ಹರ್ಯಾಣ ಮೊದಲೋ ಕರ್ನಾಟಕ ಮೊದಲೋ..! ಇಲ್ಲಿದೆ ರೆಸಾರ್ಟ್ ರಾಜಕಾರಣದ ಇತಿಹಾಸ
ಮಹಾರಾಷ್ಟ್ರದಲ್ಲಿ ಶಿವಸೇನಾ ಶಾಸಕರ ದೊಡ್ಡ ಗುಂಪು ಬಂಡಾಯ ಎದ್ದು ಸರಕಾರ ಬದಲಾವಣೆಗೆ ಎಡೆ ಮಾಡಿಕೊಡುತ್ತಿದೆ. ಶಿವಸೇನಾ ಭಿನ್ನಮತೀಯರು ಮೊದಲು ಗುಜರಾತ್ನ ಸೂರತ್ ಮತ್ತು ನಂತರ ಅಸ್ಸಾಂನ ಗುವಾಹಟಿಯ ಹೋಟೆಲ್ ಮತ್ತು ರೆಸಾರ್ಟ್ಗಳಲ್ಲಿ ಉಳಿದುಕೊಂಡಿದ್ದು ಸದ್ಯ ಸುದ್ದಿಯಲ್ಲಿರುವ ಸಂಗತಿ.
ಶಾಸಕರು ರೆಸಾರ್ಟ್ಗೆ ಹೋಗುವ ವಿಚಾರ ಕರ್ನಾಟಕದವರ ಮಟ್ಟಿಗೆ ಹೊಸ ವಿಷಯವೇನಲ್ಲ. ಈಗ್ಗೆ ಹಲವು ವರ್ಷಗಳಿಂದ ಪ್ರತೀ ಸರಕಾರ ರಚನೆಯಾದಾಗಲೂ ಕರ್ನಾಟಕದ ಶಾಸಕರಿಗೆ ಕೆಲ ದಿನಗಳ ಮಟ್ಟಿಗಾದರೂ ರೆಸಾರ್ಟ್ವಾಸದ ಭಾಗ್ಯ ಇದ್ದೇ ಇರುತ್ತದೆ.
ದೇವೇಂದ್ರ ದೆಹಲಿಗೆ, ಪಿಜಿಪಿ ರಾಜಭವನಕ್ಕೆ ಅಘಾಡಿ ಆಯ್ತ ಲಗಾಡಿ!
ಅಸಾಮಾನ್ಯ ಸಂದರ್ಭಗಳಲ್ಲಿ ಸರಕಾರ ಉಳಿಸಿಕೊಳ್ಳಲು ಅಥವಾ ಸರಕಾರ ಉರುಳಿಸಲು ರಾಜಕೀಯ ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್ಗೆ ಕರೆದುಕೊಂಡು ಭದ್ರವಾಗಿ ಇರಿಸುವ ವ್ಯವಸ್ಥೆ ಮಾಡುತ್ತವೆ. ಇದೆ ರೆಸಾರ್ಟ್ ರಾಜಕಾರಣ.
ಕರ್ನಾಟಕವಷ್ಟೇ ಅಲ್ಲ, ಬೇರೆ ರಾಜ್ಯಗಳಿಗೂ ಈಗ ರೆಸಾರ್ಟ್ ಪೊಲಿಟಿಕ್ಸ್ ಸಾಮಾನ್ಯವಾಗಿದೆ. ಮಹಾರಾಷ್ಟ್ರದ ೪೦ಕ್ಕೂ ಹೆಚ್ಚು ಭಿನ್ನಮತೀಯ ಶಾಸಕರು ಹಲವು ದಿನಗಳ ಬಳಿಕ ಇಂದು ಗುರುವಾರ ಮುಂಬೈಗೆ ಮರಳಲಿದ್ದಾರೆ. ನಾಳೆ ಶುಕ್ರವಾರ ಬಹುಮತ ಪರೀಕ್ಷೆ ಮುಗಿಯುವವರೆಗೂ ಇವರನ್ನು ಹಿಡಿದಿಡುವುದು ಸದ್ಯಕ್ಕೆ ಭಿನ್ನಮತೀಯ ಗುಂಪಿನ ನಾಯಕರಿಗೆ ಸವಾಲಿನ ಕೆಲಸವಾಗಿದೆ.
ಶಾಸಕರನ್ನು ಹೀಗೆ ರೆಸಾರ್ಟ್ನಲ್ಲಿ ಕೂಡಿಹಾಕುವುದು, ಅಥವಾ ಸೇರಿಸಿಡುವುದು, ಅಥವಾ ಒಂದುಗೂಡಿಸುವುದು ಯಾವಾಗ ಆರಂಭವಾಯಿತು ಎಂಬುದು ಕುತೂಹಲಕಾರಿಯಾಗಿದೆ. ರೆಸಾರ್ಟ್ ರಾಜಕಾರಣ ಎಂದರೇ ಕರ್ನಾಟಕದ ಹೆಸರೇ ಮೊದಲು ಬರುತ್ತದೆಯಾದರೂ ಆ ಪದ್ಧತಿ ಆರಂಭಿಸಿದ ಮೊದಲಿಗ ಕರ್ನಾಟಕವಲ್ಲ. ಅದು ಹರ್ಯಾಣ.
1982: ಹರ್ಯಾಣದಲ್ಲಿ ಮೊದಲು ರೆಸಾರ್ಟ್ ರಾಜಕಾರಣ
ಹಿರಿಯ ತಲೆಮಾರಿನವರಿಗೆ ಹರಿಯಾಣದ ಮಾಜಿ ಸಿಎಂ ದೇವಿಲಾಲ್ ಹೆಸರು ನೆನಪಿರಬಹುದು. ಇವರೇ ನಮ್ಮ ಭಾರತದಲ್ಲಿ ರೆಸಾರ್ಟ್ ರಾಜಕಾರಣಕ್ಕೆ ಚಾಲನೆ ಕೊಟ್ಟವರು.
ಅದು 1982. ಹರಿಯಾಣದ 90 ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಲೋಕದಳ (ಐಎನ್ಎಲ್ಡಿ) ಮೈತ್ರಿಕೂಟ 37 ಸ್ಥಾನ ಗೆದ್ದರೆ ಕಾಂಗ್ರೆಸ್36 ಸ್ಥಾನ ಗೆದ್ದಿತು. ಯಾರಿಗೂ ಬಹುಮತ ಬರಲಿಲ್ಲ. ಆಗ ಅತಿಹೆಚ್ಚು ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಪಕ್ಷಕ್ಕೆ ಸರಕಾರ ರಚಿಸಲು ರಾಜ್ಯಪಾಲು ಆಹ್ವಾನ ಕೊಟ್ಟರು. ಈ ಸಂದರ್ಭದಲ್ಲಿ ಐಎನ್ಎಲ್ಡಿ-ಬಿಜೆಪಿ ಮೈತ್ರಿಕೂಟದ ನಾಯಕರಾಗಿದ್ದ ದೇವಿಲಾಲ್ ಬರೋಬ್ಬರಿ 48 ಶಾಸಕರನ್ನು ನ್ಯೂಡೆಲ್ಲಿಯ ಹೋಟೆಲ್ವೊಂದಕ್ಕೆ ಕರೆದೊಯ್ದು ಇರಿಸಿದ್ದರು. ಅದರೆ, ಶಾಸಕರನ್ನು ಈ ರೀತಿಯಾಗಿ ಹಿಡಿದುಕೊಂಡರೂ ಬಹುಮತ ಪರೀಕ್ಷೆಯಲ್ಲಿ ಕಾಂಗ್ರೆಸ್ ಗೆಲುವನ್ನು ತಡೆಯಲು ಸಾಧ್ಯವಾಗಲಿಲ್ಲ.
ಮಹಾರಾಷ್ಟ್ರ ಬಿಕ್ಕಟ್ಟು; ಸ್ಪೀಕರ್ ಏಕೆ ಪ್ರಸಿದ್ಧಿಯಾಗುತ್ತಿದ್ದಾರೆ?
ಕರ್ನಾಟಕ
ಹರಿಯಾಣದಲ್ಲಿ ದೇವಿಲಾಲ್ 48 ಶಾಸಕರನ್ನು ಹೋಟೆಲ್ಗೆ ಕಳುಹಿಸಿದರೆ 1983ರಲ್ಲಿ ರಾಮಕೃಷ್ಣ ಹೆಗಡೆ ತಮ್ಮ ಜನತಾ ಪಕ್ಷದ ಶಾಸಕರನ್ನು ರೆಸಾರ್ಟ್ಗೆ ಕಳುಹಿಸಿದ್ದರು.
1983ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರ ರಚನೆ ಮಾಡಿದ್ದು ರಾಮಕೃಷ್ಣ ಹೆಗಡೆ. ಆಗ ಅವರಿಗೆ ವಿಶ್ವಾಸಮತ ಯಾಚನೆಯ ಪರೀಕ್ಷೆ ಎದುರಾಗಿತ್ತು. ತಮ್ಮ ಸರಕಾರವನ್ನು ಉಳಿಸಿಕೊಳ್ಳಲು ರಾಮಕೃಷ್ಣ ಹೆಗಡೆ 80 ಶಾಸಕರನ್ನು ಬೆಂಗಳೂರು ಹೊರವಲಯದ ರೆಸಾರ್ಟ್ವೊಂದರಲ್ಲಿ ಇಟ್ಟಿದ್ದರು. ಕಾಂಗ್ರೆಸ್ಸಿಗರು ತಮ್ಮ ಶಾಸಕರನ್ನು ಸೆಳೆದುಕೊಳ್ಳುವುದನ್ನು ತಪ್ಪಿಸಲು ಹೆಗಡೆ ಅನುಸರಿಸಿದ್ದ ಈ ತಂತ್ರ ಕೆಲಸ ಮಾಡಿತ್ತು. ಅಂತಿಮವಾಗಿ ರಾಮಕೃಷ್ಣಹೆಗಡೆ ವಿಶ್ವಾಸಮತ ಪರೀಕ್ಷೆಯಲ್ಲಿ ಗೆಲುವು ಸಾಧಿಸಲು ಯಶಸ್ವಿಯಾದರು.
ಕರ್ನಾಟಕದಲ್ಲಿ ಗಣಿಧಣಿಗಳು ರಾಜಕೀಯ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆಯೇ ರೆಸಾರ್ಟ್ ರಾಜಕಾರಣ 2010ರಲ್ಲಿ ಮತ್ತೆ ಗರಿಗೆದರಿತು. ಯಡಿಯೂರಪ್ಪ ಸರಕಾರ ವಿರುದ್ಧ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಬಂಡಾಯ ಎದ್ದಿತ್ತು. ಅಲ್ಲಿಂದ ಈಚೆಗೆ ಕರ್ನಾಟಕದಲ್ಲಿ ರೆಸಾರ್ಟ್ ಪೊಲಿಟಿಕ್ಸ್ ತೀರಾ ಸಾಮಾನ್ಯವಾಗಿ ಹೋಗಿದೆ. ಕಾಂಗ್ರೆಸ್ ಪಕ್ಷದವರೂ ಕೂಡ ತಮ್ಮ ಶಾಸಕರನ್ನು ರೆಸಾರ್ಟ್ಗೆ ಕಳುಹಿಸಲು ಆರಂಭಿಸಿದ್ದಾರೆ.
ಅಂಧ್ರಪ್ರದೇಶ
ನಮ್ಮ ನೆರೆಯ ಆಂಧ್ರಪ್ರದೇಶದಲ್ಲಿ ೧೯೮೪ರಲ್ಲಿ ಮೊದಲ ಬಾರಿಗೆ ರೆಸಾರ್ಟ್ ರಾಜಕಾರಣ ಕಂಡಿದ್ದು. ಎನ್.ಟಿ. ರಾಮರಾವ್ ಹೃದಯಶಸ್ತ್ರಚಿಕಿತ್ಸೆಗೆಂದು ಅಮೆರಿಕಕ್ಕೆ ಹೋಗಬೇಕಾಗಿ ಬಂದಾಗ ನಂದೇಂಡ್ಲ ಭಾಸ್ಕರ್ ರಾವ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದರು. ಆಗ ತೆಲುಗು ದೇಶಂ ಪಕ್ಷದೊಳಗೆ ಭಿನ್ನಮತ ಸ್ಫೋಟಗೊಂಡು ಕೊನೆಗೆ ಎಲ್ಲಾ ಟಿಡಿಪಿ ಶಾಸಕರನ್ನು ಬೆಂಗಳೂರು, ಆ ನಂತರ ದೆಹಲಿಗೆ ಕಳುಹಿಸಲಾಯಿತು. ಆ ನಂತರ ಎನ್ಟಿಆರ್ ಮತ್ತೆ ಸಿಎಂ ಆದರು.
1995ರಲ್ಲಿ ಎನ್ಟಿಆರ್ ಅಳಿಯ ಎನ್ ಚಂದ್ರಬಾಬು ನಾಯ್ಡು ಟಿಡಿಪಿಯಲ್ಲಿ ಬಂಡಾಯ ಎದ್ದು ಹಲವು ಶಾಸಕರನ್ನು ಹೈದರಾಬಾದ್ನ ಹೋಟೆಲ್ವೊಂದರಲ್ಲಿಟ್ಟಿದ್ದರು. ಈ ಕ್ರಮದಿಂದ ಚಂದ್ರಬಾಬು ನಾಯ್ಡು ಅಧಿಕಾರ ಹಿಡಿಯಲು ಸಾಧ್ಯವಾಯಿತು. ಎನ್ಟಿಆರ್ ನೇಪಥ್ಯಕ್ಕೆ ಸರಿಯುವಂತಾಯಿತು.
ಗುಜರಾತ್
1995ರಲ್ಲಿ ಅಂದಿನ ಗುಜರಾತ್ ಸಿಎಂ ಕೇಶುಭಾಯ್ ಪಟೇಲ್ ವಿರುದ್ಧ ಶಂಕರ್ ಸಿಂಗ್ ವಘೇಲಾ ಬಂಢಾಯ ಎದ್ದಿದ್ದರು. ವಘೇಲಗೆ ನಿಷ್ಠರಾಗಿದ್ದ 47 ಶಾಸಕರನ್ನು ಮಧ್ಯಪ್ರದೇಶದ ಹೋಟೆಲ್ವೊಂದರಲ್ಲಿ ಇರಿಸಿದ್ದರು. ನಂತರ ಕಾಂಗ್ರೆಸ್ ಜೊತೆ ಸೇರಿ ವಘೇಲಾ ಸರಕಾರ ರಚಿಸಿ ಎರಡು ವರ್ಷ ಸಿಎಂ ಆದರು.
ಉತ್ತರಪ್ರದೇಶ
ಉತ್ತರಪ್ರೇಶದಲ್ಲಿ 1998ರಲ್ಲಿ ರೆಸಾರ್ಟ್ ರಾಜಕಾರಣ ಮೊದಲಿಟ್ಟಿತು. ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರವನ್ನು ರಾಜ್ಯಪಾಲರು ವಜಾಗೊಳಿಸಿ ಕಾಂಗ್ರೆಸ್ನ ಜಗದಾಂಬಿಕಾ ಪಾಲ್ ಅವರನ್ನು ಸಿಎಂ ಮಾಡಿದರು. ಆಗ ಬಹುಮತ ಸಾಬೀತು ಮಾಡುವ ಪರೀಕ್ಷೆ ಇದ್ದರಿಂದ ಕಾಂಗ್ರೆಸ್ ಶಾಸಕರನ್ನು ಹಿಡಿದಿಡಲು ರಹಸ್ಯ ಸ್ಥಳವೊಂದರಲ್ಲಿ ಇರಿಸಲಾಗಿತ್ತು.
ಬಿಹಾರ
ಬಿಹಾರದಲ್ಲಿ 2000ರ ವರ್ಷದಲ್ಲಿ ನಿತೀಶ್ ಕುಮಾರ್ ಸಿಎಂ ಆದರು. ಆಗ ಎನ್ಡಿಎ ಮೈತ್ರಿಕೂಟಕ್ಕೆ 151 ಶಾಸಕರಿದ್ದರೆ, ಲಾಲೂಪ್ರಸಾದ್ ನೇತೃತ್ವದಲ್ಲಿ ಆರ್ಜೆಡಿ-ಕಾಂಗ್ರೆಸ್ ಮೈತ್ರಿಕೂಟದ ಬಳಿ 159 ಶಾಸಕರಿದ್ದರು. ಬಹುಮತ ಪರೀಕ್ಷೆ ಇದ್ದರಿಂದ ಆರ್ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್ನಲ್ಲಿ ಸುರಕ್ಷಿತವಾಗಿ ಇರಿಸಿದ್ದವು. ಅಂತಿಮವಾಗಿ ನಿತೀಶ್ ಕುಮಾರ್ ವಿಶ್ವಾಸಮತ ಪರೀಕ್ಷೆ ಗೆಲ್ಲಲು ವಿಫಲರಾದರು.
ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ ಈಗ ನಡೆಯುತ್ತಿರುವ ರೆಸಾರ್ಟ್ ರಾಜಕಾರಣ ಇದೇ ಮೊದಲಲ್ಲ. 2002ರಲ್ಲೂ ಎನ್ಸಿಪಿ ಶಾಸಕರನ್ನು ಕರ್ನಾಟಕದ ರೆಸಾರ್ಟ್ವೊಂದರಲ್ಲಿ ಇರಿಸಲಾಗಿತ್ತು. ಆಗ ಬಿಜೆಪಿ ಮತ್ತು ಶಿವಸೇನಾ ಪಕ್ಷಗಳು ತಮ್ಮ ಶಾಸಕರನ್ನು ಸೆಳೆದುಕೊಳ್ಳಬಹುದು ಎಂಬ ಭಯದಲ್ಲಿ ಸಿಎಂ ವಿಲಾಸ್ ರಾವ್ ಪಾಟೀಲ್ ತಮ್ಮ ಎನ್ಸಿಪಿ ಪಕ್ಷದ 71 ಶಾಸರಕನ್ನು ಮೈಸೂರಿನ ರೆಸಾರ್ಟ್ಗೆ ಕಳುಹಿಸಿದ್ದರು.
ಉತ್ತರಾಖಂಡ್
ಉತ್ತರಾಖಂಡ್ ರಾಜ್ಯದಲ್ಲಿ 2016ರಲ್ಲಿ ಶಾಸಕರು ರೆಸಾರ್ಟ್ಗೆ ಹೋಗುವ ಪರಿಸ್ಥಿತಿ ಬಂದಿತ್ತು. ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ವಜಾಗೊಳಿಸುವಂತೆ ಕೋರಿ ಬಿಜೆಪಿ ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿದ್ದರು. ಆಗ 27 ಬಿಜೆಪಿ ಶಾಸಕರ ಜೊತೆ 9 ಭಿನ್ನಮತೀಯ ಕಾಂಗ್ರೆಸ್ ಶಾಸಕರೂ ಇದ್ದರು. ಆಗ ಬಿಜೆಪಿ ಎರಡು ಗುಂಪುಗಳಲ್ಲಿ ಶಾಸಕರನ್ನು ಜೈಪುರದ ಬೇರೆ ಬೇರೆ ರೆಸಾರ್ಟ್ಗಳಲ್ಲಿ ಇರಿಸಿತ್ತು.
ತಮಿಳುನಾಡು
2016ರ ಡಿಸೆಂಬರ್ನಲ್ಲಿ ಜಯಲಲಿತಾ ನಿಧನರಾದಾಗ ಪನ್ನೀರ್ ಓ ಸೆಲ್ವಂ ಅವರನ್ನು ಹಂಗಾಮಿ ಸಿಎಂ ಮಾಡಲಾಯಿತು. ಶಶಿಕಲಾ ಅಧಿಕಾರ ಹಿಡಿಯಲು ಯೋಜಿಸುತ್ತಿರುವಂತೆಯೇ ಪನ್ನೀರ್ ಸೆಲ್ವಂ ಬಂಡಾಯ ಎದ್ದಿದ್ದರು. ಶಶಿಕಲಾ ೧೨೨ ಶಾಸಕರನ್ನು ಕರೆದುಕೊಂಡು ರೆಸಾರ್ಟ್ನಲ್ಲಿ ಇಟ್ಟರು. ಶಾಸಕಾಂಗ ಪಕ್ಷದ ನಾಯಕಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು. ಅದಾಗಿ ಒಂದು ದಿನದ ಬಳಿಕ ಪನ್ನೀರ್ ಸೆಲ್ವಂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಅಕ್ರಮ ಆಸ್ತಿ ಹಗರಣದದಲ್ಲಿ ಕೋರ್ಟ್ನಿಂದ ತೀರ್ಪು ಬರುವುದಿದ್ದರಿಂದ ಶಶಿಕಲಾ ಸಿಎಂ ಆಗಲಿಲ್ಲ. ಕೋರ್ಟ್ ತೀರ್ಪಿನಲ್ಲಿ ಶಶಿಕಲಾಗೆ ಜೈಲುಶಿಕ್ಷೆ ನೀಡಲಾಯಿತು. ಎಡಪ್ಪಾಡಿ ಪಳನಿಸ್ವಾಮಿಯನ್ನು ಸಿಎಂ ಆಗಿ ಮಾಡಿ ಶಶಿಕಲಾ ಜೈಲಿಗೆ ಹೋದರು.
ಮಧ್ಯಪ್ರದೇಶ
2020ರಲ್ಲಿ ಜ್ಯೋತಿರಾದಿತ್ಯ ಸಿಂದ್ಯಾ ಕಾಂಗ್ರೆಸ್ ತೊರೆಯಲು ನಿರ್ಧರಿಸಿದರು. ಆಗ ಕಾಂಗ್ರೆಸ್ನ 16 ಸೇರಿ ಒಟ್ಟು 18 ಶಾಸಕರು ಬೆಂಗಳೂರಿನ ರೆಸಾರ್ಟ್ನಲ್ಲಿ ಇದ್ದರು. ಬಳಿಕ ಇವರು ಬಿಜೆಪಿ ಸೇರಿದರು. ಸುಪ್ರೀಂ ಕೋರ್ಟ್ ಆದೇಶದಂತೆ ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ ಬಿಜೆಪಿ ಗೆದ್ದಿತು. ಶಿವರಾಜ್ ಸಿಂಗ್ ಚೌಹಾಣ್ ಸಿಎಂ ಆದರು.
ಹಾಗೆಯೇ, ಗುಜರಾತ್ನ ರಾಜ್ಯಸಭಾ ಚುನಾವಣೆಯೊಂದರಲ್ಲಿ ಕಾಂಗ್ರೆಸ್ನ ಹಲವು ಶಾಸಕರನ್ನು ಬೆಂಗಳೂರಿನ ಈಗಲ್ಟನ್ ರೆಸಾರ್ಟ್ನಲ್ಲಿ ಇರಿಸಲಾಗಿದ್ದು ನೆನಪಿರಬಹುದು. ಡಿಕೆ ಶಿವಕುಮಾರ್ ಈ ರೆಸಾರ್ಟ್ನಲ್ಲಿ ಹೆಬ್ಬಂಡೆಯಂತೆ ನಿಂತು ಕಾವಲು ಕಾದಿದ್ದರು.
(ಒನ್ಇಂಡಿಯಾ ಸುದ್ದಿ)