ಗಂಧದ ನಾಡಾಗಿದ್ದ ಮೈಸೂರಿನಲ್ಲೀಗ ಕಣ್ಮರೆಯಾಗುತ್ತಿದೆ ಶ್ರೀಗಂಧ
ಒಂದು ಕಾಲದಲ್ಲಿ ಗಂಧದ ನಾಡಾಗಿದ್ದ ಮೈಸೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಈಗ ಗಂಧದ ಮರಗಳು ಕಾಣುವುದೇ ಅಪರೂಪವಾಗುತ್ತಿದೆ. ಕೆಲವರು ಆಸಕ್ತಿಯಿಂದ ಗಿಡಗಳನ್ನು ನೆಟ್ಟು ಬೆಳೆಸುವ ಪ್ರಯತ್ನ ಮಾಡಿದರೂ ಕಣ್ತಪ್ಪಿಸಿ ಅವುಗಳ ಬುಡಕ್ಕೆ ಕೊಡಲಿಯಿಡುವ ಕಳ್ಳರಿಂದಾಗಿ ಮತ್ತು ಗಂಧ ಮರ ಬೆಳೆದರೆ ತಮ್ಮ ಜೀವಕ್ಕೆ ಎಲ್ಲಿ ಸಂಚಕಾರ ಬಂದುಬಿಡುತ್ತದೋ ಎಂಬ ಭಯವೂ ಗಂಧದ ಮರವನ್ನು ಬೆಳೆಯಲು ಹಿಂದೇಟು ಹಾಕುವಂತೆ ಮಾಡುತ್ತಿದೆ.
ಇತ್ತೀಚೆಗೆ ನಡೆದ ಗಂಧದ ಮರ ಕಳವು ಘಟನೆಗಳು ಭಯ ಹುಟ್ಟಿಸುತ್ತಿವೆ. ಗಂಧಕಳ್ಳರು ಚಾಮರಾಜನಗರದಲ್ಲಿ ವೃದ್ಧನನ್ನೇ ಬಲಿ ಪಡೆದಿದ್ದರು. ಕೊಳ್ಳೇಗಾಲದಲ್ಲಿ ಮನೆ ಮುಂದೆ ಇದ್ದ ಮರವನ್ನು ಬೆದರಿಸಿ ಕಡಿದುಕೊಂಡು ಹೋಗಿದ್ದರು. ಮೈಸೂರು ನಗರದಲ್ಲಿ ಕೆಲವರು ತಮ್ಮ ಮನೆ ಬಳಿ ಬೆಳೆಸಿದ್ದ ಮರವನ್ನೇ ಕಡಿದುಕೊಂಡು ಹೋದ ಪ್ರಕರಣಗಳು ಬೇಕಾದಷ್ಟಿವೆ. ಹೀಗಿರುವಾಗ ಮತ್ತೆ ಗಂಧದ ನಾಡು ಆಗುವುದಾದರೂ ಹೇಗೆ? ಮುಂದೆ ಓದಿ...
ಮೂರು ದಶಕಗಳಲ್ಲಿ ಮರಗಳ ಮಾರಣ ಹೋಮ
ಅರಣ್ಯ ಸಮೃದ್ಧವಾಗಿದ್ದ ಕಾಲದಲ್ಲಿ ಮೂರು-ನಾಲ್ಕು ದಶಕಗಳ ಹಿಂದೆ ಅರಣ್ಯಗಳು ಸೇರಿದಂತೆ ಎಲ್ಲೆಂದರಲ್ಲಿ ಗಂಧದ ಮರಗಳು ಸೊಂಪಾಗಿ ಬೆಳೆದು ನೆರಳು ನೀಡುತ್ತಿದ್ದವು. ಅವುಗಳ ಬಗ್ಗೆ ಜನರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಕಳೆದ ಮೂರು ದಶಕಗಳಲ್ಲಿ ಗಂಧದ ಮರಗಳ ಮಾರಣ ಹೋಮವೇ ನಡೆದುಹೋಗಿದೆ.
ಚಾಮರಾಜನಗರ: ಮನೆ ಮಾಲೀಕನನ್ನು ಹತ್ಯೆ ಮಾಡಿದ ಶ್ರೀಗಂಧ ಕಳ್ಳರು
ಅಗರಬತ್ತಿ, ಸೋಪು, ಸುಗಂಧ ದ್ರವ್ಯ ಮುಂತಾದ ಕಾರ್ಖಾನೆಗಳು ವಿರಳವಾಗಿದ್ದ ಕಾಲದಲ್ಲಿ ಶ್ರೀಗಂಧದ ಮರಗಳು ಹೆಮ್ಮರವಾಗಿ ಬೆಳೆದು ನಿಂತು, ಆ ನಂತರ ಒಣಗಿಬಿದ್ದರೂ ಅದರ ಉಪಯೋಗ ಅರಿಯದೆ ಜನ ಸುಮ್ಮನಿದ್ದರು. ಇತರ ಮರಗಿಡಗಳ ನಡುವೆ ಇರುತ್ತಿದ್ದ ಅವುಗಳನ್ನು ರೈತರು ರಕ್ಷಿಸಿ ಬೆಳೆಸುತ್ತಿದ್ದರು. ಆದರೆ ತೋಟ, ಕಾಡು, ಇನ್ನಿತರ ಪ್ರದೇಶಗಳಲ್ಲಿ ಕಾಣಸಿಗುತ್ತಿದ್ದ ಶ್ರೀಗಂಧದ ಮರಗಳು ನಂತರದ ದಿನಗಳಲ್ಲಿ ಧರೆಗುರುಳಿ ನಾಶವಾಗಿ ಹೋಗಿದ್ದೇ ಗೊತ್ತಾಗಲಿಲ್ಲ.
ವಾಮಮಾರ್ಗದಲ್ಲಿ ಶ್ರೀಗಂಧದ ಖರೀದಿ
ಗಂಧದ ಎಣ್ಣೆಯ ಕಾರ್ಖಾನೆಗಳ ಮಾಲೀಕರು ವಾಮಮಾರ್ಗದಲ್ಲಿ ಗಂಧದ ತುಂಡುಗಳನ್ನು ಪಡೆಯಲು ಮುಂದಾಗಿದ್ದೇ ಗಂಧದ ಮರಗಳ ಮಾರಣ ಹೋಮಕ್ಕೆ ಕಾರಣವಾಯಿತು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಗಂಧದ ತುಂಡಿಗೆ ಉತ್ತಮ ಬೆಲೆ ದೊರೆಯುತ್ತಿದ್ದುದರಿಂದಾಗಿ ಕಾಡುಗಳ್ಳರು ಗಂಧದ ಮರವನ್ನು ಕಡಿದು ಸಾಗಿಸುವ ಕೃತ್ಯಕ್ಕಿಳಿದರು. ಕಳ್ಳರು ತಮ್ಮ ಜಿಲ್ಲೆಗಳ ಗಡಿದಾಟಿ ಕಳ್ಳತನಕ್ಕಿಳಿದರು. ಅದನ್ನು ಖರೀದಿ ಮಾಡಲು ಮಧ್ಯವರ್ತಿಗಳು ಅಲ್ಲಲ್ಲಿ ಹುಟ್ಟಿಕೊಂಡರು. ಯಾವಾಗ ಗಂಧಕ್ಕೆ ಕೆಜಿಗೆ ಇಂತಿಷ್ಟು ಹಣ ಸಿಗುತ್ತದೆ ಎಂಬುದು ಗೊತ್ತಾಯಿತೋ ಗ್ರಾಮೀಣ ಪ್ರದೇಶಗಳಲ್ಲಿ ಗಂಧ ಕಳ್ಳರ ಹಾವಳಿ ಹೆಚ್ಚಾಯಿತು. ರಾತ್ರೋ ರಾತ್ರಿ ಗಂಧದ ಮರಗಳನ್ನು ಕಡಿದು ಸಾಗಿಸಲು ಆರಂಭಿಸಿದರು.
ಶ್ರೀಗಂಧ ಮರಗಳಿಗೆ ಉಳಿಗಾಲವಿಲ್ಲ
ಕೆಲವರು ತಮ್ಮ ತೋಟದಲ್ಲಿದ್ದ ಮರಗಳನ್ನೇ ಮಾರಿಕೊಂಡರು. ಅಕ್ರಮ ಗಂಧಸಾಗಾಟದಲ್ಲಿ ತೊಡಗಿದಾಗ ಕೆಲವರು ಪೊಲೀಸರಿಗೆ ಸಿಕ್ಕಿಬಿದ್ದರೆ, ಮತ್ತೆ ಕೆಲವರು ಸಿಕ್ಕಿಕೊಳ್ಳದೆ ದಂಧೆ ಮುಂದುವರೆಸಿದರು. ಅಷ್ಟರಲ್ಲಾಗಲೇ ಅಸಂಖ್ಯಾತ ಗಂಧದ ಮರಗಳು ಧರೆಗುರುಳಿದ್ದವು. ಇನ್ನು ಶ್ರೀಗಂಧ ಮರಗಳಿಗೆ ಉಳಿಗಾಲವಿಲ್ಲ ಎಂದು ತಿಳಿದಾಗ ಸರ್ಕಾರ ಒಂದಷ್ಟು ನಿಬಂಧನೆಗಳನ್ನು ಹೇರಿತು. ಆದರೆ ಕಳ್ಳಸಾಗಾಣಿಕೆದಾರರು ಅದ್ಯಾವುದಕ್ಕೂ ಸೊಪ್ಪು ಹಾಕದೆ ವಾಮಮಾರ್ಗದಲ್ಲಿ ಗಂಧವನ್ನು ಸಾಗಿಸುವ ಕಾಯಕವನ್ನು ಮಾಡುತ್ತಲೇ ಇದ್ದರು. ಇದರಿಂದ ಒಂದೆಡೆ ಶ್ರೀಗಂಧ ಮರಗಳು ಸಂಪೂರ್ಣ ನಾಶವಾಗಿ ಹೋದರೆ, ಮತ್ತೊಂದೆಡೆ ಹಣದ ದುರಾಸೆಗೆ ಬಿದ್ದ ಕೆಲವರು ಇನ್ನೂ ಬಲಿಯದ ಮರಗಳಿಗೆ ಕೊಡಲಿಟ್ಟು ನಾಶ ಮಾಡಿದರು. ಈ ಕೃತ್ಯ ಈಗಲೂ ಮುಂದುವರೆಯುತ್ತಿರುವುದು ಮಾತ್ರ ದುರಂತವೇ ಸರಿ.
ಚಿಕ್ಕಮಗಳೂರು: ಲಕ್ಷಾಂತರ ರೂ. ಬೆಲೆಬಾಳುವ ಶ್ರೀಗಂಧ ಮರಗಳ ಕಳ್ಳತನ
ಮರ ಬೆಳೆಸುವುದಕ್ಕಿಂತ ರಕ್ಷಿಸುವುದೇ ಸವಾಲು
ಈ ನಡುವೆ ಅಳಿದುಳಿದ ಮರಗಳನ್ನು ರಕ್ಷಿಸಿಕೊಳ್ಳುವುದೇ ಸವಾಲಾಗಿದೆ. ಗಂಧದ ಮರದಿಂದಾಗಿ ತಮ್ಮ ಜೀವಕ್ಕೆ ಎಲ್ಲಿ ಅಪಾಯ ಬಂದು ಬಿಡಬಹುದೋ ಎಂಬ ಭಯವೂ ಜನರನ್ನು ಕಾಡುತ್ತಿದೆ. ಇದರ ನಡುವೆ ಸ್ಯಾಂಡಲ್ ಸ್ಪೈಕ್ ಎಂಬ ರೋಗವೂ ಬಾಧಿಸುತ್ತಿದೆ. ಮೈಕೋ ಪ್ಲಾಸ್ಮಾಟಿಕ್ ಆರ್ಗ್ಯನಿಸಂ ಎಂಬ ಬ್ಯಾಕ್ಟೀರಿಯಾದಿಂದ ಹರಡುವ ಈ ರೋಗಕ್ಕೆ ಬಲಿಯಾದ ಗಿಡಗಳ ತುದಿಭಾಗದ ಎಲೆಗಳು ಮೊದಲಿಗೆ ಒಣಗಿ ಬಳಿಕ ಕೊಂಬೆಗಳು ನಿತ್ರಾಣಗೊಂಡು ಸಾಯುತ್ತವೆ. ಈ ರೋಗ ಕೂಡ ಗಂಧದ ಮರವನ್ನು ಬಲಿ ತೆಗೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಗಂಧದ ಮರಗಳನ್ನು ಬೆಳೆಸಲು ಪ್ರೋತ್ಸಾಹಿಸುವ ಯೋಜನೆಗಳು ಮತ್ತು ಬೆಳೆಯುವವರಿಗೆ ರಕ್ಷಣೆ ಮೊದಲಾದವುಗಳನ್ನು ಮಾಡದೆ ಹೋದರೆ ಗಂಧದ ಮರಗಳು ಅಳಿದುಹೋಗುವುದಂತು ಖಚಿತ.