ರಕ್ತದಲ್ಲಿ ಬರೆದು ಕೊಡುತ್ತೇನೆಂದು ಯಡಿಯೂರಪ್ಪ ಮಾತಿಗೆ ತಪ್ಪಿದರು: ಬಿಎಸ್ವೈ ಪರಮಾಪ್ತ ಬೇಸರ
ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಲು ಪ್ರಮುಖ ಕಾರಣೀಭೂತರಾದ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಗ್ಗೆ ಪಕ್ಷಾತೀತವಾಗಿ ವಿರೋಧ ಕಂಡು ಬಂದಿದ್ದು ಗೊತ್ತಿರುವ ವಿಚಾರ. ಹಾಲೀ ಸದನದ ಅಧಿವೇಶನದಲ್ಲೂ ಕಾಂಗ್ರೆಸ್ ಮುಖಂಡರು ಬಿಜೆಪಿ ನಾಯಕರನ್ನು ಛೇಡಿಸಿದ್ದುಂಟು.
ಬಿಜೆಪಿಯಿಂದ ಸಿಡಿದು ಯಡಿಯೂರಪ್ಪನವರು ಕೆಜೆಪಿ ಕಟ್ಟಿದ ವೇಳೆ ಪಕ್ಷದ ಉಪಾಧ್ಯಕ್ಷರಾಗಿದ್ದವರು ಮತ್ತು ಅವರ ಅತ್ಯಂತ ಪರಮಾಪ್ತ ವಲಯದಲ್ಲಿದ್ದವರು ಆರ್.ಎಂ.ಮಂಜುನಾಥ ಗೌಡ ಅವರು. ಈಗ ಮಂಜುನಾಥ ಗೌಡ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ.
ಬಿಜೆಪಿ ಕಾರ್ಯಕಾರಿಣಿಯ 1ದಿನದ ಮುನ್ನ ಬಿಎಸ್ವೈ ರವಾನಿಸಿದ ಸಂದೇಶ
'ಒನ್ ಇಂಡಿಯಾ' ಜೊತೆಗಿನ ಫೇಸ್ ಬುಕ್ ಸಂವಾದದ 95ನೇ ಸರಣಿಯಲ್ಲಿ ಮಾತನಾಡುತ್ತಿದ್ದ ಮಂಜುನಾಥ ಗೌಡ ಅವರು, "ಕೆಜೆಪಿ ಕಟ್ಟಿದ ಸಂದರ್ಭದಲ್ಲಿ ಅವರ ಒತ್ತಾಯದ ಮೇರೆಗೆ ನಾನು ಆ ಪಕ್ಷ ಸೇರಿದೆ. ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳಿದ್ದ ಯಡಿಯೂರಪ್ಪನವರು ಮಾತಿಗೆ ತಪ್ಪಿದರು" ಎಂದು ಮಂಜುನಾಥ ಗೌಡ ಬೇಸರ ವ್ಯಕ್ತ ಪಡಿಸಿದ್ದಾರೆ.
ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ಶಿವಮೊಗ್ಗ ರಾಜಕಾರಣದಲ್ಲಿ ಪ್ರಭಾವೀ ಮುಖಂಡರಾಗಿರುವ ಮಂಜುನಾಥ ಗೌಡ ಅವರು, ಯಡಿಯೂರಪ್ಪನವರಿಂದ ರಾಜೀನಾಮೆ ಪಡೆದುಕೊಂಡಿದ್ದು, ಶಿವಮೊಗ್ಗ ರಾಜಕಾರಣ, ಮುಂತಾದ ವಿಚಾರದ ಬಗ್ಗೆ ಸಂವಾದದಲ್ಲಿ ಮಾತನಾಡಿದ್ದಾರೆ. ಆಯ್ದಭಾಗ ಇಂತಿದೆ:
ಎರಡನೇ ಅಲೆಯನ್ನು ಶಿವಮೊಗ್ಗ ಜಿಲ್ಲಾಡಳಿತ ಸಮರ್ಥವಾಗಿ ನಿಭಾಯಿಸಿದೆಯಾ?
ಪ್ರ: ಕೊರೊನಾ ಎರಡನೇ ಅಲೆಯನ್ನು ಶಿವಮೊಗ್ಗ ಜಿಲ್ಲಾಡಳಿತ ಸಮರ್ಥವಾಗಿ ನಿಭಾಯಿಸಿದೆಯಾ. ತೀರ್ಥಹಳ್ಳಿಯಲ್ಲಿ ಲಸಿಕೆ ಸಮಸ್ಯೆ ಎದುರಾಗಿದೆಯಾ?
ಮಂಜುನಾಥ ಗೌಡ: ಗ್ರಾಮೀಣ ಪ್ರದೇಶಗಳಲ್ಲಿ ಬಹಳ ನಿಧಾನವಾಗಿ ಲಸಿಕೆ ವಿತರಿಸಲಾಯಿತು. ಪಟ್ಟಣ ಭಾಗದಲ್ಲಿ ವಾರಕ್ಕೆ 150-200 ಜನರಿಗೆ ಲಸಿಕೆ ವ್ಯವಸ್ಥೆಯನ್ನು ಮಾಡಿದ್ದರು. ಈಗ ಖಾಸಗಿ ಆಸ್ಪತ್ರೆಯಲ್ಲಿ ಹಣ ತೆಗೆದುಕೊಂಡು ಲಸಿಕೆ ಕೊಡುತ್ತಿದ್ದಾರೆ. ಫ್ರೀಯಾಗಿ ಲಸಿಕೆ ಕೊಡುತ್ತೇವೆ ಎಂದು ಸರಕಾರ ಪ್ರಚಾರ ಮಾಡಿತ್ತು. ಆದರೆ, ಅದು ಜಿಲ್ಲೆಯಲ್ಲಿ ಆಗುತ್ತಿಲ್ಲ. ಉಡುಪಿ- ಮಂಗಳೂರು ಬಾರ್ಡರ್ ನಲ್ಲಿ ತೀರ್ಥಹಳ್ಳಿ ಇರುವುದರಿಂದ ಕೇಸುಗಳು ಹೆಚ್ಚಾಗುತ್ತಿವೆ. ಒಟ್ಟಿನಲ್ಲಿ ವ್ಯಾಕ್ಸಿನೇಶನ್ ನಿಧಾನವಾಗಿ ಆಗುತ್ತಿದೆ.ಕಿಮ್ಮನೆ ರತ್ನಾಕರ್ ಅವರು ಜನತಾದಳದಿಂದ ಕಾಂಗ್ರೆಸ್ಸಿಗೆ ಬಂದರು
ಪ್ರ: ತೀರ್ಥಹಳ್ಳಿಯಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರು ಇದ್ದರೂ, ನೀವು ಆ ಪಕ್ಷ ಸೇರಿದ್ದು ಯಾವ ಉದ್ದೇಶಕ್ಕಾಗಿ?
ಮಂಜುನಾಥ ಗೌಡ: ಎರಡು ಉದ್ದೇಶಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದೇನೆ. ನಮ್ಮ ಪಕ್ಷದಲ್ಲಿನ ಮತ ವಿಭಜನೆಯಿಂದಾಗಿ ಬಿಜೆಪಿಗೆ ಇಲ್ಲಿ ಅನುಕೂಲವಾಗಿದೆ. 2002ರಲ್ಲಿ ಬಂಗಾರಪ್ಪ ಮತ್ತು ಡಿ.ಕೆ.ಶಿವಕುಮಾರ್ ಅವರ ಸೂಚನೆಯಂತೆ ಇಲ್ಲಿ ಪಕ್ಷವನ್ನು ಮುನ್ನಡೆಸಿದ್ದೆ. ವಿಧಾನಸಭಾ ಚುನಾವಣೆ ಹತ್ತಿರವಿದ್ದಾಗ ಬಂಗಾರಪ್ಪನವರು ಬಿಜೆಪಿಗೆ ಹೋದರು, ನಾನು ಕಾಂಗ್ರೆಸ್ಸಿನಲ್ಲೇ ಇದ್ದೆ. ಆ ಸಮಯದಲ್ಲಿ ಕಿಮ್ಮನೆ ರತ್ನಾಕರ್ ಅವರು ದಳದಿಂದ ಕಾಂಗ್ರೆಸ್ಸಿಗೆ ಬಂದರು. ಬದಲಾದ ರಾಜಕೀಯದಲ್ಲಿ ಬಿಜೆಪಿಗೆ ಹೋದೆ, ಅಲ್ಲಿಂದ ಕೆಜೆಪಿಯಿಂದ ಸ್ಪರ್ಧಿಸಿದೆ, ಕನಿಷ್ಠ ಮತಗಳ ಅಂತರದಿಂದ ಸೋತೆ. ಅದಾದ ನಂತರ ಡಿಕೆಶಿಯವರ ಸೂಚನೆಯಂತೆ ಕಾಂಗೆಸ್ಸಿಗೆ ಬಂದೆ.
ಬಿಎಸ್ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ರೀತಿಗೆ ನನಗೆ ಬೇಸರವಿದೆ
ಪ್ರ: ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಗ್ಗೆ?
ಮಂಜುನಾಥ ಗೌಡ: ನನಗೆ ಬಹಳ ನೋವಿದೆ, ಯಾಕೆಂದರೆ ಬಿಜೆಪಿ ಮತ್ತು ಕೆಜೆಪಿಯಲ್ಲಿ ನಾನು ಅವರ ಜೊತೆಗೆ ಕೆಲಸ ಮಾಡಿದವನು. ಚುನಾವಣೆಗೆ ನಾನು ಸ್ಪರ್ಧಿಸಿದ್ದೇ ಅವರ ಸೂಚನೆಯ ಮೇರೆಗೆ. ಯಡಿಯೂರಪ್ಪನವರು ಶಿವಮೊಗ್ಗ ಜಿಲ್ಲೆಗೆ ಕೆಲಸ ಮಾಡಿದ್ದಾರೆ, ಪಕ್ಷಾತೀತವಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಕೆಜೆಪಿಗೆ ಬರಲೇ ಬೇಕೆಂದು ಒತ್ತಾಯ ಮಾಡಿದರು. ವಾಪಸ್ ನೀವು ಬಿಜೆಪಿಗೆ ಹೋಗುವುದಾದರೆ ನಾನು ಬರುವುದಿಲ್ಲ ಎಂದು ಬಿಎಸ್ವೈಗೆ ಹೇಳಿದ್ದೆ. ರಕ್ತದಲ್ಲಿ ಬರೆದುಕೊಡುತ್ತೇನೆ ನಾನು ಬಿಜೆಪಿಗೆ ಹೋಗುವುದಿಲ್ಲ ಎಂದು ಮಾತು ಕೊಟ್ಟಿದ್ದರು. ಆದರೆ, ಅವರು ಬಿಜೆಪಿಗೆ ಹೋದರು. ವೈಯಕ್ತಿಕವಾಗಿ ಹೇಳುವುದಾದರೆ, ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ರೀತಿಗೆ ನನಗೆ ಬೇಸರವಿದೆ.
ಶಿವಮೊಗ್ಗದಲ್ಲಿ ಸಕ್ರಿಯ ರಾಜಕಾರಣದಲ್ಲಿ ಯಡಿಯೂರಪ್ಪ ಇಲ್ಲದಿದ್ದರೆ
ಪ್ರ: ಸಕ್ರಿಯ ರಾಜಕಾರಣದಲ್ಲಿ ಯಡಿಯೂರಪ್ಪ ಇಲ್ಲದಿದ್ದರೆ, ಶಿವಮೊಗ್ಗದಲ್ಲಿ ಬಿಜೆಪಿಯ ಶಕ್ತಿ ಹೇಗಿರುತ್ತದೆ?
ಮಂಜುನಾಥ ಗೌಡ: ಡಿ.ಕೆ.ಶಿವಕುಮಾರ್ ಅವರು ಬೇರು ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಯಡಿಯೂರಪ್ಪನವರಿಗೆ ಎಲ್ಲಾ ವರ್ಗದ ಜನರು ಬೆಂಬಲ ನೀಡಿದ್ದರು. ಅವರ ನೇತೃತ್ವ ಇಲ್ಲದ ಬಿಜೆಪಿ ಇದು ಮೊದಲನೇ ಬಾರಿ. ಆ ಕಾರಣಕ್ಕಾಗಿ, ಇದು ಕಾಂಗ್ರೆಸ್ಸಿಗೆ ಅನುಕೂಲವಾಗಲಿದೆ, ಜೊತೆಗೆ ಸಂಘಟನೆಯಲ್ಲೂ ಬಿಜೆಪಿ ಹಿಂದಿದೆ.