ಸೂತಕದ ಮನೆಯಲ್ಲಿ ಚಿಗುರಿತಾ ಶಶಿಕಲಾ ನಟರಾಜನ್ ರಾಜಕೀಯ ರೀ-ಎಂಟ್ರಿ ಕನಸು?
ಮದುವೆ ಮನೆಯಿರಲಿ, ಸೂತಕದ ಮನೆಗೆ ಹೋಗಲಿ, ರಾಜಕೀಯವನ್ನು ಮೀರಿ ವೈಯಕ್ತಿಕ ಸಂಬಂಧವಿದ್ದರೂ ಅದಕ್ಕೆ ರಾಜಕೀಯ ಲೇಪನ ಅಂಟಿ ಕೊಳ್ಳುವುದೇ ಜಾಸ್ತಿ. ಅದಕ್ಕೆ ನಮ್ಮ ರಾಜಕಾರಣಿಗಳು ಕೂಡಾ ಕಾರಣ ಎಂದರೆ ತಪ್ಪಾಗಲಾರದು.
ರಾಜಕೀಯ ನಿಂತ ನೀರಲ್ಲ ಎನ್ನುವ ಮಾತಿದೆ, ಇದಕ್ಕೆ ಯಾವ ಪಕ್ಷಗಳೂ ಹೊರತಲ್ಲ. ತಮಿಳುನಾಡಿನಲ್ಲಿ ಇಂತದ್ದೇ ಒಂದು ವಿದ್ಯಮಾನಕ್ಕೆ ರಾಜಕೀಯ ಬಣ್ಣ ತಗಲಿಕೊಂಡಿದೆ. ಅದು, ಎಐಎಡಿಎಂಕೆ ಪಕ್ಷದ ಚಾವಡಿಯಲ್ಲಿ. ಉದ್ದೇಶ ಬೇರೆನೇ ಇದ್ದಿದ್ದರೂ, ಅದು ತಮಿಳುನಾಡು ರಾಜಕೀಯದಲ್ಲಿ ಸಾರಿದ ಸಂದೇಶ ಇನ್ನೊಂದು.
ಮೇಕೆದಾಟು, ಕಾವೇರಿ ವಿಚಾರದಲ್ಲಿ ಕರ್ನಾಟಕದ ಹಿತ ಕಾಪಾಡಲು ಬಿಜೆಪಿ ಕಟಿಬದ್ಧ: ಅರುಣ್ ಸಿಂಗ್
ತಮಿಳುನಾಡಿನ ಜನತೆಯಿಂದ ಅಮ್ಮ ಎಂದು ಕರೆಯಲ್ಪಡುತ್ತಿದ್ದ ದಿವಂಗತ ಸಿಎಂ ಜಯಲಲಿತಾ ಕಾಲಾವಧಿಯಲ್ಲೂ, ಶಶಿಕಲಾ ನಟರಾಜನ್ ಪವರ್ ಫುಲ್ ಆಗಿದ್ದದ್ದು ಗೊತ್ತಿರುವ ವಿಚಾರ. ಆದರೆ, ಜಯಾ ನಿಧನದ ನಂತರ ಎಐಐಡಿಎಂಕೆ ಹಲವು ಹೋಳಾಗಿ ಹೋಯಿತು. ಎಲ್ಲವೂ ಅಧಿಕಾರಕ್ಕಾಗಿ..
ಇತ್ತ, ಶಶಿಕಲಾ ನಟರಾಜನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ ನಂತರ ಮತ್ತು ಅವರು ಜೈಲು ಶಿಕ್ಷೆ ಮುಗಿಸಿ ಬಂದ ನಂತರ, ಅವರನ್ನು ಎಲ್ಲಿ ಇಡಬೇಕೋ, ಅಲ್ಲಿ ಇಡಬೇಕು ಎನ್ನುವ ಒಮ್ಮತದ ನಿರ್ಧಾರಕ್ಕೆ ಬಂದ ಎಐಎಡಿಎಂಕೆಯ ಎರಡು/ಮೂರು ಬಣಗಳು ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾಗೆ ವಿಶೇಷ ಸೌಕರ್ಯ ಬಗ್ಗೆ ಎಸಿಬಿ ವರದಿ
ಬೆಟ್ಟದಷ್ಟು ಆಸೆ ಹೊತ್ತು ಜಯಲಲಿತಾ ಸೇವೆ ಮಾಡಿದ್ದ ಶಶಿಕಲಾ
ಬೆಟ್ಟದಷ್ಟು ಆಸೆ ಹೊತ್ತು ಜಯಲಲಿತಾ ಸೇವೆ ಮಾಡಿದ್ದ ಶಶಿಕಲಾ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ಮಾತ್ರಕ್ಕೆ ರಾಜಕೀಯದ ಸಹವಾಸ ಬೇಡ ಎನ್ನುವ ನಿರ್ಧಾರಕ್ಕೆ ಅವರು ಬರುವವರಲ್ಲ ಎನ್ನುವುದು ಮಾಜಿ ಸಿಎಂ ಪಳನಿಸ್ವಾಮಿ, ಮಾಜಿ ಡಿಸಿಎಂ ಪನ್ನೀರ್ ಸೆಲ್ವಂ ಅವರಿಗೂ ಗೊತ್ತಿರುವ ವಿಚಾರ. ಪರದೆಯ ಹಿಂದೆ, ಶಶಿಕಲಾ ತನ್ನ ರಾಜಕೀಯ ಪಗಡೆಯಾಟವನ್ನು ಉರುಳಿಸುತ್ತಲೇ ಬರುತ್ತಿದ್ದಾರೆ. ಅದಕ್ಕೊಂದು, ಉದಾಹರಣೆ ಎರಡು ದಿನಗಳ ಹಿಂದೆ ನಡೆದಿದೆ.
ಪತ್ನಿಯ ಸಾವಿನಿಂದ ಒತ್ತಡದಲ್ಲಿದ್ದ ಸೆಲ್ವಂ ನಿವಾಸಕ್ಕೆ ಭೇಟಿ ನೀಡಿ ಶಶಿಕಲಾ ಸಾಂತ್ವನ
ಪನ್ನೀರ್ ಸೆಲ್ವಂ ಅವರ ಪತ್ನಿ ವಿಜಯಲಕ್ಷ್ಮೀ ಸೆಪ್ಟಂಬರ್ ಒಂದರಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಪತ್ನಿಯ ಸಾವಿನಿಂದ ಒತ್ತಡದಲ್ಲಿದ್ದ ಸೆಲ್ವಂ ಅವರ ನಿವಾಸಕ್ಕೆ ಭೇಟಿ ನೀಡಿ ಶಶಿಕಲಾ ನಟರಾಜನ್ ಸಾಂತ್ವನ ಹೇಳಿ ಬಂದಿದ್ದಾರೆ. ಇಲ್ಲಿ, ಗಮನಿಸಬೇಕಾದ ರಾಜಕೀಯ ಏನಂದರೆ, ಶಶಿಕಲಾ ಅವರನ್ನು ಎಐಎಡಿಎಂಕೆಗೆ ಮತ್ತೆ ಸೇರಿಸಿಕೊಳ್ಳುವಲ್ಲಿ ಪ್ರಬಲ ಪ್ರತಿರೋಧ ತೋರಿದವರು ಇದೇ ಪನ್ನೀರ್ ಸೆಲ್ವಂ. ಹಾಗಾಗಿ, ಮನೆಯೊಂದು ಊರೆಲ್ಲಾ ಬಾಗಿಲಂತಾಗಿರುವ ಪಕ್ಷದಲ್ಲಿ ಶಶಿಕಲಾ ಭೇಟಿ ಮಹತ್ವವನ್ನು ಪಡೆದುಕೊಂಡಿದೆ.
ಎಐಎಡಿಎಂಕೆ ಪಕ್ಷಕ್ಕೆ ಬೇಕಾಗಿರುವುದು ಬಲವಾದ ಸಂಘಟನೆ, ಸುದೃಢವಾದ ನಾಯಕತ್ವ
ತಮಿಳುನಾಡು ಚುನಾವಣೆ ಮುಗಿದು ಕೆಲವೇ ತಿಂಗಳು ಆಗಿರುವುದರಿಂದ, ಸದ್ಯದ ಮಟ್ಟಿಗೆ ಅಲ್ಲಿ ಚುನಾವಣೆಯ ಗಾಳಿಯಿಲ್ಲ. ಎಐಎಡಿಎಂಕೆ ಪಕ್ಷಕ್ಕೆ ಈಗ ಬೇಕಾಗಿರುವುದು ಬಲವಾದ ಸಂಘಟನೆ, ಸುದೃಢವಾದ ನಾಯಕತ್ವ. ಅದನ್ನು ಯಾರ ಹೆಗಲಿಗೆ ವಹಿಸಬೇಕು? ಪನ್ನೀರ್ ಸೆಲ್ವಂ ಅವರಿಗೋ, ಪಳನಿಸ್ವಾಮಿಗೋ, ದಿನಕರನ್ ಅವರಿಗೋ ಅಥವಾ ಅದ್ಭುತ ಸಂಘಟನಾಕಾರರಾಗಿರುವ ಶಶಿಕಲಾ ನಟರಾಜನ್ ಅವರಿಗೋ ಎನ್ನುವುದಿಲ್ಲಿ ಪ್ರಶ್ನೆ.
ಒಂದೇ ಒಂದು ರೌಂಡ್ ದಿ ಟೇಬಲ್ ಮೀಟಿಂಗ್ ನಲ್ಲಿ ಪರಿಹಾರ ಕಂಡುಕೊಳ್ಳುವ ಶಕ್ತಿಯಿರುವ ಶಶಿಕಲಾ
ಜಯಲಲಿತಾ ಜೀವಿತಾವಧಿಯಲ್ಲೂ ಎಂತದ್ದೇ ಕ್ಲಿಷ್ಟಕರ ಸಮಸ್ಯೆಗಳನ್ನುಒಂದೇ ಒಂದು ರೌಂಡ್ ದಿ ಟೇಬಲ್ ಮೀಟಿಂಗ್ ನಲ್ಲಿ ಪರಿಹಾರ ಕಂಡುಕೊಳ್ಳುವ ಶಕ್ತಿಯಿರುವ ಶಶಿಕಲಾ ಅವರೇ ಮುಂದಿನ ನಾಯಕಿ ಎನ್ನುವ ಮುನ್ನುಡಿಗೆ ಸೂತಕದ ಮನೆ ಸಾಕ್ಷಿಯಾಯಿತಾ? ಈ ಚರ್ಚೆ ಈಗ ತಮಿಳುನಾಡು ರಾಜಕೀಯದಲ್ಲಿ ವೇಗ ಪಡೆದುಕೊಂಡಿದೆ. ತನ್ನ ರಾಜಕೀಯ ಮರು ಎಂಟ್ರಿಗೆ ತೊಡಕಾಗಿರುವ ಮತ್ತು ಕಣ್ಣೀರಿಗೆ ಕರಗುವ ರಾಜಕಾರಣಿ ಎಂದೇ ಹೆಸರು ಪಡೆದಿರುವ ಪನ್ನೀರ್ ಸೆಲ್ವಂಗೆ ಸಾಂತ್ವನ ಹೇಳಿ ಶಶಿಕಲಾ ಅವರು ಮೊದಲ ಹೆಜ್ಜೆಯನ್ನು ಸರಿಯಾಗಿಯೇ ಇಟ್ಟಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.