ರಂಗಭೂಮಿಯನ್ನೇ ಬದುಕಿದ ನಿರ್ಭೀತ ವ್ಯಕ್ತಿತ್ವ-ಮಾಸ್ಟರ್ ಹಿರಣ್ಣಯ್ಯ
Recommended Video
ನಾಟಕ ಅಂದ್ರೆ ಯಾರೋ ಬರೆದಿದ್ದನ್ನು ಉರುಹೊಡೆದು ವೇದಿಕೆ ಮೇಲೆ ನಿಂತು ಉಚ್ಚರಿಸೋದಲ್ಲ, ಆಯಾ ಕಾಲಘಟ್ಟದ ರಾಜಕೀಯ, ಸಾಮಾಜಿಕ ಸ್ಥಿತ್ಯಂತರಗಳು ನಟನ ಬಾಯಿಂದ ಸುಲಲಿತವಾಗಿ ಅವೇ ಹೊರಬರಬೇಕು. ನಾಟಕದ ಸಂದರ್ಭಗಳನ್ನು ನೈಜ ಬದುಕಿಗೆ ತಾಳೆ ಮಾಡುವಂಥ ಸನ್ನಿವೇಶವನ್ನು ನಟ ಸೃಷ್ಟಿಸಬೇಕು... ಆ ಮಾತಿಗೆ ನಿದರ್ಶನ ಎಂಬಂತಿದ್ದವರು ಮಾಸ್ಟರ್ ಹಿರಣ್ಣಯ್ಯ.
ರಂಗಭೂಮಿಗೆ ಹೊಸ ದಿಶೆಯನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಟಿವಿ, ಸಿನಿಮಾ, ತರಹೇವಾರಿ ಧಾರಾವಾಹಿಗಳು ಆರಂಭವಾದ ಕಾಲದಲ್ಲೂ ನಾಟಕದ ಬಗೆಗಿನ ಹುಚ್ಚನ್ನು ಉಳಿಸಿದ್ದು ನಿಸ್ಸಂದೇಹವಾಗಿ ಹಿರಣ್ಣಯ್ಯ ಅವರು.
ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ನಿಧನ
ವ್ಯಂಗ್ಯ ಅವರ ಪ್ರತಿ ಮಾತಿನ ತುದಿಯಲ್ಲೂ ಇಣುಕಿದರೂ, ಆ ವ್ಯಂಗ್ಯದಲ್ಲಿ ಸಾಮಾಜಿಕ, ರಾಜಕೀಯ ಅಧಃಪತನದ ಬಗೆಗಿನ ಗಾಢ ವಿಷಾದ ವ್ಯಕ್ತವಾಗಿದೆ. ಹಾಸ್ಯಮಿಶ್ರಿತ ವ್ಯಂಗ್ಯ, ನಿರ್ಭೀತ ಮಾತುಗಳು ಅವರ ವ್ಯಕ್ತಿತ್ವಕ್ಕೆ ಒಂದು ತೂಕ ನೀಡಿವೆ.
ವಯೋಸಹಜ ಅನಾರೋಗ್ಯದ ಕಾರಣ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಹಿರಣ್ಣಯ್ಯ ಗುರುವಾರ ಬೆಳಿಗ್ಗೆ ನಿಧನರಾದರು. 85 ವರ್ಷ ವಯಸ್ಸಿನ ಅವರ ಅಗಲಿಕೆ ರಂಗಭೂಮಿ ಕ್ಷೇತ್ರದಲ್ಲಿ ನಿರ್ವಾತ ಸೃಷ್ಟಿಸಿದೆ. ಈ ಸಂದರ್ಭದಲ್ಲಿ ಅವರ ವ್ಯಕ್ತಿಚಿತ್ರದ ಮೆಲುಕು ಇಲ್ಲಿದೆ.
ನ್ಯೂಸ್ ಪೇಪರ್ ಮಾರಿ ವಿದ್ಯಾಭ್ಯಾಸ!
1934 ಫೆಬ್ರವರಿ 15 ರಂದು ಮೈಸೂರಿನಲ್ಲಿ ಜನಿಸಿದ ಹಿರಣ್ಣಯ್ಯ ಅವರ ತಂದೆ ಕೆ ಹಿರಣ್ಣಯ್ಯ, ತಾಯಿ ಶಾರದಮ್ಮ. ತಂದೆಯೂ ನಾಟಕಕಾರ, ಸಿನಿಮಾ ನಟ ಮತ್ತು ಬರಹಗಾರರಾಗಿದ್ದರಿಂದ ನಟನೆಯ ಕಲೆ ರಕ್ತದಲ್ಲೇ ಸಿದ್ಧಿಸಿತ್ತು. ಬನುಮಯ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಶಾರದಾ ಚಿಲಾಸ್ ಶಾಲೆಯಲ್ಲಿ ಇಂಟರ್ ಮೀಡಿಯೇಟ್ ಓದಿದ ಮಾಸ್ಟರ್ ಹಿರಣ್ಣಯ್ಯ ಅವರ ಬಾಲ್ಯ ಎಲ್ಲರಂತಿರಲಿಲ್ಲ. ನ್ಯೂಸ್ ಪೇಪರ್ ಮಾರಿ ಬಂದ ಹಣದಲ್ಲಿ ಅವರು ವಿದ್ಯಾಭ್ಯಾಸ ಪೂರೈಸಿದರು. ಅದೇ ಸಂದರ್ಭದಲ್ಲಿ ನಾಟಕದಲ್ಲೂ ತಮ್ಮನ್ನು ತೊಡಗಿಸಿಕೊಂಡರು.
ಬದುಕಿಗೆ ಬೇಕಷ್ಟು ಲಂಚ ತಿಂದ್ರೆ ತಪ್ಪೇನಿಲ್ಲ : ಮಾಸ್ಟರ್ ಹಿರಣ್ಣಯ್ಯ ಸಂದರ್ಶನ
ರಂಗಭೂಮಿ ಪ್ರವೇಶ
ತಂದೆಯವರ ಮರಣಾನಂತರ ಅವರು ಆರಂಭಿಸಿದ್ದ, 'ಕೆ ಹಿರಣ್ಣಯ್ಯ ಮಿತ್ರ ಮಂಡಳಿ'ಯ ಆಡಳಿತವನ್ನು ನೋಡಿಕೊಳ್ಳುವುದಕ್ಕೆ ಮಾಸ್ಟರ್ ಹಿರಣ್ಣಯ್ಯ ಮುಂದಾದರು. ನಂತರ ಇದೇ ರಂಗಭೂಮಿ ಕಂಪನಿಯನ್ನು ಚೆನ್ನಾಗಿ ಬೆಳೆಸಿ, ನಟರಾಗಿ, ನಿರ್ದೇಶಕರಾಗಿ ಪ್ರಸಿದ್ಧಿ ಪಡೆದರು.
ರಂಗಲೋಕದ ಹಿರಿಯಣ್ಣ: ಮಾಸ್ಟರ್ ಹಿರಣ್ಣಯ್ಯ
30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ
ಕೇವಲ ನಾಟಕ ಮಾತ್ರವಲ್ಲ, ಬದಲಾದ ಕಾಲಘಟ್ಟದಲ್ಲಿ ಸಿನಿಮಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದರು ಹಿರಣ್ಣಯ್ಯ. ಸುಮಾರು ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದರು. ಶಾಂತಿ ನಿವಾಸ, ಯಕ್ಷ, ನಿರಂತರ, ಬಾಂಬುಗಳು ಸಾರ್ ಬಾಂಬುಗಳು, ಈ ಸಂಭಾಷಣೆ, ಲಂಚ ಸಾಮ್ರಾಜ್ಯ, ಆಪರೇಶನ್ ಅಂತ, ಗಜ, ಹುಡುಗೀರು ಸಾರ್ ಹುಡುಗೀರು ಅವರುಗಳಲ್ಲಿ ಪ್ರಮುಖ ಚಿತ್ರಗಳು.
ರಂಗಭೂಮಿಯಲ್ಲಿ ಅಚ್ಚಳಿಯದ ಹೆಜ್ಜೆಗುರುತು
ಲಂಚಾವತಾರ, ಡಬಲ್ ತಾಳಿ, ಕನ್ಯಾ ದಹನ, ಸನ್ಯಾಸಿ ಸಂಸಾರ, ಚಮಚಾವತಾರ, ಹಾಸ್ಯದಲ್ಲಿ ಉಲ್ಟಾ ಪಲ್ಟಾ, ಕಪಿಲ್ ಮುಷ್ಠಿ, ನಡುಬೀದಿ ನಾರಾಯಣ, ಭ್ರಷ್ಟಾಚಾರ, ಅನಾಚಾರ ಮುಂತಾದವು ಅವರ ಪ್ರಮುಖ ನಾಟಕಗಳು. ಅವರ ಲಂಚಾವತಾರ ನಾಟಕವಂತೂ ಅಮೆರಿಕ, ಆಸ್ಟ್ರೇಲಿಯಾ, ಸಿಂಗಪುರ, ಇಂಗ್ಲೆಂಡ್ ಸೇರಿದಮತೆ ಹೊರ ದೇಶಗಳಲ್ಲೂ ಪ್ರದರ್ಶನ ಕಂಡಿದ್ದು, ಸುಮಾರು 11,000 ಪ್ರದರ್ಶನಗಳನ್ನು ಕಂಡ ದಾಖಲೆ ಬರೆದಿದೆ.
ಪ್ರಶಸ್ತಿಗಳು
ನರ್ನಾಟಕ ರಾಜ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ನಾಟಕ ಅಕಾಡಮಿ ಪ್ರಶಸ್ತಿ, ಆಲ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿವೆ.