ವಿಶೇಷ ಲೇಖನ; 'ರಾಜದ್ರೋಹ' ಕಾಯ್ದೆ ಆಳ-ಅಗಲ ಏನು?
ಬೆಂಗಳೂರು ಫೆಬ್ರವರಿ 28: 'ರಾಜದ್ರೋಹ' ಪ್ರಕರಣಗಳು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿವೆ. ದೇಶದ ಸಾರ್ವಭೌಮತೆಗೆ ಧಕ್ಕೆ ತರುವವರಿಗೆ ಬುದ್ಧಿ ಕಲಿಸಲು ಈ ಕಾನೂನು ಸೂಕ್ತ ಎಂದು ಕಾಯ್ದೆ ಪರ ಇರುವವರು ಹೇಳುತ್ತಾರೆ. ಆದರೆ, ಆಳುವ ಸರ್ಕಾರಗಳು ತಮ್ಮ ವಿರುದ್ಧ ದನಿ ಎತ್ತುವವರನ್ನು ಹತ್ತಿಕ್ಕಲು ಇಟ್ಟುಕೊಂಡಿರುವ ಅಸ್ತ್ರ ಇದು ಎಂದು ಕಾಯ್ದೆ ವಿರುದ್ಧ ಇರುವವರು ಆರೋಪಿಸುತ್ತಾರೆ.
'ರಾಜದ್ರೋಹ' (Sedition) ಅಥವಾ ದೇಶದ್ರೋಹ ಎಂದು ಕರೆಯಲಾಗುವ ಈ ಕಾನೂನು ಇಂದು ನಿನ್ನೆಯದಲ್ಲ. ಇಂಗ್ಲೆಂಡಿನಲ್ಲಿ (1839) ಅರಸರು ತಮ್ಮ ವಿರುದ್ಧ ದ್ವನಿ ಎತ್ತುವವರನ್ನು ಹಣಿಯಲು ರಾಜದ್ರೋಹ ಕಾಯ್ದೆ ತಂದರು. 1870ರ ನಂತರ ಅದನ್ನು ಭಾರತಕ್ಕೂ ಅಂಟಿಸಿದರು.
ಕನ್ಹಯ್ಯ ವಿರುದ್ಧ ದೇಶದ್ರೋಹ ಪ್ರಕರಣ: ಮಧ್ಯ ಪ್ರವೇಶಕ್ಕೆ ಸುಪ್ರೀಂ ನಕಾರ
ಭಾರತ ಸ್ವಾತ್ರಂತ್ರ್ಯ ಚಳವಳಿಯಲ್ಲಿ, ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕಲು, ಸರ್ಕಾರದ ವಿರುದ್ಧ ಮಾತನಾಡುವವರನ್ನು, ಸರ್ಕಾರದ ವಿರುದ್ಧ ಬರೆಯುವ ಪತ್ರಕರ್ತರನ್ನು, ಸಾಹಿತಿಗಳನ್ನು ಕಟ್ಟಿಹಾಕಲು ಬ್ರಿಟೀಷರಿಗೆ ಇದ್ದಂತಹ ಪ್ರಬಲ ಅಸ್ತ್ರ ಇದಾಗಿತ್ತು. ಇತ್ತೀಚೆಗೆ ಸಾಕಷ್ಟು ಪರ ವಿರೋಧದ ಚರ್ಚೆಗೆ ಕಾರಣವಾಗಿರುವ ಈ ಕಾಯ್ದೆಯ ಬಗ್ಗೆ ಮಾಹಿತಿ ಇಲ್ಲಿದೆ.
'ರಾಜದ್ರೋಹ' ಎಂದರೇನು?
ಭಾರತೀಯ ದಂಡ ಸಂಹಿತೆಯ 124 ಎ ಕಲಂನ ವ್ಯಾಪ್ತಿಗೆ ಈ ಕಾಯ್ದೆ ಬರುತ್ತದೆ. "ಯಾವುದೇ ವ್ಯಕ್ತಿಯು ಪದಗಳಿಂದ, ಮಾತನಾಡುವ ಅಥವಾ ಬರೆದ ಚಿಹ್ನೆಗಳಿಂದ, ಆಂಗಿಕ ಸನ್ನೆಗಳಿಂದ, ಭಾರತದಲ್ಲಿ ಕಾನೂನಿನಿಂದ ಸ್ಥಾಪಿಸಲ್ಪಟ್ಟ ಸರ್ಕಾರದ ಬಗ್ಗೆ ಕುಂದುಂಟು ಮಾಡುವ ಪ್ರಯತ್ನಗಳು, ಕುತಂತ್ರವನ್ನು ನಡೆಸುವುದು, ಬಾಹ್ಯ ಶಕ್ತಿಗಳ ಜೊತೆಯಾಗಿ ಭಾರತದ ಸಾರ್ವಭೌಮತೆಗೆ ಧಕ್ಕೆ ತರುವುದು ರಾಜದ್ರೋಹ ಎನಿಸಿಕೊಳ್ಳುತ್ತದೆ' ಎಂದು 'ರಾಜದ್ರೋಹ'ವನ್ನು ವ್ಯಾಖ್ಯಾನಿಸಲಾಗಿದೆ.
ಶಿಕ್ಷೆ ಏನು?
ರಾಜದ್ರೋಹ ಪ್ರಕರಣದಲ್ಲಿ ಬಂಧಿತರಾದವರಿಗೆ ಜಾಮೀನು ಇಲ್ಲ. ಒಂದು ವೇಳೆ ಆರೋಪ ಸಾಬೀತಾದರೆ ಕನಿಷ್ಠ ಮೂರು ವರ್ಷದಿಂದ ಜೀವಾವಧಿ ತನಕ ಶಿಕ್ಷೆ ವಿಧಿಸಬಹುದಾಗಿದೆ. ಶಿಕ್ಷೆಯಾದವರ ಪಾಸ್ಪೋರ್ಟ್ಗಳನ್ನು ಸರ್ಕಾರ ವಶಪಡಿಸಿಕೊಂಡು ನ್ಯಾಯಾಲಯದ ವಶಕ್ಕೆ ಕೊಡುತ್ತದೆ. ಅಲ್ಲದೇ ಶಿಕ್ಷೆ ಅನುಭವಿಸಿ ಹೊರ ಬಂದವರಿಗೆ ಯಾವುದೇ ಸರ್ಕಾರಿ ಉದ್ಯೋಗ ಇತರ ಪ್ರಮುಖ ಸೌಲಭ್ಯಗಳು ಸಿಗುವುದಿಲ್ಲ.
ಕಾಶ್ಮೀರಿ ವಿದ್ಯಾರ್ಥಿಗಳ ದೇಶದ್ರೋಹ ಪ್ರಕರಣ: ಪೊಲೀಸ್ ವಿಶೇಷ ತನಿಖೆ
ಪರ-ವಿರೋಧಗಳೇನು?
ರಾಜದ್ರೋಹ ಕಾಯ್ದೆ ಉಗಮವಾದಾಗಿನಿಂದಲೂ ಇಂದಿನವರೆಗೂ ಚರ್ಚೆಯ ವಿಷಯ. ಅರಸೊತ್ತಿಗೆಯಲ್ಲಿ ಈ ಕಾಯ್ದೆ ತುಂಬಾ ಕ್ರೂರವಾಗಿ ಆಚರಣೆಯಲ್ಲಿತ್ತು. ಭಾರತ ಸ್ವಾತಂತ್ರ್ಯ ಪಡೆದ ನಂತರವೂ ಈ ಕಾಯ್ದೆಯನ್ನು ಮುಂದುವರೆಸಲಾಗಿದೆ. ದೇಶದೊಳಗಿದ್ದು ದೇಶದ ಬಗ್ಗೆ ದ್ರೋಹ ಮಾಡುವವರನ್ನು ಶಿಕ್ಷಿಸಲು, ಭಯೋತ್ಪಾದನಾ ಚಟುವಟಿಕೆಗಳನ್ನು ತಡೆಯಲು, ಕಾನೂನುರೀತ್ಯಾ ಸ್ಥಾಪಿತವಾದ ಸರ್ಕಾರವನ್ನು ಉಳಿಸಿಕೊಳ್ಳಲು ರಾಜದ್ರೋಹ ಕಾಯ್ದೆ ಪ್ರಸ್ತುತ ಎಂದು ಇದನ್ನು ಸಮರ್ಥಿಸಿಕೊಳ್ಳುವವರು ಹೇಳುತ್ತಾರೆ.
ಆಳುವ ಸರ್ಕಾರಗಳ ಅಂಕುಶ
ಆದರೆ, ರಾಜದ್ರೋಹ ಕಾಯ್ದೆ ಆಳುವ ಸರ್ಕಾರಗಳ ಅಂಕುಶವಾಗಿದೆ. ಸರ್ಕಾರದ ಬಗ್ಗೆ ಮಾತನಾಡದಂತೆ ಬಾಯಿ ಮುಚ್ಚಿಸಲು, ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲು ಈ ಕಾಯ್ದೆ ಬಳಸಿಕೊಳ್ಳಲಾಗುತ್ತದೆ. ಕಾಯ್ದೆಯನ್ನು ಮೊದಲು ಜಾರಿಗೆ ತಂದ ಇಂಗ್ಲೆಂಡ್ ದೇಶದಲ್ಲೇ ಈ ಕಾಯ್ದೆ ಈಗ ಇಲ್ಲ. ಆದರೆ, ಭಾರತದಲ್ಲಿ ಏಕೆ? ಎಂದು ಕಾಯ್ದೆಯ ವಿರೋಧ ಇರುವವರು ಪ್ರಶ್ನಿಸುತ್ತಾರೆ. ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿರುವ ಸಂವಿಧಾನದ ಆಶಯಗಳಿಗೆ ರಾಜದ್ರೋಹ ಕಾಯ್ದೆ ಧಕ್ಕೆ ತರುತ್ತಿದೆ ಎನ್ನುತ್ತಾರೆ.
ಅಷ್ಟಕ್ಕೂ ಅಮೂಲ್ಯ 'ಪಾಕಿಸ್ತಾನ್ ಜಿಂದಾಬಾದ್' ಎಂದಿದ್ದೇಕೆ?
ಗಾಂಧೀಜಿ ಕೂಡ ಶಿಕ್ಷೆ ಅನುಭವಿಸಿದ್ದರು
ರಾಜದ್ರೋಹ ಕಾಯ್ದೆ ಬ್ರಿಟೀಷರ ಕಾಲದಲ್ಲಿ ವ್ಯಾಪಕ ದುರ್ಬಳಕೆಯಾಗಿತ್ತು ಎಂಬುದು ಇತಿಹಾಸ ಹೇಳುತ್ತದೆ. ಈ ಕಾಯ್ದೆಯ ಅಡಿ ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ್, ಸುಭಾಷ್ ಚಂದ್ರ ಬೋಸ್ರಂತಹ ಪ್ರಮುಖರು, ಅನೇಕ ಸ್ವಾತ್ರಂತ್ರ್ಯ ಹೋರಾಟಗಾರರು ಕಾಯ್ದೆಯ ಕಪಿಮುಷ್ಠಿಗೆ ಸಿಲುಕಿದ್ದರು. ಕೆಲವರು ಜೀವನಪೂರ್ತಿ ಜೈಲಿನಲ್ಲಿ ಕಾಲ ಕಳೆದಿದ್ದರು.
ಶೇ 70 ರಷ್ಟು ಪ್ರಕರಣಗಳಲ್ಲಿ ಚಾರ್ಜ್ಶೀಟ್
ಇತ್ತೀಚೆಗೆ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವ ರಾಜದ್ರೋಹ ಕಾಯ್ದೆ ಪ್ರಸ್ತುತೆಯನ್ನು ಹಲವರು ಪ್ರಶ್ನಿಸುತ್ತಾರೆ. ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋದ 2014-16 ರ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಒಟ್ಟು 179 ಪ್ರಕರಣಗಳು ದಾಖಲಾಗಿದ್ದವು. ಆದರೆ, ಅದರಲ್ಲಿ ಶೇ 70 ರಷ್ಟು ಪ್ರಕರಣಗಳಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗಿರಲಿಲ್ಲ. ಹೀಗಾಗಿ ಬಹುತೇಕ ರಾಜದ್ರೋಹ ಪ್ರಕರಣಗಳು ಸರ್ಕಾರಗಳ ಹಿತಾಸಕ್ತಿ ಸಾಧಿಸಲೆಂದೇ ಬಳಕೆಯಾಗಿರುವೆ ಎಂದು ಇದನ್ನು ವಿರೋಧಿಸುವವರು ಅಂಕಿ ಸಂಖ್ಯೆಗಳನ್ನು ಇಟ್ಟುಕೊಂಡು ಹೇಳುತ್ತಾರೆ.
ರಾಷ್ಟ್ರೀಯ ಕಾನೂನು ಆಯೋಗ
ರಾಷ್ಟ್ರೀಯ ಕಾನೂನು ಆಯೋಗದ ದೇಶದ್ರೋಹ ಕುರಿತ ಇತ್ತೀಚಿನ ಸಮಾಲೋಚನಾ ಪ್ರಬಂಧದಲ್ಲಿ, 'ಸಾರ್ವಜನಿಕ ಸುವ್ಯವಸ್ಥೆಯನ್ನು ಅಡ್ಡಿಪಡಿಸುವ ಉದ್ದೇಶದಿಂದ ಅಥವಾ ಹಿಂಸಾಚಾರ ಮತ್ತು ಕಾನೂನುಬಾಹಿರ ವಿಧಾನಗಳಿಂದ ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ಮಾಡಿದ ಕೃತ್ಯಗಳಲ್ಲಿ ಮಾತ್ರ ರಾಜದ್ರೋಹ ಕಾಯ್ದೆ ಬಳಸಬಹುದು' ಎಂದು ಹೇಳಲಾಗಿದೆ.
ಸುಪ್ರೀಂಕೋರ್ಟ್ ಹೇಳುವುದೇನು?
ಸುಪ್ರೀಂಕೋರ್ಟ್ ಕೂಡ ರಾಜದ್ರೋಹ ಕಾಯ್ದೆ ದುರ್ಬಳಕೆ ಆಗಬಾರದು ಎಂದು ಹಲವು ಬಾರಿ ಹೇಳಿದೆ (ಕೇದಾರನಾಥ್ ಸಿಂಗ್ ವರ್ಸಸ್ ಬಿಹಾರ್ ಸರ್ಕಾರ ಪ್ರಕರಣ). "ಒಬ್ಬ ವ್ಯಕ್ತಿಯು ಅವನ ಕೃತ್ಯಗಳು ಹಿಂಸಾಚಾರ ಅಥವಾ ಪ್ರಚೋದನೆ ಅಥವಾ ಸಾರ್ವಜನಿಕ ಅಸ್ವಸ್ಥತೆಯನ್ನು ಉಂಟುಮಾಡುವ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವ ಪ್ರವೃತ್ತಿಯನ್ನು ಉಂಟುಮಾಡಿದರೆ ಮಾತ್ರ ದೇಶದ್ರೋಹಕ್ಕಾಗಿ ಕಾನೂನು ಕ್ರಮ ಜರುಗಿಸಬಹುದು" ಎಂದು ಹೇಳಿದೆ.
ಸರ್ಕಾರಗಳ ಟೀಕಿಸುವುದು ನಾಗರಿಕ ಹಕ್ಕು
ಸರ್ಕಾರಗಳ ವಿರುದ್ಧ ಕಾಮೆಂಟ್ ಮಾಡುವುದು, ಅಭಿಪ್ರಾಯ ಹಂಚಿಕೊಳ್ಳುವುದು, ಲೇಖನ ಬರೆಯುವುದು ಪ್ರತಿಭಟಿಸುವುದು ಈ ಕಾಯ್ದೆ ವ್ಯಾಪ್ತಿಗೆ ತರುವಂತಿಲ್ಲ. ಇದು ದೇಶದ ನಾಗರಿಕನ ಹಕ್ಕು ಎಂದು ಸುಪ್ರೀಂಕೋರ್ಟ್ 2018 ರಲ್ಲಿ ಹೇಳಿದೆ.
ವ್ಯಾಪಕ ಚರ್ಚೆಯಾಗಬೇಕು
ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಕಾಲ ಕಾಲಕ್ಕೆ ಸರ್ಕಾರಗಳು ಬದಲಾಗುತ್ತಲೇ ಇರುತ್ತವೆ. ಅಧಿಕಾರದಲ್ಲಿರುವ ಸರ್ಕಾರಗಳಿಗೆ, ರಾಜದ್ರೋಹ ಕಾಯ್ದೆ ತಮ್ಮ ವಿರುದ್ಧ ಮಾತನಾಡುವವರನ್ನು ಹತ್ತಿಕ್ಕಲು ಬಳಸುವ ಅಸ್ತ್ರ ಎನ್ನುವಂತಾಗಿದೆ. ಇದಕ್ಕೆ ಈಗಾಗಲೇ ಹಲವು ಪ್ರಕರಣಗಳು ಸಾಕ್ಷಿಯಾಗಿವೆ. ಈ ನಿಟ್ಟಿನಲ್ಲಿ ರಾಜದ್ರೋಹ ಕಾಯ್ದೆಯ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು ಎಂಬ ಆಗ್ರಹ ಪ್ರಸ್ತುತ ಸನ್ನಿವೇಶದಲ್ಲಿ ತೀವ್ರವಾಗಿ ಕೇಳಿಬರುತ್ತಿದೆ.