ವಿಜ್ಞಾನಕ್ಕೆ ಹೊಸ ಆಯಾಮ ನೀಡಿದ ಭಾರತರತ್ನ ಸಿ.ವಿ ರಾಮನ್
ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ.ವಿ ರಾಮನ್ ಅವರ ಹುಟ್ಟುಹಬ್ಬ(ನವೆಂಬರ್ 07) ದಿನದಂದು ಅವರ ಕುರಿತ ವಿಶೇಷ ಲೇಖನ ಇಲ್ಲಿದೆ.
ಸರ್. ಸಿ.ವಿ. ರಾಮನ್ ಜನಿಸಿದ್ದು, 1888ರ ನವೆಂಬರ್ 7ರಂದು. 82 ವರ್ಷಗಳ ತುಂಬು ಜೀವನ ನಡೆಸಿದ ರಾಮನ್ ಕೊನೆಯುಸಿರೆಳೆದದ್ದೂ ನವೆಂಬರ್ ತಿಂಗಳಿನಲ್ಲೇ ಎಂಬುದು ವಿಶೇಷ. ಭೌತವಿಜ್ಞಾನಕ್ಕೆ ಅಭೂತಪೂರ್ವ ಕಾಣಿಕೆ ಇತ್ತ ಅವರು, ಭೌತಿಕ ಶರೀರ ತೊರೆದದ್ದು, 1970ರ ನವೆಂಬರ್ 21ರಂದು. ಹುಟ್ಟು - ಸಾವುಗಳೆರಡನ್ನೂ ನವೆಂಬರ್ನಲ್ಲೇ ಕಂಡರು
ತಮ್ಮ 42ನೇ ವಯಸ್ಸಿನಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ಸಿ.ವಿ ರಾಮನ್ ಅವರು ಈ ಉನ್ನತ ಪ್ರಶಸ್ತಿ ಪಡೆದ ಏಷ್ಯಾದ ಮೊದಲಿಗರು. ಇಂದು ಅವರ 130ನೇ ಹುಟುಹಬ್ಬ, ತಮಿಳುನಾಡಿನಲ್ಲಿ ಹುಟ್ಟಿದರೂ ಬೆಂಗಳೂರಿನ ಜತೆ ಉತ್ತಮ ಬಾಂಧವ್ಯ ಹೊಂದಿದ್ದರು. ಕೊನೆಗಾಲವನ್ನು ಬೆಂಗಳೂರಿನಲ್ಲೆ ಕಳೆದರು.
ಹುಟ್ಟಿದರೂ ಕಂನಾಡಿನಲ್ಲಿ ನೆಲೆಸಿದ್ದ ಸಿವಿ ರಾಮನ್
ತಮಿಳುನಾಡಿನ ತಿರುಚಿನಾಪಳ್ಳಿಯ ತಿರುವಣ್ನೈಕಾವಲ್ ನಲ್ಲಿ ಹುಟ್ಟಿದರೂ ಕಂನಾಡಿನಲ್ಲಿ ನೆಲೆಸಿದ್ದ ಚಂದ್ರಶೇಖರ ವೆಂಕಟರಾಮನ್ ಕರ್ನಾಟಕವನ್ನು ವಿಶ್ವವಿಜ್ಞಾನ ಭೂಪಟದಲ್ಲಿ ಚಿತ್ರಿಸಿದ ಭೌತವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ. ಶಬ್ದ, ಬೆಳಕು, ಸ್ವರ, ನಾದಗಳಿಗೆ ವರ್ಣಮಯ ಬೆಳಕು ಚೆಲ್ಲಿದ ಧೀಮಂತ ಸಂಶೋಧಕ.
ಭೌತವಿಜ್ಞಾನಕ್ಕೆ ಹೊಸ ಆಯಾಮ ನೀಡಿ, ಭೌತ ವಿಜ್ಞಾನ ಕ್ಷೇತ್ರದಲ್ಲಿ ಭಾರತ ಹೆಸರು ಚಿರಸ್ಥಾಯಿಯಾಗಿ ನೆಲೆಗೊಳಿಸಿ, ಶಾಶ್ವತ ಕೀರ್ತಿ ಪಡೆದ ವಿಜ್ಞಾನಿ. ಬೆಂಗಳೂರಿನಲ್ಲಿ ರಾಮನ್ ಎಫೆಕ್ಟ್ ಬಗ್ಗೆ ಪ್ರಕಟಿಸಿದ್ದು ಸೇರಿದಂತೆ ಅವರ ಅಂತಿಮದಿನಗಳು ಕೂಡಾ ಇಲ್ಲೆ ಕಳೆದು ವಿಧಿವಶರಾದರು.
ರಾಮನ್ ಎಫೆಕ್ಟ್
ರಾಮನ್ ಸಂಶೋಧನೆ ರಾಮನ್ ಪರಿಣಾಮ (ರಾಮನ್ ಎಫೆಕ್ಟ್) ಎಂದೇ ಜಗದ್ವಿಖ್ಯಾತ. 1928ರ ಫೆಬ್ರವರಿ 28ರಲ್ಲಿ ಕೆಎಸ್ ಕೃಷ್ಣನ್ ಜತೆ ಆವಿಷ್ಕಾರವಾದ ಸಂಗತಿಯನ್ನು ಮಾರ್ಚ್ 16ರಂದು ದಕ್ಷಿಣ ಭಾರತ ವಿಜ್ಞಾನ ವೇದಿಕೆ ಹಾಗೂ ಬೆಂಗಳೂರು ಸೆಂಟ್ರಲ್ ಕಾಲೇಜಿನ ವಿಜ್ಞಾನ ವೇದಿಕೆಯಲ್ಲಿ ಹಂಚಿಕೊಂಡಾಗ ಅಲ್ಲಿದ್ದ ಸದಸ್ಯರಿಗೆ ರೋಮಾಂಚಕ ಅನುಭವ. ಜಗತ್ತಿಗೇ ತಿಳಿಯದ ಹೊಸ ವಿಷಯವನ್ನು ಸಂಶೋಧಕರ ಬಾಯಿಂದಲೇ ಕೇಳಿ ತಿಳಿಯುವ ಅವಿಸ್ಮರಣೀಯ ಸದವಕಾಶ ಸಿಕ್ಕಿತ್ತು.
ಆಕಾಶಕ್ಕೇಕೆ ನೀಲಿಬಣ್ಣ
ಆಕಾಶದ ನೀಲಿ ಬಣ್ಣ ಅವರನ್ನು ಸ್ತಬ್ದರನ್ನಾಗಿ ಮಾಡಿತ್ತು'. ಅದು ಹೇಗೆ ಸಾಧ್ಯ ? ಎಂಬ ಪ್ರಶ್ನೆ ರಾಮನ್ ರನ್ನು ಮೊದಲಿನಿಂದಲೂ ಕಾಡುತ್ತಿತ್ತು. ಸಮುದ್ರದ ಮೇಲೆ ವಿದೇಶ ಪ್ರಯಾಣದಲ್ಲಿದ್ದಾಗ ಕಡಲಿನ ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತ ಹಡಗಿನ ತುಂಬ ಅಲೆದಾಡುತ್ತಿದ್ದರು. ಹೂಗಳ ಬಣ್ಣದಿಂದಲೂ ಅವರು ಆಶ್ಚರ್ಯ ಚಕಿತರಾಗುತ್ತಿದ್ದರು.
ಬೆಳಕು ಚದುರಿದಾಗ, ಅದರ ಎಲ್ಲ ಬಣ್ಣಗಳೂ ಚದುರುವುವು. ಹೆಚ್ಚು ಚದುರದ ಕೆಂಪು ಬೆಳಕು ದಿಗಂತದ ಸಮೀಪ ಸೂರ್ಯಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು ಎನ್ನುವ ವಿಚಾರ ಬೆಳಕಿಗೆ ಬಂತು.
ಬಣ್ಣದಲ್ಲಿ ವ್ಯತ್ಯಾಸ ಉಂಟಾಗುತ್ತದೆ
ಬೆಳಕಿನ ಕಿರಣಗಳು ಪಾರದರ್ಶಕ ವಸ್ತುಗಳ ಮೂಲಕ ಹರಿಯುವಾಗ ಹಲವು ಅಣುಗಳಿಂದ ಚೈತನ್ಯ ಪಡೆದು, ಕೆಲವು ಅಣುಗಳಿಗೆ ಚೈತನ್ಯ ನೀಡುತ್ತವೆ. ಆ ರೀತಿ ಚದುರಲ್ಪಟ್ಟ ಬೆಳಕು ಪತನಗೊಂಡ ಬೆಳಕಿಗಿಂತಲೂ ಕಡಿಮೆ ತರಂಗಾಂತರ ಹಾಗೂ ಹೆಚ್ಚು ತರಂಗಾಂತರ ಹೊಂದಿರುತ್ತದೆ.
ಬೆಳಕು ಬಿಳಿಯ ಬಟ್ಟೆ ಅಥವಾ ಬಿಳಿ ಕಾಗದದ ಮೇಲೆ ಹಾಯ್ದಾಗ ಯಾವುದೇ ವ್ಯತ್ಯಾಸ ಆಗದು. ಆದರೆ ಅದೇ ಬೆಳಕು ಬಣ್ಣದ ಬಟ್ಟೆ ಅಥವಾ ಬಣ್ಣದ ಕಾಗದದ ಮೇಲೆ ಬಿದ್ದಾಗ, ಸ್ವಲ್ಪ ಬೆಳಕು (ಸ್ಪೆಕ್ಟ್ರಂ) ವರ್ಣದಲ್ಲಿ ಸೇರಿ ಚದುರುವುದರಿಂದ ಬಣ್ಣದಲ್ಲಿ ವ್ಯತ್ಯಾಸ ಉಂಟಾಗುತ್ತದೆಯಾದರೂ ಅದು ಅದರ ನೈಜ ವರ್ಣವಲ್ಲವೆಂಬ ವಿಚಾರಧಾರೆ