ಗುಜರಾತ್ ಗಲಭೆ 2002 Timeline: ಮೋದಿ v/s ಜಾಫ್ರಿ ಕಾನೂನು ಸಮರ, ಹತ್ಯಾಕಾಂಡ - ಕ್ಲೀನ್ ಚಿಟ್
ನವದೆಹಲಿ, ಜೂನ್ 24: 2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಶಕಗಳ ನಂತರ ಪ್ರಧಾನಿ ಮೋದಿ ವಿರುದ್ಧ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ(ಜೂನ್ 24) ವಜಾಗೊಳಿಸಿದೆ.
ಇದಕ್ಕೂ ಮುನ್ನ ವಿಶೇಷ ತನಿಖಾ ತಂಡವು ಗುಜರಾತ್ ರಾಜ್ಯದ ಅಂದಿನ ಸಿಎಂ ಆಗಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ 62 ಜನರಿಗೆ ಕ್ಲೀನ್ ಚಿಟ್ ನೀಡಿತ್ತು. ಈ ಕುರಿತಂತೆ ಸ್ಥಳೀಯ ನ್ಯಾಯಾಲಯ ಹಾಗೂ ಸುಪ್ರೀಂ ಆದೇಶವನ್ನು ಪ್ರಶ್ನಿಸಿ ಝಾಕಿಯಾ ಜಾಫ್ರಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಝಾಕಿಯಾ ಜಾಫ್ರಿ ಅರ್ಜಿ ವಿಚಾರಣೆ ನಡೆಸಿದ ಅಹಮದಾಬಾದ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಬಿ.ಜೆ.ಗನತ್ರ ಅವರು ತೀರ್ಪು ನೀಡಿ, ಎಸ್ಐಟಿ ವರದಿಯನ್ನು ಪರಿಗಣಿಸಿ, ಮೋದಿ ಸೇರಿದಂತೆ ಅನೇಕರನ್ನು ದೋಷಮುಕ್ತ ಎಂದಿದ್ದರು. ಗುಜರಾತ್ ಗಲಭೆ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ) ಮೋದಿ ಸೇರಿದಂತೆ ಪ್ರಕರಣದ 57 ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿ, ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.
2002ರಲ್ಲಿ ಗುಜರಾತ್ನ ಗುಲ್ಬರ್ಗದಲ್ಲಿ ನಡೆದ ಹತ್ಯಾಕಾಂಡದಲ್ಲಿ ಝಾಕಿಯಾ ಜಾಫ್ರಿ ಪತಿ ಹಾಗೂ ಮಾಜಿ ಕಾಂಗ್ರೆಸ್ ಸಂಸದ ಇಶಾನ್ ಜಾಫ್ರಿ ಸೇರಿದಂತೆ 35 ಮಂದಿ ಸಜೀವ ದಹನವಾಗಿದ್ದರು. ಗುಲ್ಬರ್ಗ್ ಹೌಸಿಂಗ್ ಸೊಸೈಟಿ ಗಲಭೆ ಹಾಗೂ ಎಹ್ಸಾನ್ ಕೊಲೆ ಪ್ರಕರಣ ಕುರಿತಂತೆ ಸಿಬಿಐನ ಮಾಜಿ ನಿರ್ದೇಶಕ ಆರ್.ಕೆ.ರಾಘವನ್ ನೇತೃತ್ವದ ವಿಶೇಷ ತನಿಖಾ ತಂಡ ತನಿಖೆ ನಡೆಸಿತ್ತು.
2011ರ ಸೆಪ್ಟೆಂಬರ್ 12ರಂದು ಸುಪ್ರಿಂ ಕೋರ್ಟ್ನ ಮೂವರು ಸದಸ್ಯರ ವಿಸ್ತೃತ ನ್ಯಾಯಪೀಠ, ವಿಶೇಷ ತನಿಖಾ ತಂಡದ ಅಂತಿಮ ವರದಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಸ್ತಾಂತರಿಸುವಂತೆ ಆದೇಶ ನೀಡಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಅಹಮದಾಬಾದ್ ವಿಚಾರಣಾ ನ್ಯಾಯಾಲಯ 2012ರ ಮಾರ್ಚ್ 13ರಂದು ತನಿಖಾ ತಂಡ ಸಲ್ಲಿಸಿದ್ದ ಪರಿಸಮಾಪ್ತಿ ವರದಿಯನ್ನು ಎತ್ತಿ ಹಿಡಿದಿತ್ತು.
ಗೋಧ್ರಾ, ಗೋಧ್ರೋತ್ತರ, ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಕೇಸ್ timeline:
2021, ಜೂನ್ 24: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್ ನೀಡಿರುವುದರ ವಿರುದ್ಧ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್.
2017ರ ಅಕ್ಟೋಬರ್ : ಗುಜರಾತ್ ಹೈಕೋರ್ಟ್ ತೀರ್ಪು ಪ್ರಕಟ 11 ದೋಷಿಗಳ ಮರಣದಂಡನೆ ಜೀವಾವಧಿ ಶಿಕ್ಷೆಗೆ ಪರಿವರ್ತನೆ.
2016: ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದಲ್ಲಿ ಬಂಧನಕ್ಕೊಳಗಾದ 66 ಮಂದಿ ಆರೋಪಿಗಳ ಪೈಕಿ 24 ಮಂದಿಯ ಮೇಲಿನ ಆರೋಪ ಸಾಬೀತಾಗಿದೆ. 36 ಮಂದಿಗೆ ಖುಲಾಸೆ ಮಾಡಿ ಅಲಹಾಬಾದ್ ವಿಶೇಷ ನ್ಯಾಯಾಲಯದಿಂದ ತೀರ್ಪು.
2014 ನವೆಂಬರ್: ಗೋಧ್ರಾ ಹಾಗೂ ಗೋಧ್ರೋತ್ತರ ಹತ್ಯಾಕಾಂಡಕ್ಕೆ ಸೇರಿದ ಒಟ್ಟು 9 ಕೇಸ್ ವಿಚಾರಣೆ, ತೀರ್ಪು ನೀಡಲು ಅಹಮದಾಬಾದ್ ವಿಚಾರಣಾ ನ್ಯಾಯಾಲಯಕ್ಕೆ ಮೂರು ತಿಂಗಳ ಅವಧಿ ನಿಗದಿ
2014: ಮೂರು ತಿಂಗಳಲ್ಲಿ ಪ್ರಕರಣದ ತೀರ್ಪು ನೀಡುವಂತೆ ಅಹಮದಾಬಾದ್ ವಿಚಾರಣಾ ನ್ಯಾಯಾಲಯಕ್ಕೆ ಸುಪ್ರೀಂಕೋರ್ಟ್ ಸೂಚನೆ.
2013ರ ಡಿಸೆಂಬರ್: ಸುಪ್ರೀಂ ಕೋರ್ಟ್ ನೇಮಿಸಿರುವ ಎಸ್ಐಟಿ ಮುಖ್ಯಸ್ಥ ಆರ್. ಕೆ ರಾಘವನ್, ಅಹಮದಾಬಾದ್ ವಿಚಾರಣಾ ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿ, ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯ ನಿಲುವು ಸಮರ್ಥನೆಯಾಗಿದೆ ಎಂದು ಹೇಳಿದರು.
2012 ಮಾರ್ಚ್: ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ನರೇಂದ್ರ ಮೋದಿ ಕ್ಲೀನ್ ಚಿಟ್ ನೀಡಿರುವ ವರದಿ ಪೂರ್ಣಪಾಠವನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸಲು ಕೋರಿದ್ದ ಝಾಕಿಯಾ ಜಾಫ್ರಿ ಅರ್ಜಿ ವಜಾಗೊಳಿಸಿದ ಅಹಮದಾಬಾದ್ ಮೆಟ್ರೋಪಾಲಿಟನ್ ಕೋರ್ಟ್.
2012: ಗೋಧ್ರೋತ್ತರ ಹಿಂಸಾಚಾರ, ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ನರೇಂದ್ರ ಮೋದಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಎಸ್ಐಟಿಯಿಂದ ಮೊದಲ ವರದಿ ಸಲ್ಲಿಕೆ.
2011 ಮಾರ್ಚ್: 2002ರ ಕೋಮುಗಲಭೆಗಳ ಮುನ್ನಾದಿನದಂದು ಪೊಲೀಸರಿಗೆ ಮೋದಿ ನೀಡಿದ ವಿವಾದಾತ್ಮಕ ಆದೇಶದ ಬಗ್ಗೆ ಹುರುಳನ್ನು ಚೆಲ್ಲಿದ್ದಾರೆ ಎಂದು ಹೇಳಲಾದ ಗುಜರಾತ್ ಡೆಪ್ಯುಟಿ ಇನ್ಸ್ಪೆಕ್ಟರ್-ಜನರಲ್ ಆಫ್ ಪೊಲೀಸ್ ಸಂಜೀವ್ ಭಟ್ ಅವರು ಸುಪ್ರೀಂ ಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿದ್ದರು.
2011ರ ಫೆಬ್ರವರಿ : 31 ಜನರು ದೋಷಿ ಎಂದು ವಿಶೇಷ ಕೋರ್ಟ್ ತೀರ್ಪು. 63 ಜನರು ಖುಲಾಸೆ. 11 ಜನರಿಗೆ ಮರಣದಂಡನೆ, 20 ದೋಷಿಗಳಿಗೆ ಜೀವಾವಧಿ ಶಿಕ್ಷೆ
2011ರ ಜನವರಿ 28 : ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಲು ಇದ್ದ ತಡೆಯನ್ನು ತೆರವು ಮಾಡಿದ ಸುಪ್ರೀಂಕೋರ್ಟ್.
2010ರ ಸೆಪ್ಟೆಂಬರ್ 28 : ವಿಚಾರಣೆ ಪೂರ್ಣಗೊಳಿಸಿ, ತೀರ್ಪನ್ನು ಕಾಯ್ದಿರಿಸಿದ ವಿಶೇಷ ಕೋರ್ಟ್. ಸುಪ್ರೀಂಕೋರ್ಟ್ ಆದೇಶದ ತನಕ ತೀರ್ಪು ಪ್ರಕಟಿಸಲು ಕಾದ ಕೋರ್ಟ್.
2010ರ ಆಗಸ್ಟ್: ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ 62 ಮಂದಿ ವಿರುದ್ಧ ತನಿಖೆ ನಡೆಸಲು ಕೋರಿದ್ದ ಝಾಕಿಯಾ ಜಾಫ್ರಿ ಅರ್ಜಿ ಪುರಸ್ಕರಿಸಿದ ಸುಪ್ರೀಂಕೋರ್ಟ್, ತನಿಖೆ ಮುಂದುವರೆಸಲು ಎಸ್ಐಟಿಗೆ ನಿರ್ದೇಶನ.
2009: ಆರೋಪಿಗಳ ವಿರುದ್ಧ ದಾಖಲಾಗಿದ್ದ ಪೋಟಾ ಕಾಯ್ದೆ ತೆರವುಗೊಳಿಸಿದ ಗುಜರಾತ್ ಹೈಕೋರ್ಟ್. ಏಪ್ರಿಲ್ನಲ್ಲಿ ಪ್ರಕರಣದ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪನೆ. ಸೆಪ್ಟೆಂಬರ್ನಲ್ಲಿ ವಿಚಾರಣೆ ಆರಂಭಿಸಿದ ಕೋರ್ಟ್
2008 ಮಾರ್ಚ್: ಗೋಧ್ರಾ, ಸರ್ದಾರ್ ಪುರ, ಗುಲ್ಬರ್ಗ್ ಸೊಸೈಟಿ, ಒಡೆ, ನರೋಡಾ ಗಾಂವ್, ನರೋಡಾ ಪಾಟಿಯಾ, ದೀಪ್ಲಾ ದರ್ವಾಜಾ ಪ್ರದೇಶಗಳಲ್ಲಿನ ಹಾನಿ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಎಸ್ಐಟಿಗೆ ಸೂಚಿಸಿದ ಸುಪ್ರೀಂಕೋರ್ಟ್.
2008: ನಾನಾವತಿ-ಶಾ ಕಮೀಷನ್ನಿಂದ ವರದಿ ಸಲ್ಲಿಕೆ. ರೈಲಿಗೆ ಬೆಂಕಿ ಹಚ್ಚಿರುವುದು ಒಳಸಂಚು ಎಂದು ಉಲ್ಲೇಖ. ವಿಚಾರಣೆಗೆ ಇದ್ದ ತಡೆಯಾಜ್ಞೆ ತೆರವುಗೊಳಿಸಿದ ಸುಪ್ರೀಂಕೋರ್ಟ್. ಸಿಬಿಐ ನಿವೃತ್ತ ನಿರ್ದೇಶಕ ಆರ್.ಕೆ.ರಾಘವನ್ ನೇತೃತ್ವದಲ್ಲಿ ವಿಚಾರಣೆಗೆ ಎಸ್ಐಟಿ ರಚನೆ.
2007 ನವೆಂಬರ್: ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರ 62 ಜನರ ವಿರುದ್ಧ ದೂರು ದಾಖಲಿಸಲು ಪೊಲೀಸರಿಗೆ ನ್ಯಾಯಾಲಯದ ನಿರ್ದೇಶನವನ್ನು ಕೋರಿ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಗುಜರಾತ್ ಹೈಕೋರ್ಟ್ .
2006: ಕೇಂದ್ರ ಸರ್ಕಾರದಿಂದ ಯು.ಸಿ.ಬ್ಯಾನರ್ಜಿ ನೇತೃತ್ವದಲ್ಲಿ ಪ್ರತ್ಯೇಕ ವಿಚಾರಣಾ ಸಮಿತಿ ರಚನೆ. ಸಮಿತಿ ಸಲ್ಲಿಸಿದ ವರದಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್
2003 ನವೆಂಬರ್: ಆರೋಪಿಗಳ ವಿರುದ್ಧ ಪೋಟಾ ಕಾಯ್ದೆ ಹಾಕಿದ್ದನ್ನು ಪ್ರಶ್ನಿಸಿ ಮಾವನ ಹಕ್ಕುಗಳ ಆಯೋಗ ಮತ್ತು ಇತರ ಸಂಘಟನೆಗಳಿಂದ ಸುಪ್ರೀಂಕೋರ್ಟ್ಗೆ ಅರ್ಜಿ. ನವೆಂಬರ್ನಲ್ಲಿ ಪ್ರಕರಣ ಗುಜರಾತ್ ಹೈಕೋರ್ಟ್ಗೆ ವರ್ಗಾವಣೆ. ಪೋಟಾ ಕಾಯ್ದೆಯ ವಿವಾದದ ತೀರ್ಪು ಬರುವ ತನಕ ವಿಚಾರಣೆಗೆ ತಡೆ.
2003ರ ಫೆಬ್ರವರಿ: ಎಲ್ಲಾ ಆರೋಪಿಗಳ ವಿರುದ್ಧ Prevention Of Terrorism Act (POTA) ಅಡಿ ಪ್ರಕರಣ ದಾಖಲು. ಮಾರ್ಚ್ನಲ್ಲಿ ವಿಶೇಷ ಪೋಟಾ ಕೋರ್ಟ್ ಸ್ಥಾಪನೆ. ಏಪ್ರಿಲ್ನಲ್ಲಿ ಮೂರನೇ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ.
2002 ಮೇ 24: 54 ಆರೋಪಿಗಳ ವಿರುದ್ಧ ಗೋಧ್ರಾ ಹತ್ಯಾಕಾಂಡದ ಮೊದಲ ಚಾರ್ಚ್ ಶೀಟ್ ಸಲ್ಲಿಕೆ. ಡಿಸೆಂಬರ್ 19ರಂದು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ.
2002: ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ 50ಕ್ಕೂ ಅಧಿಕ ಜನರ ಬಂಧನ, ಹತ್ಯಾಕಾಂಡದ ತನಿಖೆಗೆ ಗುಜರಾತ್ ಸರ್ಕಾರದಿಂದ ನಾನಾವತಿ-ಶಾ ಕಮೀಷನ್ ನೇಮಕ.
2002, ಫೆಬ್ರವರಿ 28: ಗುಜರಾತ್ನ ಗುಲ್ಬರ್ಗದಲ್ಲಿ ನಡೆದ ಹತ್ಯಾಕಾಂಡದಲ್ಲಿ ಝಾಕಿಯಾ ಜಾಫ್ರಿ ಪತಿ ಹಾಗೂ ಮಾಜಿ ಕಾಂಗ್ರೆಸ್ ಸಂಸದ ಇಶಾನ್ ಜಾಫ್ರಿ ಸೇರಿದಂತೆ 35 ಮಂದಿ ಸಜೀವ ದಹನವಾಗಿದ್ದರು.
2002ರ ಫೆಬ್ರವರಿ 27 : ಗುಜರಾತ್ನ ಗೋಧ್ರಾ ರೈಲು ನಿಲ್ದಾಣದಲ್ಲಿ ಅಯೋಧ್ಯೆಯಿಂದ ವಾಪಸ್ ಆಗುತ್ತಿದ್ದ ಸಬರಮತಿ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ. ಎಸ್ 6 ಕೋಚ್ ನಲ್ಲಿದ್ದ 59 ಯಾತ್ರಾರ್ಥಿಗಳ ಸಜೀವ ದಹನ. ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಬಳಿಕ ಗುಜರಾತ್ನ ಹಲವು ಪ್ರದೇಶಗಳಲ್ಲಿ ಕೋಮು ಗಲಭೆ, 1000ಕ್ಕೂ ಅಧಿಕ ಜನರ ಸಾವು.