ಪ್ರತಿಷ್ಠಿತ ನ್ಯಾಯವಾದಿ, ರಾಜಕಾರಣಿ ರಾಮ್ ಜೇಠ್ಮಲಾನಿ ವ್ಯಕ್ತಿಚಿತ್ರ
ಹೈ ಪ್ರೊಫೈಲ್ ಪ್ರಕರಣಗಳನ್ನು ಕೈಗೆತ್ತಿಕೊಂಡು ಸಮರ್ಥವಾಗಿ ವಾದ ಮಂಡಿಸಿ, ಯಶಸ್ಸು ಕಾಣುತ್ತಿದ್ದ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ(95) ಭಾನುವಾರ ಬೆಳಗ್ಗೆ ತಮ್ಮ ದೆಹಲಿ ನಿವಾಸದಲ್ಲಿ ನಿಧನರಾಗಿದ್ದಾರೆ.
ಸಮಸ್ಯೆಯ ಸುಳಿಯಲ್ಲಿ ಸಿಲುಕಿದ ಹತ್ತು ಹಲವು ರಾಜಕಾರಣಿಗಳು, ಉದ್ಯಮಿಗಳು, ಖ್ಯಾತನಾಮರ ನೆಚ್ಚಿನ ಆಯ್ಕೆಯಾಗಿದ್ದ ಭಾರತದ ಪ್ರತಿಷ್ಠಿತ ನ್ಯಾಯವಾದಿ ರಾಮ್ ಜೇಠ್ಮಲಾನಿ 7 ದಶಕಕ್ಕೂ ಅಧಿಕ ಕಾಲ ಕರಿ ಕೋಟು ಧರಿಸಿ ವಕೀಲಿಕೆ ಮಾಡಿದವರು. ಕ್ರಿಮಿನಲ್ ವಕೀಲ, ರಾಜ್ಯಸಭಾ ಸದಸ್ಯ, ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ, ಕೇಂದ್ರ ಕಾನೂನು ಸಚಿವರಾಗಿ ಕರ್ತವ್ಯ ನಿರ್ವಹಿಸಿದರು.
Recommended Video
ಹಿರಿಯ ವಕೀಲ ರಾಮ್ ಜೇಠ್ಮಲಾನಿ ವಿಧಿವಶ
ಹೆಚ್ಚು ಸಂಭಾವನೆ ಪಡೆಯುವ ವಕೀಲರಾಗಿದ್ದ ರಾಮ್, ವಿವಾದಿತ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಟೀಕೆಗೊಳಗಾಗುತ್ತಿದ್ದರು. ಬಿಜೆಪಿ ಆಡಳಿತದಲ್ಲಿ ಕೇಂದ್ರ ಸಚಿವರಾಗಿದ್ದವರು ನಂತರ ಪಕ್ಷದಿಂದ ಅಮಾನತುಗೊಂಡಿದ್ದರು.
ತಮ್ಮ ವೃತ್ತಿಗೆ ಎರಡು ವರ್ಷಗಳ ಹಿಂದೆ ನಿವೃತ್ತಿ ಘೋಷಿಸಿದ ಬಳಿಕ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಯುಪಿಎ ವೈಫಲ್ಯಕ್ಕಿಂತ ಎನ್ಡಿಎ ವೈಫಲ್ಯ ದೊಡ್ಡದು ಎಂದಿದ್ದರು. "ನಾನು ಜೀವಂತ ಇರುವ ತನಕ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆಯಲಿದೆ. ಭಾರತ ಉತ್ತಮ ಸ್ಥಿತಿ ಹೊಂದಲು ಶ್ರಮಿಸುತ್ತೇನೆ' ಎಂದಿದ್ದರು.
ಮೋದಿ ಸರ್ಕಾರದ ವಿರುದ್ಧ ದನಿ
ಮೋದಿ ವಿರುದ್ಧ ದನಿ: 'ನರೇಂದ್ರ ಮೋದಿ ಪ್ರಧಾನಿಯಾಗಲು ಅರ್ಹ' ಎಂದು ಆರಂಭದಲ್ಲಿ ಧ್ವನಿ ಎತ್ತಿದ್ದೆ, ಅವತ್ತು ನಾನು ಕೆಟ್ಟ ನಿರ್ಧಾರ ಮಾಡಿದೆ. ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಪ್ಯಾರಾಗಟ್ಟಲೆ ಕಪ್ಪು ಹಣದ ಹಿಂತರುವ ಬಗ್ಗೆ ಉಲ್ಲೇಖ ಮಾಡಿದ್ದರು ಆದರೆ ಇಲ್ಲಿಯವರೆಗೂ ಕಪ್ಪು ಹಣ ವಾಪಸ್ ಬಂದಿಲ್ಲ' ಎಂದು ಬಿಜೆಪಿ ಸರ್ಕಾರ ವಿರುದ್ಧ ಆಗಾಗ ಸಾರ್ವಜನಿಕ ವೇದಿಕೆಯಲ್ಲಿ ದನಿಯೆತ್ತುತ್ತಿದ್ದರು. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೊಂದಿರುವ ನಿಲುವನ್ನು ಪ್ರಶ್ನಿಸಿದ್ದಕ್ಕೆ ಪಕ್ಷದಿಂದ ಹೊರ ಹಾಕಲಾಗಿತ್ತು.
ಒಂದು ಪೈಸೆಯೊಂದಿಗೆ ಬಾಂಬೆಗೆ ಬಂದಿದ್ದ ರಾಮ್
ಸೆಪ್ಟೆಂಬರ್ 14, 1923ರಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಶಿಖಾರ್ ಪುರ್ ನಲ್ಲಿ ಜನಿಸಿದರು. ಬೂಲ್ ಚಂದ್ ಗುರುಮುಖ್ ದಾಸ್ ಜೇಠ್ಮಲಾನಿ ಹಾಗೂ ಪಾರ್ವತಿ ಬೂಲ್ ಚಂದ್ ದಂಪತಿಯ ಪುತ್ರ ಚಿಕ್ಕಂದಿನಿಂದಲೇ ಓದಿನಲ್ಲಿ ಮುಂದಿದ್ದರು. ರಾಮ್ ಜೇಠ್ಮಲಾನಿ 17ನೇ ವರ್ಷಕ್ಕೆ ಬಾಂಬೆ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದುಕೊಂಡರು.
ದೇಶ ವಿಭಜನೆಯಾದ ಬಳಿಕ ಅಂದಿನ ಬಾಂಬೆಗೆ ಶಿಫ್ಟ್ ಆಗಿ ನಿರಾಶ್ರಿತರ ತಾಣದಲ್ಲಿ ನೆಲೆಸಿದ್ದರು. ಜೇಬಿನಲ್ಲಿ ಒಂದು ಪೈಸಾ ಇಟ್ಟುಕೊಂಡು ಬಾಂಬೆಗೆ ಬಂದು ವಕೀಲಿಕೆ ಆರಂಭಿಸಿದರು. ರಾಮ್ ಅವರಿಗೆ ದುರ್ಗಾ ಹಾಗೂ ರತ್ನಾ ಎಂಬ ಇಬ್ಬರು ಪತ್ನಿಯರು, ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ಮಹೇಶ್ ಜೇಠ್ಮಲಾನಿ ಹಾಗೂ ರಾಣಿ ಜೇಠ್ಮಲಾನಿ ತಂದೆಯಂತೆ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದುರ್ಗಾ ಅವರಿಂದ ರಾಣಿ, ಶೋಭಾ, ಮಹೇಶ್ ಎಂಬ ಮಕ್ಕಳು ಹಾಗೂ ರತ್ನಾರಿಂದ ಜನಕ್ ಎಂಬುವರನ್ನು ರಾಮ್ ಪಡೆದಿದ್ದಾರೆ.
ಕರ್ನಾಟಕದ ರಾಜ್ಯಪಾಲ ಭ್ರಷ್ಟ: ಹಿರಿಯ ವಕೀಲ ರಾಮ್ಜೇಠ್ಮಲಾನಿ
ವೃತ್ತಿ ಬದುಕು
1959ರಲ್ಲಿ ನಾನಾವತಿ ಕೇಸ್ ವಾದ ಜೇಠ್ಮಲಾನಿ ಅವರನ್ನು ಕ್ರಿಮಿನಲ್ ಕೇಸುಗಳತ್ತ ವಾಲುವಂತೆ ಮಾಡಿತು. 1988ರಲ್ಲಿ ರಾಜ್ಯಸಭಾ ಸದಸ್ಯರಾದ ಬಳಿಕ ರಾಜಕೀಯ ರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಕೇಂದ್ರದ ಕಾನೂನು, ಕಾರ್ಪೊರೇಟ್ ವ್ಯವಹಾರ, ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 1999ರಲ್ಲಿ ಕಾನೂನು ಸಚಿವರಾಗಿದ್ದ ಜೇಠ್ಮಲಾನಿ ಹಾಗೂ ಅಂದಿನ ಮುಖ್ಯ ನ್ಯಾಯಮೂರ್ತಿ ಎ.ಎಸ್ ಆನಂದ್ ಹಾಗೂ ಅಟರ್ನಿ ಜನರಲ್ ಸೋಲಿ ಸೊರಾಬ್ಜಿ ಜತೆಗಿನ ವೈಮನಸ್ಯದಿಂದಾಗಿ, ಜೇಠ್ಮಲಾನಿ ತಮ್ಮ ಸಚಿವ ಸ್ಥಾನ ತೊರೆಯುವಂತೆ ಸೂಚಿಸಲಾಗಿತ್ತು. ಆದರೆ, ಅಡ್ವಾಣಿ ಮಧ್ಯಸ್ಥಿಕೆಯಲ್ಲಿ ಪರಿಸ್ಥಿತಿ ತಿಳಿಗೊಂಡಿತ್ತು.
ಹೈ ಪ್ರೊಫೈಲ್, ವಿವಾದಿತ ಕೇಸುಗಳ ವಕೀಲ
ಹೈ ಪ್ರೊಫೈಲ್ ಕೇಸುಗಳು: ಇಂದಿರಾಗಾಂಧಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಪರ, ಹರ್ಷದ್ ಮೆಹ್ತಾ ಷೇರು ಹಗರಣ, ಕೇತಾನ್ ಪಾರೇಖ್ ಕೇಸ್, ಹವಾಲಾ ಕೇಸಿನಲ್ಲಿ ಎಲ್ ಕೆ ಅಡ್ವಾಣಿ ಪರ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೆ ಜಯಲಲಿತಾ ಪರ, 2ಜಿ ಹಗರಣದಲ್ಲಿ ಕನ್ನಿಮೋಳಿ ಪರ, ಜೆಸ್ಸಿಕಾ ಲಾಲ್ ಕೊಲೆ ಕೇಸಿನಲ್ಲಿ ಮನು ಶರ್ಮ ಪರ, ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಯಾದವ್ ಪರ ಜೇಠ್ಮಲಾನಿ ವಾದಿಸಿದ್ದಾರೆ.
ಮಿಕ್ಕಂತೆ ರಾಜೀವ್ ಗಾಂಧಿ ಹಂತಕರು, ಭೂಗತ ಪಾತಕಿ ಹಾಜಿ ಮಸ್ತಾನ್, ಉಗ್ರ ಅಫ್ಜಲ್ ಗುರು, ನಕಲಿ ಎನ್ ಕೌಂಟರ್ ಕೇಸಿನಲ್ಲಿ ಅಮಿತ್ ಶಾ ಪರ, ಮನಿ ಲಾಂಡ್ರಿಂಗ್ ಕೇಸಿನಲ್ಲಿ ಜಗನ್ ರೆಡ್ಡಿ ಪರ, ಅಕ್ರಮ ಗಣಿಗಾರಿಕೆಯಲ್ಲಿ ಬಿ.ಎಸ್ ಯಡಿಯೂರಪ್ಪ ಪರ, ಅಸರಾಮ್ ಬಾಪು ಪರ, ಸಹಾರಾ ಸೆಬಿ ಕೇಸಿನಲ್ಲಿ ಸುಬ್ರತಾ ರಾಯ್ ಪರ, ಅರುಣ್ ಜೇಟ್ಲಿ ಹಾಕಿದ್ದ ಮಾನನಷ್ಟ ಮೊಕದ್ದಮೆ ಕೇಸಿನಲ್ಲಿ ಅರವಿಂದ್ ಕೇಜ್ರಿವಾಲ್ ಪರ ಜೇಠ್ಮಲಾನಿ ವಾದಿಸಿದ್ದರು.
ಮೋದಿ ಒಬ್ಬ ಮೋಸಗಾರ ಎಂದು ನಿಂದಿಸಿದ ರಾಮ್ ಜೇಠ್ಮಲಾನಿ
ಕೆಲ ಕೇಸುಗಳ ಬಗ್ಗೆ ಜೇಠ್ಮಲಾನಿಗೆ ಪಶ್ಚಾತ್ತಾಪವಿತ್ತು
ಕೈಕೊಟ್ಟ ಜಾಮೀನು ಕೇಸುಗಳು: ಕೆಲವು ಜಾಮೀನು ಕೇಸುಗಳು ಸೋಲಿನ ಕಹಿ ತಿನಿಸಿದ್ದವು. ಜಗನ್ ಮೋಹನ್ ರೆಡ್ಡಿ ಕೇಸ್, ಅಸಾರಾಮ್ ಬಾಪು ಕೇಸ್ , ಜಯಲಲಿತಾ ಕೇಸ್ ಇರಬಹುದು ರಾಮ್ ಭಾರಿ ಹಿನ್ನಡೆ ಉಂಟು ಮಾಡಿತ್ತು.
ಕಾನೂನಿನ ಮೂಲಕ ವಿಶ್ವ ಶಾಂತಿ ಎಂಬರ್ಥ ನೀಡುವ ಸಂಸ್ಥೆ ನೀಡಿದ್ದ ಮಾನವ ಹಕ್ಕುಗಳನ್ನು ಕಾಯ್ದ ನ್ಯಾಯವಾದಿ ಎಂಬ ಪ್ರಶಸ್ತಿ ಧರಿಸಿರುವ ಜೇಠ್ಮಲಾನಿ ಅವರಿಗೆ ಜಯಲಲಿತಾ ಕೇಸಿನಲ್ಲಿ ತೀವ್ರ ಮುಖಭಂಗವಾಗಿತ್ತು.
ಫಿಲಿಫೈನ್ಸ್ ನ ಸಂತ್ರಸ್ತರ ಪರ ವಾದಿಸಿ ಮಾನವ ಹಕ್ಕುಗಳನ್ನು ಕಾಯ್ದಿದ್ದ ಜೇಠ್ಮಲಾನಿ ಅವರು ಅವರ ಮುಖಕ್ಕೆ ಹೊಡೆದಂತೆ ಜಯಾ ಕೇಸಿನಲ್ಲಿ ಇದೇ ಅಂಶದ ಕಾರಣಕ್ಕೆ ಶಿಕ್ಷೆ ಆದೇಶ ರದ್ದು ಹಾಗೂ ಜಾಮೀನು ನಿರಾಕರಿಸಲಾಗಿತ್ತು. ಇದಲ್ಲದೆ, ಉಗ್ರ ಅಫ್ಜಲ್ ಗುರು ಪರ ವಾದಿಸಿದ್ದರ ಬಗ್ಗೆ ಕೂಡಾ ಜೇಠ್ಮಲಾನಿ ಸಂದರ್ಶನವೊಂದರಲ್ಲಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು.
ಅಂತಾರಾಷ್ಟ್ರೀಯ ಜ್ಯೂರಿಸ್ಟ್ ಪ್ರಶಸ್ತಿ, ಕಾನೂನಿನ ಮೂಲಕ ವಿಶ್ವ ಶಾಂತಿ ಪ್ರಶಸ್ತಿಗಳನ್ನು ರಾಮ್ ಜೇಠ್ಮಲಾನಿ ಗಳಿಸಿದ್ದರು. ಜೇಠ್ಮಲಾನಿ ಕುರಿತಂತೆ ಹತ್ತು ಹಲವು ಕೃತಿಗಳು ಹೊರ ಬಂದಿವೆ.