ಬಿಜೆಪಿಗೆ ವರದಾನವಾಗಿ ಪರಿಣಮಿಸಿದ 'ಕೈ' ಶಾಸಕರ ಬಡಿದಾಟ!
ಬಿಜೆಪಿಯವರು ಆಪರೇಷನ್ ಕಮಲದ ಮೂಲಕ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ಅವರ ವಿರುದ್ಧವೇ ಸಮರ ಸಾರಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆದುಕೊಳ್ಳಲು ಹವಣಿಸುತ್ತಿದ್ದ ಕಾಂಗ್ರೆಸ್ಗೆ ಇದೀಗ ರೆಸಾರ್ಟ್ ರಾಜಕಾರಣ ಮತ್ತು ಶಾಸಕರ ನಡುವಿನ ಮಾರಾಮಾರಿ ಭಾರೀ ಹೊಡೆತ ನೀಡಿದೆ.
ತಮ್ಮ ಪಕ್ಷದ ಶಾಸಕರಿಗೆ ಕೋಟಿ ಹಣದ ಆಮಿಷವೊಡ್ಡಿ ಸೆಳೆಯುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದು, ಭ್ರಷ್ಟಾಚಾರದ ಹಣವನ್ನು ಕುದುರೆ ವ್ಯಾಪಾರಕ್ಕೆ ಬಳಸುತ್ತಿದ್ದಾರೆ ಎಂಬ ಆರೋಪಗಳನ್ನು ಮಾಡುವ ಮೂಲಕ ಜತೆಗೆ ಬಿಜೆಪಿ ಏನೇ ತಂತ್ರ ಮಾಡಿದರೂ ಅದು ನಡೆಯಲ್ಲ. ನಮ್ಮ ಶಾಸಕರಲ್ಲಿ ಅಸಮಾಧಾನವಿಲ್ಲ. ನಾವೆಲ್ಲರೂ ಒಂದಾಗಿದ್ದೇವೆ ಎಂಬುದನ್ನು ತೋರಿಸುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಯತ್ನಕ್ಕೆ ಸದ್ಯದ ಬೆಳವಣಿಗೆ ತಣ್ಣೀರೆರಚಿದಂತಾಗಿದೆ.
ಸಂಕ್ರಾಂತಿ ವೇಳೆಗೆ ಏನಾದರು ಮಾಡಿ ಒಂದಿಷ್ಟು ಕಾಂಗ್ರೆಸ್ ಶಾಸಕರನ್ನು ತಮ್ಮತ್ತ ಸೆಳೆದು ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ನೇತೃತ್ವದ ಆಡಳಿತವನ್ನು ಕರ್ನಾಟಕದಲ್ಲಿ ತರಲೇಬೇಕೆಂದು ಹಠಕ್ಕೆ ಬಿದ್ದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯತಂತ್ರ ಫಲಿಸಲೇ ಇಲ್ಲ.
ಇತ್ತ ಜನ ಯಾವಾಗ ಅಸಮಾಧಾನಗೊಳ್ಳುತ್ತಿದ್ದಾರೆ ಎಂಬುದು ಗೊತ್ತಾಯಿತೋ ಹೊರಗೆ ರೆಸಾರ್ಟ್ನಲ್ಲಿದ್ದ ಶಾಸಕರನ್ನು ರಾಜ್ಯಕ್ಕೆ ಕರೆತರುವ ಮತ್ತು ನಾವು ಸರ್ಕಾರವನ್ನು ಅಸ್ಥಿರಗೊಳಿಸಲ್ಲ ಎಂಬ ಕದನವಿರಾಮ ಘೋಷಿಸಿದ್ದಲ್ಲದೆ, ಶಾಸಕರೆಲ್ಲ ತಮ್ಮ ಕ್ಷೇತ್ರಗಳಿಗೆ ತೆರಳಿ ಬರ ಅಧ್ಯಯನ ನಡೆಸಲಿದ್ದಾರೆ ಎಂಬುದಾಗಿ ಹೇಳಿ ಜಾರಿಕೊಂಡರು. ಬಿ.ಎಸ್.ಯಡಿಯೂರಪ್ಪ ಕದನ ವಿರಾಮ ಘೋಷಿಸಿದ ಕೂಡಲೇ ಅವರೇನು ಕೈಕಟ್ಟಿ ಕುಳಿತುಕೊಳ್ಳುತ್ತಾರೆ ಎನ್ನುವಂತಿಲ್ಲ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನಿರಬೇಕು : ಬೆಂಗಳೂರಿನ ಜನ ಹೇಳಿದ್ದೇನು?
ಅದು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಯತ್ನವಷ್ಟೆ. ಆದರೆ ಯಡಿಯೂರಪ್ಪ ಅವರ ನಸೀಬು ಸರಿಯಿತ್ತು. ರಾಜ್ಯದ ಸರ್ಕಾರದ ಪಾಲಿಗೆ ಅವರೊಬ್ಬ ವಿಲನ್ ನಂತೆ ಕಾಣುತ್ತಿದ್ದರಾದರೂ ಇದೀಗ ಕೈ ಶಾಸಕರ ಬಡಿದಾಟ ಬಿಜೆಪಿಗೆ ವರದಾನವಾಗಿ ಪರಿಣಮಿಸಿದೆ.
ಅಚ್ಚರಿಗೆ ಕಾರಣವಾಗಿದೆ
ಈ ಬಡಿದಾಟದ ಕುರಿತು ಕೈ ಶಾಸಕರು ತಮ್ಮದೇ ಆದ ಹೇಳಿಕೆಗಳನ್ನು ನೀಡುತ್ತಾ ಹುಳುಕು ಮುಚ್ಚಿಕೊಳ್ಳುವ ಯತ್ನವನ್ನು ಮಾಡುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ನ ದಿವಾಳಿತನ ಮತ್ತು ಅಧಿಕಾರಕ್ಕಾಗಿ ಪಕ್ಷದ ನಾಯಕರು ಹಿಡಿದಿರುವ ಹಾದಿ ಎಲ್ಲವೂ ಅರ್ಥವಾಗಿ ಬಿಡುತ್ತದೆ. ಹೊಸಪೇಟೆ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಮತ್ತು ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ಅವರ ನಡುವೆ ಶನಿವಾರ ರಾತ್ರಿ ಈಗಲ್ಟನ್ ರೆಸಾರ್ಟ್ನಲ್ಲಿಯೇ ಗಲಾಟೆ ನಡೆದಿದ್ದು, ಆನಂದ್ ಸಿಂಗ್ ಅವರ ತಲೆಗೆ ಬಲವಾಗಿ ಪೆಟ್ಟು ಬಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸತ್ಯ ಕಣ್ಣಮುಂದೆಯೇ ಇದ್ದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬ ನಾಯಕರು ನೀಡಿದ ಸ್ಪಷ್ಟನೆಗಳು ಅಚ್ಚರಿಗೆ ಕಾರಣವಾಗಿದೆ.
ಮಾರ್ಚ್ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆ ದಿನಾಂಕ ಪ್ರಕಟ?
ಯಾವುದೇ ಗಲಾಟೆ ನಡೆದಿಲ್ಲ
ಕಾಂಗ್ರೆಸ್ನ ಪ್ರಭಾವಿ ನಾಯಕ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಹೇಗಿದೆ ಎಂದರೆ ರೆಸಾರ್ಟ್ನಲ್ಲಿ ಯಾವುದೇ ಗಲಾಟೆ ನಡೆದಿಲ್ಲ, ಇಬ್ಬರು ಶಾಸಕರು ರಾತ್ರಿ ತಮ್ಮ ಬಳಿಯೇ ಇದ್ದರು, ಈಗ ರೂಮ್ನಲ್ಲಿ ಆರಾಮಾಗಿದ್ದಾರೆ. ಇನ್ನು ಡಿಸಿಎಂ ಪರಮೇಶ್ವರ್ ಅವರು ಮಾತನಾಡಿ ಈಗಲ್ಟನ್ ರೆಸಾರ್ಟ್ನಲ್ಲಿ ನಡೆದಿರುವ ಗಲಾಟೆ ವಿಷಯ ನನಗೆ ಗೊತ್ತಿಲ್ಲ, ನಾನು ರಾತ್ರಿ 8 ಗಂಟೆಯವರೆಗೆ ರೆಸಾರ್ಟ್ನಲ್ಲಿಯೇ ಉಳಿದಿದ್ದೆ. ಈ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದರೆ, ಶಾಸಕ ಆನಂದ್ಸಿಂಗ್ ಅವರಿಗೆ ಸಣ್ಣ ಪ್ರಮಾಣದ ಗಾಯವಾಗಿದೆ ಅಷ್ಟೆ, ಅವರು ಆಸ್ಪತ್ರೆಯಲ್ಲಿ ಆರಾಮಾಗಿ ಇದ್ದಾರೆ, ಮಧ್ಯಾಹ್ನ ಬಿರಿಯಾನಿ ತಿಂದರು ಎಂದು ಸಚಿವ ಜಮೀರ್ ಅಹಮದ್ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಪರಿಚಯ
ಹೈಕಮಾಂಡ್ ಗೆ ಮುಜುಗರ ತಂದಿದೆ
ಕಾಂಗ್ರೆಸ್ ನಾಯಕರು ತಮ್ಮದೇ ಆದ ಹೇಳಿಕೆಗಳನ್ನು ನೀಡಿ ನುಣುಚಿಕೊಳ್ಳುತ್ತಿದ್ದರೂ ಈ ಘಟನೆ ಕಾಂಗ್ರೆಸ್ಗೊಂದು ಕಪ್ಪು ಚುಕ್ಕೆಯಾಗಿದೆ ಅಲ್ಲದೆ, ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾರಿ ಹೇಳುತ್ತಿದೆ. ಈ ಘಟನೆ ಹೈಕಮಾಂಡ್ ಗೆ ಮುಜುಗರ ತಂದಿದೆ. ಹೀಗಾಗಿ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಸಂಜೆ ವೇಳೆ ಶಾಸಕರ ಸಭೆ ನಡೆದಿದೆ ಎನ್ನಲಾಗಿದ್ದು, ಸಭೆಯಲ್ಲಿ ಗಲಾಟೆಯ ಬಗ್ಗೆ ಕಂಪಿ ಕ್ಷೇತ್ರದ ಶಾಸಕ ಗಣೇಶ್ ಅವರನ್ನು ವಿಚಾರಣೆ ನಡೆಸಿ ತರಾಟೆಗೆ ತೆಗೆದುಕೊಂಡ ಅವರು ಘಟನೆಯಿಂದಾಗಿ ಪಕ್ಷದ ಘನತೆಗೆ ಹೊಡೆತ ಬಿದ್ದಿದೆ. ನೀವು ಶಾಸಕ ಅನ್ನೋದನ್ನೇ ಮರೆತಿದ್ದೀರಾ? ಎಂದು ಪ್ರಶ್ನಿಸಿದರಲ್ಲದೆ, ಸ್ಥಳದಲ್ಲಿ ನೀವಿದ್ದರೂ ಇದೆಲ್ಲಾ ಹೇಗಾಯಿತು ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರನ್ನೂ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ನಾಯಕರಿಗೆ ಸೂಚನೆ
ಈ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಆರ್.ವಿ.ದೇಶಪಾಂಡೆ, ಸಂಸದ ಡಿ.ಕೆ.ಸುರೇಶ್ ಮುಂತಾದವರು ಇದ್ದರು ಎನ್ನಲಾಗಿದ್ದು, ಮುಂದೆ ಏನು ಮಾಡಬಹುದು ಎಂಬುದರ ಕುರಿತು ಚರ್ಚೆ ನಡೆಸಿದ್ದಾರೆ. ಜತೆಗೆ ಶಾಸಕರೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯದಿದ್ದರೆ ಸಂಕಷ್ಟ ಎದುರಿಸಬೇಕಾಗುತ್ತದೆ ಎಂಬ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ. ಶಾಸಕರ ಬಡಿದಾಟ ಪಕ್ಷದ ಮೇಲೆ ಪರಿಣಾಮ ಬೀರಿದ್ದು, ಅದನ್ನು ಸರಿಪಡಿಸುವ ಸಲುವಾಗಿ ಮುಂದೇನು ಮಾಡಬಹುದು ಎಂಬುದರ ಬಗ್ಗೆ ಕೈ ನಾಯಕರು ಚಿಂತನೆ ನಡೆಸಿದ್ದು, ಈ ಸಂಬಂಧ ಯಾವುದೇ ಹೇಳಿಕೆ ನೀಡದಂತೆ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.