ಈ ಚಳಿಗಾಲದ ಧಾನ್ಯ ಸಂಕ್ರಾಂತಿ ತನಕ ಅಡುಗೆ ಮನೆ ಸಂಗಾತಿ
ಭಾರತೀಯ ಆಹಾರ ಪದ್ಧತಿಯಲ್ಲಿ ಪ್ರತಿ ಋತುವಿಗೆ ತಕ್ಕಂತೆ ತರಕಾರಿ, ಧಾನ್ಯ, ಹಣ್ಣು, ಆಹಾರ ಬಳಕೆ ರೂಢಿಯಲ್ಲಿದೆ. ಯಾವ ತರಕಾರಿ ಜೊತೆ ಯಾವ ತರಕಾರಿ ಇದ್ದರೆ ರುಚಿ ಯಾವುದರ ಜೊತೆ ಯಾವ ಧಾನ್ಯ ವರ್ಜ್ಯ ಎಂಬುದನ್ನು ಯಾರೂ ಯಾವ ಕಾಲೇಜು, ಕ್ಲಾಸ್ ಗಳಲ್ಲಿ ಹೇಳಿಕೊಡಲ್ಲ. ಅಡುಗೆ ಅರಮನೆಯ ಒಡತಿರೆನಿಸಿದ ಅನ್ನಪೂರ್ಣೆಯರು ಅನಾದಿ ಕಾಲದಿಂದಲೂ ತಾವು ತಮ್ಮ ಅಮ್ಮ, ಅಜ್ಜಿಯಿಂದ ಕಲಿತ ವಿದ್ಯೆಯನ್ನು ಮನೆ ಮಂದಿ ಮೇಲೆ ಪ್ರಯೋಗಿಸಿ ತಿಳಿದುಕೊಂಡಿರುತ್ತಾರೆ. ಸದ್ಯ ಸಂಕ್ರಾಂತಿ ತನಕ ಅಡುಗೆ ಮನೆಯಲ್ಲಿ ನೆಲೆಗೊಳ್ಳುವ ದೇಶಿ ಸೊಡಗುಳ್ಳ ಅವರೇ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ ಇಲ್ಲಿದೆ..
ಚುಮು ಚುಮು ಚಳಿಗಾಲ ಎಂಬುದೆಲ್ಲ ಕೊರೊನಾ ಬಂದಮೇಲೆ ಬದಲಾಗಿ ಬಿಟ್ಟಿದೆ. ಧನುರ್ ಮಾಸ ಬಂದು ಹೋದರೂ ಚಳಿ ಜೊತೆಗೆ ಮಳೆ ಆಗಾಗ ಬಿಸಿಲು ಹೀಗೆ ಋತುಮಾನವೇ ಅಯೋಮಯವಾಗಿದೆ. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಅವರೇಕಾಯಿ ಎಂದರೆ ಎಲ್ಲರೂ ಬಾಯಿ ಚಪ್ಪರಿಸುವವರೇ.
ಅಡುಗೆ ಅರಮನೆ: ಸಿಂಪಲ್ಲಾಗೊಂದ್ ಅವರೆಕಾಯಿ ಸಾಂಬಾರು ಮಾಡಿ ನೋಡಿ
ಚಳಿಗಾಲದ ಧಾನ್ಯ ಅವರೇಕಾಳು ನಮ್ಮ ದೇಶಿ ತಳಿ. ಸುಗ್ಗಿ ಹಬ್ಬಕ್ಕೂ ಮುನ್ನ ಶಿಶಿರ, ಹೇಮಂತ ಋತುಗಳಲ್ಲಿ ಚಳಿ ತಡೆದುಕೊಳ್ಳಲು ಅವರೇಕಾಯಿಯೇ ಶಕ್ತಿ ನೀಡುತ್ತದೆ ಎಂಬುದು ಬಯಲು ಸೀಮೆ ಜನರಲ್ಲಿ ಬಲವಾದ ನಂಬಿಕೆ. ಇನ್ನು ಬೆಂಗಳೂರಿನಲ್ಲಿ ನವೆಂಬರ್ ತಿಂಗಳಿನಿಂದ ಜನವರಿ ಮುಗಿದು ಫೆಬ್ರವರಿ ಬಂದರೂ ಒಂದಲ್ಲ ಒಂದು ರೀತಿ ಅವರೇ ನಿಮ್ಮ ನಿತ್ಯ ಅಡುಗೆಯನ್ನು ಅವರಿಸಿಬಿಡುತ್ತದೆ. ಫುಡ್ ಸ್ಟ್ರೀಟ್ ಮೇಳದಿಂದ ಅವರೇ ತಿನಿಸುಗಳು ಇನ್ನಷ್ಟು ಜನಪ್ರಿಯಗೊಂಡಿದ್ದು ಸುಳ್ಳಲ್ಲ.
ದೇಶಿ ಧಾನ್ಯ ವಿದೇಶದಲ್ಲೂ ಫೇಮಸ್
ಅವರೇಕಾಯಿ ಭಾರತದಲ್ಲಷ್ಟೇ ಅಲ್ಲ ಏಷ್ಯಾ ಖಂಡದ ಇತರ ಭಾಗಗಳು, ಆಫ್ರಿಕಾ, ಅಮೆರಿಕಕ್ಕೂ ತನ್ನ ಸೊಗಡನ್ನು ಹಬ್ಬಿಸಿದೆ. ಪೊದೆಯಂಥ ಚಿಕ್ಕಗಿಡ ಹಾಗೂ ಬಳ್ಳಿಯಂತೆ ಚಪ್ಪರದಲ್ಲಿ ಬೆಳೆಯ ವಿವಿಧ ತಳಿಗಳಿವೆ. ಇದು ಪೊದೆಯಂತೆ ಚಿಕ್ಕ ಗಿಡವಾಗಿ ಬೆಳೆಯುವ ವಿಧಕ್ಕೆ ದಾಲಿಖಾಸ್ ಲ್ಯಾಬ್ ಲ್ಯಾಬ್ ತಳಿ ರಿಗ್ನೋಸಸ್ ಎಂದೂ, ಬಳ್ಳಿಯಂತೆ ಚಪ್ಪರದವರೆಗೆ ಹಬ್ಬುವ ತಳಿಗೆ ದಾಲಿಖಾಸ್ ಲ್ಯಾಬ್ ಲ್ಯಾಬ್ ಟಿಪಿಕಸ್ ಎಂದೂ ಶಾಸ್ತ್ರೀಯ ಹೆಸರಿದೆ. ಚಪ್ಪರದವರೆ, ಕೆ.ಜಿಗೆ 50 ರಿಂದ 80 ರುಪಾಯಿ ತಗುಲಬಹುದು. ಹೇಮಂತ ಋತುವಿನಲ್ಲಿ ಹೊಲಗಳಲ್ಲಿ ಸೊನೆ ಅವರೆ ಸೊಗಡು ಮೂಗಿಗೆ ಅಡರತೊಡಗುತ್ತದೆ.
ಬೆಂಗಳೂರೇ ಮಾರುಕಟ್ಟೆ
ದಪ್ಪ ಅವರೆ, ಮಣಿಲಾ ಅವರೆ, ದಬ್ಬೆ ಅವರೆಕಾಯಿ ಹೀಗೆ ವಿವಿಧ ತಳಿಗಳಿವೆ. ಮೈಸೂರು, ಹುಣಸೂರು, ಚಾಮರಾಜನಗರಗಳಲ್ಲಿ ಬೆಳೆದ ಅವರೆ ಬೆಂಗಳೂರು, ದೊಡ್ಡಬಳ್ಳಾಪುರ, ಮಂಗಳೂರು, ಬಾಂಬೆ, ಚೆನ್ನೈ, ತಮಿಳುನಾಡು, ಆಂಧ್ರಪ್ರದೇಶ ಮೊದಲಾದ ರಾಜ್ಯಗಳಿಗೆ ರವಾನೆಯಾಗುತ್ತದೆ. ಎಲ್ಲೇ ಬೆಳೆದರೂ ಬೆಂಗಳೂರು ಅವರೇಕಾಯಿಯ ಅಘೋಷಿತ ಶಾಶ್ವತ ಮಾರುಕಟ್ಟೆಯಾಗಿದೆ. ವಿವಿಧ ತಳಿ ಮಿಶ್ರ ಮಾಡಿ ವರ್ಷವಿಡಿ ಅವರೆ ಸಿಗುವಂತೆ ಮಾಡಲಾಗಿದೆ. ಆದರೆ, ಎಲ್ಲಾ ಕಾಲಕ್ಕೂ ಅವರೇ ಎಲ್ಲರಿಗೂ ಆಗಿಬರುವುದಿಲ್ಲ.
ಅವರೇ ಆರೋಗ್ಯಕರ ಯಾವಾಗ
ಅವರೇ ಆರೋಗ್ಯಕರ: ಈ ಸಸ್ಯದ ಬೇರುಗಳು ಅತಿಸಾರ ಭೇದಿ, ಅಪ್ತಾಲ್ಮಿಯಾ ಮತ್ತು ಚರ್ಮ ರೋಗ ನಿವಾರಣೆಗೆ ಉಪಯೋಗಕಾರಿ. ಬೀಜಗಳ ಕಷಾಯವು ವಾಯುವಿಗೆ ಒಳ್ಳೆಯದು. ಅನೇಕ ಕಡೆ ಇದನ್ನು ಮಣ್ಣು ಸುರಕ್ಷಿತ ಬೆಳೆಯಾಗಿ ಮತ್ತು ಹಸಿರೆಲೆ ಗೊಬ್ಬರಕ್ಕಾಗಿಯೂ ಬೆಳೆಸುತ್ತಿದ್ದಾರೆ. ಆದರೂ, ಅವರೇ ಅತಿಯಾದ ಬಳಕೆ ಅಪಾಯಕಾರಿ, ಸಂಜೆ ವೇಳೆ ಚಹಾ, ಕಾಫಿ ಜೊತೆ ಅವರೇಕಾಯಿ ತಿಂಡಿ ತಿನಿಸು ಮೆಲ್ಲಲು ಅಡ್ಡಿಯಿಲ್ಲ. ಆದರೆ, ಅವರೆ ಅತಿಯಾದರೆ ಮೊಟ್ಟ ಮೊದಲಿಗೆ ವಾಯು ಸಮಸ್ಯೆ ಎದುರಾಗುತ್ತದೆ. ಅಯ್ಯೋ ನನಗೆ ಗ್ಯಾಸ್ಟ್ರಿಕ್ ಪ್ರಾಬ್ಲಂ ಎಂದೇಳಿ ಎಷ್ಟೋ ಜನ ಅವರೆ ಮುಟ್ಟೋದೇ ಇಲ್ಲ.
ದೇಹದ ತೂಕ ಹೆಚ್ಚುತ್ತದೆ
ಉತ್ತಮ ಪ್ರಮಾಣದ ಅಮೈನೋ ಆಮ್ಲಗಳನ್ನು ಒಳಗೊಂಡಿದೆ. ಇದರಲ್ಲಿರುವ ಪಿಷ್ಟದ ಪ್ರಮಾಣ ಗಮನಿಸಿದರೆ ಚಳಿಗಾಲದಲ್ಲಿ ದೇಹದ ಉಷ್ಣತೆಯನ್ನು ಹೆಚ್ಚಿಸುವುದಕ್ಕಾಗಿ ಸೃಷ್ಟಿಯಾದಂತಿದೆ. ಈ ಕಾಯಿ ಸಮೃದ್ಧಿಯಾಗಿ ದೊರೆತರೆ ಚಳಿಗಾಲದಲ್ಲಿ ಬೇರೆ ಯಾವ ತರಕಾರಿಯೂ ಇಚ್ಛೆಯಾಗದು. ಇದರಲ್ಲಿರುವ ಪೋಷಕಾಂಶಗಳಿಂದ ರಕ್ತ ಪುಷ್ಟಿಯಾಗಿ ದೇಹದ ತೂಕ ಹೆಚ್ಚುತ್ತದೆ. ಇದರ ಸಿಪ್ಪೆಯಲ್ಲಿರುವ ಸೆಲ್ಯುಲೋಸ್ ಕಾಳಿನಿಂದಾಗುವ ಮಲಬದ್ಧತೆ ಮತ್ತು ಅಜೀರ್ಣಗಳನ್ನು ನಿವಾರಣೆ ಮಾಡುತ್ತದೆ.
ಹಿತ ಮಿತವಾಗಿ ಬಳಸಿ ಅವರೆ
ಇನ್ನು ಕೆಲವರಿಗೆ ಅವರೆ ಕಾಯಿ ಸುಲಿಯೋಕೆ ಕೂತರೆ ಆಗಿಬರಲ್ಲ, ಮೈಕೈ ತುರಿಸಿಕೊಂಡು ಎದ್ದು ಬಿಡುತ್ತಾರೆ. ಕೆಲವರಿಗೆ ಮಲ್ಲಿಗೆ ಪರಿಮಳವೇ ಅಲರ್ಜಿ ಎನ್ನುವಂತೆ ಅವರೆ ಘಮ ಕೂಡಾ ಕೆಲವರ ಮೂಗಿಗೆ ತೊಂದರೆ. ಹೀಗಾಗಿ ಚಳಿಗಾಲದಲ್ಲಿ ಹಿತ ಮಿತವಾಗಿ ಬಳಸಿದರೆ ಯಾವುದೇ ರೀತಿ ತೊಂದರೆಯಾಗಲ್ಲ.
100 ಗ್ರಾಂ ಅವರೇ ಕಾಳಿನಲ್ಲಿರುವ ಪೋಷಕಾಂಶ : ಪಿಷ್ಟ 60.1 ಗ್ರಾಂ, ಕಬ್ಬಿಣ 520 ಎಂ.ಸಿ.ಜಿ., ಸಸಾರಜನಕ 24.9 ಗ್ರಾಂ, ನಯಾಸಿಸ್ 1.8 ಮಿ. ಗ್ರಾಂ, ಕೊಬ್ಬು 0.8 ಗ್ರಾಂ ಪೊಟ್ಯಾಷಿಯಂ 402 ಮಿ. ಗ್ರಾಂ, ಸುಣ್ಣ 70 ಮಿ.ಗ್ರಾಂ, ಸೋಡಿಯಂ 89 ಮಿ. ಗ್ರಾಂ., ರಂಜಕ 455 ಮಿ. ಗ್ರಾಂ. ಇಷ್ಟೆಲ್ಲ ಇರೋ ಅವರೆಕಾಯಿ, ಕಾಳು ಬಳಸಿ ಏನೆಲ್ಲ ತಿಂಡಿ, ತಿನಿಸು, ಸಾಂಬಾರು, ಹುಳಿ ಮಾಡಬಹುದು, ಅವರೆಯ ಸ್ಪೆಷಲ್ ಐಟಂಗಳು ತಯಾರಿಸುವ ವಿಧಾನ ಬಗ್ಗೆ ಮುಂದಿನ ಲೇಖನದಲ್ಲಿ ಮಾಹಿತಿ ಇರಲಿದೆ.. ತಪ್ಪದೇ ಓದಿ...
Recommended Video