ಅರಮನೆಯ ಆವರಣದಲ್ಲಿ ಘರ್ಜಿಸುವ ಕಂಚಿನ ಹುಲಿಗಳು!
ಮೈಸೂರು, ಅಕ್ಟೋಬರ್ 16: ಮೈಸೂರು ಅರಮನೆ ಬರೀ ಅರಮನೆ ಅಲ್ಲ ಅದೊಂದು ಇತಿಹಾಸದ ಸಂಗ್ರಹಾಲಯ ಎಂದರೂ ತಪ್ಪಾಗಲಾರದು. ಇಲ್ಲಿ ಕಾಣಸಿಗುವ ಪ್ರತಿಯೊಂದಕ್ಕೂ ತನ್ನದೇ ಆದಂತಹ ಚರಿತ್ರೆಯಿದೆ.
ಅರಮನೆಯ ಆವರಣದಲ್ಲಿ ಹೆಜ್ಜೆ ಹಾಕುತ್ತಾ ಹೋದಾಗ ನಮ್ಮ ಕಣ್ಣಿಗೆ ಕಂಚಿನ ಹುಲಿಗಳು ಗೋಚರಿಸುತ್ತವೆ. ಎಂಟು ಕಡೆಯಲ್ಲಿರುವ ಈ ಹುಲಿಗಳು ನಮ್ಮನ್ನು ನೋಡಿ ಗರ್ಜಿಸುತ್ತಿವೆಯೇನೋ ಎಂಬಂತೆ ಭಾಸವಾಗುತ್ತದೆ. ಈ ಕಂಚಿನ ಹುಲಿಯ ಪ್ರತಿಮೆಗಳನ್ನು ಅರಮನೆಯ ಉತ್ತರ, ದಕ್ಷಿಣ ಹಾಗೂ ಪೂರ್ವ ದಿಕ್ಕು ಅಲ್ಲದೆ, ಜಯಮಾರ್ತಂಡ, ವರಾಹ, ಜಯರಾಮ ಮತ್ತು ಬಲರಾಮ ದ್ವಾರಕ್ಕೆ ಎದುರಾಗಿ ಹಾಗೂ ಕಲ್ಯಾಣ ಮಂಟಪ ಹತ್ತಿರವಿರುವ ತೆರೆದ ತೊಟ್ಟಿಯ ಭಾಗ (ಜಟ್ಟಿ ಕಾಳಗ ಸ್ಥಳ)ದಲ್ಲಿ ಹೀಗೆ ಒಟ್ಟು ಎಂಟು ಕಡೆ ಪ್ರತಿಷ್ಠಾಪಿಸಲಾಗಿದೆ.
ಇತಿಹಾಸದ ಕಥೆಗೆ ಸಾಕ್ಷಿಯಾದ ಹುಲಿಗಳು
ಮೇಲ್ನೋಟಕ್ಕೆ ಕಂಚಿನ ಹುಲಿಯ ಈ ಪ್ರತಿಮೆಯನ್ನು ಅರಮನೆಯ ಅಲಂಕಾರಕ್ಕಾಗಿ ಪ್ರತಿಷ್ಠಾಪಿಸಿರಬಹುದು ಎಂದು ನಾವೇನಾದರೂ ಆಲೋಚನೆ ಮಾಡಿದರೆ ಅದು ತಪ್ಪಾಗಿ ಬಿಡುತ್ತದೆ. ಏಕೆಂದರೆ ಅರಮನೆ ಒಳಗಾಗಲೀ, ಹೊರಗಾಗಲೀ ಯಾವುದನ್ನು ಸುಖಾಸುಮ್ಮನೆ ನಿರ್ಮಿಸಿಲ್ಲ ಎಲ್ಲದಕ್ಕೂ ಒಂದೊಂದು ಕಾರಣವಿದೆ ಮತ್ತು ಅದು ಇವತ್ತು ಇತಿಹಾಸದ ಕಥೆ ಸಾಕ್ಷಿಯಾಗಿವೆ.
ನಾಳೆಯಿಂದ ಮೈಸೂರು ರಾಜವಂಶಸ್ಥರ ಖಾಸಗಿ ದರ್ಬಾರ್ ಆರಂಭ
ಹಾಗಾದರೆ ಕಂಚಿನ ಹುಲಿಗಳ ನಿರ್ಮಾಣದ ಹಿಂದೆ ಅಂತಹದೊಂದು ವಿಶೇಷತೆ ಏನಿರಬಹುದು ಎಂಬ ಕುತೂಹಲ ಎಲ್ಲರನ್ನು ಕಾಡುತ್ತದೆ. ಆದರೆ ಇವುಗಳ ನಿರ್ಮಾಣದ ಕುರಿತಂತೆ ತಿಳಿಯುತ್ತಾ ಹೋದರೆ ರೋಚಕ ಇತಿಹಾಸವೊಂದು ತೆರೆದುಕೊಳ್ಳುತ್ತಾ ಹೋಗುತ್ತದೆ.
ಮಹಾರಾಜರು ಹುಲಿ ನೋಡಿ ಖುಷಿಪಡುತ್ತಿದ್ದರು
ಅದು ಸ್ವಾತಂತ್ರ್ಯ ಪೂರ್ವದ ಕಾಲ, ಮೈಸೂರು ಸಂಸ್ಥಾನವನ್ನು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಆಳುತ್ತಿದ್ದರು. ಆಗ ಹಳೆಯ ಅರಮನೆಯಿತ್ತು. ಅಲ್ಲಿ ರಾಜಪರಿವಾರ ಸೇವಕರು ಇದ್ದರು. ಅವತ್ತಿನ ಕಾಲದಲ್ಲಿ ಎಲ್ಲೆಡೆ ಕಾಡುಗಳಿದ್ದವು. ಹೀಗಾಗಿ ಕಾಡು ಪ್ರಾಣಿಗಳು ಅರಮನೆ ಸುತ್ತಮುತ್ತ ಅಡ್ಡಾಡುತ್ತಿದ್ದವು. ಅವು ಯಾವುದೂ ಮಹಾರಾಜರಿಗೆ ಅಚ್ಚರಿ ಅನಿಸಲಿಲ್ಲ. ಇವುಗಳ ನಡುವೆ ಅವರನ್ನು ಹೆಚ್ಚಾಗಿ ಕಾಡಿದ್ದು ಅರಮನೆಯ ಹೊರ ಆವರಣದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹುಲಿಗಳು. ಈ ಹುಲಿಗಳು ಹೊರ ಆವರಣದಲ್ಲಿ ಅಡ್ಡಾಡಿದರೂ ಯಾರಿಗೂ ತೊಂದರೆ ನೀಡುತ್ತಿರಲಿಲ್ಲವಂತೆ. ಸೌಮ್ಯತೆಯಿಂದ ವರ್ತಿಸುತ್ತಿದ್ದ ಹುಲಿಗಳನ್ನು ನೋಡಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಖುಷಿಪಡುತ್ತಾ ದಿನ ಕಳೆಯುತ್ತಿದ್ದರಂತೆ. ಆದರೆ ಕೆಲವು ವರ್ಷಗಳ ನಂತರ ಹುಲಿಗಳು ಬರುವುದನ್ನು ನಿಲ್ಲಿಸಿ ಬಿಟ್ಟವು. ಇದು ಅವರಿಗೆ ಅತೀವ ವೇದನೆಯನ್ನುಂಟು ಮಾಡಿತಂತೆ. ಮುಂದೆ ಈ ವಿಚಾರವನ್ನು ಅವರು ಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರ್ಗೆ ಹೇಳಿದ್ದರಂತೆ. ಇದನ್ನು ಕೇಳಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಅರಮನೆ ಆವರಣದಲ್ಲಿ ಹುಲಿಗಳು ಅಡ್ಡಾಡುತ್ತಿದ್ದ ನೆನಪಿಗಾಗಿ ಪ್ರತಿಮೆಗಳನ್ನು ನಿರ್ಮಿಸುವ ತೀರ್ಮಾನ ಮಾಡಿದರು.
ನಾಲ್ವಡಿ ಒಡೆಯರ ಕಾಲದಲ್ಲಿ ನಿರ್ಮಾಣ
ಹುಲಿಗಳ ಪ್ರತಿಮೆ ನಿರ್ಮಾಣ ಮಾಡಲು ಶಿಲ್ಪಿಗಳನ್ನು ಹುಡುಕುತ್ತಿದ್ದರಂತೆ ಅದೇ ಸಂದರ್ಭ ಅರಮನೆ ವೀಕ್ಷಣೆಗೆ ಬಂದಿದ್ದ ಪ್ರಖ್ಯಾತ ಶಿಲ್ಪ ತಜ್ಞ ಬ್ರಿಟನ್ನ ರಾಯಲ್ ಅಕಾಡೆಮಿಯ ರಾಬರ್ಡ್ ವಿಲಿಯಂ ಕಾಲ್ಟನ್ ಅವರೊಂದಿಗೆ ಮಾತನಾಡುತ್ತಾ, ತಮ್ಮ ಮನದ ಇಂಗಿತವನ್ನು ತಿಳಿಸಿದರು. ಆಗ ರಾಬರ್ಡ್ ವಿಲಿಯಂ ಕಾಲ್ಟನ್ ಅವರು ಮೂರು ತಿಂಗಳ ಅವಧಿಯೊಳಗೆ ಹುಲಿಗಳ ಪ್ರತಿಮೆಯನ್ನು ಮಾಡಿಕೊಡಲು ಒಪ್ಪಿದರು. ಅದರಂತೆ 1909ರ ಅವಧಿಯಲ್ಲಿ ಅರಮನೆಯ ತೊಟ್ಟಿಯ ಭಾಗದ ನಾಲ್ಕು ಕಡೆ ಕಂಚಿನ ಹುಲಿ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಯಿತು.
ಮೈಸೂರು ದಸರಾ: ಕುಶಾಲು ತೋಪು ಸಿಡಿಸುವ ತಾಲೀಮು ಆರಂಭ
ಪ್ರವಾಸಿಗರಿಗೆ ಆಕರ್ಷಣಾ ಕೇಂದ್ರ
ಇವತ್ತು ಅರಮನೆಯಲ್ಲಿ ಈ ಹುಲಿಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿವೆ. ಅದರಲ್ಲೂ ಮೊಬೈಲ್ ಬಂದ ಬಳಿಕವಂತು ಅದರಲ್ಲೂ ಇತ್ತೀಚಿಗಿನ ಸೆಲ್ಫಿ ಯುಗದಲ್ಲಿ ದೂರದಿಂದ ಬರುವ ಪ್ರವಾಸಿಗರಿಗೆ ಇದರ ಬಳಿ ನಿಂತು ಒಂದು ಫೋಟೋ ತೆಗೆದುಕೊಂಡು ಹೋಗದಿದ್ದರೆ ಸಮಾಧಾನವಾಗುವುದಿಲ್ಲ.