ಗ್ರಾಮ್ಯ ಹಬ್ಬ ಸಂಕ್ರಾಂತಿ: ಹಳ್ಳಿಗಳಲ್ಲಿ ಆಚರಣೆ ಹೇಗೆ?
ಸಂಕ್ರಾಂತಿ ಗ್ರಾಮ್ಯ ಹಬ್ಬ, ನಗರವಾಸಿಗಳಿಗೆ ಸಂಕ್ರಾಂತಿ ಎಂದರೆ ಎಳ್ಳು-ಬೆಲ್ಲ ಹಂಚುವುದು, ದೇವಾಲಯಗಳಿಗೆ ಹೋಗಿ ಕೈಮುಗಿಯುವುದು ಅಷ್ಟೆಯೋ ಏನೋ, ಆದರೆ ಹಳ್ಳಿಗರಿಗೆ ಇದು ಸುಗ್ಗಿ ಹಬ್ಬ. ಬೆಳೆದ ಬೆಳೆಯನ್ನು ಕಟಾವು ಮಾಡಿ ಭಕ್ತಿಯಿಂದ ಕೈಮುಗಿಯುವ ಹಬ್ಬ. ಸಂಕ್ರಾಂತಿ, ರೈತ ತನ್ನ ಶ್ರಮಕ್ಕೆ ತಾನೇ ನಮಿಸುವ ಹಬ್ಬ.
ಬೆಳೆದ ಬೆಳೆಯನ್ನು ಕಣ (ಒಟ್ಟು) ಮಾಡಿ, ಸಗಣಿಯನ್ನು ಸಣ್ಣ ತ್ರಿಭುಜದ ಆಕಾರಕ್ಕೆ ಮಾಡಿ ಅದಕ್ಕೊಂದು ಗರಿಕೆ ಚುಚ್ಚಿ ಒಟ್ಟು ಮಾಡಿದ ಫಸಲಿನ ಮೇಲೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ಫಸಲು ಬಳಸಿ ಮಾಡಿದ ಅಡುಗೆಯನ್ನು ದೇವರಿಗೆ ನೈವೇದ್ಯ ಇಡುವುದು ಬಯಲುಸೀಮೆಯಲ್ಲಿ ಇರುವ ಪ್ರತೀತಿ. ಈಗಲೂ ಹೀಗೆಯೇ ನಡೆಯುತ್ತದೆ ಎಂದು ಹೇಳಲಾಗದಾದರೂ ಆದರೆ ಹಿಂದೆಲ್ಲಾ ಆಚರಣೆ ಹೀಗೆಯೇ ಇತ್ತು.
ಸಂಭ್ರಮದ ಸುಗ್ಗಿ ಸಂಕ್ರಾಂತಿ: ಆಚರಣೆ ಹೇಗೆ?
ಆ ನಂತರದ್ದು ಎತ್ತುಗಳ ಪೂಜೆ. ವರ್ಷವಿಡೀ ರೈತನಿಗೆ ಸಮನಾಗಿ ದುಡಿದ ಎತ್ತುಗಳನ್ನು ಚೆನ್ನಾಗಿ ತೊಳೆದು, ಅದಕ್ಕೆ ಸುಖಕರ ಎನಿಸುವ ಆಹಾರವನ್ನು ಅಂದು ನೀಡುತ್ತಾರೆ. ಎತ್ತುಗಳನ್ನು ಸಿಂಗಾರ ಮಾಡಿ ಊರ ದೇವಾಲಯಕ್ಕೆ ಸುತ್ತು ಹೊಡೆಸುವ ಪದ್ಧತಿಯೂ ಕೆಲವು ಹಳ್ಳಿಗಳಲ್ಲಿ ಉಂಟು. ಕೇವಲ ಎತ್ತುಗಳು ಮಾತ್ರವಲ್ಲ ಮನೆಯಲ್ಲಿನ ಎಲ್ಲ ಜಾನುವಾರುಗಳಿಗೆ ಅಂದು ಸ್ನಾನ ಮಾಡಿಸಿ ಪೂಜೆ ಮಾಡಲಾಗುತ್ತದೆ.
ಸಂಜೆ ಮಬ್ಬು ಕವಿಯುತ್ತಲೆ ಊರ ಮುಂದಿನ ಅರಳಿ ಮರದ ಬಳಿಯೋ ಅಥವಾ ದೇವಾಲಯದ ಬಳಿಯೋ ಕಿಚ್ಚು ಮಾಡಿ ಎತ್ತುಗಳನ್ನು ಅದರ ಮೂಲಕ ಹಾಯಿಸಲಾಗುತ್ತದೆ. ಎತ್ತುಗಳು ಕಿಚ್ಚು ಹಾಯುವುದನ್ನು ನೋಡಲೆಂದು ಗ್ರಾಮದ ಜನರೆಲ್ಲಾ ಊರ ಮುಂದೆ ನೆರೆಯುತ್ತಾರೆ.
ಮಿಯಾಮಿಯಲ್ಲಿ ನಂದಿ ಕನ್ನಡ ಕೂಟದ ಸುಗ್ಗಿ ಸಂಭ್ರಮ
ಕೆಲವು ಹಳ್ಳಿಗಳಲ್ಲಿ ಪಂಜು ತಿರುಗಿಸುವ ಪದ್ಧತಿಯೂ ಇದೆ. ಯುವಕರು ಉದ್ದ ಕಂಬಿಗಳಿಗೆ ಮುಂದೆ ಬಟ್ಟೆಗಳನ್ನು ಚೆನ್ನಾಗಿ ಸುತ್ತಿ ಅದಕ್ಕೆ ಬೆಂಕಿ ಕೊಟ್ಟು ಕಂಬಿಯನ್ನು ಹಿಡಿದು ತಿರುಗಿಸುತ್ತಾರೆ, ಪಂಜು ತಿರುಗುತ್ತಿದ್ದರೆ ಬೆಂಕಿಯ ಬೆಳಕಲ್ಲಿ ಕತ್ತಲ ಕ್ಯಾನ್ವಾಸ್ನಲ್ಲಿ ಚಿತ್ರಗಳು ಮೂಡಿದಂತೆ ಭಾಸವಾಗುತ್ತದೆ.
ಸಂಕ್ರಾಂತಿ ಸುಗ್ಗಿಯಂದು ಜಗದೊಡೆಯನಿಗೆ ಮಂಗಳಾರತಿ
ಇನ್ನು ಎಳ್ಳು-ಬೆಲ್ಲವಂತೂ ಸಂಕ್ರಾಂತಿಯಂದು ಇರಲೇ ಬೇಕು. ಬೆಳಿಗ್ಗೆ ಪೂಜೆ ಮುಗಿದ ಕೂಡಲೇ ಎಳ್ಳು-ಬೆಲ್ಲವನ್ನು ನೆರೆ-ಹೊರೆಯವರಿಗೆ ಹಂಚಲಾಗುತ್ತದೆ.