳ್ಳಲು ಜನರು ಮತ್ತೆ ಮತ್ತೆ ಸರದಿಯಲ್ಲಿ ನಿಲ್ಲುತ್ತಾರೆ ಎನ್ನುವುದು ಅವರು ನೀಡಿದ ಹೇಳಿಕೆಯಾಗಿತ್ತು. ವಿಶೇಷವೆಂದರೆ ಈ ನಿರ್ಧಾರವನ್ನು ಈ ರೀತಿಯ ಅಳಿಸಲಾಗದ ಶಾಯಿಗಳನ್ನು ತಯಾರಿಸುವ ದೇಶದ ಏಕೈಕ ಉತ್ಪಾದನಾ ಸಂಸ್ಥೆಗೂ ಮಾಹಿತಿ ನೀಡದೆ ಪ್ರಕಟಿಸಲಾಗಿತ್ತು.
ಆರ್ಬಿಐ ಗವರ್ನರ್ ಆಗಿ ದಾಸ್ ನೇಮಕ: ಚಿದಂಬರಂ ವಿರೋಧ
ಹಣದ ನಿಯಮ ಸಡಿಲಿಕೆ
ಸಾಕ್ಷಿ ಸಹಿತ ಘಟನಾವಳಿಗಳ ಮಾಹಿತಿ ಒದಗಿಸಿದಾಗ ಮಾತ್ರ ಸರ್ಕಾರ ನೋಟು ನಿಷೇಧದ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುತ್ತಿತ್ತು. ಮುಂಗಾರು ಅವಧಿಯ ಬೆಳೆ ಕಟಾವಿನ ಸಂದರ್ಭದಲ್ಲಿ ರೈತರ ಬಳಿ ನಗದು ಹಣದ ಕೊರತೆ ತಲೆದೋರಿರುವುದು ಪತ್ರಿಕೆಗಳಲ್ಲಿ ವರದಿಯಾದ ಬಳಿಕ ಎಚ್ಚೆತ್ತುಕೊಂಡು ರೈತರು 25 ಸಾವಿರದವರೆಗೆ ಹಣ ಪಡೆದುಕೊಳ್ಳಬಹುದು ಎಂಬ ಸರ್ಕಾರದ ನಿರ್ಧಾರವನ್ನು ದಾಸ್ ಪ್ರಕಟಿಸಿದ್ದರು.
ಮದುವೆ ಸಿದ್ಧತೆ ನಡೆಸುತ್ತಿರುವ ಕುಟುಂಬಗಳು ಬ್ಯಾಂಕ್ ಮ್ಯಾನೇಜರ್ಗೆ ಮದುವೆ ಆಮಂತ್ರಣ ಪತ್ರಿಕೆಯನ್ನು ಸಾಕ್ಷಿಯಾಗಿ ನೀಡಿ 2.5 ಲಕ್ಷ ರೂ.ವರೆಗೆ ನಗದು ಪಡೆದುಕೊಳ್ಳಬಹುದು ಎಂದೂ ಇದೇ ಸಂದರ್ಭದಲ್ಲಿ ಅವರು ಘೋಷಿಸಿದ್ದರು.
ಕೆಟ್ಟ ಪರಿಣಾಮವಿಲ್ಲ
ಹೀಗೆ ನೋಟು ರದ್ದತಿ ಸಂದರ್ಭದಲ್ಲಿ ಸರ್ಕಾರ ತೆಗೆದುಕೊಂಡ ಎಲ್ಲ ನಿರ್ಧಾರಗಳನ್ನೂ ದಾಸ್ ಸಮರ್ಥಿಸಿಕೊಂಡಿದ್ದರು. ಮೂರು ತಿಂಗಳ ಬಳಿಕ 2017ರ ಫೆಬ್ರುವರಿಯಲ್ಲಿ ಅಪನಗದೀಕರಣವು ಕೃಷಿಯಂತಹ ಕ್ಷೇತ್ರಗಳ ಮೇಲೆ ಯಾವ ಕೆಟ್ಟ ಪರಿಣಾಮವನ್ನೂ ಬೀರಲಿಲ್ಲ ಎಂದು ಹೇಳಿಕೊಂಡಿದ್ದರು.
ಅಲ್ಲದೆ, ಯಾವುದೇ ಪರಿಣಾಮಗಳಿದ್ದರೂ ಅದು ಮುಂದಿನ ವರ್ಷ ಮುಂದುವರಿಯುವುದಿಲ್ಲ. ಈ ಹಿಂದಿನ ಎರಡು ಮೂರು ತಿಂಗಳು ಅದರ ಪರಿಣಾಮವಿತ್ತು. ಈಗ ಸಹಜ ಸ್ಥಿತಿಗೆ ಬಂದಿದೆ ಎಂದು ಹೇಳಿದ್ದರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕ
ಸಮರ್ಥನೆ ಈಡೇರಿಲ್ಲವಲ್ಲ
ನಾವು ಗಮನಿಸಿರುವಂತೆ ದಾಸ್ ಅವರ ಸಮರ್ಥನೆಯ ಯಾವ ಅಂಶಗಳೂ ವಾಸ್ತವದಲ್ಲಿ ಈಡೇರಿಕೆಯಾಗಿಲ್ಲ. ಚಿನ್ನ, ಭೂಮಿ, ಬೇನಾಮಿ ಆಸ್ತಿ ಮತ್ತು ವಿದೇಶಿ ಬ್ಯಾಂಕುಗಳಲ್ಲಿ ಇರುವ ಕಪ್ಪುಹಣ ಇದಾವುದನ್ನೂ ಅಪನಗದೀಕರಣ ಮುಟ್ಟಿಯೇ ಇಲ್ಲ. ನಕಲಿ ನೋಟುಗಳು ಆರ್ಥಿಕತೆಯ ಒಳಗೆ ಮತ್ತೆ ನುಸುಳಿದವು. ಡಿಜಿಟಲ್ ಪಾವತಿ ಪ್ರಮಾಣ ಕೂಡ ಅಪನಗದೀಕರಣ ಪೂರ್ವದಲ್ಲಿ ಇದ್ದ ಸ್ಥಿತಿಗೇ ನಿಧಾನವಾಗಿ ಮರಳುತ್ತಿದೆ.
ವರ್ಷಗಟ್ಟಲೆ ಕಷ್ಟಪಟ್ಟು ಸಂಪಾದಿಸಿ ಕೂಡಿಟ್ಟ ಹಣವನ್ನು ಬ್ಯಾಂಕ್ನಲ್ಲಿ ಇರಿಸಬೇಕಾದ ಸ್ಥಿತಿಗೆ ತಲುಪಿದ ಕುಟುಂಬಗಳು, ತಮ್ಮ ನಗದು ಹಣದ ಸಂಗ್ರಹವನ್ನು ಮತ್ತೆ ಸ್ಥಾಪಿಸಲು ಹೆಣಗಾಡಬೇಕಾಯಿತು.
ಒಂದೇ ವ್ಯತ್ಯಾಸವೆಂದರೆ, ಬ್ಯಾಂಕಿಂಗ್ ವಲಯದ ಬಗ್ಗೆ ನಂಬಿಕೆ ಕಳೆದುಕೊಂಡ ಜನರು, ತಮ್ಮ ಬಳಿ ಹಿಂದೆಂದಿಗಿಂತಲೂ ಅಧಿಕ ನಗದು ಸಂಗ್ರಹವನ್ನು ಇರಿಸಿಕೊಳ್ಳುತ್ತಿದ್ದಾರೆ!
ಕೃಷಿ ಮೇಲೆ ಪರಿಣಾಮ
ಅಪನಗದೀಕರಣದಿಂದ ಕೃಷಿಗೆ ನಿಜಕ್ಕೂ ಹೊಡೆತ ಬಿದ್ದಿದೆ. ನಿಷೇಧದ ಪರಿಣಾಮಗಳು ಇಂದಿಗೂ ವಲಯವನ್ನು ಬಾಧಿಸುತ್ತಿದೆ. ಭಾರತದ ಅನೌಪಚಾರಿಕ ಆರ್ಥಿಕತೆಯಲ್ಲಿನ ಉದ್ಯಮಿಗಳು ಮತ್ತು ಸ್ವ ಉದ್ಯೋಗಿಗಳ ಗಳಿಕೆ ಅಪನಗದೀಕರಣದ ಹಿಂದಿನ ಸ್ಥಿತಿಗೆ ಇನ್ನೂ ತಲುಪಿಲ್ಲ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢಗಳ ವಿಧಾನಸಭೆ ಚುನಾವಣೆಗಳಲ್ಲಿ ಮತದಾರರು ಬಿಜೆಪಿಯನ್ನು ಸೋಲಿಸಲು ಇದೂ ಕಂಡು ಕಾರಣ. ಈ ಜನರು ಆರ್ಥಿಕವಾಗಿ ಅಪನಗದೀಕರಣಕ್ಕೆ ಹಿಂದೆ ಇದ್ದ ಸ್ಥಿತಿಗಿಂತಲೂ ಹೀನಾಯ ಸ್ಥಿತಿಯಲ್ಲಿದ್ದಾರೆ.
ದಾಸ್ ಗವರ್ನರ್ ಆಗುವುದು ಬೇಡ
ಶಕ್ತಿಕಾಂತ ದಾಸ್ ಅವರು ಆರ್ ಬಿಐ ಗವರ್ನರ್ ಆಗಬಾರದು ಎನ್ನುವುದಕ್ಕೆ ಅಪನಗದೀಕರಣವೇ ಕಾರಣ. ಅವರನ್ನು ವಿರೋಧಿಸಲು ಇನ್ನೂ ಎರಡು ಕಾರಣಗಳಿವೆ. ಭಾರತದ ಆರ್ಥಿಕತೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಅವರಿಗೆ ಅರ್ಥವಾಗಿಲ್ಲ ಮತ್ತು ಅವರಿಗೆ ಅದು ಅರ್ಥವಾದರೂ, ಸರ್ಕಾರ ತಮಗೆ ಹೇಳಿದ್ದನ್ನು ಮಾತ್ರ ಪಾಲಿಸಲು ಅವರು ಆಸಕ್ತಿ ತೋರುತ್ತಾರೆ.