ಒಂದು ಬಾರಿ ಕೊರೊನಾವೈರಸ್ ಬಂದು ಹೋಗುವುದು ಒಳ್ಳೆಯದ್ದೇ!?
ನವದೆಹಲಿ, ಜೂನ್ 04: ಜಾಗತಿಕ ಮಟ್ಟದಲ್ಲಿ ಹರಡುತ್ತಿರುವ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಅಪಾಯಕಾರಿ ಎನ್ನುವುದು ಜಗತ್ಜಾಹೀರಾಗಿದೆ. ಕೊವಿಡ್-19 ಮಹಾಮಾರಿ ಅಂಟಿದ ಲಕ್ಷಾಂತರ ಜನರು ಸಾವಿನ ಮನೆ ಸೇರಿದ್ದರೆ, ಕೋಟ್ಯಂತರ ಮಂದಿ ಗುಣಮುಖರಾಗಿ ಮನೆಗಳಿಗೆ ವಾಪಸ್ ಆಗಿದ್ದಾರೆ.
Recommended Video
ಸಾಮಾನ್ಯವಾಗಿ ಮನುಷ್ಯದ ದೇಹದ ಪ್ರತಿಕಾಯ ವ್ವಸ್ಥೆಯ ರಚನೆ ಹಾಗೂ ಸಾಮರ್ಥ್ಯ ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತದೆ. ಕೊರೊನಾವೈರಸ್ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಹಾಗೂ ಪ್ರತಿಕಾಯ ವ್ಯವಸ್ಥೆಕ್ಕೆ ತಕ್ಕಂತೆ ತನ್ನ ಪ್ರಭಾವ ಬೀರಲಿದೆ ಎಂದು ಸಂಕ್ರಾಮಿಕ ರೋಗಶಾಸ್ತ್ರಜ್ಞರು ತಿಳಿಸಿದ್ದಾರೆ.
ಕೊವಿಡ್-19 ಸೋಂಕಿನ ಸೌಮ್ಯ ಲಕ್ಷಣಗಳನ್ನು ಹೊಂದಿರುವ ರೋಗಿಗಳು ಆರಂಭಿಕ ಹಂತದಲ್ಲೇ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದ ಕೆಲವರ ದೇಹದ ಮೂಳೆ ಮತ್ತು ಎಲುಬಿನ ಕೊಬ್ಬು ನಿರಂತರವಾಗಿ ಪ್ರತಿಕಾಯವನ್ನು ಬಿಡುಗಡೆ ಮಾಡಿರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಅದಾಗ್ಯೂ, ರೋಗಾಣುವಿನ ರೂಪಾಂತರದಿಂದಾಗಿ ರೋಗ ನಿರೋಧಕ ಶಕ್ತಿ ಕುಂಠಿತಗೊಂಡಿರುವುದು ಕಂಡು ಬಂದಿದೆ.
ಕೊರೊನಾವೈರಸ್ ಮಹಾಮಾರಿಯಿಂದ ಮಗುವನ್ನು ರಕ್ಷಿಸುವುದು ಹೇಗೆ?
ಕೊರೊನಾವೈರಸ್ ಸೋಂಕು ಅಂಟಿಕೊಂಡ ರೋಗಿಗಳು ಹಾಗೂ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳಲ್ಲಿ ಯಾವ ರೀತಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸೋಂಕಿನಿಂದ ಗುಣಮುಖರಾಗಲು ರೋಗಿಗಳಿಗೆ ಸಹಕಾರಿ ಆಗಿದ್ದು ಏನು. ಕೊವಿಡ್-19 ಸೋಂಕಿನಿಂದ ಗುಣಮುಖವಾದ ವ್ಯಕ್ತಿಯಲ್ಲಿ ಯಾವ ರೀತಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ.
ರೋಗಿಗಳ ದೇಹದಲ್ಲಿ ದೀರ್ಘಕಾಲಿಕ ಪ್ರತಿಕಾಯ ವ್ಯವಸ್ಥೆ
ಒಂದು ಬಾರಿ ಕೊರೊನಾವೈರಸ್ ಸೋಂಕಿಗೆ ತುತ್ತಾದ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ದೀರ್ಘಕಾಲಕ್ಕೆ ಸಾಕಾಗುವಷ್ಟು ಉತ್ಪಾದನೆ ಆಗುತ್ತದೆ ಎಂದು ನೇಚರ್.ಕಾಮ್ ವರದಿ ಮಾಡಿದೆ. ಕೊವಿಡ್-19 ರೋಗಾಣುಗಳ ವಿರುದ್ಧ ಹೋರಾಡುವುದಕ್ಕಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ(ಪ್ರತಿಕಾಯ) ವೃದ್ಧಿಯಾಗುತ್ತದೆ. ಇಡೀ ಜೀವನಕ್ಕೆ ಅಗತ್ಯವಾಗಿರುವ ಪ್ರತಿಕಾಯದ ಪೈಕಿ ಅರ್ಧದಲ್ಲಿ ಪ್ರತಿಕಾಯಗಳು ಇದೇ ಅವಧಿಯಲ್ಲಿ ಉತ್ಪಾದನೆ ಆಗುತ್ತದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳಿದ್ದಾರೆ.
ಒಂದು ಬಾರಿ ಕೊರೊನಾವೈರಸ್ ಬಂದರೆ ಒಳ್ಳೆಯದ್ದೇ!?
ಕೊರೊನಾವೈರಸ್ ಸೋಂಕು ಒಂದು ಬಾರಿ ಬಂದು ಹೋಗುವುದು ಉತ್ತಮ. ಏಕೆಂದರೆ ಈ ಸೋಂಕಿನಿಂದ ಎದುರಿಸುವ ಅನುಕರಣೆ ಮತ್ತು ಲಸಿಕೆಯು ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ದೇಹದಲ್ಲಿ ಸೃಷ್ಟಿ ಆಗುವ ರೋಗನಿರೋಧಕ ಶಕ್ತಿಯು ದೀರ್ಘಕಾಲದವರೆಗೂ ಕೆಲಸ ಮಾಡುತ್ತವೆ ಎಂಬುದಕ್ಕೆ ವೈದ್ಯಕೀಯ ಪ್ರಯೋಗದಲ್ಲಿ ಪುರಾವೆಗಳು ಸಹ ಸಿಕ್ಕಿವೆ ಎಂದು ಎಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ನ ಮೊನಾಶ್ ವಿಶ್ವವಿದ್ಯಾಲಯದ ರೋಗನಿರೋಧಕ ತಜ್ಞ ಮೆನ್ನೊ ವ್ಯಾನ್ ಜೆಲ್ಮ್ ತಿಳಿಸಿದ್ದಾರೆ ಎಂದು ನೇಚರ್.ಕಾಂ ವರದಿ ಮಾಡಿದೆ.
ಪ್ಲಾಸ್ಮಾ ಸೆಲ್ ಹಾಗೂ ಪ್ರತಿಕಾಯ ವ್ಯವಸ್ಥೆ ಎಂದರೇನು?
ಪ್ರತಿಕಾಯಗಳು ದೇಹವನ್ನು ಹೊಕ್ಕುವ ಯಾವುದೇ ರೋಗಾಣುವನ್ನು ಗುರುತಿಸಿ ನಿಷ್ಕ್ರಿಯಗೊಳಿಸುವುದಕ್ಕೆ ಸಹಾಯಕವಾದ ಪ್ರೋಟೀನ್ ಆಗಿದೆ. ಪ್ರತಿಕಾಯಗಳು ರೋಗನಿರೋಧಕ ಶಕ್ತಿಯ ಪ್ರಮುಖ ಅಂಶ ಆಗಿರುತ್ತದೆ. ದೇಹದಲ್ಲಿ ಹೊಸ ರೋಗಾಣು ಕಾಣಿಸಿಕೊಂಡ ನಂತರದಲ್ಲಿ ಪ್ಲಾಸ್ಮಾಬ್ಲಾಸ್ಟ್ಗಳು ಎಂಬ ಅಲ್ಪಾವಧಿಯ ಜೀವಕೋಶಗಳು ಹುಟ್ಟಿಕೊಳ್ಳುತ್ತವೆ. ಇವು ಪ್ರತಿಕಾಯಗಳ ಆರಂಭಿಕ ಮೂಲ ಆಗಿರುತ್ತದೆ. ಆದರೆ ದೇಹದಿಂದ ವೈರಸ್ ಅನ್ನು ಹೊರಹಾಕಿದ ನಂತರ ಈ ಕೋಶಗಳ ಪಾತ್ರವು ಶೀಘ್ರದಲ್ಲೇ ಮುಗಿಯುತ್ತದೆ.
ದೇಹದ ಮೂಳೆಗಳಲ್ಲಿ ದೀರ್ಘಕಾಲಿಕ ಪ್ರತಿಕಾಯ
ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ವ್ಯಕ್ತಿಯಲ್ಲಿ ದೀರ್ಘಕಾಲಿಕ ಪ್ರತಿಕಾಯಗಳು ಅಭಿವೃದ್ಧಿ ಆಗಿರುತ್ತವೆ. ಎರಡನೇ ಹಂತದಲ್ಲಿ ಜೀವಕೋಶವನ್ನು ಪ್ರವೇಶಿಸುವ ಪ್ರತಿಕಾಯಗಳು ಎರಡನೇ ಬಾರಿ ಸೋಂಕು ತಗುಲುವ ಅಪಾಯದ ಪ್ರಮಾಣವನ್ನು ತಗ್ಗಿಸುತ್ತವೆ. ದೇಹದ ಮೂಳೆಗಳಲ್ಲಿ ದೀರ್ಘಕಾಲದವರೆಗೂ ಜೀವಂತವಾಗಿರುವ ಪ್ರತಿಕಾಯಗಳು ರೋಗಾಣುಗಳ ವಿರುದ್ಧ ರಕ್ಷಿಸಲಿವೆ. ಪ್ಲಾಸ್ಮಾ ಸೆಲ್ ಕೂಡ ಪ್ಲಾಸ್ಮಾ ಬಿ ಸೆಲ್ ಎಂದು ಕರೆಯಲಾಗುತ್ತಿದ್ದು, ದೇಹದ ಎಲುಬುಗಳಲ್ಲಿ ಬಿಳಿ ರಕ್ತ ಕಣದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ವೃದ್ಧಿಸುತ್ತದೆ. ಅತಿಹೆಚ್ಚು ಅವಧಿವರೆಗೆ ಬಾಳಿಕೆ ಬರುವ ಸಾಮರ್ಥ್ಯವನ್ನು ಈ ಬಿ ಪ್ಲಾಸ್ಮಾ ಸೆಲ್ ಹೊಂದಿರುತ್ತವೆ.
ಕೊವಿಡ್-19 ಸೌಮ್ಯ ಪ್ರಮಾಣದ ರೋಗಿಗಳಿಗೆ ಅವಕಾಶ
ಎಲ್ಲ ಸಾಂಕ್ರಾಮಿಕ ರೋಗಗಳ ರೀತಿಯಲ್ಲೇ ಸಾರ್ಸ್-ಕೊವ್-2 ಸೋಂಕು ಕೂಡ ಸಾಮಾನ್ಯ ರೀತಿಯ BMPC ಗಳ ಬೆಳವಣಿಗೆಗೆ ಪ್ರಚೋದಿಸುತ್ತವೆ ಎಂದು ವಿಜ್ಞಾನಿಗಳು ಭಾವಿಸಿದ್ದರು. ಸಂಶೋಧನೆ ಪ್ರಕ್ರಿಯೆಯನ್ನು ಮುಂದುವರಿಸಿದಂತೆ ಕೊರೊನಾವೈರಸ್ ಸೋಂಕು ಜೀವಕೋಶಗಳನ್ನು ಛಿದ್ರಗೊಳಿಸುತ್ತವೆ ಎಂಬುದನ್ನು ಕಂಡುಕೊಂಡಿದ್ದಾರೆ. ಕೊವಿಡ್-19 ಅಧ್ಯಯನದ ವೇಳೆ ಚೇತರಿಕೆ ನಂತರದಲ್ಲಿ ಪ್ರತಿಕಾಯ ಮಟ್ಟವು ಕುಸಿಯುತ್ತಿರುವುದು ಗೊತ್ತಾಗಿದೆ.
ಕೊವಿಡ್-19 ಸೋಂಕಿತರಲ್ಲಿ ಪ್ರತಿಕಾಯಗಳ ಜೀವಾವಧಿ?
ಕೊರೊನಾವೈರಸ್ ಸೋಂಕಿನ ಸೌಮ್ಯ ಲಕ್ಷಣಗಳ ನಂತರ ಚೇತರಿಸಿಕೊಂಡ 77 ಜನರಲ್ಲಿ ಪ್ರತಿಕಾಯಗಳ ಉತ್ಪಾದನೆ ಬಗ್ಗೆ ಪತ್ತೆ ಹಚ್ಚಲಾಯಿತು. ಕೊವಿಡ್-19 ಸೋಂಕಿನ ನಂತರದ ನಾಲ್ಕು ತಿಂಗಳಲ್ಲಿ SARS-CoV-2 ಪ್ರತಿಕಾಯಗಳ ಪ್ರಮಾಣ ಕುಸಿದಿರುವುದು ಸಂಶೋಧನೆಯಲ್ಲಿ ಗೊತ್ತಾಗಿದೆ. ಆದರೆ ಸೋಂಕಿನ ನಂತರ 11 ತಿಂಗಳವರೆಗೆ ಸಾರ್ಸ್-ಕೊವ್-2 ರೋಗಾಣುವಿನ ವಿರುದ್ಧದ ಪ್ರತಿಕಾಯಗಳು ಸಂಶೋಧನೆಯಲ್ಲಿ ಪತ್ತೆಯಾಗಿವೆ. ಕೊರೊನಾವೈರಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ವ್ಯಕ್ತಿಯ ಮೂಳೆ ಮತ್ತು ಎಲುಬಿನಲ್ಲಿ ಏಳು ತಿಂಗಳವರೆಗೂ ಬಿ ಜೀವಕೋಶಗಳು ಜೀವಂತವಾಗಿ ಇರುತ್ತವೆ ಎಂದು ತಿಳಿದು ಬಂದಿದೆ.
ಕೊರೊನಾವೈರಸ್ ಹೊಸ ತಳಿಗಳ ವಿರುದ್ಧ ಪ್ರತಿರಕ್ಷೆ?
ಜಗತ್ತಿನಾದ್ಯಂತ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಅಲೆಗಳ ರೂಪದಲ್ಲಿ ಹರಡುತ್ತಿದೆ. ಮೊದಲ ಅಲೆ, ಎರಡನೇ ಅಲೆ ಅಲ್ಲದೇ ಮೂರನೇ ಅಲೆಯ ಕಡೆಗೆ ದೇಶ ಹೊರಳುತ್ತಿದೆ. ಈ ಸಂದರ್ಭದಲ್ಲಿ ಕೊವಿಡ್-19 ಸೋಂಕಿತರಲ್ಲಿ ಉತ್ಪಾದನೆಯಾದ ಪ್ರತಿಕಾಯ ಅಥವಾ ಲಸಿಕೆಯಿಂದ ದೇಹದಲ್ಲಿ ಉತ್ಪಾದನೆಗೊಂಡ ಪ್ರತಿಕಾಯಗಳು ದೀರ್ಘಕಾಲದವರೆಗೂ ಜೀವಂತವಾಗಿ ಉಳಿಯುತ್ತವೆ ಎಂದು ಖಚಿತವಾಗಿ ಹೇಳುವುದಕ್ಕೆ ಬರುವುದಿಲ್ಲ. ಏಕೆಂದರೆ ಕೊವಿಡ್-19 ಸೋಂಕಿನ ರೂಪಾಂತರ ತಳಿಗಳು ಈಗಾಗಲೇ ಚೇತರಿಸಿಕೊಂಡಿರುವ ರೋಗಿಗಳಲ್ಲಿ ಉತ್ಪಾದನೆಯಾಗಿರುವ ಪ್ರತಿಕಾಯಗಳನ್ನು ನಾಶಪಡಿಸುವ ಅಪಾಯವನ್ನು ತಳ್ಳಿ ಹಾಕುವಂತಿಲ್ಲ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳುತ್ತಾರೆ.
ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು
ದೇಶದಲ್ಲಿ ಒಂದೇ ದಿನ 1,32,364 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 2,07,071 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 2713 ಮಂದಿ ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ಒಟ್ಟು 2,85,74,350 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,65,97,655 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,40,702 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 16,35,993 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಹೇಗೆ ನಡೆಯುತ್ತಿದೆ ಲಸಿಕೆ ವಿತರಣೆ ಅಭಿಯಾನ?
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿದ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯು ಹೈದ್ರಾಬಾದ್ ನಲ್ಲಿ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸುವುದಕ್ಕೆ ಭಾರತದಲ್ಲಿ ಅನುಮೋದನೆ ನೀಡಲಾಗಿದೆ. ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 139 ದಿನಗಳಲ್ಲಿ 22,41,09,448 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.