ಭೂಮಿ ಮೇಲೆ ಪ್ರಳಯದ ಮುನ್ಸೂಚನೆ, ಭೂಮಿಗೆ ‘ಬೋರ್ವೆಲ್’ ಕಂಟಕ..!
ಭೂಮಿ ಮೇಲೆ ಪ್ರಳಯ ಸಂಭವಿಸುತ್ತದೆ ಎಂಬ ಮಾತುಗಳಿಗೆ ವಿಜ್ಞಾನಿಗಳ ಇತ್ತೀಚಿನ ಸಂಶೋಧನೆ ಪುಷ್ಟಿ ನೀಡಿದೆ. ಆದರೆ ಸಿನಿಮಾಗಳ ರೀತಿ ದಿಢೀರನೆ ಪ್ರಳಯ ಸಂಭವಿಸದೇ ಇದ್ದರೂ, ನಿಧಾನವಾಗಿ ನಮಗೆಲ್ಲಾ ಅರಿವಿಗೆ ಬಾರದಂತೆ ಪ್ರಳಯ ಸಮೀಪ ಬಂದುಬಿಟ್ಟಿದೆ. ಹೌದು, ಜಗತ್ತಿನ ತಾಪಮಾನ ಏರುತ್ತಿರುವ ಕಾರಣ ಹಿಮಪದರ ಕರಗುತ್ತಿದೆ. ಇದರಿಂದಾಗಿ ಸಮುದ್ರದ ನೀರಿನ ಮಟ್ಟ ಏರುತ್ತಿದೆ.
ಆದರೆ ನಾವು ಗಮನಿಸದಿರುವ ಮತ್ತೊಂದು ಸಂಗತಿಯನ್ನು ವಿಜ್ಞಾನಿಗಳು ಬಯಲು ಮಾಡಿದ್ದಾರೆ. ಸಮುದ್ರದ ನೀರಿನ ಮಟ್ಟ ಏರಿಕೆಯಾಗಿ, ನಿಧಾನವಾಗಿ ಭೂಮಿ ಸಮುದ್ರದ ಪಾಲಾಗುತ್ತಿರಲು ಕಾರಣ ತಾಪಮಾನ ಏರಿಕೆ ಮಾತ್ರವಲ್ಲ. ಅಂತರ್ಜಲದ ಅತಿಯಾದ ಬಳಕೆ ಹಾಗೂ ಭೂಮಿಯ ಆಳದಲ್ಲಿ ಹುದುಗಿರುವ ಅಪಾರ ಪ್ರಮಾಣದ ನೀರನ್ನು ಹೊರಗಡೆ ಹಾಕುತ್ತಿರುವುದು ಕೂಡ ಸಮುದ್ರದ ನೀರಿನ ಮಟ್ಟ ಏರಿಕೆಯಾಗಲು ಕಾರಣವಾಗುತ್ತಿದೆ.
ಕುದಿಯುತ್ತಿದೆ ಭೂಮಿ, 2020 ಅತಿಹೆಚ್ಚು ತಲೆ'ಬಿಸಿ'ಯ ವರ್ಷ..!
ಇದು ಅಂದಾಜುಗಳ ಲೆಕ್ಕವನ್ನೂ ಮೀರಿದ್ದು, ಪ್ರತಿ ವರ್ಷ ಜಗತ್ತಿನಾದ್ಯಂತ ಸರಾಸರಿ 2.5 ಮಿ.ಮೀ. ಭೂಮಿ ಸಮುದ್ರದ ಪಾಲಾಗಿ ಹೋಗುತ್ತಿದೆ. ಕರಾವಳಿ ಪ್ರದೇಶದಲ್ಲಿ ಸರಾಸರಿ 7.8 ಮಿ.ಮೀ- 9.9 ಮಿ.ಮೀ. ಎಂದು ಲೆಕ್ಕಹಾಕಲಾಗಿದೆ.
ನದಿ ದಂಡೆಯಲ್ಲಿ ನಾಗರಿಕತೆ ಪಾಠ..!
ಮನುಷ್ಯ ಕಾಡು ಬಿಟ್ಟು ಬಂದು ನಾಡಿನಲ್ಲಿ ನೆಲೆಸುತ್ತಾ ಕ್ರಮೇಣ ನಾಗರಿಕತೆ ಪಾಠ ಕಲಿತಿದ್ದು ಇದೇ ನದಿ ದಂಡೆ ಮೇಲೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ನದಿಗಳ ನೀರಿನ ಮಟ್ಟದಲ್ಲೂ ಅಪಾಯಕಾರಿ ಬದಲಾವಣೆ ಕಾಣುತ್ತಿದೆ. ಸಮುದ್ರದ ನೀರು ನಿರಂತರವಾಗಿ ಏರಿಕೆ ಕಂಡಂತೆ, ನದಿಗಳಲ್ಲಿ ಪ್ರವಾಹ ಕೂಡ ಏರಿಕೆಯಾಗುತ್ತಿದೆ.
ಮಳೆಗಾಲ ನದಿ ಸುತ್ತಮುತ್ತಲ ಪ್ರದೇಶಗಳಿಗೆ ಯುದ್ಧ ಪರಿಸ್ಥಿತಿ ನೆನಪಿಸುತ್ತಿದೆ. ಇದು ಜಗತ್ತಿನ ಮಹಾನ್ ನಗರಗಳ ಪಾಲಿಗೆ ಮರಣ ಶಾಸನವಾಗಿದೆ. ಏಕೆಂದರೆ ಜಗತ್ತಿನ ದೊಡ್ಡದೊಡ್ಡ ನಗರಗಳು ನದಿ ದಂಡೆ ಅಥವಾ ಕರಾವಳಿ ಬಳಿಯೇ ತಲೆ ಎತ್ತಿವೆ. ಈ ರೀತಿ ನೀರಿನ ಮಟ್ಟ ಅಪಾಯಕಾರಿ ರೀತಿಯಲ್ಲಿ ಏರುತ್ತಿದ್ದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ.
ಇಂಡೋನೇಷ್ಯಾಗೆ ಕಾದಿದೆ ಕಂಟಕ..!
ಜ್ವಾಲಾಮುಖಿ, ಸುನಾಮಿ, ಪ್ರವಾಹ, ಭಾರಿ ಮಳೆ, ಸಮುದ್ರದ ನೀರಿನ ಮಟ್ಟ ಏರಿಕೆ ಹೀಗೆ ಇಂಡೋನೇಷ್ಯಾಗೆ ಒಂದಾದ ನಂತರ ಮತ್ತೊಂದು ಕಂಟಕ ಎದುರಾಗುತ್ತಿದೆ. ಸದ್ಯ ವಿಜ್ಞಾನಿಗಳು ನೀಡಿರುವ ಎಚ್ಚರಿಕೆ ಮುಖ್ಯವಾಗಿ ಇಂಡೋನೇಷ್ಯಾಗೆ ಅನ್ವಯಿಸುವಂತಿದೆ. ಈಗಾಗ್ಲೇ ಇಂಡೋನೇಷ್ಯಾದ ಜಕಾರ್ತ ಸೇರಿದಂತೆ ಹಲವು ದೊಡ್ಡ ದೊಡ್ಡ ನಗರಗಳಿಗೆ ಸಮುದ್ರದ ನೀರಿನ ಮಟ್ಟ ಏರಿಕೆ ಪರಿಣಾಮ ಕಂಟಕ ಎದುರಾಗಿದೆ. ಭವಿಷ್ಯದಲ್ಲಿ ಇದು ಮತ್ತಷ್ಟು ಹೆಚ್ಚುವ ಅಪಾಯವಿದೆ. ಇಂಡೋನೇಷ್ಯಾದ ಕರಾವಳಿ ನಗರಗಳು ಸಮುದ್ರದಲ್ಲಿ ಮುಳುಗಿರುವ ದೃಶ್ಯ ಉಪಗ್ರಹ ಚಿತ್ರಗಳ ಮೂಲಕ ಕನ್ಫರ್ಮ್ ಆಗುತ್ತಿದೆ. ದಿನದಿಂದ ದಿನಕ್ಕೆ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ಕೊರೊನಾ ಬಿಟ್ಟಾಕಿ, ಇನ್ನೂ ದೊಡ್ಡ ಗಂಡಾಂತರ ಕಾದಿದೆ: ಬಿಲ್ ಗೇಟ್ಸ್
ತಾಪಮಾನ ಬದಲಾವಣೆ ಪರಿಣಾಮ
ಜಾಗತಿಕ ತಾಪಮಾನ ಏರಿಕೆ ಹಾಗೂ ಇದರಿಂದ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪಗಳಿಗೆ ಮೊದಲು ಬಲಿ ಆಗುವುದೇ ದ್ವೀಪ ರಾಷ್ಟ್ರಗಳು. ಏಕೆಂದರೆ ಧ್ರುವ ಪ್ರದೇಶದ ಹಿಮ ಕರಗಿ, ಸಮುದ್ರದ ನೀರಿನ ಮಟ್ಟ ಹೆಚ್ಚಾದ ಸಂದರ್ಭದಲ್ಲಿ ಕರಾವಳಿ ಭಾಗದ ಅದರಲ್ಲೂ ಸಣ್ಣಪುಟ್ಟ ದ್ವೀಪ ರಾಷ್ಟ್ರಗಳ ಜನ ನಲುಗಿ ಹೋಗುತ್ತಾರೆ. ಈ ಬಗ್ಗೆ ವಿಜ್ಞಾನಿಗಳು ಎಚ್ಚರಿಸುತ್ತಾ ಬಂದರೂ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಬರುತ್ತಿಲ್ಲ. ಸಮುದ್ರದಲ್ಲಿನ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದು ಸಹಜವಾಗಿ ಭೂಮಿಯನ್ನ ನುಂಗಿ ಹಾಕುತ್ತಿದೆ. ಈಗಾಗಲೇ ಅದೆಷ್ಟೋ ಸಣ್ಣಪುಟ್ಟ ದ್ವೀಪಗಳು ಹೀಗೆ ಸಮುದ್ರದ ಆರ್ಭಟಕ್ಕೆ ಮುಳುಗಿ ಹೋಗಿರುವ ಉದಾಹರಣೆ ಇದೆ.
ಹಿಮ ಪದರ ಕರಗುವ ಆತಂಕ
2020ರ ಬಗ್ಗೆ ಬೆಚ್ಚಿಬೀಳುವ ಸಂಗತಿಯೊಂದನ್ನು ವಿಜ್ಞಾನಿಗಳು ಬಿಚ್ಚಿಟ್ಟಿದ್ದಾರೆ. ಮಾನವ ಬದುಕಿನ ಇತಿಹಾಸದಲ್ಲಿ 2020 3ನೇ ಅತಿಹೆಚ್ಚು ತಾಪಮಾನ ತೋರಿದ ವರ್ಷವಾಗಿದೆ. 2016, 2019ರ ನಂತರ 2020 ಅತಿ ಹೆಚ್ಚಾದ ತಾಪಮಾನ ಹೊಂದಿರುವ ವರ್ಷವಾಗಿದೆ. ತಾಪಮಾನ ಏರಿಕೆ ಕಡಿವಾಣಕ್ಕೆ ಎಷ್ಟೇ ಮುತುವರ್ಜಿ ವಹಿಸಿದರೂ ಪ್ರಯೋಜನವಾಗುತ್ತಿಲ್ಲ. ತಾಪಮಾನ ಏರಿಕೆ ತಡೆಯಲು ಪ್ಯಾರಿಸ್ ಒಪ್ಪಂದಂತಹ ಪ್ರಯತ್ನ ವಿಫಲವಾಗಿದೆ. 2020ರಲ್ಲಿ ತಾಪಮಾನ 1.2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದ್ರೆ ರಷ್ಯಾದ ಸೈಬೀರಿಯಾ ಪ್ರಾಂತ್ಯದಲ್ಲಿ ಅತಿಹೆಚ್ಚು ತಾಪಮಾನ ಏರಿಕೆಯಾಗಿದೆ. ಸೈಬೀರಿಯಾ ಪ್ರಾಂತ್ಯದಲ್ಲಿ 2020ರಲ್ಲಿ 5 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಕಂಡಿದೆ. ಇದು ರಷ್ಯಾದ ಇತಿಹಾಸದಲ್ಲೇ ಭಯಾನಕ ವರ್ಷವಾಗಿದೆ.